Friday, September 3, 2010

Vishnusahasranama 320

ವಿಷ್ಣು ಸಹಸ್ರನಾಮ: ಪ್ರಥಿತಃ

320) ಪ್ರಥಿತಃ
ಪ್ರಥಿತಃ ಎಂದರೆ ವಿಖ್ಯಾತನಾದವನು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ:
ಯಾಸ್ಮಾತ್ ಕ್ಷರಮತೀತೋssಹಮಕ್ಷರಾದಪಿ ಚೋತ್ತಮಃ
ಅತೋssಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ (ಅ-೧೫ ಶ್ಲೋ-೧೮)
ಅಂದರೆ "ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು. ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದೇ ಹೆಸರಾಗಿದ್ದೇನೆ". ಹೀಗೆ ಸರ್ವ ಆತ್ಮಗಳಲ್ಲಿ ಶ್ರೇಷ್ಠ ಆತ್ಮ, ಸರ್ವ ವೇದ ವಾಚ್ಯ ಹಾಗೂ ಸರ್ವ ಶಬ್ದ ವಾಚ್ಯ ಭಗವಂತ ಪ್ರಥಿತಃ.

Thursday, September 2, 2010

Vishnu sahasranama 319


ವಿಷ್ಣು ಸಹಸ್ರನಾಮ: ಅಚ್ಯುತಃ...

319) ಅಚ್ಯುತಃ
ಭಗವಂತನ ಈ ನಾಮ ಸಹಸ್ರನಾಮದಲ್ಲಿ ಮೂರು ಭಾರಿ ಪುನರುಕ್ತಿಯಾಗಿದೆ (100,319 ಹಾಗೂ 556). ನಮ್ಮಲ್ಲಿ ಯಾವುದೇ ಮಂತ್ರ, ಜಪ ಪಾರಾಯಣ ಮಾಡಿ ಮುಗಿಸಿದ ಮೇಲೆ ಸ್ವರ-ವರ್ಣದ ಲೋಪದ ಪ್ರಾಯಶ್ಚಿತಕ್ಕಾಗಿ ಹೇಳುವ ಪ್ರಾಯಶ್ಚಿತ ಮಂತ್ರದಲ್ಲಿನ ಮೂರು ನಾಮಗಳಲ್ಲಿ ಈ ನಾಮವೂ ಒಂದು ‘ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ’ ಚ್ಯುತಿ ಇಲ್ಲದ ಅಚ್ಚುತ ನಾಮಕ ಭಗವಂತ ನಮ್ಮ ಸರ್ವಉಚ್ಚಾರ ದೋಷಹರ. ಇಷ್ಟೇ ಅಲ್ಲದೆ ಪುರಾಣದಲ್ಲಿ ವೇದವ್ಯಾಸರು ಹೇಳಿದಂತೆ :
"ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಬೀಶಿತಾಃ ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂವದಾಮ್ಯಹಂ" ಎಂದರೆ ಭಗವಂತನ ಈ ನಾಮೋಚ್ಚಾರಣೆಯಿಂದ ಸರ್ವ ರೋಗಗಳು ಹೆದರಿ ಬಿಟ್ಟೋಡುತ್ತವೆ ಇದು ಸತ್ಯ. ಇದಕ್ಕಾಗಿ ನಮಗೆ ಭಗವಂತನಲ್ಲಿ ಅಗಾಧವಾದ ನಂಬಿಕೆ(Involvement) ಹಾಗು ಸ್ವೀಕರಿಸುವ ಸಾಮರ್ಥ್ಯ(Receiving Power) ಬೇಕು. ಪರಿಪೂರ್ಣನಾದ ಭಗವಂತ ಸರ್ವ ರೋಗಹರ. ಹೀಗೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ ಅಚ್ಯುತಃ.

Wednesday, September 1, 2010

Vishnu Sahasranama 317-318

ವಿಷ್ಣು ಸಹಸ್ರನಾಮ: ವಿಶ್ವಬಾಹುರ್ಮಹೀಧರಃ
317) ವಿಶ್ವಬಾಹುಃ
ಮೇಲ್ನೋಟಕ್ಕೆ ವಿಶ್ವಬಾಹು ಎಂದರೆ ಪರಿಪೂರ್ಣವಾದ ತೋಳು ಉಳ್ಳವನು ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಅನಂತ ಹಾಗು ಪರಿಪೂರ್ಣವಾದ ತೊಳುಗಳುಳ್ಳವನು. ಇಲ್ಲಿ ಅನಂತ ಎಂದರೆ ಪರಿಪೂರ್ಣವಾದ ಸ್ವರೂಪಭೂತವಾದ ತೋಳು. ಭಗವಂತ ಹಾಗು ಅವನ ತೋಳುಗಳು ಭಿನ್ನವಲ್ಲ, ಆತನಿಗೆ ಬೌತಿಕವಾದ ಅಂಗಗಳಿಲ್ಲ. ನಮಗೆ ಬೌತಿಕವಾದ ಎರಡು ಕೈಗಳು; ನಮ್ಮೊಳಗಿರುವ ಸೂಕ್ಷ್ಮ ಶರೀರಕ್ಕೆ ಎರಡು ತೋಳುಗಳು; ಲಿಂಗ ಶರೀರಕ್ಕೆ ಎರಡು ತೋಳುಗಳು ಹಾಗು ನಮ್ಮ ಜೀವ ಸ್ವರೂಪಕ್ಕೆ ಎರಡು ಭುಜಗಳು. ನಮ್ಮ ಬೌತಿಕ ಇಂದ್ರಿಯ ಶಾಶ್ವತವಲ್ಲ ಆದರೆ ಸ್ವರೂಪಭೂತವಾದ ಇಂದ್ರಿಯ ಮೊಕ್ಷದಲ್ಲೂ ನಮ್ಮೊಂದಿಗಿರುತ್ತದೆ. ಭಗವಂತನ ಅನಂತ ಅವಯವಗಳು ಸ್ವರೂಪಭೂತವಾದದ್ದು ಹಾಗು ಪರಿಪೂರ್ಣವಾದದ್ದು. ಇಲ್ಲಿ ವಿಶ್ವ ಬಾಹು ಎಂದರೆ ಇಡೀ ವಿಶ್ವವನ್ನು ರಕ್ಷಣೆ ಮಾಡುವ ತೋಳು. ಪ್ರಾಣದೇವರ ಮುಖೇನ ಇಡೀ ವಿಶ್ವವನ್ನು ಧಾರಣೆ ಮಾಡಿದ ಭಗವಂತ ವಿಶ್ವಬಾಹುಃ.
318) ಮಹೀಧರಃ
'ಮಹೀ' ಎಂದರೆ ಭೂಮಿ. ಭಗವಂತ ಇಡೀ ಜಗತ್ತನ್ನು ಧರಿಸಿರುವುದಷ್ಟೇ ಅಲ್ಲದೆ ಪ್ರತಿಯೊಂದು ವಸ್ತುವಿನೊಳಗಿದ್ದು ಅದನ್ನು ಪ್ರತ್ಯೇಕವಾಗಿ ಧರಿಸಿದ್ದಾನೆ. ಭೂಮಿಯೊಳಗಿದ್ದು ಭೂಮಿಯನ್ನು ಧರಿಸಿರುವ ಭಗವಂತ ಮಹೀಧರಃ. ಗಾಯತ್ರಿಯಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಒಂದು ರೂಪ 'ಮಹೀರೂಪ'. ಗಾಯತ್ರಿಯಲ್ಲಿ ಸಮಸ್ತ ವಾಗ್ಮಯಗಳಿಗೆ ಕಾರಣನಾದ ವಾಕ್ ನಾಮಕ ಭಗವಂತನ ರೂಪ, ಪ್ರಥ್ವಿಯಲ್ಲಿರುವ ಪ್ರಥ್ವಿ ನಾಮಕ ಭಗವಂತನ ರೂಪ, ನಮ್ಮೊಳಗಿರುವ ಬಿಂಬರೂಪಿ ಭಗವಂತನ ರೂಪ ಹಾಗು ಸೂರ್ಯಮಂಡಲದಲ್ಲಿ ಸನ್ನಿಹಿತನಾದ ಭಗವಂತನ ರೂಪವನ್ನು ಸ್ತ್ರೀ ಹಾಗು ಪುರುಷ ರೂಪದಲ್ಲಿ ಉಪಾಸನೆ ಮಾಡುತ್ತಾರೆ. ಹೀಗೆ ಗಾಯತ್ರಿ ಪ್ರತಿಪಾದ್ಯನಾದ, ತನ್ನ ಎದೆ ಹಾಗು ತೊಡೆಯಲ್ಲಿ ಲಕ್ಷ್ಮಿಯನ್ನು ಧರಿಸಿರುವ ಭಗವಂತ ಮಹೀಧರಃ.