Showing posts with label Vishnusahasranama. Show all posts
Showing posts with label Vishnusahasranama. Show all posts

Thursday, December 16, 2010

Vishnusahasranama 830-833

ವಿಷ್ಣು ಸಹಸ್ರನಾಮ:
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ
830) ಸಹಸ್ರಾರ್ಚಿಃ
ಸಹಸ್ರ +ಅರ್ಚಿ; ಇಲ್ಲಿ ಸಹಸ್ರ ಎಂದರೆ ಸಾವಿರಾರು ಅಥವಾ ಅನಂತ; ಅರ್ಚಿ ಎಂದರೆ ಜ್ವಾಲೆ, ಅಂಶು, ಬೆಳಕಿನ ಕಿಡಿಗಳು ಇತ್ಯಾದಿ. ಸೂರ್ಯ ಮಂಡಲದ ಮಧ್ಯದಲ್ಲಿದ್ದು, ಈ ಜಗತ್ತಿಗೆ ಸೌರಶಕ್ತಿಯನ್ನು ಕೊಟ್ಟು ಬದುಕಿಸುವ ಭಗವಂತ ಸಹಸ್ರಾರ್ಚಿಃ. ಸಹಸ್ರಾರು ಅವತಾರಗಳನ್ನು ತಾಳಿ ಜೀವಕೋಟಿಯನ್ನು ರಕ್ಷಿಸುವ ಭಗವಂತ ಸಹಸ್ರಾರ್ಚಿಃ. ಅಂತಹ ಮಹಾನ್ ಜ್ವಾಲೆಯ ಸಣ್ಣ ಅಂಶಗಳಾದ ಅನಂತ ಜೀವರ ಒಳಗಿದ್ದು ರಕ್ಷಿಸುವ ಬಿಂಬರೂಪಿ ಭಗವಂತ ಸಹಸ್ರಾರ್ಚಿಃ.   
831) ಸಪ್ತಜಿಹ್ವಃ
ಜಿಹ್ವ  ಎಂದರೆ ನಾಲಿಗೆ. ಏಳು ನಾಲಿಗೆಗಳುಳ್ಳ ಭಗವಂತ ಸಪ್ತಜಿಹ್ವಃ! ಅಗ್ನಿಯಲ್ಲಿ ಸನ್ನಿಹಿತನಾಗಿರುವ ಭಗವಂತನಿಗೆ ಏಳು ನಾಲಿಗೆಗಳು. ಕಟ್ಟಿಗೆಯಿಂದ ಪ್ರಜ್ವಲಿಸುವ ಅಗ್ನಿಯಲ್ಲಿ ಎಳುವರ್ಣಗಳಿವೆ(Spectrum). ಇದನ್ನು ಪ್ರಾಚೀನರು  ಗುರುತಿಸಿದ್ದಾರೆ. ಹೀಗೆ ಏಳು ಬಣ್ಣದ ನಾಲಿಗೆಯಿಂದ ನಾವು ಕೊಡುವ ಹವಿಸ್ಸನ್ನು ಸ್ವೀಕರಿಸುವ ಭಗವಂತ ಸಪ್ತಜಿಹ್ವಃ. ನಮ್ಮೊಳಗೆ ಅಂತರ್ಯಾಮಿಯಾಗಿರುವ ಭಗವಂತ ನಮ್ಮ ದೇಹದಲ್ಲಿ ಏಳು ಜ್ವಾಲೆಯಾಗಿ ಹವನವನ್ನು ಸ್ವೀಕರಿಸುತ್ತಾನೆ. ಕಣ್ಣು ಎನ್ನುವ ಜ್ವಾಲೆಯಲ್ಲಿ-ರೂಪದ ಹೋಮ, ಕಿವಿಯಲ್ಲಿ-ನಾದದ ಹೋಮ,ಮೂಗಿನಿಂದ ಗಂಧದ ಆಹುತಿ,ನಾಲಿಗೆಯಿಂದ-ಆಹಾರದ ಆಹುತಿ, ತೊಗಲಿನಿಂದ-ಸ್ಪರ್ಶದ ಆಹುತಿ ಹಾಗು ಈ ಐದು ಜ್ಞಾನೇಂದ್ರಿಯಗಳನ್ನು ನಿಯಂತ್ರಿಸುವ ಹಾಗು ಗ್ರಹಿಸುವ ಮನಸ್ಸು ಮತ್ತು ಬುದ್ಧಿ. ಹೀಗೆ ಏಳು ನಾಲಿಗೆಗಳನ್ನು ಜೀವರಿಗೆ ಕೊಟ್ಟು ಅದರಿಂದ ವಿಷಯ ಜ್ಞಾನವನ್ನು ಕೊಡುವ ಭಗವಂತ ಸಪ್ತಜಿಹ್ವಃ.
832) ಸಪ್ತೈಧಾಃ
ಏಳು ಜ್ಞಾನೇಂದ್ರಿಯಗಳಿಗೆ ವಿಷಯಗಳನ್ನಿತ್ತವನು. ಏಳು ಇಂದ್ರಿಯಗಳನ್ನು ಸೃಷ್ಟಿ ಮಾಡಿ, ಜೀವನಿಗೆ ಏಳು ಜ್ವಾಲೆಗಳನ್ನು ಕೊಟ್ಟು, ಆ ಜ್ವಾಲೆಯ ಬೆಳಕಿನಲ್ಲಿ ಏಳು ಅರಿವನ್ನು ಕೊಟ್ಟು, ಏಳು ವಿಷಯಗಳನ್ನು ಸವಿಯುವ ಭಗವಂತ ಸಪ್ತೈಧಾಃ. ಇದನ್ನೇ ಗೀತೆಯಲ್ಲಿ ಹೀಗೆ ಹೇಳಿದ್ದಾರೆ:
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ   ।
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ (ಅ-೧೫; ಶ್ಲೋ-೯)
 
833) ಸಪ್ತವಾಹನಃ
ಭಗವಂತ ಇಡೀ ಪ್ರಪಂಚವನ್ನು ನಿರ್ವಹಿಸುವ ರೀತಿಯನ್ನು ಈ ನಾಮ ತಿಳಿಸುತ್ತದೆ.ಇಲ್ಲಿ ಸಂಖ್ಯೆ ಏಳಕ್ಕೆ ಪ್ರಾಮುಖ್ಯವಿದೆ.ಇದು ವೈದಿಕ ಸಂಖ್ಯಾ ಶಾಸ್ತ್ರ ಕೂಡಾ ಹೌದು. ನಮ್ಮ ದೇಹ ಸಪ್ತ ಧಾತುವಿನಿಂದಾಗಿದೆ ತ್ವಕ್(ಹೊರ ಪದರ), ಚರ್ಮ(ಒಳಪದರ),ಮಾಂಸ, ರಕ್ತ, ಕೊಬ್ಬು, ಎಲುಬು ಹಾಗು ಮಜ್ಜೆ. ನಮ್ಮ ದೇಹದಲ್ಲಿ ಪಂಚ ಜ್ಞಾನೇಂದ್ರಿಯಗಳು ಐದು ಕುದುರೆಗಳು. ಮನಸ್ಸು ಕಡಿವಾಣ ಬುದ್ಧಿ ಸಾರಥಿ. ಸಪ್ತ ಧಾತುವಿನಿಂದಾದ ಈ ದೇಹಕ್ಕೆ ಪಂಚ ಜ್ಞಾನೇಂದ್ರಿಯಗಳೆಂಬ  ಐದು ಕುದುರೆಗಳನ್ನು ಕಟ್ಟಿ, ಮನಸ್ಸೆಂಬ ಕಡಿವಾಣ ಹಾಗು ಬುದ್ಧಿ ಎನ್ನುವ ಸಾರಥಿಯಿಂದ ನಡೆಸುವ ಭಗವಂತ ಸಪ್ತವಾಹನಃ.
ಜಗತ್ತಿನಲ್ಲಿರುವ ಸಮಸ್ಥ ವಾಗ್ಮಯವೂ ಕೂಡಾ ಸಪ್ತ ಸ್ವರಗಳಿಂದಾಗಿದೆ. ಅವುಗಳೆಂದರೆ: ಷಡ್ಜ , ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ. (ಸ, ರಿ, ಗ, ಮ, ಪ, ಧ, ನಿ). ಈ ಸಪ್ತ ಸ್ವರಗಳಿಗೆ ಸಪ್ತ ಛಂದಸ್ಸುಗಳಾದವು. ಷಡ್ಜಕ್ಕೆ-24 ಅಕ್ಷರದ ಗಾಯತ್ರಿ, ಋಷಭಕ್ಕೆ- 28 ಅಕ್ಷರದ ಉಷ್ಣಿಕ್, ಗಾಂಧಾರಕ್ಕೆ- 32 ಅಕ್ಷರದ ಅನುಷ್ಪುಪ್, ಮಧ್ಯಮಕ್ಕೆ-36 ಅಕ್ಷರದ ಬೃಹತೀ, ಪಂಚಮಕ್ಕೆ-40 ಅಕ್ಷರದ ಪಂಕ್ತಿ, ಧೈವತಕ್ಕೆ-44 ಅಕ್ಷರದ ತ್ರಿಷ್ಪುಪ್ ಮತ್ತು  ನಿಷಾದಕ್ಕೆ-48 ಅಕ್ಷರದ ಜಗತೀ. ಈ ಏಳು ಛಂದಸ್ಸುಗಳೇ ಸೂರ್ಯನ ರಥದ ಏಳು ಕುದುರೆಗಳು. ಅವೇ ಸೂರ್ಯ ಕಿರಣದಲ್ಲಿರುವ ಏಳು ಬಣ್ಣಗಳು.ಅಗ್ನಿಯಲ್ಲಿಯೂ ಕೂಡಾ ಏಳು ಬಣ್ಣಗಳು(ಕಾಳೀ, ಕರಾಳೀ, ಮನೋಜವಾ, ಸುಲೋಹಿತ, ಸುಧೂಮ್ರವರ್ಣಾ, ಸ್ಫಲಿಂಗಿನಿ ಹಾಗು ವಿಶ್ವರುಚೀ). ಮೂಲಭೂತವಾಗಿ ಸಮಸ್ಥ ಸಂಸ್ಕೃತ ವಾಗ್ಮಯಗಳು ಇರುವುದು ಮೇಲೆ ಹೇಳಿದ ಏಳು ಅಂಶಗಳಲ್ಲಿ. ಭಗವದ್ಗೀತೆಯ ಸುಮಾರು 600 ಶ್ಲೋಕಗಳು 'ಅನುಷ್ಪುಪ್'ನಲ್ಲಿದ್ದರೆ, ಇತರ ಶ್ಲೋಕಗಳು ತ್ರಿಷ್ಪುಪ್ ಮತ್ತು 'ಜಗತೀ'ನಲ್ಲಿದೆ.
ಇಷ್ಟೇ ಅಲ್ಲದೆ ಕಾಲಕ್ಕೆ ಏಳು ವಾರಗಳು(ಭಾನು, ಸೋಮ,ಮಂಗಳ, ಬುಧ, ಗುರು, ಶುಕ್ರ, ಶನಿ); ಹದಿನಾಲ್ಕು ಲೋಕಗಳಲ್ಲಿ ಮೇಲಿನ ಲೋಕಗಳು ಏಳು(ಭೂಃ, ಭುವಃ ಸ್ವಃ ಮಹಃ, ಜನಃ, ತಪಃ, ಸತ್ಯಮ್) ಕೆಳಗಿನ ಲೋಕಗಳು  ಏಳು (ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ). ಭೂಲೋಕವನ್ನು ಸುತ್ತುವರಿದಿರುವ ಏಳು ಸೂಕ್ಷ್ಮ ಸಾಗರಗಳು(ಲವಣ, ಇಕ್ಷು, ಸುರಾ, ಘೃತ, ದಧಿ, ಕ್ಷೀರ ಮತ್ತು ಶುದ್ಧೋದಕ ಸಮುದ್ರ).
ನಮ್ಮ  ದೇಹದಲ್ಲಿರುವ ಅಧ್ಯಾತ್ಮ ಚಕ್ರಗಳು(ನಿರ್ನಾಳ ಗ್ರಂಥಿಗಳು) ಏಳು. ಅವುಗಳೆಂದರೆ ಮೂಲಾಧಾರ(Gonad), ಸ್ವಾಧಿಷ್ಟಾನ(Cells of Leydig), ಮಣಿಪೂರ(Adrenal), ಅನಾಹತ(Thymus), ವಿಶುದ್ಧಿ(Thyroid and parathyroid), ಆಜ್ಞಾ(Pineal), ಮತ್ತು ಸಹಸ್ರಾರ(Pituitary).
ಏಳು ಮಹಾ ಪರ್ವತಗಳು(ಹಿಮವಂತ,ಮೇರು,ಹೇಮಕೂಟ, ನಿಷಧ,ಮಾಲ್ಯವಂತ, ಗಂಧಮಾದನ, ಪಾರಿಯಾತ್ರ); ಏಳು ಮಹಾ ನದಿಗಳು (ಗಂಗಾ,ಯಮುನಾ,ಸರಸ್ವತಿ, ಗೋದಾವರಿ, ನರ್ಮದಾ, ಸಿಂಧು, ಕಾವೇರಿ). ಇಷ್ಟೇ ಅಲ್ಲದೆ ಸಪ್ತಗಂಗೆಗಳು, ಸಪ್ತಸಿಂಧುಗಳು, ಸಪ್ತಕ್ಷೇತ್ರಗಳು, ಸಪ್ತ ಮಾತೃಕೆಯರು, ಇತ್ಯಾದಿ.
ಈ ರೀತಿ ಜಗತ್ತನ್ನು ನಿರ್ವಹಿಸುವ ಭಗವಂತನ ಏಳನೇ ಅವತಾರ ರಾಮಾವತಾರ. ಈ ಅವತಾರದಲ್ಲಿ ಭಗವಂತ ಜನಿಸಿದ್ದು ಏಳನೇ ನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿ. ಇದು ಭಗವಂತನ ಪ್ರಪಂಚ ನಿರ್ವಹಣೆಯ ರೀತಿ ಹಾಗು ಆತನ ವ್ಯವಸ್ಥೆ. ಇಂತಹ ಭಗವಂತ ಸಪ್ತವಾಹನಃ.           

Sunday, December 12, 2010

Vishnu Sahasranama 786-789

ವಿಷ್ಣು ಸಹಸ್ರನಾಮ:
ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ
786) ಶುಭಾಂಗಃ
ಭಗವಂತ   ಸರ್ವಾಂಗ ಮಂಗಳಮೂರ್ತಿ.  ದೋಷ ದುರ್ಗುಣದ ಸ್ಪರ್ಶ ಅವನಿಗಿಲ್ಲ. ಹೆಜ್ಜೆ-ಹೆಜ್ಜೆಗೂ ಕೆಟ್ಟ ದಾರಿ ಹಿಡಿಯುವ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾದರೆ ಆ ಶುಭಾಂಗಃನಲ್ಲಿ ಶರಣಾಗಬೇಕು.
787) ಲೋಕಸಾರಂಗಃ
ಲೋಕದಲ್ಲಿ ವಸ್ತು 'ಸಾರ'ವಾಗಲು ಕಾರಣ ಭಗವಂತ. ಆತ ನಮ್ಮೊಳಗಿದ್ದರೆ ಸಾರ, ಇಲ್ಲದಿದ್ದರೆ ನಿಸ್ಸಾರ. ನಮಗೆ ಸಾರಭೂತವಾದದ್ದನ್ನು ಗ್ರಹಿಸುವ ಶಕ್ತಿಕೊಡುವ ಭಗವಂತ ಲೋಕಸಾರಂಗಃ.
788) ಸುತಂತುಃ
ಇಡೀ ಜಗತ್ತು ಒಂದಕ್ಕೊಂದು ಹೆಣೆದುಕೊಂಡು ನಿಯತಬದ್ಧವಾಗಿ ನಿಲ್ಲುವಂತೆ 'ನಿಯತಿಯ' ಹಗ್ಗದ ಬಲೆ ನೇಯ್ದ ಭಗವಂತ ಸುತಂತುಃ. 'ತಂತು' ಎಂದರೆ ಸಂತತಿ, ಬ್ರಹ್ಮಾದಿ ದೇವತೆಗಳೆಂಬ ಶ್ರೇಷ್ಠ ಸಂತತಿಯುಳ್ಳ  ಭಗವಂತ ಸುತಂತುಃ.   
789) ತಂತುವರ್ಧನಃ
ಸಂತತಿಯನ್ನು ಬೆಳೆಸುವವನು ಹಾಗು ಸಂಹರಿಸುವವನು
ತಂತುವರ್ಧನಃ. ನಮ್ಮೊಳಗೆ ಸ್ನೇಹದ, ಪ್ರೀತಿಯ ಅಂಕುರವನ್ನು ಬಿತ್ತಿ  ಸಂಸಾರವನ್ನು ಬೆಳೆಸುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಸಂಹಾರ ಮಾಡುತ್ತಾನೆ.

Saturday, December 11, 2010

Vishnusahasranama 773-776

ವಿಷ್ಣು ಸಹಸ್ರನಾಮ:
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್
773) ಚತುರಾತ್ಮಾ
ನಮ್ಮ ದೇಹದೊಳಗಿನ ಜೀವಸ್ವರೂಪದಲ್ಲಿ ಆತ್ಮ-ಅಂತರಾತ್ಮ-ಪರಮಾತ್ಮ-ಜ್ಞಾನಾತ್ಮ ಎಂಬ ನಾಲ್ಕು ರೂಪಗಳಿಂದ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.
774) ಚತುರ್ಭಾವಃ
ಈ ನಾಮದಲ್ಲಿ ಓಂಕಾರಕ್ಕೆ ಸಂಬಂಧಪಟ್ಟ ವಿಷಯ ಅಡಗಿದೆ. 'ಅ'ಕಾರ , 'ಉ'ಕಾರ, 'ಮ'ಕಾರ ಹಾಗು 'ನಾದ' ಈ ನಾಲ್ಕು ಅಕ್ಷರಗಳಿಂದ ಭಾವಿಸಲ್ಪಡುವ ಭಗವಂತ ಚತುರ್ಭಾವಃ. 'ಅ'ಕಾರಕ್ಕೆ ಸಂಬಂಧಪಟ್ಟ ರೂಪ 'ಕೃಷ್ಣ'; 'ಉ'ಕಾರಕ್ಕೆ ಸಂಬಂಧಪಟ್ಟ ರೂಪ 'ರಾಮ'; 'ಮ'ಕಾರಕ್ಕೆ ಸಂಬಂಧಪಟ್ಟ ರೂಪ 'ನರಸಿಂಹ' ಹಾಗು 'ನಾದ'ಕ್ಕೆ ಸಂಬಂಧಪಟ್ಟ ರೂಪ 'ವರಾಹ'. ಇವೇ ನಾಲ್ಕು ಭಾವಗಳು. ಈ ನಾಲ್ಕು ಅವತಾರಗಳು ಜಯ-ವಿಜಯರ ಆಸುರೀ ಶಕ್ತಿಯ ಸಂಹಾರಕ್ಕೆ ಭಗವಂತ ತಳೆದ ರೂಪ. ಹಿರಣ್ಯಾಕ್ಷನನ್ನು 'ವರಾಹ'ನಾಗಿ, ಹಿರಣ್ಯಕಶಿಪುವನ್ನು 'ನರಸಿಂಹ' ನಾಗಿ; ರಾವಣ-ಕುಂಭಕರ್ಣರನ್ನು 'ರಾಮ'ನಾಗಿ; ಶಿಶುಪಾಲ-ದಂತವಕ್ರರನ್ನು 'ಕೃಷ್ಣ'ನಾಗಿ ಭಗವಂತ ಸಂಹಾರ ಮಾಡಿ ಜಯ-ವಿಜಯರನ್ನು ಅವರ ಆಸುರೀ ರೂಪದಿಂದ ಬಿಡುಗಡೆ ಮಾಡಿದ. ಜಯ-ವಿಜಯರು 'ಶೇಷನ' ಮಕ್ಕಳು. ಇವರನ್ನು ಭಗವಂತನ ಅರಮನೆಯ ಬಾಗಿಲು ಕಾಯುವ ಸೇವಕರು ಎಂದು ಹೇಳುತ್ತಾರೆ. ನಮ್ಮ ದೇಹದಲ್ಲಿ ಭಗವಂತನ ಅರಮನೆ 'ಹೃತ್ಕಮಲ', ಈ ಹೃತ್ಕಲವನ್ನು ಕಾಯುವ ಶಕ್ತಿಗಳಾದ ಜಯ-ವಿಜಯರು ಆಸುರೀ ರೂಪ ತೊಟ್ಟರೆ ನಾವು ನಮ್ಮ ಸ್ಥಿಮಿತವನ್ನು ಕಳೆದುಕೊಳ್ಳುತ್ತೇವೆ. ನಿರಂತರ ಓಂಕಾರದ ಉಪಾಸನೆಯಿಂದ ಅಥವಾ ರಾಮ-ಕೃಷ್ಣ-ನರಸಿಂಹ-ವರಾಹರೂಪಿ ಭಗವಂತನ ಉಪಾಸನೆಯಿಂದ ನಾವು ಮೋಕ್ಷವನ್ನು ಕಾಣಬಹುದು.
ನಾಲ್ಕು   ಪುರುಷಾರ್ಥಗಳನ್ನು, ನಾಲ್ಕು ವರ್ಣಗಳನ್ನು ಹುಟ್ಟಿಸಿದ ಭಗವಂತ ಚತುರ್ಭಾವಃ.
775) ಚತುರ್ವೇದಃ
ನಾಲ್ಕು ವೇದಗಳ ಅಂತರಂಗದ ಸಂಪೂರ್ಣ ಅರ್ಥವನ್ನು ಬಲ್ಲ ಭಗವಂತ ತುರ್ವೇದಃ. ವೇದವೆಂಬ ಕಡಲಿನಲ್ಲಿ ಮುಳುಗಿ, ಅಲ್ಲಿರುವ ಮುತ್ತುಗಳನ್ನು ಹೆಕ್ಕಿ ತರಬಲ್ಲವರು ನಿಜವಾದ ವೇದಪಾರಂಗತರು. ನಾವು ಎಷ್ಟೇ ತಿಳಿದರೂ ಅದು ಅಪೂರ್ಣ. ವೇದವನ್ನು ಸಂಪೂರ್ಣ ತಿಳಿದವನು ಭಗವಂತನೊಬ್ಬನೇ. ಇದನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾರೆ:      
     ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇ
ದಾಂತಕೃದ್ ವೇದವಿದೇವ ಚಾಹಮ್ (ಅ-೧೫; ಶ್ಲೋ-೧೫)
ಅಂದರೆ "ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ, ನೆನಪು, ಅರಿವು,ಮರೆವು ಎಲ್ಲವೂ ನನ್ನ ಕೊಡುಗೆ. ಎಲ್ಲಾ ವೇದಗಳಿಂದ ಅರಿಯಬೇಕಾದವನು ನಾನೇ. ವೇದಾಂತಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ"   
776) ಏಕಪಾತ್
ಭಗವಂತನ ರೂಪ ಹಲವು. ಅನಂತ ರೂಪಿ ಭಗವಂತ ಏಕರೂಪದವನಾದವನು. ಅಖಂಡ ಅಭಿನ್ನ ಸ್ವರೂಪದಿಂದ ಸರ್ವ ಜೀವಜಾತವನ್ನು ಆವರಿಸಿರುವ ಭಗವಂತ ಏಕಪಾತ್.

Thursday, December 9, 2010

Vishnu sahasranama 769-772

ವಿಷ್ಣು ಸಹಸ್ರನಾಮ:
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ
769) ಚತುಮೂರ್ತಿಃ

ವಿಶ್ವ, ತೈಜಸ, ಪ್ರಾಜ್ಞ ಹಾಗು ತುರಿಯ ಎನ್ನುವ ನಾಲ್ಕು ರೂಪದಲ್ಲಿ ನಮ್ಮ ನಾಲ್ಕು ಸ್ಥಿತಿಯನ್ನು ನಿಯಂತ್ರಿಸುವ ಭಗವಂತ ಚತುಮೂರ್ತಿಃ. ಎಚ್ಚರ ಸ್ಥಿತಿಯಲ್ಲಿ ನಮ್ಮ ಕಣ್ಣಿನ ಮಧ್ಯ (ಭ್ರೂ-ಮಧ್ಯ) ಬಲಗಣ್ಣಿಗೆ ಒತ್ತಿಕೊಂಡು ಇರುವ ಶಕ್ತಿ ಕೇಂದ್ರದಲ್ಲಿ (ಆಜ್ಞಾಚಕ್ರ) ಇದ್ದು, ನಮ್ಮ ಎಚ್ಚರ ಸ್ಥಿತಿಯನ್ನು ನಿಯಂತ್ರಿಸುವ ವಿಶ್ವ ರೂಪಿ ಭಗವಂತ; ಕಂದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ, ವಿಶುದ್ಧಿಚಕ್ರದಲ್ಲಿದ್ದು ನಮ್ಮ ಕನಸಿನ ಸ್ಥಿತಿಯನ್ನು ನಿಯಂತ್ರಿಸುವ ತೈಜಸ ರೂಪಿ ಭಗವಂತ; ನಿದ್ರೆಯನ್ನು ನಿಯಂತ್ರಿಸುವ ಪ್ರಾಜ್ಞಾ ನಾಮಕ ಭಗವಂತ; ಈ ಮೂರು ಸ್ಥಿತಿಳಿಂದಾಚೆಗಿನ ನಾಲ್ಕನೇ ಸ್ಥಿತಿ (ತುರಿಯ-ಧ್ಯಾನದಲ್ಲಿ ದೇವರನ್ನು ಕಾಣುವ ಸ್ಥಿತಿ)ಯನ್ನು ನಿಯಂತ್ರಿಸುವ ಭಗವಂತ ಚತುಮೂರ್ತಿಃ.
770) ಚತುರ್ಬಾಹುಃ
ಭಗವಂತ ತನ್ನ ಭಕ್ತರಿಗೆ ದರ್ಶನ ಕೊಟ್ಟಾಗಲೆಲ್ಲಾ ನಾಲ್ಕು ಬಾಹುವಿನೊಂದಿಗೆ ಕಾಣಿಸಿಕೊಂಡಿದ್ದಾನೆ. ವಿಶ್ವರೂಪ ದರ್ಶನವನ್ನು ನೋಡಿ ಭಯಭೀತನಾದ ಅರ್ಜುನ "ನಿನ್ನ ಚತುರ್ಭುಜ ರೂಪವನ್ನು ತೋರು"  ಎಂದು ಶ್ರೀಕೃಷ್ಣನಲ್ಲಿ ಈ ರೀತಿ  ಅಂಗಲಾಚುತ್ತಾನೆ.
ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ    ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ  (ಅ-೧೧; ಶ್ಲೋ-೪೬)
ಅಂದರೆ   "ಮುಕುವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೇ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೇ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೋ"
ಭಗವಂತನ ನಾಲ್ಕು ತೋಳು ಧರ್ಮ ಅರ್ಥ ಕಾಮ ಮೋಕ್ಷದ ಸಂಕೇತ. ಇದಕ್ಕನುಗುಣವಾಗಿ ನಾಲ್ಕು ಆಯುಧಗಳು ಅಥವಾ ಅಭಯ ಹಾಗು ಧ್ಯಾನ ಮುದ್ರೆ. ಭಗವಂತನು ಹಿಡಿದಿರುವ ಆಯುಧದ ಮಹತ್ವವನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಇನ್ನು ಧ್ಯಾನ ಮುದ್ರೆ; ತೋರು ಬೆರಳು ಉಳಿದ ಮೂರು ಬೆರಳುಗಳಿಂದ ಮುಂದಕ್ಕೆ ಬಾಗಿ ಹೆಬ್ಬೆರಳನ್ನು ಸ್ಪರ್ಶಿರುವುದು. ಇಲ್ಲಿ ತೋರು ಬೆರಳು ಜೀವರನ್ನು, ಹೆಬ್ಬೆರಳು ಭಗವಂತನನ್ನು ಪ್ರತಿಪಾದಿಸುತ್ತದೆ. ಉಳಿದ ಮೂರು ಬೆರಳು ಅವಿಧ್ಯ, ಕಾಮ ಕರ್ಮವನ್ನು ಸೂಚಿಸುತ್ತದೆ. ಈ ರೀತಿ ಅವಿಧ್ಯ, ಕಾಮ, ಕರ್ಮವನ್ನು ಬಿಟ್ಟು ಜ್ಞಾನ, ಭಕ್ತಿ, ಮೊಕ್ಷವಾದ ಭಗವಂತನನ್ನು ಸೇರುವುದನ್ನು ಧ್ಯಾನಮುದ್ರೆ ಪ್ರತಿಪಾದಿಸುತ್ತದೆ. ಇನ್ನು ಅಭಯ, ಅಭಯ ಭಗವಂತನ ಪಾದವನ್ನು ತೋರಿಸುತ್ತದೆ. ಅಂದರೆ ಭಗವಂತನ ಪಾದದಲ್ಲಿ ಶರಣಾಗತಿಯನ್ನು ಬೇಡಿ ಬಂದ ಭಕ್ತರನ್ನು ಭಗವಂತ ಎಂದೂ ಕೈ ಬಿಡುವುದಿಲ್ಲ ಎಂದರ್ಥ.   
771) ಚತುರ್ವ್ಯೂಹಃ
ವಾಸುದೇವ , ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ನಾಲ್ಕು ರೂಪಗಳ ಗುಂಪು ಉಳ್ಳವನು. ಶರೀರಪುರುಷ ಶಿವ, ಛಂದಃಪುರುಷ ಶೇಷ, ವೇದ ಪುರುಷ ಗರುಡ, ಮಹಾ ಪುರುಷ ಬ್ರಹ್ಮವಾಯು, ಹೀಗೆ ನಾಲ್ಕು ಗುಂಪಿನ ದೇವತೆಗಳ ಪರಿವಾರ ಉಳ್ಳವನು ತುರ್ವ್ಯೂಹಃ.      
772) ಚತುರ್ಗತಿಃ
ನಾಲ್ಕು ಆಶ್ರಮಗಳಿಗೆ ಆಸರೆಯಾದವನು ತುರ್ಗತಿಃ. ಮೋಕ್ಷದಲ್ಲಿ ನಾಲ್ಕು ವಿಧ. (೧) ಸಾಲೋಕ್ಯ (೨) ಸಾಮೀಪ್ಯ (೩) ಸಾರೂಪ್ಯ ಹಾಗು (೪) ಸಾಯುಜ್ಯ. ಸಾಲೋಕ್ಯ ಎಂದರೆ ಭಗವಂತ ಇರುವ ಲೋಕದಲ್ಲಿ ನಾವಿರುವುದು; ಸಾಮೀಪ್ಯ ಎಂದರೆ ಭಗವಂತನ ಪಕ್ಕದಲ್ಲಿರುವುದು; ಸಾರೂಪ್ಯ ಎಂದರೆ ಭಗವಂತನಿಗೆ ಸಮನಾಗಿರುವುದು, ಸಾಯುಜ್ಯ ಎಂದರೆ ಹಾಲು-ನೀರು ಬೆರೆತಂತೆ ಭಗವಂತನಲ್ಲಿ ಬೆರೆತಿರುವುದು. ಈ ರೀತಿ ನಾಲ್ಕು ವಿಧದ ಮುಕ್ತಿಯನ್ನು ಕರುಣಿಸುವ ಭಗವಂತ ತುರ್ಗತಿಃ. ಮನುಷ್ಯನಿಗೆ ಇನ್ನೊಂದು ರೀತಿಯಲ್ಲಿ ನಾಲ್ಕು ಗತಿಗಳಿವೆ. ಭೂಮಿಯಲ್ಲಿದ್ದು ಪುಣ್ಯ ಮಾಡಿದವರಿಗೆ ಸ್ವರ್ಗ, ಪಾಪ ಮಾಡಿದವರಿಗೆ ನರಕ. ಆಸುರ ಸ್ವಭಾವದವರಿಗೆ ತಮಸ್ಸು, ಸಾತ್ವಿಕರಿಗೆ ಮುಕ್ತಿ. ಹೀಗೆ ತಮಸ್ಸು, ಮುಕ್ತಿ, ಸ್ವರ್ಗ ಹಾಗು ನರಕಗಳೆಂಬ ಚತುರ್ಗತಿಗಳಿಗಾಸರೆಯಾದ  ಭಗವಂತ ತುರ್ಗತಿಃ.

Saturday, December 4, 2010

Vishnusahasranama 761-763

ವಿಷ್ಣು ಸಹಸ್ರನಾಮ:
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂವರಃ
761) ತೇಜೋವೃಷಃ
ಇದು ಅಪೂರ್ವವಾದ ಶಬ್ಧ. ತೇಜಸ್ಸು ಅಂದರೆ ಬೆಳಕು ಅಥವಾ ಪ್ರಕಾಶ; ವೃಷ ಅಂದರೆ ಧರ್ಮ. ನಮಗೆ ತೇಜಸ್ಸನ್ನು, ವೃವನ್ನು ಕೊಡುವ ಭಗವಂತ ತೇಜೋವೃಷಃ. ನಮಗೆ ಅಧ್ಯಯನದಿಂದ, ಯೋಗ ಸಾಧನೆಯಿಂದ, ಪ್ರಾಣಾಯಾಮದಿಂದ ವರ್ಚಸ್ಸನ್ನು ಗಳಿಸಬೇಕು ಎನ್ನುವ ಆಸೆ ಇರಬಹುದು. ಆದರೆ ಆ ವರ್ಚಸ್ಸನ್ನು ಕರುಣಿಸುವವನು ಭಗವಂತ. ಅದೇ ರೀತಿ ನಮಗೆ ಧರ್ಮದ ದಾರಿಯಲ್ಲಿ ನಡೆಯಬೇಕು ಎನ್ನುವ ಆಸೆ ಇರಬಹುದು, ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎನ್ನುವ ಜ್ಞಾನ ಕೊಟ್ಟು ಆ ನಡೆಯನ್ನು ತೊರಿಸುವವನು ಭಗವಂತ.   
762) ದ್ಯುತಿಧರಃ
ಎಲ್ಲಾ ಬಗೆಯ ಪ್ರಕಾಶವನ್ನು ಧರಿಸಿರುವ ಜ್ಯೋತಿರ್ಮಯಸ್ವರೂಪ ಭಗವಂತ ದ್ಯುತಿಧರಃ
ಗೀತೆಯಲ್ಲಿ ಹೇಳುವಂತೆ:
ಯದಾದಿತ್ಯ ಗತಂ  ತೇಜೋ ಜಗದ್ ಭಾಸಯತೇsಖಿಲಮ್ |
ಯಚ್ಚಂದ್ರ ಮಸಿ ಯಚ್ಚ ಗೌನ ತತ್  ತೇಜೋ ವಿದ್ದಿ ಮಾಮಕಮ್  || (ಅ-೧೫, ಶ್ಲೋ-೧೨)
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ  ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಈ ರೀತಿ  ಹೊರಗೂ ಒಳಗೂ ತುಂಬಿರುವ, ಎಲ್ಲಾ ಬೆಳಕನ್ನು ಬೆಳಗಿಸುವ ಮಹಾ ಬೆಳಕು  ಭಗವಂತ ದ್ಯುತಿಧರಃ
763) ಸರ್ವಶಸ್ತ್ರಭೃತಾಂವರಃ
ಎಲ್ಲಾ ಶಸ್ತ್ರಧಾರಿಗ
ಳಿಗಿಂತಲೂ ಉತ್ತಮವಾದ ಶಸ್ತ್ರವನ್ನು ಹಿಡಿದು ಧರ್ಮ ಸ್ಥಾಪನೆ ಮಾಡುವ ಭಗವಂತ ಸರ್ವಶಸ್ತ್ರಭೃತಾಂವರಃ.
ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಈ ರೀತಿ ಭಗವಂತನ ಗುಣಗಾನ ಮಾಡುವ ಮಂತ್ರವನ್ನು 'ಶಸ್ತ್ರ' ಎನ್ನುತ್ತಾರೆ. ಇಂತಹ ವೇದ ಮಂತ್ರಗಳಲ್ಲಿ ಬೇರೆ ಬೇರೆ ದೇವತೆಗಳ ಮಂತ್ರವಿದೆ.  ಒಂದೊಂದು ಮಂತ್ರ ಒಂದೊಂದು ದೇವತೆಗಳನ್ನು ಹೇಳುತ್ತದೆ. ದೇವತೆಗಳು ಅನೇಕ, ಆದರೆ ದೇವರು ಒಬ್ಬನೇ. ಅಗ್ನಿಮಂತ್ರದಿಂದ ಕರೆದರೆ ಅಗ್ನಿಯಲ್ಲಿರತಕ್ಕಂತಹ ಭಗವಂತ, ವಾಯು ಮಂತ್ರದಿಂದ ಕರೆದರೆ ವಾಯುವಿನಲ್ಲಿರತಕ್ಕಂತಹ ಭಗವಂತ, ಇಂದ್ರ ಮಂತ್ರದಿಂದ ಕರೆದರೆ
ಇಂದ್ರನೊಳಗಿರತಕ್ಕಂತಹ ಭಗವಂತ. ಹೀಗೆ ಸಮಸ್ತ ದೇವತೆಗಳಲ್ಲಿರುವ, ಸರ್ವ ಶಸ್ತ್ರಗಳಲ್ಲಿ(ಭಗವಂತನ ಗುಣಗಾನ ಮಾಡುವ ಸಮಸ್ತ ಮಂತ್ರಗಳಲ್ಲಿ) ಶ್ರೇಷ್ಟನಾಗಿ ಧಾರಣೆ ಮಾಡಿರುವ ಭಗವಂತ ಸರ್ವಶಸ್ತ್ರಭೃತಾಂವರಃ.

Thursday, December 2, 2010

Vishnusahasranama 751-755

ವಿಷ್ಣು ಸಹಸ್ರನಾಮ:
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್
751) ಅಮಾನೀ
ಅ+ಮಾನೀ; ಅಂದರೆ ಮಾನ ಇಲ್ಲದವನು! ಇಲ್ಲಿ ಮಾನ ಎಂದರೆ ಅಭಿಮಾನ(Attachment); 'ನನ್ನದು' ಎನ್ನುವ ಕ್ಷುದ್ರ ಮನೋವೃತ್ತಿ. ಇಂದ್ರಾದಿ ದೇವತೆಗಳಿಗೂ ಕೂಡಾ ಅಭಿಮಾನವಿದೆ, ಆದರೆ ಭಗವಂತನಿಗೆ ಇಂತಹ ಯಾವುದೇ ಅಭಿಮಾನವಿಲ್ಲ. ಇನ್ನು 'ಮಾನ' ಎಂದರೆ ನಾಶ, ಅಳತೆ, ಎನ್ನುವ ಅರ್ಥ ಕೂಡಾ ಇದೆ. ಅಳತೆಗೆ ಸಿಗದ (immeasurable), ನಾಶವಿಲ್ಲದ,
ಯಾವುದೇ ಅಭಿಮಾನವಿಲ್ಲದ  ಅನಂತ ತತ್ವ ಭಗವಂತ ಅಮಾನೀ.
752) ಮಾನದಃ
ನಮಗೆ ಅಭಿಮಾನವನ್ನು ಕೊಡುವವನು ಹಾಗು ನಮ್ಮ ಅಭಿಮಾನವನ್ನು(Ego) ಕಳಚುವವನು. ನಮ್ಮ ಅಹಂಕಾರ ನಾಶಮಾಡುವ ಭಗವಂತ
ಮಾನದಃ.
753) ಮಾನ್ಯಃ
ಎಲ್ಲರಿಂದಲೂ ಪೂಜ್ಯನಾದ ಭಗವಂತ
ಮಾನ್ಯಃ. ಭಗವಂತನನ್ನು ದ್ವೇಷಿಸುವವರು ಅಂತತಃ ಆತನನ್ನು ಹೆಚ್ಚು ನೆನೆಯುತ್ತಾರೆ! ಕಂಸನಿಗೆ ಕನಸಿನಲ್ಲಿ, ಎಚ್ಚರದಲ್ಲಿ, ನಿದ್ದೆಯಲ್ಲಿ, ಎಲ್ಲೆಲ್ಲೂ ಕೃಷ್ಣನೇ ಕಾಣುತ್ತಿದ್ದನಂತೆ. ನಾಸ್ತಿಕರು ದೇವರನ್ನು ದ್ವೇಷಿಸುವ ಭ್ರಮೆಯಲ್ಲಿ ಯಾವಾಗಲೂ ದೇವರ ಬಗ್ಗೆಯೇ ಚಿಂತಿಸುತ್ತಾರೆ. ಕೆಲವರಿಗೆ ಉಪಾಸನೆ ಮಾಡಲು, ಕೆಲವರಿಗೆ ನಿರಾಕರಣೆ ಮಾಡಲು, ಕೆಲವರಿಗೆ ಪ್ರೀತಿಮಾಡಲು, ಇನ್ನು ಕೆಲವರಿಗೆ ದ್ವೇಷಿಸಲು, ಹೀಗೆ ಎಲ್ಲರಿಗೂ ಭಗವಂತ ಮಾನ್ಯ.     
754) ಲೋಕಸ್ವಾಮೀ
ಈ ನಾಮಕ್ಕೆ ವಿಶೇಷ ವಿಶ್ಲೇಷಣೆಯ ಅಗತ್ಯವಿಲ್ಲ, ಕೇಳಿದಾಕ್ಷಣ ಅದರ ಅರ್ಥ ಹೊಳೆಯುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡಾ ನಾನು-ನನ್ನಿಂದ ಎನ್ನುವ ಭ್ರಮೆಯಲ್ಲಿರುತ್ತಾರೆ. ಆದರೆ ಎಲ್ಲವನ್ನೂ ಮಾಡಿಸುವ ಪರಶಕ್ತಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಈ ಲೋಕಕ್ಕೆ ಭಗವಂತನೊಬ್ಬನೇ ನಿಜವಾದ ಸ್ವಾಮಿ. ನಾನು-ನನ್ನದು ಎನ್ನುವುದು ಕೇವಲ ತಿಳಿಗೇಡಿತನ. ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:
ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ |
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ (ಅ-೧೮, ಶ್ಲೋ-೧೬)
“ಏನೂ ಮಾಡದ ತನ್ನನ್ನು ಮಾಡುವವನು ಎಂದು (ತಾನೊಬ್ಬನೇ ಎಲ್ಲವನ್ನು ಮಾಡಿದವನು ಎಂದು) ತಿಳಿದವನು ಬುದ್ಧಿಗೇಡಿ. ಅಂತಹ ತಿಳಿಗೇಡಿಗಳಿಗೆ  ಏನೂ ತಿಳಿದಿಲ್ಲ”. ಆದ್ದರಿಂದ ಭಗವಂತನನ್ನು ಬಿಟ್ಟರೆ ಬೇರೆ ಯಾರೂ ಸ್ವಾಮಿ ಶಬ್ಧಕ್ಕೆ ಅರ್ಹರಲ್ಲ.
ಲೋಕ ಎಂದರೆ ಜ್ಞಾನಿ ಎನ್ನುವ ವಿಶೇಷ ಅರ್ಥವಿದೆ. ಭಗವಂತ ಎಲ್ಲರಿಗೂ ಸ್ವಾಮಿಯಾದರೂ ಕೂಡಾ ಜ್ಞಾನಿಗಳಿಗೆ ವಿಶೇಷ ಸ್ವಾಮಿ. ಏಕೆಂದರೆ ಇರುವಿಕೆ ಮುಖ್ಯವಲ್ಲ, ಇರವಿನ ಅರಿವು ಮುಖ್ಯ. ಆದ್ದರಿಂದ ಭಗವಂತ 'ಲೋಕಸ್ವಾಮಿ' ಎಂದು ತಿಳಿದ ಜ್ಞಾನಿಗಳಿಗೆ ಆತ ನಿಜವಾದ ಸ್ವಾಮಿ. ಉಳಿದವರು ಅರಿವಿಲ್ಲದೆ ಅವನನ್ನು ಕಳೆದುಕೊಳ್ಳುತ್ತಾರೆ.     
755) ತ್ರಿಲೋಕಧೃಕ್
ಮೂರು ಲೋಕವನ್ನು ಧರಿಸಿದ ಭಗವಂತ
ತ್ರಿಲೋಕಧೃಕ್. ಪ್ರಾಚೀನರು ಬ್ರಹ್ಮಾಂಡವನ್ನು ಹದಿನಾಲ್ಕು ವಿಭಾಗವಾಗಿ ವಿಂಗಡಿಸಿದ್ದರು . ಅಳ, ವಿಳ, ಸುಳ, ತಳಾತಳ, ರಸಾತಳ, ಮಹಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ತಪೋಲೋಕ, ಮಹಾಲೋಕ, ಜನರ್ಲೋಕ ಮತ್ತು ಸತ್ಯಲೋಕ. ಹದಿನಾಲ್ಕು ಲೋಕಗಳನ್ನೊಳಗೊಂಡ ಮೂರು ಪ್ರಮುಖ ಲೋಕಗಳೇ ತ್ರಿಲೋಕಗಳು. 'ಭೂಲೋಕ' ಹಾಗು ಅದರ 'ಮೇಲೆ ಏಳು' ಹಾಗು 'ಕೆಳಗಿನ ಆರು' ಲೋಕಗಳನ್ನು ಮೂರು ಲೋಕಗಳನ್ನಾಗಿ ಭೂಃ, ಭುವಃ, ಸ್ವಃ ಎಂದು ಕರೆಯುತ್ತಾರೆ. 'ಭೂಃ' ನಾವು ವಾಸವಾಗಿರುವ ಸ್ಥೂಲಲೋಕ. ಇತರ ಎರಡು ಲೋಕಗಳು ಸೂಕ್ಷ್ಮ ಲೋಕಗಳು. ಈ ಮೂರೂ ಲೋಕಗಳನ್ನು ಧರಿಸಿರುವ(ಹೊತ್ತಿರುವ) ಭಗವಂತ ತ್ರಿಲೋಕಧೃಕ್.

Wednesday, December 1, 2010

Vishnu Sahasranama 745-750

ವಿಷ್ಣು ಸಹಸ್ರನಾಮ:
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ
745) ವೀರಹಾ
ವೀರ+ಹಾ; ಅಂದರೆ ವೀರರ ಸಂಹಾರ ಮಾಡುವವನು! ಈ ನಾಮ 'ಜನಾರ್ದನ' ಎನ್ನುವ ನಾಮದಂತೆ. ಅಲ್ಲಿ 'ಜನ' ಎಂದರೆ 'ದುರ್ಜನ' ಇಲ್ಲಿ ವೀರ ಎಂದರೆ 'ತನ್ನ ಪರಾಕ್ರಮವನ್ನು ದುರ್ಬಲ ಜನರ ಮೇಲೆ ದಬ್ಭಾಳಿಕೆಯಾಗಿ ಉಪಯೋಗಿಸುವವರು'. ವಿ+ಈರ, ಅಂದರೆ ಈರನಿಗೆ(ಪ್ರಾಣನಿಗೆ) ವಿರುದ್ಧವಾಗಿ ನಿಲ್ಲುವ ಲೋಕಕಂಟಕರು. ಇಂತಹ ಸಮಾಜಕಂಟಕರನ್ನು ಸಂಹಾರ ಮಾಡುವ ಭಗವಂತ ವೀರಹಾ.
746) ವಿಷಮಃ (ಅವಿಷಮಃ)
ಭಗವಂತ ವಿಷಮಃ, ಏಕೆಂದರೆ ಆತ ಯಾರಿಗೂ ಏಕ ರೂಪದಲ್ಲಿ ಏನನ್ನೂ ಕೊಡುವುದಿಲ್ಲ. ಆಯಾ ಜೀವಧರ್ಮಕ್ಕನುಗುಣವಾಗಿ ಭಗವಂತ ಸೃಷ್ಟಿ ನಿರ್ಮಾಣ ಮಾಡಿದ್ದಾನೆ. ಆದರೆ ಆತ ಅವಿಷಮಃ, ಏಕೆಂದರೆ ಆತನಿಗೆ ಯಾರ ಮೇಲೂ ದ್ವೇಷವಿಲ್ಲ; ಎಲ್ಲರೂ ಆತನಿಗೆ ಒಂದೇ.  
747) ಶೂನ್ಯಃ
ಕ್ಷ+ಊನ+ಯಾ-ಶೂನ್ಯಕ್ಷ+ಊನ-ಶೂನ ಅಂದರೆ 'ಆನಂದಹೀನ'; 'ಯಾ' ಎಂದರೆ ನಿಯಂತ್ರಿಸುವವ. ಆನಂದದಿಂದ ಊನವಾಗಿರುವ ಜೀವರನ್ನು ಜ್ಞಾನ ಕೊಟ್ಟು ನಿಯಂತ್ರಿಸುವ ಭಗವಂತ ಶೂನ್ಯಃ.  ನಾವು  ಆನಂದದಿಂದ ಊನವಾಗಿರಲು ಕಾರಣ ನಮ್ಮ ಅಜ್ಞಾನ. ಮನುಷ್ಯ ಸಾಮಾನ್ಯವಾಗಿ ಇನ್ನೊಬ್ಬರಿಂದ ನನಗೆ ಸುಖ ಸಿಗಬಹುದು ಎಂದು ಬಯಸುತ್ತಾನೆ. ಆದರೆ ಇದೇ ಮೂಲ ದುಃಖಕ್ಕೆ ಕಾರಣ. ತನ್ನೊಳಗೆ ನಿಜವಾದ ಸುಖ ಅಡಗಿದೆ ಎಂದು ತಿಳಿಯದೆ ಸುಖವನ್ನು ಅರಸುತ್ತ ಎಲ್ಲೆಲ್ಲೋ ಹೋಗುವುದು, ಬೇರೆಡೆಯಲ್ಲಿ ಸುಖವಿದೆ ಎನ್ನುವ ಭ್ರಮೆಯಿಂದಲೇ ದುಃಖಪಡುವುದು. ಇಂತಹ ಶೂನರಿಗೆ ಜ್ಞಾನವನ್ನು ಕೊಟ್ಟು ಉದ್ಧಾರ ಮಾಡುವ ಭಗವಂತ ಶೂನ್ಯಃ.
748) ಘೃತಾಶೀಃ
ಆಸೆಗಳೇ ಇಲ್ಲದ ಬೆಳಗುವ ಇಚ್ಛಾರೂಪಿ ಭಗವಂತ ಘೃತಾಶೀಃ.
ಆತ ತುಪ್ಪ ತಿನ್ನುವವನು ಎನ್ನುವ ಮೇಲ್ನೋಟದ ಅರ್ಥವನ್ನು ಈ ನಾಮ ಕೊಡುತ್ತದೆ. ಅಂದರೆ ಭಗವಂತ ಭಕ್ತಿಯಿಂದ ಕೊಡುವ ಯಾವುದೇ ಹವಿಸ್ಸನ್ನು ಸ್ವೀಕರಿಸುತ್ತಾನೆ ಎಂದರ್ಥ. ಹೋಮ ಮಾಡುವಾಗ ನಮ್ಮ ಪಿಂಡಾಂಡದ 360 ಆಸ್ತಿಗಳನ್ನು, ಕಾಲ ಚಕ್ರದ 360 ದಿನಗಳನ್ನು ಬಿಂಬಿಸುವ 360  ಇಟ್ಟಿಗೆಯಿಂದ ಹೋಮ ಕುಂಡ ನಿರ್ಮಾಣ ಮಾಡಿ, ಅದರಲ್ಲಿ ಅಗ್ನಿಯನ್ನು ಆಹ್ವಾನ ಮಾಡಿ, ಗರ್ಭದಾನ, ಜನನ, ನಾಮಕರಣ ಅನ್ನಪ್ರಾಶನ ಉಪನಯನ ಇತ್ಯಾದಿ ಶೋಡಷ ಸಂಸ್ಕಾರವನ್ನು ಅಗ್ನಿಗೆ ಮಾಡುತ್ತಾರೆ. ಉರಿಯುವ ಅಗ್ನಿ ಜೀವ ಚೈತನ್ಯದ ಸ್ವರೂಪ. ಇಂತಹ ಅಗ್ನಿಯಲ್ಲಿ ಕಣ್ಣು ಬಾಯಿಯ ಪರಿಕಲ್ಪನೆ ಮಾಡಿ, ಮೊದಲು ಅಗ್ನಿ-ಸೋಮರ ಪ್ರತಿರೂಪವಾಗಿ ಚಕ್ಷುರ್ಹೋಮ (ಕಣ್ಣಿಗೆ ತುಪ್ಪದ ಅರ್ಪಣೆ) ಮಾಡಿ ಆನಂತರ ಬಾಯಿಗೆ ತುಪ್ಪವನ್ನು ಅರ್ಪಿಸುತ್ತಾರೆ. ಇದು ಅಗ್ನಿ ಮತ್ತು ಸೋಮರ ಅಂತರ್ಗತನಾಗಿ ಜಗತ್ತನ್ನು ನಡೆಸುವ, ಅಗ್ನಿ  ಮುಖೇನ ತುಪ್ಪವನ್ನು  ಆಹುತಿಯಾಗಿ ಸ್ವೀಕರಿಸುವ  ಭಗವಂತನ ಪರಿಕಲ್ಪನೆ.      
749) ಅಚಲಃ
ಸರ್ವವ್ಯಾಪ್ತನಾದ ಭಗವಂತ ಅಚಲಃ
750) ಚಲಃ
ಎಲ್ಲಾ ಕಡೆಯೂ ಚಲಿಸುವವನು! [ಈ ರೀತಿಯ ವರ್ಣನೆ ಭಗವಂತನಿಗಲ್ಲದೆ ಇನ್ಯಾವುದೇ ವಸ್ತುವಿಗೆ ಮಾಡಲು ಸಾಧ್ಯವಿಲ್ಲ.  It moves (ಚಲಃ) ; it moves not(
ಅಚಲಃ)]   

Friday, November 26, 2010

Vishnu Sahasranama 703-707

ವಿಷ್ಣು ಸಹಸ್ರನಾಮ: ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ
703) ಸದ್ಗತಿಃ
ಭಗವಂತನ ಗುಣಗಾನ ಮಾಡುತ್ತಾ ನಾಮ ಜಪ ಮಾಡುತ್ತಾ ಕುಳಿತರೆ ನಮ್ಮ ದೈನಂದಿನ ಚಟುವಟಿಕೆಯನ್ನು ಯಾರು ಮಾಡುತ್ತಾರೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.ನಾವು ಮಾಡುವ ನಮ್ಮ ದೈನಂದಿನ ಕೆಲಸ ಕಾರ್ಯವನ್ನು ಭಗವದರ್ಪ
ಣೆಯಾಗಿ ಮಾಡುವುದೇ ಮಹಾ ಹವನ. ಇದು ಸಜ್ಜನರಿಗೆ ಗಮ್ಯನಾದ ಭಗವಂತನನ್ನು ಸೇರಲು ಇರುವ ಅತ್ಯಂತ  ಸರಳ ವಿಧಾನ. ಹೀಗೆ ಸಜ್ಜನರಿಗೆ, ಜ್ಞಾನಿಗಳಿಗೆ, ಸಾತ್ವಿಕರಿಗೆ ಗಮ್ಯನಾದ ಭಗವಂತ ಸದ್ಗತಿಃ.  
704) ಸತ್ಕೃತಿಃ
ನಮ್ಮಿಂದ ಸಮೀಚೀನವಾದ ಕ್ರಿಯೆಯನ್ನು ಮಾಡಿಸಿ, ನಮ್ಮ ಜ್ಞಾನ ವೃದ್ಧಿ ಮಾಡಿಸುವ ಭಗವಂತ
ಸತ್ಕೃತಿಃ .  
705) ಸತ್ತಾ
'ಸತ್ತಾ' ಅಂದರೆ 'ಇರುವಿಕೆ' (Pure Existence).  ಈ ಜಗತ್ತಿನಲ್ಲಿ ಇರುವ ಏಕಮಾತ್ರ 'ನಿರ್ದೊಶತ್ವವಾದ ಇರುವಿಕೆ' ಕೇವಲ ಭಗವಂತ. ಯಾವ ದೋಷವೂ ಇಲ್ಲದ ಪರಿಶುದ್ಧ ಇರುವಿಕೆಯ ಭಗವಂತ ಸತ್ತಾ.     
706) ಸದ್ಭೂತಿಃ
ಸಜ್ಜನರಿಗೆ ಭೂತಿಯನ್ನು ಕೊಡುವ ಭಗವಂತ,
ಜ್ಞಾನಿಗಳಿಗೆ ಉನ್ನತಿಯನ್ನು ಕೊಟ್ಟು ಎತ್ತರಕ್ಕೇರಿಸುವ ಸದ್ಭೂತಿಃ.
707) ಸತ್ಪರಾಯಣಃ
ಸಜ್ಜನರು ಹೋಗಿ ಸೇರಬೇಕಾದ ಕೊನೆಯ ನಿಲುದಾಣ (Last Destination). ಅಲ್ಲಿಂದ ಮುಂದೆ  ಪ್ರಯಾಣವಿಲ್ಲ. ನಮ್ಮ ಪಯಣದ ಕೊನೆಯ ನಿಲ್ದಾಣ ಭಗವಂತ
ಸತ್ಪರಾಯಣಃ

Tuesday, November 23, 2010

Vishnusahasranama 694-697

ವಿಷ್ಣು ಸಹಸ್ರನಾಮ: ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ
694) ಮನೋಜವಃ
ಎಲ್ಲಕ್ಕಿಂತ ವೇಗವಾಗಿ ಹೋಗುವ ವಸ್ತು ಮನಸ್ಸು. ಆದರೆ ಭಗವಂತನ ವೇಗ ಮನಸ್ಸಿನ ವೇಗಕ್ಕಿಂತ ಮಿಗಿಲು. ಇಂತಹ ಭಗವಂತನನ್ನು ತಲುಪಬೇಕಾದರೆ ನಾವು ನಮ್ಮ ಅಹಂಕಾರವನ್ನು ಸಂಪೂರ್ಣವಾಗಿ ಕಳಚಿ ಆತನಲ್ಲಿ ಶರಣಾಗಬೇಕು. ಆಗ ಮಾತ್ರ ನಮ್ಮ ಮನಸ್ಸು ಆತನನ್ನು ಮುಟ್ಟಬಲ್ಲದು.  
695) ತೀರ್ಥಕರಃ
ಭಗವಂತನ ಕಡೆಗೆ ಹೋಗಬೇಕಾದರೆ ಹಂತ-ಹಂತವಾಗಿ ಹೋಗಬೇಕು. ಮೊದಲು ನಮ್ಮ ಮನಸ್ಸು ಒಳ್ಳೆಯ ಕಡೆ ಹರಿಯಬೇಕು. ಮನಸ್ಸಿನಲ್ಲಿ ಬೇಡವಾದ ಪ್ರಾಪಂಚಿಕ ವಿಷಯ ತುಂಬಿಕೊಂಡರೆ ನಾವು ಭಗವಂತನತ್ತ ಪ್ರಯಾಣಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಭಗವಂತ ದೇವಸ್ತಾನ ಹಾಗು ಪುಣ್ಯ ತೀರ್ಥಗಳ ಸೃಷ್ಟಿ ಮಾಡಿದ. ಗಂಗೆ ಕಾವೇರಿಯಂತಹ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ನಮ್ಮ ಮನಸ್ಸಿನ ಕಲ್ಮಶ ಹೊರಟು ಹೋಗಿ ಮನಸ್ಸು ಭಗವಂತನೆಡೆಗೆ ಹರಿಯುತ್ತದೆ. ಶಾಸ್ತ್ರಗಳನ್ನೂ ಕೂಡಾ ತೀರ್ಥ ಎಂದು ಕರೆಯುತ್ತಾರೆ. ಸ್ವಚ್ಚ ಮನಸ್ಸಿನಿಂದ ಓದಲು ಶಾಸ್ತ್ರಗಳ ನಿರ್ಮಾಣ ಕೂಡಾ ಭಗವಂತನ ಸೃಷ್ಟಿ. ಇದರಿಂದ ಮನಸ್ಸಿಗೆ ವೇಗ ಸಿಗುತ್ತದೆ. ಹೀಗೆ ಪವಿತ್ರ ತೀರ್ಥಗಳ, ಶಾಸ್ತ್ರಗಳ ಸೃಷ್ಟಿ ಮಾಡಿದ ಭಗವಂತ ತೀರ್ಥಕರಃ
696) ವಸುರೇತಾಃ
'ವಸುಗಳು' ಎಂದರೆ ದೇವತೆಗಳು. ಎಲ್ಲಾ ದೇವತೆಗಳ ಸೃಷ್ಟಿಗೆ ಕಾರಣ ಪುರುಷನಾದ ಭಗವಂತ ವಸುರೇತಾಃ.
697) ವಸುಪ್ರದಃ
ಮೋಕ್ಷವೆಂಬ ಸಿರಿಯನ್ನೀಯುವವ. ನಾವು ದಾರಿತಪ್ಪಿದಾಗ ಎಲ್ಲವನ್ನೂ ಕಸಿದುಕೊಳ್ಳುವವನು. (ಏಕೆಂದರೆ ದೇವರ ಸಾಮ್ರಾಜ್ಯದಲ್ಲಿ ತಪ್ಪಿಗೆ ಸಜೆ ತಪ್ಪಿದ್ದಲ್ಲ)

Vishnusahasranama 689-693

ವಿಷ್ಣು ಸಹಸ್ರನಾಮ:  ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ
689) ಪೂರ್ಣಃ
ನಾವು ಶಾಂತಿ ಮಂತ್ರಗಳಲ್ಲಿ ಈ ರೀತಿ ಹೇಳುತ್ತೇವೆ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ ! ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ "ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" ಎಂದರ್ಥ.  ಭಗವಂತ ನಮ್ಮೊಳಗೂ ಇದ್ದಾನೆ ಹೊರಗೂ ಇದ್ದಾನೆ, ಆತ ಒಳಗೂ ಪೂರ್ಣ, ಹೊರಗೂ ಪೂರ್ಣ. ಆತ ಅವತಾರದಲ್ಲೂ ಪೂರ್ಣ, ಅವತಾರದ ನಂತರವೂ ಪೂರ್ಣ. ಆತ ಹಣತೆಯಂತೆ. ಒಂದು ಹಣತೆಯಿಂದ ಇನ್ನೊಂದು, ಇನ್ನೊಂದರಿಂದ ಮತ್ತೊಂದು ಹೀಗೆ ಸಹಸ್ರಾರು ಹಣತೆಗಳನ್ನು ಹಚ್ಚಿದರೂ, ಮೂಲ ಹಣತೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಸರ್ವ ಶಬ್ಧವಾಚ್ಯ  ಭಗವಂತ ಪೂರ್ಣಃ.    
690) ಪೂರಯಿತಾ
ನಮಗೆ ಯಥಾರ್ಥ ಜ್ಞಾನ ಕೊಟ್ಟು ಮೊಕ್ಷದತ್ತ ಕೊಂಡೊಯ್ಯುವ ಭಗವಂತ ಪೂರಯಿತಾ.ಭಗವಂತ ಸೂರ್ಯನಾದರೆ ನಾವು ಮಿಂಚು ಹುಳದಂತೆ, ಆತ ಕಡಲಾದರೆ ನಾವು ಕೊಡದಂತೆ. ಕಡಲಿನಿಂದ ನಾವು ನಮ್ಮ ನಮ್ಮ ಕೊಡವನ್ನು ತುಂಬಿಸಿಕೊಳ್ಳಬೇಕು, ಅವರವರ ಯೋಗ್ಯತೆಗೆ ತಕ್ಕಂತೆ ಇದನ್ನು ಮಾಡಿಸುವವನೂ ಅವನೇ.
691) ಪುಣ್ಯಃ
ಪುಣ್ಯ ಎಂದರೆ ಪವಿತ್ರ ಅಥವಾ ಪಾವನ. ಭಗವಂತನ ಜ್ಞಾನ ನಮ್ಮನ್ನು, ನಮ್ಮ ಮನಸ್ಸನ್ನು ಪಾವನ ಗೊಳಿಸುವ ಏಕೈಕ ಸಾಧನ. ಮಾನಸಿಕವಾಗಿ ಗೊಂದಲ, ದುಃಖ, ನಿರಾಶೆಗೊಳಗಾದ ಮನಸ್ಸನ್ನು  ಭಗವಂತನತ್ತ ಹರಿಸಿದಾಗ ಮನಸ್ಸು ನೆಮ್ಮದಿಯಿಂದಿರುತ್ತದೆ. ಇದೇ ಪುಣ್ಯ ಅಥವಾ ಪಾವಿತ್ರ್ಯ. ಲೋಕೋತ್ತರವಾದ ಸುಂದರ ಭಗವಂತನ ಚಿಂತನೆಯಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಬಾಡುವುದಿಲ್ಲ, ಮುದುಡುವುದಿಲ್ಲ. ಹೀಗೆ ಪವಿತ್ರನೂ ಪರಮ ಸುಂದರನೂ ಆದ ಭಗವಂತ ಪುಣ್ಯಃ
692) ಪುಣ್ಯಕೀರ್ತಿಃ
ಕೀರ್ತನ ಮಾತ್ರದಿಂದ ಎಲ್ಲಾ ಪಾಪಗಳನ್ನು ಕಳೆಯುವ ಭಗವಂತ ಪುಣ್ಯಕೀರ್ತಿಃ. ಅವನ ಗುಣಗಾನ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಭಗವನ್ನಾಮ ನಮ್ಮನ್ನು ಉದ್ಧಾರ ಮಾಡುತ್ತದೆ.
693) ಅನಾಮಯಃ
'ಆಮಯ' ಎಂದರೆ ದೋಷಗಳು. ಬೆಂಕಿಯ ಜೊತೆಗೆ ಹೊಗೆ ಇರುವಂತೆ ನಮ್ಮಲ್ಲಿ ದೋಷಗಳು ಇದ್ದೇ ಇರುತ್ತದೆ. ಆದರೆ ಭಗವಂತನಿಗೆ ಯಾವುದೇ ದೋಷದ ಲೇಪವಿಲ್ಲ. ಆತ ಪೂರ್ಣ ನಿರ್ದೋಷ. ಇಂತಹ ಭಗವಂತ ಅನಾಮಯಃ

Monday, November 22, 2010

Vishnusahasranama 675-678

ವಿಷ್ಣು ಸಹಸ್ರನಾಮ:    ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ
675) ಮಹಾಕ್ರಮಃ
ಕ್ರಮ ಎಂದರೆ 'ರೀತಿ' ; ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಆಕಸ್ಮಿಕವಲ್ಲ, ಅದು ಕ್ರಮಬದ್ಧವಾದ ಕ್ರಿಯೆ.ಎಲ್ಲವನ್ನೂ ಕರಾರುವಕ್ಕಾಗಿ ಗಣಿತಬದ್ಧವಾಗಿ ಮಾಡುವ ಭಗವಂತ
ಮಹಾಕ್ರಮಃ.  ಅನಂತ ಕಾಲದಿಂದ ಈ ಪ್ರಪಂಚ ನೆಡೆದು ಬಂದಿದೆ, ಹಾಗು ಮುಂದುವರಿಯುತ್ತದೆ. ಈವರೆಗೆ ಅನಂತ ಪ್ರಪಂಚ ಸೃಷ್ಟಿಯಾಗಿದೆ ಹಾಗು ಇನ್ನು ಮುಂದೆ ಅನಂತ ಪ್ರಪಂಚ ಸೃಷ್ಟಿಯಾಗಲಿದೆ.ಆದರೆ ಪ್ರತಿಯೊಂದು ಸೃಷ್ಟಿಯೂ ಕ್ರಮಬದ್ಧ. ಪ್ರತಿಯೊಂದಕ್ಕೂ ಒಂದು ಲೆಕ್ಕಾಚಾರವಿದೆ, ಅದರಂತೆಯೇ ನಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧರಿತ.
676) ಮಹಾಕರ್ಮಾ
ಈ ವಿಶ್ವದಲ್ಲಿ ಮಹತ್ತಾದ ಕರ್ಮ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ.  ಇಂತಹ ಮಹಾ ಕರ್ಮವನ್ನು ನಿರ್ವಹಿಸುವ ಭಗವಂತ
ಮಹಾಕರ್ಮಾ. ನಮ್ಮ ಕೈಯಲ್ಲಿ ಮಹತ್ತಾದ ಕರ್ಮವನ್ನು ಮಾಡಿಸುವವನೂ ಅವನೇ.
677) ಮಹಾತೇಜಾಃ
ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ.ಜಗತ್ತಿನಲ್ಲಿ ನಡೆಯುವ ತೇಜಸ್ಸಿನ ಪ್ರತಿಯೊಂದು ಕ್ರಿಯೆಯ ಮೂಲ ಭಗವಂತ
ಮಹಾತೇಜಾಃ. ಆತ ಎಲ್ಲವನ್ನೂ ಬೆಳಗಿಸುವ ಬೆಳಕು. ಗೀತೆಯಲ್ಲಿ ಹೇಳುವಂತೆ:
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಅ-೧೫, ಶ್ಲೋ-೦೬)
ಅಂದರೆ "ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ"  ಹೀಗೆ ಬೆಳಕುಗಳಿಗೆ ಬೆಳಕು ನೀಡುವ ಮಹಾ ತೇಜಸ್ಸು ಭಗವಂತ
ಮಹಾತೇಜಾಃ.  
678) ಮಹೋರಗಃ
ಉರಗ ಎಂದರೆ ಹೊಟ್ಟೆ ಹೊಸೆದುಕೊಂಡು ಹೋಗುವ ಪ್ರಾಣಿ; ಅದನ್ನು ಸರ್ಪ ಎನ್ನುತ್ತಾರೆ. ಹೆಡೆ ಇರುವ ಹಾವು 'ನಾಗರ'. ಭಗವಂತ ದೊಡ್ಡ ಉರಗದ ಮೇಲೆ ಮಲಗಿದ ಶೇಷಶಾಹಿ. ಶೇಷಶಾಹಿ ಎಂದರೇನು ಎನ್ನುವುದನ್ನು ನಾವು ನಮ್ಮೊಳಗಿರುವ ದೇವರನ್ನು ಕಾಣಲು ಪ್ರಯತ್ನಿಸಿದಾಗ ಮಾತ್ರ ತಿಳಿಯುತ್ತದೆ. ಈ ಹಿಂದೆ ಹೇಳಿದಂತೆ ನಮ್ಮ ದೇಹದೊಳಗೆ ಮೂಲಾಧಾರದಿಂದ ಸಹಸ್ರಾರದವರೆಗೆ ಬೇರೆ ಬೇರೆ ಶಕ್ತಿ ಕೇಂದ್ರಗಳಿವೆ. ಮೂಲಾಧಾರದಲ್ಲಿ ಮಾಡಿಕೆಹಾಕಿ ತಲೆಯನ್ನು ಕೆಳಗಿಟ್ಟು ಮಲಗಿದ ಉರಗದ ಸ್ಥಿತಿಯಲ್ಲಿ ಕುಂಡಲಿನಿ ಶಕ್ತಿ ಅಡಗಿದೆ. ಕೆಳಮುಖವಾಗಿರುವ ಈ ಶಕ್ತಿ
ಕೇಂದ್ರದಿಂದ ಶಕ್ತಿ ಪಾತವಾಗುತ್ತದೆ. ಇಂತಹ ಹಾವನ್ನು ಕೆಣಕಿದರೆ ಮಾತ್ರ ಅದು ಹೆಡೆ ಎತ್ತುತ್ತದೆ; ಆಗ ಶಕ್ತಿ ಮೇಲ್ಮುಖವಾಗಿ ಸ್ವಾಧಿಷ್ಟಾನ-ಮಣಿಪುರ-ಅನಾಹತ-ವಿಶುದ್ಧಿ-ಆಜ್ಞಾ-ಸಹಸ್ರಾರ, ಹೀಗೆ ಹಂತ ಹಂತವಾಗಿ ಮೇಲೇರುತ್ತದೆ. ನಮ್ಮ ಆಜ್ಞಾ ಚಕ್ರವೇ ಕ್ಷೀರ ಸಾಗರ. ಇಂತಹ ಕ್ಷೀರ ಸಾಗರದಲ್ಲಿ ಸಹಸ್ರಾರದತ್ತ ಹೆಡೆಯತ್ತಿನಿಂತ ಶೇಷ ಶಕ್ತಿ ಹಾಗು ಅದರ ಮೇಲೆ ಮಲಗಿ ದರ್ಶನವನ್ನೀಯುವ ಅನಂತ ಪದ್ಮನಾಭ ಭಗವಂತ ಮಹೋರಗಃ.

Sunday, November 21, 2010

Vishnu Sahasranaama 655-664

ವಿಷ್ಣು ಸಹಸ್ರನಾಮ:
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ
655) ಕಾಮದೇವಃ
ಈ ನಾಮದ ಮೇಲ್ನೋಟದ ಅರ್ಥ ಎಲ್ಲರಿಗೂ ಚಿರಪರಿಚಿತ. ಮನುಷ್ಯನ ಬದುಕಿನಲ್ಲಿ ಬಯಕೆ ಹಾಗು ಅರಿವು (desire and wisdom) ಚೈತನ್ಯದ ಮೂಲಭೂತ ಧರ್ಮ.'ಕಾಮ' ಸಂಸ್ಕೃತದಲ್ಲಿ ಸೌಂದರ್ಯದ ಸಂಕೇತ. ಅಂದರೆ ಸುಂದರವಾದದ್ದನ್ನು ಬಯಸುವುದು 'ಕಾಮ'. 'ಸುಂದರ' ಅಂದರೆ ಪ್ರೀಯವಾದದ್ದು. ಸುಂದರವಾದದ್ದನ್ನು, ಅಥವಾ ಪ್ರಿಯವಾದದ್ದನ್ನು ಬಯಸುವುದು ಕಾಮ. ಸೌಂದರ್ಯ ವಸ್ತುವಿನಲ್ಲಿಲ್ಲ, ನಾವು ನೋಡುವ ದೃಷ್ಟಿಯಲ್ಲಿದೆ. ನಮಗೆ ಯಾವುದು ಇಷ್ಟವೋ ಅದು ನಮಗೆ ಸುಂದರವಾಗಿ ಕಾಣುತ್ತದೆ. ಹೀಗೆ ಇರುವ ಕಾಮವನ್ನು ಈಡೇರಿಸುವ ಕಾಮದೇವ (ಮನ್ಮಥ) ನಮ್ಮೊಳಗಿದ್ದು ವಿವಿಧ ರೂಪದ ಬಯಕೆಗಳನ್ನು ಪ್ರಚೋದಿಸಿ, ಕಾಮನೆಗಳನ್ನು ಈಡೇರಿಸಿ, ಆನಂದವನ್ನು ಕೊಟ್ಟು ವಿಹರಿಸುವವ. ಮನ್ಮಥ ವಿಷ್ಣುವಿನ ಮಗ; ಅವನೇ ಶಿವನ ಮಗ ಸ್ಕಂದ (ಷಣ್ಮುಖ), ಅವನೇ ಬ್ರಹ್ಮನ ಮಗ ಸನತ್ಕುಮಾರ. ನಮಗೆ ಕಾಮನೆಗಳನ್ನು ನೀಡುವ ಹಾಗು ಅದನ್ನು ನಿಯಂತ್ರಿಸುವ ಮನ್ಮಥ-ಸನತ್ಕುಮಾರ-ಷಣ್ಮುಖನೊಳಗಿರುವ, ಸರ್ವ ಕಾಮಗಳನ್ನು ಗೆದ್ದ ಭಗವಂತ ಕಾಮದೇವಃ.     
656) ಕಾಮಪಾಲಃ
ನಮ್ಮ ಎಲ್ಲಾ ಬಯಕೆಗಳನ್ನು ರಕ್ಷಣೆ ಮಾಡುವವನು ಭಗವಂತ. ನಮ್ಮ ಬಯಕೆ ನಮ್ಮ ಅಧೀನ ಅಲ್ಲ. ಧರ್ಮ ಕಾರ್ಯ ಮಾಡಬೇಕು ಎನ್ನುವ ಕಾಮ ಇಲ್ಲದಿದ್ದರೆ ಧರ್ಮವಿಲ್ಲ! ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಬೇಕು ಎನ್ನುವ ಕಾಮನೆ ಇಲ್ಲದಿದ್ದರೆ 'ಅರ್ಥಕ್ಕೆ' ಬೆಲೆಯಿಲ್ಲ. ಕಾಮ ಇಲ್ಲದಿದ್ದರೆ ಎಲ್ಲವೂ ಅಸಾಧ್ಯ. ಬಯಕೆಯೇ ಇಲ್ಲದ ಬದುಕಿಲ್ಲ. ಬಯಕೆ ಕೆಟ್ಟದ್ದಲ್ಲ ಆದರೆ ಕುಸ್ಸಿತವಾದ ಬಯಕೆ ಕೆಟ್ಟದ್ದು. ನಮಗೆ ಒಳ್ಳೆಯ ಬಯಕೆಯನ್ನು ಕೊಟ್ಟು ಅದನ್ನು ಪೂರೈಸಿ ಉದ್ಧರಿಸುವ ಭಗವಂತ ಕಾಮಪಾಲಃ.
657) ಕಾಮೀ
ಕಾಮೀ ಅಂದರೆ ಕಾಮ ಉಳ್ಳವನು ಎಂದರ್ಥವಲ್ಲ. ಕಾಮದ ಒಡೆಯ ಕಾಮೀ. ಜಗತ್ತಿನಲ್ಲಿ ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನ ಅಪ್ಪ ಭಗವಂತ ಕಾಮೀ.
658) ಕಾಂತಃ
ರತಿ-ಮನ್ಮಥರಿಗೆ ರೂಪಕೊಟ್ಟ ಭಗವಂತ ಎಲ್ಲರೂ ಬಯಸುವಂತಹ  ಪರಮಸುಂದರ ಮೂರ್ತಿ. ಅತ್ಯಂತ  ಸುಂದರ ಮಾಂಗಲಿಕ ರೂಪ ಆತನದ್ದು. ಇಲ್ಲಿ ಸೌಂದರ್ಯ ಎಂದರೆ ಬಾಹ್ಯ ಸೌಂದರ್ಯವಲ್ಲ, ಪಂಚಭೂತಗಳಿಂದಾದ ಸೌಂದರ್ಯವಲ್ಲ, ಜ್ಞಾನಾನಂದಗಳಿಂದ ತುಂಬಿದ  ಪರಿಪೂರ್ಣ ಸೌಂದರ್ಯ.ಇಂತಹ ಸುಂದರ ಮೂರ್ತಿ ಭಗವಂತ ಕಾಂತಃ.   
659) ಕೃತಾಗಮಃ
ಮೊಟ್ಟ ಮೊದಲು ಜ್ಞಾನವನ್ನು, ವೇದವನ್ನು, ಚತುರ್ಮುಖನಿಗೆ ಉಪದೇಶ ಮಾಡಿ ಜಗತ್ತಿಗೆ ಆಗಮನದ ರೂಪದಲ್ಲಿ ಕೊಟ್ಟವ ಭಗವಂತ. ಆತ ಆಗಮಗಳಿಂದ ಕೃತನಾದವನು. ಸಮಸ್ತ ಆಗಮಗಳಿಂದಲೇ ತಿಳಿಯಬೇಕಾದವನು. ಭೂಮಿಗೆ ಇಳಿದು ಬಂದು, ವೇದ-ಪುರಾಣವನ್ನು ರಚಿಸಿ ಕೊಟ್ಟು, ಶೃತಿ-ಸ್ತುತಿಗಳನ್ನು ನೀಡಿದ ಭಗವಂತ ಕೃತಾಗಮಃ.
660) ಅನಿರ್ದೇಶ್ಯವಪು
ಇಂಥದ್ದೇ ಎಂದು ನಿರೂಪಿಸಲು ಆಗದ ಆಚಿಂತ್ಯ ರೂಪನು. 'ನಿರ್ದೇಶ' ಎಂದರೆ ಇದು ಇಂತದ್ದೇ ಎಂದು ಮನಸ್ಸು ಗ್ರಹಿಸುವ ರೂಪ. ಕೃಷ್ಣನನ್ನು, ರಾಮನನ್ನು, ವ್ಯಾಸರನ್ನು ಕಂಡವರಿದ್ದಾರೆ, ಆದರೆ ಅದು ಕಂಡು ಗ್ರಹಿಸುವ ರೂಪವಲ್ಲ. ಯಾವುದನ್ನು ನಿರೂಪಿಸಲಾಗದೆ ಮಾತು ಮೂಕವಾಗುತ್ತದೋ, ಮನಸ್ಸು ಸ್ವಚ್ಚವಾಗುತ್ತದೋ, ಅಂತಹ ಆನಂದಮಯ ರೂಪ ಎಂದು ಉಪನಿಷತ್ತು ಹೇಳುತ್ತದೆ. ಹೀಗೆ ಮನಸ್ಸಿನ ಚಿಂತನೆಗೆ ಮೀರಿದ ರೂಪವುಳ್ಳ  ಭಗವಂತ  ಅನಿರ್ದೇಶ್ಯವಪು.
661) ವಿಷ್ಣುಃ
ಎಲ್ಲಾ ಕಡೆಯೂ, ಎಲ್ಲರ ಒಳಗೂ-ಹೊರಗೂ ತುಂಬಿರುವ, ಮಾತು ಮನಸ್ಸಿಗೆ ಮೀರಿದ ಅನಂತ ಶಕ್ತಿ ಭಗವಂತ ವಿಷ್ಣುಃ.
662) ವೀರಃ
ಎಲ್ಲವನ್ನೂ ನಿಗ್ರಹಿಸಬಲ್ಲ ಪೌರುಷಶಾಲಿ. 'ವಿ' ಅಂದರೆ ಪಕ್ಷಿ (ಗರುಡ), 'ಈರ' ಅಂದರೆ ಪ್ರಾಣದೇವರು. ಗರುಡ-ಪ್ರಾಣರನ್ನು ನಿಯಂತ್ರಿಸುವ ಪರಾಶಕ್ತಿ ಭಗವಂತ ವೀರ.
663) ಅನಂತಃ
ಅಳತೆಗೆ ಸಿಗದ ಅನಂತ ಶಕ್ತಿ. ಆತ ಕಾಲತಃ, ದೇಶತಃ, ಗುಣತಃ ಅನಂತ.  
664) ಧನಂಜಯಃ
ಅರ್ಜುನನಲ್ಲಿ ಸನ್ನಿಹಿತನಾಗಿ ಅವನನ್ನು ಧನಂಜಯನಾಗಿ ಮಾಡಿದ ಭಗವಂತ
ಧನಂಜಯಃಜಗತ್ತಿನಲ್ಲಿರುವ ಎಲ್ಲಾ ಸಂಪತ್ತು ಆತನ ಸೊತ್ತು. ಆದ್ದರಿಂದ 'ನನ್ನದು' ಎನ್ನುವ ಅಹಂಕಾರ ಬಿಟ್ಟು ಆ ಧನಂಜಯನಲ್ಲಿ ಶರಣಾಗಬೇಕು. 

Wednesday, November 17, 2010

Vishnusahasranama 585-590

ವಿಷ್ಣು ಸಹಸ್ರನಾಮ: ಸಂನ್ಯಾಸಕೃಚ್ಛಮಶ್ಯಾಂತೋ ನಿಷ್ಠಾ ಶಾಂತಿಃ ಪರಾಯಣಮ್
585) ಸಂನ್ಯಾಸಕೃತ್
ಸನತ್ ಕುಮಾರನಾಗಿ, ನರ-ನಾರಾಯಣ ರೂಪಿಯಾಗಿ ನಮಗೆ ನಿಜವಾದ ಸನ್ಯಾಸಿಯ ಬದುಕನ್ನು ಬದುಕಿ ತೋರಿಸಿದ ಭಗವಂತ ಸಂನ್ಯಾಸಕೃತ್. ನಿಜವಾದ ಸನ್ಯಾಸ ಎಂದರೆ ಕಾಮವನ್ನು ಹಾಗು ಕ್ರೋಧವನ್ನು ಸಂಪೂರ್ಣ ಬಿಡುವುದು. ಕಾಮವೇ ಕ್ರೋಧಕ್ಕೆ ಕಾರಣ. ಈಡೇರದ ಆಸೆಯಿಂದ ಮನಸ್ಸಿನಲ್ಲಿ ಉಂಟಾಗುವ ವಿಕಾರ 'ಕೋಪ'. ಪ್ರಪಂಚ ನಾವು ಬಯಸಿದಂತೆ ಎಂದೂ ಇರುವುದಿಲ್ಲ, ಹೀಗಿರುವಾಗ ಹೀಗೇ ಆಗಬೇಕು ಎಂದು ಬಯಸುವುದು ಮೂರ್ಖತನ.ಜಗತ್ತಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಹಾಗೇ ಸ್ವೀಕರಿಸುವುದು ಧರ್ಮ. ಸಮುದ್ರದಲ್ಲಿ ಅಲೆಗಳು, ತರಂಗಗಳು ನಿರಂತರ ಹಾಗು ಅನಿವಾರ್ಯ. ಆದ್ದರಿಂದ ತೆರೆಯ ಜೊತೆಗೆ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಬೇಕೇ ಹೊರತು ತೆರೆ ನಿಂತ ಮೇಲೆ ಸ್ನಾನ ಮಾಡುತ್ತೇನೆ ಎಂದರಾಗದು. ಬದುಕು ಕೂಡಾ ಅಷ್ಟೇ; ಪ್ರಪಂಚ ಸಮುದ್ರದ ಅಲೆಗಳಂತೆ, ಜೀವನದಲ್ಲಿ ಏನು ಘಟಿಸಿತೋ ಅದಕ್ಕೆ ಒಗ್ಗಿಕೊಂಡು ಬದುಕಬೇಕೇ ಹೊರತು ಜಗತ್ತನ್ನು ನಮ್ಮ ಇಚ್ಚೆಯಂತೆ ಬಯಸುವುದು ತಪ್ಪು. ಹೀಗೇ ಜಗತ್ತಿನ ಅಲೆಗಳಿಗೆ ಒಗ್ಗಿಕೊಂಡು ಬದುಕುವುದು ಒಬ್ಬ ಸಂಸಾರಿಯ ಸನ್ಯಾಸ! ಇಂತದ್ದು ಬೇಕು ಎಂದು ಬಯಸದೇ ಇದ್ದದ್ದರಲ್ಲಿ ಖುಷಿ ಪಡುವುದು, ಏನೇ ಬಂದರೂ ದೃತಿಗೆಡದೆ, ಬದುಕಿನ ಸಂಪೂರ್ಣ ಹೊಣೆಗಾರಿಕೆಯನ್ನು ಭಗವಂತನಿಗೆ ಬಿಟ್ಟುಬಿಡುವುದು ಸನ್ಯಾಸ. ಇಡೀ ಬದುಕನ್ನು, ಸರ್ವಸ್ವವನ್ನು, ಸರ್ವ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸನ್ಯಾಸ.   
586) ಶಮಃ
ಮನಸ್ಸನ್ನು  ಸದಾ ಭಗವಂತನಲ್ಲಿಡುವುದು, ಯಾವ ಚಿಂತೆ ಇಲ್ಲದೆ ನೆಮ್ಮದಿಯಿಂದಿರುವುದು, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಧರ್ಮ.ಒಳ್ಳೆಯ ವ್ಯಕ್ತಿತ್ವ ಹೊಂದಿದ ಅಥವಾ ಒಳ್ಳೆಯ ಜೀವ ಸ್ವಭಾವವಿರುವವರಿಗೆ ಇಂತಹ ಗುಣಗಳನ್ನು ದಯಪಾಲಿಸುವ ಭಗವಂತ ಶಮಃ. ಇದಕ್ಕಾಗಿ ಸನ್ಯಾಸಿಯಾಗಬೇಕೆಂದಿಲ್ಲ, ಗೃಹಸ್ಥ ಕೂಡಾ ಅನುಸರಿಸಬುದಾದ ಗುಣವಿದು. ಇದಕ್ಕೆ ಉತ್ತಮ ಉದಾಹರಣೆ ಧರ್ಮ ವ್ಯಾದ, ಮಾಂಸ ಮಾರಿ ಜೀವಿಸುತ್ತಿದ್ದ ವ್ಯಾದನಲ್ಲಿ ಇಂತಹ ಗುಣವಿತ್ತು. ಲೋಕದಲ್ಲಿ ನಡೆಯುವ ಪ್ರತಿಯೊಂದು  ಘಟನೆಯ ಹಿಂದೆ ಒಂದು ಕಾರಣವಿರುತ್ತದೆ, ಭಗವಂತ ಎಂದೂ ಕೆಟ್ಟದ್ದನ್ನು ಕೊಡುವುದಿಲ್ಲ,ಆತ ಕೊಡುವುದೆಲ್ಲ ಪ್ರಸಾದ ಎಂದು ಸ್ವೀಕರಿಸುವ ಗುಣ ನಮ್ಮಲ್ಲಿರಬೇಕು ಅಷ್ಟೇ.      
587) ಶಾಂತಃ
'ಶಂ' ಎಂದರೆ ಆನಂದ; 'ಅಂತ' ಎಂದರೆ ತುತ್ತತುದಿ. ಆನಂದದ ಪರಾಕಾಷ್ಟೆಯಲ್ಲಿರುವ ಭಗವಂತ ಶಾಂತಃ 
588) ನಿಷ್ಠಾ
ಜಗತ್ತಿನಲ್ಲಿರುವ ಎಲ್ಲವೂ ಏಲ್ಲಿ ಕೊನೆಗೊಳ್ಳುತ್ತದೋ, ಯಾವುದು ಸರ್ವಾಧಾರವೋ ಅದು ನಿಷ್ಠಾ.
589) ಶಾಂತಿಃ
ಜ್ಞಾನಾನಂದ ಭಲದ ಪರಿಪೂರ್ಣ ಸಮಷ್ಟಿ ಭಗವಂತ ಶಾಂತಿಃ. ಈ ಕಾರಣಕ್ಕಾಗಿ ವೇದಗಳಲ್ಲಿ ಮೊದಲಿಗೆ ಶಾಂತಿ  ಮಂತ್ರ ಪಠನೆ ಮಾಡುತ್ತೇವೆ.
590) ಪರಾಯಣಮ್
ಪರಾಯಣಮ್ ಎಂದರೆ ಸರ್ವೋತ್ಕ್ರುಷ್ಟವಾದ ತುತ್ತ ತುದಿ, ಕೊನೆಯ ಆಸರೆ(last destination). ಎಲ್ಲಾ ಮೆಟ್ಟಿಲುಗಳನ್ನು ಹತ್ತಿ ಕೊನೆಗೆ ತಲುಪುವ ತುತ್ತ ತುದಿ. 

Tuesday, November 16, 2010

Vishnusahasranama 575-578

ವಿಷ್ಣು ಸಹಸ್ರನಾಮ: ದಿವಸ್ಪೃಕ್ ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ
575) ದಿವಸ್ಪೃಕ್
ಮುಗಿಲನ್ನು ಮುತ್ತಿ ನಿಂತವನು ದಿವಸ್ಪೃಕ್; ಭಗವಂತ ಭೂ ಆಕಾಶದಲ್ಲಿ ತುಂಬಿ ನಿಂತಿದ್ದಾನೆ. ಅವನಿಗೆ ತಿಳಿಯದ ವಿಷಯ ಈ ಪ್ರಪಂಚದಲ್ಲಿಲ್ಲ. ಆತ ಎಲ್ಲವನ್ನೂ ಕಾಣಬಲ್ಲ.
576) ಸರ್ವದೃಗ್ ವ್ಯಾಸಃ
ಇಲ್ಲಿ ವ್ಯಾಸ ಎನ್ನುವುದು 'ವಿಸ್ತಾರ, ವಿಭಾಗ' ಎನ್ನುವ ಅರ್ಥವನ್ನೂ ಕೊಡುತ್ತದೆ. ವೇದಗಳನ್ನು ವಿಭಾಗ ಮಾಡಿ ಜ್ಞಾನಿಗಳ ಅರಿವನ್ನು ವಿಸ್ತಾರ ಮಾಡಿದ ಭಗವಂತ  ಸರ್ವದೃಗ್ ವ್ಯಾಸಃ.
ಭಗವಂತ ವೇದವನ್ನು 1137 ಸಂಹಿತೆಯಾಗಿ ವಿಭಾಗಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ 24 ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ 15 ಸಂಹಿತೆ, ಹಾಗು ಕೃಷ್ಣ ಯಜುರ್ವೇದದಲ್ಲಿ 86 ಸಂಹಿತೆ, ಒಟ್ಟು 101 ಸಂಹಿತೆ. ಸಾಮವೇದದಲ್ಲಿ 1000 ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು 12  ಶಾಖೆಗಳು. ಹೀಗೆ ವೇದವನ್ನು  1137 (24+101+12+1000) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ ಸರ್ವದೃಗ್ ವ್ಯಾಸಃ.         
577) ವಾಚಸ್ಪತಿಃ
ಭಗವಂತ ವಾಗ್ದೇವತೆಯ ಒಡೆಯ. ಮೂಲತಃ ವಾಗ್ದೇವತೆ ಸಮಸ್ತ ವೇದ ಮಾನಿನಿಯಾದ ಲಕ್ಷ್ಮಿ. ಇಂತಹ ವಾಗ್ದೇವತೆಯ ಒಡೆಯ ಭಗವಂತ ವಾಚಸ್ಪತಿಃ
ಸಮಸ್ತ ವೇದದ ಸಾರವನ್ನು ಭಗವದ್ಗೀತೆಯ ಮುಖೇನ ಉಪದೇಶ ಮಾಡಿದ ಹಾಗು , ಅದನ್ನೇ ಶಬ್ದರೂಪದಲ್ಲಿ ಸೆರೆ ಹಿಡಿದ ವ್ಯಾಸ ರೂಪಿ ಭಗವಂತ ವಾಚಸ್ಪತಿಃ
578) ಅಯೋನಿಜಃ
ತಾಯ ಬಸಿರಿನಿಂದ ಹುಟ್ಟದವನು ಅಯೋನಿಜಃ. ಕೃಷ್ಣ ದೇವಕಿಯಿಂದ, ರಾಮ ಕೌಸಲ್ಯಳಿಂದ,ವಾಮನ ಅದಿತಿಯಿಂದ, ವೇದವ್ಯಾಸ ಸತ್ಯವತಿಯಲ್ಲಿ ಹುಟ್ಟಿದರು. ಆದರೆ ವಾಸ್ತವಿಕವಾಗಿ ಭಗವಂತ ಅಯೋನಿಜಃ. ಇದನ್ನು ಸ್ಪಷ್ಟವಾಗಿ ಆತನ ನರಸಿಂಹ, ಕೂರ್ಮ,ಮತ್ಸ್ಯ ವರಾಹ ಇತ್ಯಾದಿ ಅವತಾರದಲ್ಲಿ ಕಾಣಬಹುದು. ಆತ ತಾಯ ಬಸಿರಿನಿಂದ ಹುಟ್ಟುವುದಿಲ್ಲ, ಆದರೆ ನಮಗೆ ಹಾಗೆ ಕಾಣಿಸಿಕೊಳ್ಳುತ್ತಾನೆ. ಆತನಿಗೆ ಜನನವೆಂಬುದೊಂದಿಲ್ಲ. ಆತ ನಮಗೆ ಕಾಣಿಸಿಕೊಳ್ಳುವುದನ್ನು ನಾವು ಆತನ ಜನನ ಎಂದು ತಿಳಿಯುತ್ತೇವೆ ಅಷ್ಟೇ.

Monday, November 15, 2010

Vishnusahasranama 567-570

ವಿಷ್ಣು ಸಹಸ್ರನಾಮ:  ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ
567) ಆದಿತ್ಯಃ
ಭೂಮಿಯಲ್ಲಿ ಪ್ರತಿಯೊಂದು ಜೀವದೊಳಗೆ ಅಂತರ್ಯಾಮಿಯಾಗಿರುವ ಭಗವಂತನೇ ಸೂರ್ಯ ಮಂಡಲದಲ್ಲಿ ತುಂಬಿ ಸೂರ್ಯ ಕಿರಣಗಳ ಮೂಲಕ ಶಕ್ತಿಪಾತ ಮಾಡುತ್ತಿದ್ದಾನೆ. ಆದಿತ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಆದಿತ್ಯಃ.
568) ಜ್ಯೋತಿರಾದಿತ್ಯಃ
ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆ ಅದರ ಮೂಲ ಭಗವಂತ. ಗೀತೆಯಲ್ಲಿ ಹೇಳಿದಂತೆ: 
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇ s ಖಿಲಮ್ |
ಯಚ್ಚಂದ್ರಮಸಿ  ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ || (ಅ-೧೫ ಶ್ಲೋ-೧೨)
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನ ಬೆಳಕೆಂದು ತಿಳಿ".  ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ, ಬೆಳಕಿನ ಮೂಲ ಕಾರಣಗಳಾದ ಸೂರ್ಯಾದಿಗಳಲ್ಲಿ ತುಂಬಿದ ಜ್ಞಾನ ಮೂರ್ತಿ ಭಗವಂತ ಜ್ಯೋತಿರಾದಿತ್ಯಃ
569) ಸಹಿಷ್ಣುಃ
ಭಗವಂತ ಅಪರಾಧಗಳನ್ನು ಸಹಿಸುವ ಕರುಣಾಮೂರ್ತಿ. ನಾವು ಕೆಲವೊಮ್ಮೆ ದೇವರನ್ನು ತಪ್ಪಾಗಿ ತಿಳಿಯುತ್ತೇವೆ, ಬಯ್ಯುತ್ತೇವೆ, ತಪ್ಪು ಉಪಾಸನೆ ಮಾಡುತ್ತೇವೆ.ಆದರೆ ಆತ ಭಕ್ತರ ಸರ್ವಾಪರಾಧವನ್ನು ಮನ್ನಿಸುವ ಮಹಾ ಸಹಿಷ್ಣು, ಯಾರಾದರು ಅನನ್ಯ ಭಕ್ತಿಯಿಂದ ಕರೆದಾಗ ಅವರ ಸರ್ವಾಪರಾಧವನ್ನು ಮನ್ನಿಸುವ ಕರುಣಾಮೂರ್ತಿ.ಆದರೆ ತಪ್ಪುಮಾಡಿದವರ ತಪ್ಪನ್ನು ಭಗವಂತ ಕ್ಷಮಿಸುವುದಿಲ್ಲ. ಏಕೆಂದರೆ ಕ್ಷಮೆ ನಮ್ಮನ್ನು ಕೆಡಿಸಬಹುದು ಎನ್ನುವ ಕಾರುಣ್ಯ ಭಗವಂತನದ್ದು.     
570) ಗತಿಸತ್ತಮಃ
ನಮ್ಮ ಜೀವದ ಗತಿಯನ್ನರಿತ, ಎಲ್ಲರಿಗಿಂತ ಎತ್ತರದಲ್ಲಿರುವ ಕಾರುಣ್ಯಮೂರ್ತಿ.'ಗತಿ' ಎಂದರೆ ನಾವು ಹೋಗಿ ಸೇರಬೇಕಾದ ತಾಣ. ಗಮ್ಯವಾದ ಸ್ಥಾನದಲ್ಲಿ ಶ್ರೇಷ್ಠವಾದ ಹಿರಿಯ ತಾಣ ಭಗವಂತ ಗತಿಸತ್ತಮಃ.

Sunday, November 14, 2010

Vishnusahasranama 562-566

ವಿಷ್ಣು ಸಹಸ್ರನಾಮ:  ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ
562) ಭಗವಾನ್
ಈ ನಾಮ ಬಹಳ ಪ್ರಸಿದ್ಧವಾದ, ಎಲ್ಲಾ ಬಾಷೆಯಲ್ಲಿ, ಎಲ್ಲಾ ಜಾತಿ-ಧರ್ಮಗಳಲ್ಲಿ ಇರುವ ನಾಮ.ಸಾಮಾನ್ಯವಾಗಿ ಭಗವಂತನಿಗೆ ಬ್ರಹ್ಮ, ಪರಬ್ರಹ್ಮ, ಆತ್ಮ, ಪರಮಾತ್ಮ ಹಾಗು ಭಗವನ್ ಈ ನಾಮಗಳು ವಿಶಿಷ್ಟ ನಾಮಗಳು. ಇಲ್ಲಿ 'ಭಗ' ಎಂದರೆ ಭಾಗ್ಯ, ಭಗವಾನ್ ಎಂದರೆ ಭಾಗ್ಯಸ್ವರೂಪ.
ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ ವೈರಾಗ್ಯ ಯೋಗಸ್ಚೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ' ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ.
೧) ಐಶ್ವರ್ಯ: ಪೂರ್ಣ ಐಶ್ವರ್ಯ ಅಂದರೆ ಸರ್ವ ಸಮರ್ಥ (Omnipotent) 
೨) ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ.
೩) ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ, ಅದರಿಂದ ಯಶಸ್ಸು.
೪) ಶ್ರೀ: ಶ್ರೀ ಎಂದರೆ ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು ನಿಜವಾದ ಶ್ರೀ. ಈ ಬ್ರಹ್ಮಾಂಡವೇ ಅತೀ ದೊಡ್ಡ ಸಂಪತ್ತು.
೫) ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ
೬) ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು.
ಈ ಆರು ಗುಣಗಳು ಪೂರ್ಣಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲದವ ಭಗವಾನ್.
563) ಭಗಹಾ
ದುಷ್ಟರ ಭಾಗ್ಯವನ್ನು ಕಸಿವವನು ಹಾಗು ಪುಣ್ಯಾತ್ಮರಿಗೆ ಭಾಗ್ಯಪ್ರದನಾಗಿರುವ ಭಗವಂತ ಭಗಹಾ. 
564) ಆನಂದೀ
ಪೂರ್ಣಾನಂದವುಳ್ಳವನು; ಪೂರ್ಣಾನಂದ ಸ್ವರೂಪ ಭಗವಂತ ಆನಂದೀ. 
565) ವನಮಾಲೀ
ಇದು ವಿಶೇಷವಾಗಿ ಕೃಷ್ಣಾವತಾರಕ್ಕೆ ಸಂಬಂಧಪಟ್ಟ ಹೆಸರು. ಕೃಷ್ಣ ಗೋಪಾಲಕರ ಜೊತೆ ಗೋವುಗಳನ್ನು ಕಾಯುತ್ತಿದ್ದ. ಆಗ ಪ್ರಕೃತಿಯಲ್ಲಿರುವ ಹೂ, ನವಿಲುಗರಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಕುತ್ತಿಗೆಯಿಂದ ಕಾಲಿನಗಂಟಿನವರೆಗೆ ಹೂ ಮಾಲೆಯನ್ನು ಮಾಡಿ ಹಾಕಿಕೊಳ್ಳುತ್ತಿದ್ದ ಭಗವಂತನನ್ನು ವನಮಾಲೀ ಎನ್ನುತ್ತಿದ್ದರು.
ಪ್ರಪಂಚ ಸೃಷ್ಟಿಯ ಮೊದಲ ಹಂತದಲ್ಲಿ ನಾನಾ ಬಗೆಯ ವನಸ್ಪತಿಗಳ ರೂಪದಲ್ಲಿ ಜೀವಸೃಷ್ಟಿ ಮಾಡಿದ ಭಗವಂತ ವನಮಾಲೀ.
566) ಹಲಾಯುಧಃ
ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ ಆವಿರ್ಭೂತಿಯಾದ ಭಗವಂತ
ಹಲಾಯುಧಃ

Vishnusahasranama 557-561

ವಿಷ್ಣು ಸಹಸ್ರನಾಮ:  ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ
557) ವರುಣಃ
ಮಿತ್ರ ಹಗಲಿನ ಸೂರ್ಯನಾದರೆ ವರುಣ ರಾತ್ರಿಯ ಸೂರ್ಯ, ಇದನ್ನೇ  "ಶಂ ನೋ ಮಿತ್ರಃ ಶಂ ವರುಣಃ" ಎಂದಿದ್ದಾರೆ. ಮಿತ್ರನಾಗಿ , ವರುಣನಾಗಿ ಜಗತ್ತಿನ ಹಗಲು ರಾತ್ರಿಯನ್ನು ನಿಯಂತ್ರಿಸುವ ಭಗವಂತ 'ವರುಣಃ' ಜೀವರನ್ನು ಸಂಸಾರವೆಂಬ ಮಾಯೆಯ ಆವರಣದಲ್ಲಿಡುವ ಹಿರಿಯ ಆನಂದ ಸ್ವರೂಪ ಭಗವಂತ ವರುಣಃ. 
558) ವಾರುಣಃ
ನೀರಿನ, ಸಮುದ್ರದ, ಪಶ್ಚಿಮದಿಕ್ಕಿನ ದೇವತೆ ವರುಣ. ಇಂತಹ ವರುಣನಲ್ಲಿದ್ದು, ಸಮಸ್ಥ ಕಾರ್ಯವನ್ನು ನಿರ್ವಹಿಸುವ, ಶತ್ರುಗಳನ್ನು ತಡೆಯಬಲ್ಲ ಭಲದ ಮೂರ್ತಿ, ಕ್ಷೀರಸಾಗರವಾಸಿ ಭಗವಂತ ವಾರುಣಃ. 
559) ವೃಕ್ಷಃ
ವೃಕ್ಷ ಎಂದರೆ ಮರ, ಯಾವುದನ್ನು ಕಡಿಯುತ್ತೇವೋ(ಛೇದನೆ) ಅದು ವೃಕ್ಷ. ಸಂಸಾರವೆಂಬ ಮಹಾ ವೃಕ್ಷವನ್ನು ಕಡಿದು ಮುಕ್ತಿ ಕೊಡುವ ನಿರ್ವೀಕಾರ ಹಾಗು ನಿಶ್ಚಲ ಮೂರ್ತಿ ಭಗವಂತ ವೃಕ್ಷಃ.
560) ಪುಷ್ಕರಾಕ್ಷಃ
ಪುಷ್ಕರಾಕ್ಷಃ ಎಂದರೆ ಪುಷ್ಕರದಂತೆ(ತಾವರೆಯಂತೆ) ಅಕ್ಷ ಉಳ್ಳವ ಅಥವಾ ತಾವರೆಗಣ್ಣಿನವ. ದೇಹದಲ್ಲಿ ಕಣ್ಣು ಆಕರ್ಷಣೆಯ ಕೇಂದ್ರ.  ಭಗವಂತ ಅಗಲವಾದ ಅರಳುಗಣ್ಣಿನ ಸೌಂದರ್ಯಮೂರ್ತಿ. ಕೆಂದಾವರೆ ಬಣ್ಣ ನಸುಗೆಂಪು. ಆರೋಗ್ಯವಾಗಿರುವ ವ್ಯಕ್ತಿಯ ಕಣ್ಣು ಹಾಗಿರುತ್ತದೆ. ರಕ್ತ ಕೆಂಪಾದ ಅಥವಾ ಬಿಳಿಚಾದ ಕಣ್ಣು ಆರೋಗ್ಯದ ಲಕ್ಷಣವಲ್ಲ. ನಸುಗೆಂಪು ವಾತ್ಸಲ್ಯವನ್ನು ಬಿಂಬಿಸುತ್ತದೆ. ಭಕ್ತವಾತ್ಸಲ್ಯವನ್ನು ಬಿಂಬಿಸುವ ಕಣ್ಣುಗಳುಳ್ಳ ವಾತ್ಸಲ್ಯಮೂರ್ತಿ ಭಗವಂತ ಪುಷ್ಕರಾಕ್ಷಃ.       
561) ಮಹಾಮನಾಃ
ಮನಸ್ಸು ಎಂದರೆ 'ಮನನ'. ಒಂದು ವಸ್ತುವನ್ನು ತಳಸ್ಪರ್ಶಿಯಾಗಿ ತಿಳಿಯುವುದು 'ಅರಿವು'. ಇಂತಹ ಮಹತ್ತರವಾದ ಮನನ ಉಳ್ಳವನು ಮಹಾಮನಃ. ಭಕ್ತರು ಬಯಸಿದ್ದೆಲ್ಲವನ್ನೂ ಕೊಡುವ ಮನೋವೈಶಾಲ್ಯವುಳ್ಳ ಸರ್ವಜ್ಞ ಭಗವಂತ ಮಹಾಮನಾಃ.