Thursday, August 26, 2010

Vishnusahasranama 314-316

ವಿಷ್ಣು ಸಹಸ್ರನಾಮ : ಕ್ರೋಧಹಾ ಕ್ರೋಧಕೃತ್ಕರ್ತಾ

314) ಕ್ರೋಧಹಾ
ಮನುಷ್ಯ ಕಾಮವನ್ನಾದರೂ ಗೆಲ್ಲಬಹುದು ಆದರೆ ಕ್ರೋದವನ್ನು ಗೆಲ್ಲುವುದು ಅತೀ ಕಷ್ಟ. ಕ್ರೋಧ ನಮಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮನ್ನು ಅಂಟಿಕೊಂಡಿರುತ್ತದೆ. ಈ ಸಮಸ್ಯೆ ಋಷಿ ಮುನಿಗಳನ್ನೂ ಬಿಟ್ಟಿಲ್ಲ. ಕಾಮವನ್ನು ಗೆದ್ದ ವಿಶ್ವಾಮಿತ್ರರು ರಂಬೆ ಬಂದಾಗ ಕೋಪಗೊಂಡು 'ಕಲ್ಲಾಗು' ಎಂದು ಶಾಪ ಕೊಟ್ಟು ಕ್ರೋಧದ ಬಲೆಗೆ ಬೀಳುತ್ತಾರೆ. ನಮ್ಮ ಕ್ರೋಧವನ್ನು ಭಗವಂತನೊಬ್ಬನೇ ಹರಣ ಮಾಡಬಲ್ಲ. ನಾವು ಕ್ರೋಧದಿಂದ ಮುಕ್ತಿ ಪಡೆಯಬೇಕಾದರೆ ಭಗವಂತನಲ್ಲಿ ಶರಣಾಗುವುದೊಂದೇ ನಮಗಿರುವ ಮಾರ್ಗ. ನಮ್ಮ ಕ್ರೋಧವನ್ನು ಕಳೆವವನು ಹಾಗು ಕ್ರೋಧದ ಪಡೆಯಾದ ರಾಕ್ಷಸರನ್ನು ಸಂಹಾರ ಮಾಡುವ ಭಗವಂತ ಕ್ರೋಧಹಾ.
315) ಕ್ರೋಧಕೃತ್
ದುಷ್ಟ ಸಂಹಾರದಲ್ಲಿ ಭಗವಂತ ಸ್ವಯಂ ಕ್ರೋಧ ರೂಪಿ. ಭಗವಂತನ ನರಸಿಂಹ ಅವತಾರ ಆತನ ಕ್ರೋಧ ರೂಪದ ಒಂದು ಉದಾಹರಣೆ. ನಮಗೆ ಕೋಪವನ್ನು ಕೊಡುವವನು ಭಗವಂತನೇ! ಮಹಾತ್ಮರ ಕೋಪ ಮಹತ್ಕಾರ್ಯವಾಗಿ ಮಾರ್ಪಾಟಾಗುತ್ತದೆ. ಸನಕಾದಿಗಳು ಜಯ-ವಿಜಯರ ಮೇಲೆ ಕೋಪಗೊಂಡು ಶಾಪ ಕೊಟ್ಟ ಪರಿಣಾಮ ಭಗವಂತ ಭೂಮಿಯಲ್ಲಿ ಹಲವು ಅವತಾರವನ್ನು ತೊಟ್ಟು ಸಜ್ಜನರ ಉದ್ದಾರ ಮಾಡುವಂತಾಯಿತು. ಹೀಗೆ ದುರ್ಜನರ ಮೇಲೆ ಕೋಪಗೊಳ್ಳುವ ಭಗವಂತ ಕ್ರೋಧಕೃತ್.
316) ಕರ್ತಾ
ಕರ್ತಾ ಎಂದರೆ 'ಮಾಡುವವನು' ಅಥವಾ 'ಕತ್ತರಿಸುವವನು'. ಸೃಷ್ಟಿ ಕಾಲದಲ್ಲಿ ಎಲ್ಲವನ್ನೂ ಸೃಷ್ಟಿ 'ಮಾಡುವ' ಭಗವಂತ ಸಂಹಾರ ಕಾಲದಲ್ಲಿ ಎಲ್ಲವನ್ನೂ 'ಕತ್ತರಿಸುತ್ತಾನೆ' ಹೀಗೆ ಯಾವ ಯಾವ ಕಾಲದಲ್ಲಿ ಏನೇನು ಆಗಬೇಕೋ ಅದನ್ನು ಮಾಡುವ ಹಾಗು ಯಾವ ಕಾಲದಲ್ಲಿ ಯಾವುದು ಇರಬಾರದೋ ಅದನ್ನು ಕತ್ತರಿಸಿ ತೆಗೆಯುವ ಭಗವಂತ ಕರ್ತಾ

Wednesday, August 25, 2010

Vishnu sahasranama 310-313


ವಿಷ್ಣು ಸಹಸ್ರನಾಮ: ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ
310) ಶಿಷ್ಟೇಷ್ಟಃ

ಶಿಷ್ಟರು ಎಂದರೆ ಸಂಪ್ರದಾಯದಿಂದ ಬಂದ ಸತ್ಯದ ಅರಿವನ್ನು ಪಡೆದವರು; ಗುರೂಪದೇಶದಂತೆ ಸತ್ಯದ ಮಾರ್ಗದಲ್ಲಿ ನಡೆಯುವವರು. ಬಲ್ಲವರಿಗೆ ಇಷ್ಟವಾದ ಹಾಗು ಬಲ್ಲವರಿಂದ ಪೂಜೆತನಾಗುವ ಭಗವಂತ ಶಿಷ್ಟೇಷ್ಟಃ.
311) ಶಿಖಂಡೀ
ಸಾಮಾಜಿಕವಾಗಿ ಈ ಪದಕ್ಕೆ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು. ಶಿಖ+ಅಂಡ ಇಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು ಈ ಕಾರಣಕ್ಕಾಗಿ ಆತನನ್ನು ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ ಆ ಕಾರಣಕ್ಕಾಗಿ ಆತನನ್ನು ಶಿಖಂಡೀ ಎನ್ನುವುದು ವಾಡಿಕೆ.
ಈ ನಾಮವನ್ನು ಒಡೆದು ನೋಡಿದರೆ ಶಿ+ಖಂಡಿ; ಇಲ್ಲಿ ಶಿ ಎಂದರೆ ಸದಾ ಅಜ್ಞಾನದ ನಿದ್ದೆಯಲ್ಲಿರುವವರು, ಇಂತವರನ್ನು ಖಂಡಿಸುವ ಭಗವಂತ ಶಿಖಂಡೀ, ಶಂ ಎಂದರೆ ಸುಖ, ಸ್ವಯಂ ಆನಂದ ಸ್ವರೂಪನಾಗಿದ್ದು ದುಃಖಮಯವಾದ ಸಂಸಾರವನ್ನು ಖಂಡಿಸಿ ಮುಕ್ತಿ ಕೊಡುವವನು; ಸುಖಕ್ಕೆ ಅಯೋಗ್ಯರಾದವರ ಸುಖವನ್ನು ಖಂಡಿಸುವ ಭಗವಂತ ಶಿಖಂಡೀ.
312) ನಹುಷಃ
ನಮ್ಮನ್ನು ಸಂಸಾರ ಬಂಧನದಲ್ಲಿ ಸಿಲುಕಿಸುವ, ಕೊನೆಗೆ ಸಂಸಾರ ಬಂಧದಿಂದ ಬಿಡಿಸಿ ಮೋಕ್ಷ ಕರುಣಿಸುವ ಭಗವಂತ ನಹುಷಃ.
ನಾವು ಅನೇಕ ಬಂಧನಗಳ ಸರಮಾಲೆಗಳಿಂದ ಬಂಧಿಸಲ್ಪಟ್ಟಿರುತ್ತೇವೆ. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವುದಕ್ಕೆ ಅವರೊಳಗಿರುವ ಯಾವುದೋ ಒಂದು ಶಕ್ತಿ ಕಾರಣವಾಗಿರುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ಅಪರಿಚಿತರಾಗಿ ಬಂದು ಸ್ನೇಹದ ಬಂಧನದಲ್ಲಿ ಸಿಲುಕುವುದು, ಪತಿ-ಪತ್ನಿಯಾಗಿ ಪ್ರೀತಿಯ ಬಂಧನದಲ್ಲಿ ಬಂಧಿಸಲ್ಪಡುವುದು, ಎಲ್ಲವೂ ಭಗವಂತನ ನಿಯಮದಂತೆ. ಒಬ್ಬ ವ್ಯಕ್ತಿಯ ಸಹವಾಸದಲ್ಲಿ ನಮ್ಮ ಹೃದಯ ಅರಳುವಂತೆ ಮಾಡುವವ ಭಗವಂತ. ಇದರಿಂದ ಸ್ನೇಹ ಬೆಳೆಯುತ್ತದೆ. ಸ್ನೇಹ-ಪ್ರೇಮದ ನಂಟನ್ನು ಬೆಳೆಸುವವ ಹಾಗು ಬೆಸೆಯುವವ ಹಾಗು ಬೇರ್ಪಡಿಸುವವ ಭಗವಂತ. ನಮ್ಮನ್ನು ಬಂಧನಕ್ಕೆ ಸಿಲುಕಿಸುವ ಭಗವಂತ ಯಾವಾಗ ಬೇರ್ಪಡಿಸುತ್ತಾನೆ ಎಂದು ತಿಳಿಯುವುದು ಕಷ್ಟ. ಪ್ರೀತಿಗಾಗಿ ಬೇರ್ಪಡುವ, ದ್ವೇಷದಿಂದ ಬೇರ್ಪಡುವ ಜನರನ್ನು ಸಾಮಾನ್ಯವಾಗಿ ನಾವು ಕಾಣುತ್ತೇವೆ. ಹೀಗೆ ಬಂಧನದಲ್ಲಿ ಸಿಲುಕಿಸುವವ ಹಾಗು ಬಂಧನದಿಂದ ಬೇರ್ಪಡಿಸುವ ಭಗವಂತ ನಹುಷಃ. ಗ್ರಹ-ಗೊಲಗಳನ್ನು ಒಂದಕ್ಕೊಂದು ಸಂಕರ್ಷಣ ಶಕ್ತಿಯಿಂದ ಬಂಧಿಸಿಟ್ಟಿರುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಬೇರ್ಪಡಿಸುತ್ತಾನೆ. ಇದು ಆತನ ನಿಯಮ.


313) ವೃಷಃ
ರೂಢಿಯಲ್ಲಿ ವೃಷಃ ಎಂದರೆ ಗೂಳಿ ಎನ್ನುವ ಅರ್ಥವಿದೆ. ಆದರೆ ವೈದಿಕವಾಗಿ ವೃಷಃ ಎಂದರೆ 'ಸುರಿಸುವುದು' ಎನ್ನುವ ಅರ್ಥವನ್ನು ಕೊಡುತ್ತದೆ. ಭಕ್ತರ ಹಾಗು ಜ್ಞಾನಿಗಳ ಮೇಲೆ ಅಭೀಷ್ಟದ ಮಳೆ ಸುರಿಸುವ ಭಗವಂತ ವೃಷಃ. ಈ ನಾಮದ ಇನ್ನೊಂದು ಅರ್ಥ 'ಧರ್ಮ'; ಸಮಾಜವನ್ನು ಧಾರಣೆ ಮಾಡುವುದು ಧರ್ಮ ಹಾಗು ಇದು ಭಗವಂತನ ಪ್ರತೀಕ. ವೃ+ಷಃ ಇಲ್ಲಿ 'ಷ' ಎಂದರೆ ಷಡ್ಗುಣಾಃ; ಭಗವಂತನ ಉಪಾಸನೆ ಮಾಡುವ ಆರು ಮೂಲ ಗುಣ. ಐಶ್ವರ್ಯ, ವೀರ್ಯ, ಯಶಸ್ಸು, ಸಂಪತ್ತು , ಜ್ಞಾನ ಹಾಗು ವೈರಾಗ್ಯ. ಯಾರಲ್ಲಿ ಈ ಆರು ಗುಣಗಳು ಪೂರ್ಣವಾಗಿದೆಯೋ ಅವನು ವೃಷಃ .

Tuesday, August 24, 2010

Vishnu Sahasranama 308-309

ವಿಷ್ಣು ಸಹಸ್ರನಾಮ: ಇಷ್ಟೋ ವಿಶಿಷ್ಟಃ........
308) ಇಷ್ಟಃ

ಯಾವುದೇ ಒಂದು ವಸ್ತುವನ್ನು ಗೌರವಿಸಿ ಆದರಿಸಬೇಕಾದರೆ ಅದು ನಮಗೆ ಇಷ್ಟವಾಗಬೇಕು. ಭಗವಂತನ ರೂಪಗಳು ಹಲವು; ಹಾಗು ಒಬ್ಬೊಬ್ಬರಿಗೆ ಒಂದೊಂದು ರೂಪ ಇಷ್ಟ. ಇಲ್ಲಿ ಇಷ್ಟ ಎಂದರೆ ನಮ್ಮ ಪ್ರೀತಿಗೆ ಪಾತ್ರವಾದ ವಸ್ತು. ಭಗವಂತ ಎಲ್ಲರೂ ಪ್ರೀತಿಸಬೇಕಾದ ವಸ್ತು. ಇನ್ನೊಂದು ಅರ್ಥದಲ್ಲಿ ಇಷ್ಟಃ ಎಂದರೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವವನು. ಗೀತೆಯಲ್ಲಿ ಹೇಳುವಂತೆ:
ಅಹಂ ಹಿ ಸರ್ವ ಯಜ್ಞಾನಾಂ ಭೂಕ್ತಾ ಚ ಪ್ರಭುರೇವ ಚ
ನಾವು ಯಾವುದೇ ದೇವತೆಯ ಕುರಿತು ಯಾಗ ಮಾಡಿದರೂ ಅದು ಕೊನೆಗೆ ತಲುಪುವುದು ಅಂತರ್ಯಾಮಿ-ಯಾದ ಭಗವಂತನನ್ನೇ. ಹೀಗೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವ, ಎಲ್ಲಾರಿಗೂ ಇಷ್ಟನಾದ 'ಇಷ್ಟದೇವ' ಭಗವಂತ ಇಷ್ಟಃ.
309) ಅವಿಶಿಷ್ಟಃ (ವಿಶಿಷ್ಟಃ)
ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಅವಿಶಿಷ್ಟಃ ; ಆತ ಎಲ್ಲರಿಗಿಂತ ಹೆಚ್ಚು ವಿಶೇಷತೆ ಉಳ್ಳವನು (Extraordinary). ಅಸಾಧಾರಣ ಗುಣವುಳ್ಳ ಸರ್ವೋತ್ಕೃಷ್ಟ ಭಗವಂತ ವಿಶಿಷ್ಟಃ. ಇಲ್ಲಿ ಶಿಷ್ಟ ಎಂದರೆ 'ಶೇಷ' ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಮಹಾ ಪ್ರಳಯದ ನಂತರ ಕೊನೆಗೆ ಉಳಿಯುವ ಏಕಮಾತ್ರ ಶಕ್ತಿ. ಪ್ರಪಂಚಕ್ಕೆ ಭಗವಂತನ ಅರಿವನ್ನು ಕೊಟ್ಟವರು ಜ್ಞಾನಿಗಳು. ಜ್ಞಾನಿಗಳ ಉಪದೇಶದಿಂದ ಯಾರನ್ನು ತಿಳಿಯಲು ಸಾದ್ಯವೋ ಅವನು ವಿಶಿಷ್ಟಃ

Monday, August 23, 2010

Vishnusahasranama 304-307

ವಿಷ್ಣು ಸಹಸ್ರನಾಮ: ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್
304) ಅದೃಶ್ಯಃ

ಅದೃಶ್ಯಃ ಎಂದರೆ ಕಾಣಸಿಗದವನು. ಭಗವಂತ ಜೀವನ ನಾಟಕದ ಸೂತ್ರದಾರ ಆದರೆ ಆತ ಕಾಣ-ಸಿಗುವುದಿಲ್ಲ. ಇದಕ್ಕೆ ವಿಶೇಷ ಕಾರಣವಿದೆ. ನಮ್ಮ ಕಣ್ಣಿಗೆ ಕಾಣುವುದು ಕೇವಲ ಮಣ್ಣು-ನೀರು-ಬೆಂಕಿಯಿಂದಾದ ವಸ್ತು ಮಾತ್ರ. ಭಗವಂತನ ಆಕಾರ ಮಣ್ಣು-ನೀರು-ಬೆಂಕಿಯಿಂದಾಗಿಲ್ಲ. ಅವನು ಸ್ವಯಂ ಕಾಣಿಸಿಕೊಳ್ಳಬೇಕು ಎಂದು ಬಯಸದೇ ಕಾಣಿಸಿಕೊಳ್ಳುವುದಿಲ್ಲ.
305) ವ್ಯಕ್ತರೂಪಃ (ಅವ್ಯಕ್ತರೂಪಃ)
ಭಗವಂತನ ರೂಪ ಜ್ಞಾನಾನಂದ ಸ್ವರೂಪ. ಆನಂದ, ದುಃಖ, ಸುಖ, ಜ್ಞಾನ, ಅಜ್ಞಾನ, ಇತ್ಯಾದಿ ಕಣ್ಣಿಗೆ ಕಾಣುವ ವಸ್ತುಗಳಲ್ಲ. ಭಗವಂತ ಜ್ಞಾನಾನಂದಮಯ ಅವನ ರೂಪ ಅವ್ಯಕ್ತ. ಆದರೆ ಆತ ಬಯಸಿದರೆ ವ್ಯಕ್ತನಾಗಬಲ್ಲ. ಆತ ಒಲಿದನೆಂದರೆ ತನ್ನ ರೂಪವನ್ನು ತೆರೆದು ತೋರಿಸುತ್ತಾನೆ. ಅವತಾರರೂಪನಾಗಿ ಬಂದಾಗ ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ. ಸೂತ್ರದಾರನಾದ ಭಗವಂತ ಸ್ವಯಂ ತನ್ನ ಪಾತ್ರವನ್ನು ನಿಭಾಯಿಸಲು ಅವತಾರ ರೂಪಿಯಾಗಿ ಭೂಮಿಗಿಳಿದು ಬರುತ್ತಾನೆ. ಹೊರಗಣ್ಣಿಗೆ ಕಾಣದ ಭಗವಂತ ಸಾಧಕರಿಗೆ ಧ್ಯಾನದಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಧಕ ಧ್ಯಾನದಲ್ಲಿ ತನ್ನ ಮನಸ್ಸನ್ನು ಅಣಿಗೊಳಿಸುತ್ತಾನೆ. ಆದರೆ ಇದು ಸುಲಭದ ಕೆಲಸವಲ್ಲ. ಮನಸ್ಸನ್ನು ನಿಯಂತ್ರಿಸಿ, ಬುದ್ಧಿಯನ್ನು ನಿಯಂತ್ರಣ ಮಾಡಿ ಅದರಾಚೆಗಿನ ಅಹಂಕಾರ, ಚಿತ್ತ, ಚೇತನ ಎಲ್ಲವನ್ನೂ ನಿಯಂತ್ರಣ ಮಾಡಿ, ಒಂದು ಬಿಂದುವಿನಲ್ಲಿ ಏಕಾಗ್ರನಾದಾಗ ಮನಸ್ಸು ಆತನ ಪ್ರತೀಕವನ್ನು ಕಡೆಯುತ್ತದೆ. ಆದರೆ ಇದು ಕೇವಲ ನಮ್ಮ ಸಂಸ್ಕಾರದ ಪ್ರತಿಮೆ ಹೊರತು ಭಗವಂತನಲ್ಲ. ಸಾಕ್ಷಾತ್ ಭಗವಂತನನ್ನು ಕಾಣಬೇಕಾದರೆ ನಾವು ನಮ್ಮ ಪಂಚ ಕೋಶಗಳಿಂದ ಈಚೆ ಬಂದು ಜ್ಞಾನಾನಂದಮಯರಾಗಬೇಕು. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿ ಆತ್ಮವೇ ಯೋಚಿಸಲು ಆರಂಭಿಸುತ್ತದೆ. ಆಗ ಜ್ಞಾನಾನಂದ ರೂಪನಾದ ಭಗವಂತನನ್ನು ಕಾಣಬಹುದು. ಈ ಕಾರಣಕ್ಕಾಗಿ ಭಗವಂತನ ರೂಪ ವ್ಯಕ್ತ ಹಾಗು ಅವ್ಯಕ್ತ!
306) ಸಹಸ್ರಜಿತ್
ಭಗವಂತ ಸಾವಿರ ರೂಪವನ್ನು ತೊಟ್ಟವ. ವ್ಯಕ್ತಿ ಒಂದೇ ಆದರೂ ಅವತಾರದಲ್ಲಿ ಅಭಿವ್ಯಕ್ತಿ ಬೇರೆ ಬೇರೆ. ವ್ಯಕ್ತಿ ಏಕ ಅಭಿವ್ಯಕ್ತಿ ಅನಂತ. ಸೃಷ್ಟಿಯ ಆದಿಯಲ್ಲಿ ನಾಲ್ಕು ರೂಪದಲ್ಲಿ ವ್ಯಕ್ತನಾದ (ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ವಾಸುದೇವ) ನಂತರ ಪಂಚರೂಪ, ನಂತರ ಕೇಶವಾದಿ ದ್ವಾದಶರೂಪ, ನಂತರ ಸಂಕರ್ಷಣಾದಿ ಇಪ್ಪತ್ನಾಲ್ಕು ರೂಪ ಆನಂತರ ನಾರಾಯಣಾದಿ 108 ರೂಪ ಆ ಮೇಲೆ ವಿಶ್ವಾದಿ ಸಹಸ್ರರೂಪ. ಈ ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಒಂದೊಂದು ರೂಪದ ಪ್ರತೀಕ. ಸಹಸ್ರಾರು ದೇವತೆಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಭಗವಂತನಿಗೆ ಪ್ರಾಣತತ್ವ ಸದಾ ಜೊತೆಗಾರ. ಸಹಸ್ರಾರು ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಭಗವಂತ ಸಹಸ್ರಜಿತ್.
307) ಅನಂತಜಿತ್
ಭಗವಂತ ಅನಂತವನ್ನು ಗೆದ್ದವನು ಹಾಗು ಅನಂತದ ಜೊತೆಗಿರುವವನು. ಗೀತೆಯಲ್ಲಿ ಹೇಳುವಂತೆ:
ಅನಂತಸ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್
ಪಿತ ಣಾಮರ್ಯಮಾ ಚಾಸ್ಮಿ ಯಮಃ ಸಂಯಮ ತಾಮಹಮ್ (ಅ-೧೦ ಶ್ಲೋ-೨೯)
ನಾಗರ ಹಾವುಗಳಲ್ಲಿ ಶೇಷ ನಾನು (ಅಳಿವಿರದ್ದರಿಂದ 'ಅನಂತ' ಎನ್ನಿಸಿ ಶೇಷನಲ್ಲಿದ್ದೇನೆ). ಜಲಚರಗಳ ಒಡೆಯ ವರುಣ ನಾನು, ಪಿತೃ ದೇವತೆಗಳಲ್ಲಿ ಆರ್ಯಮ ನಾನು , ದಂಡಿಸುವವರಲ್ಲಿ ಯಮ ನಾನು. ಹೀಗೆ ನಾಗರನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶೇಷಶಯನನಾದ ಅನಂತಜಿತ್.

Sunday, August 22, 2010

Vishnusahasranama 301-303


ವಿಷ್ಣು ಸಹಸ್ರನಾಮ: ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ

301) ಯುಗಾವರ್ತಃ
ಮೇಲೆ ಹೇಳಿದಂತೆ ಯುಗದ ಆದಿಗೆ ಕಾರಣಕರ್ತನಾದ ಭಗವಂತ ಯುಗದ ಆವರ್ತನೆಗೂ ಕಾರಣಕರ್ತ. ಯುಗದ ನಂತರ ಯುಗ, ಚತುರ್ಯುಗದ ನಂತರ ಚತುರ್ಯುಗ, ಮನ್ವಂತರದ ನಂತರ ಮನ್ವಂತರ, ಹೀಗೆ ವಿಶ್ವದ ಆವರ್ತನೆಗೆ ಕಾರಣಕರ್ತನಾಗಿ, ಪ್ರತಿಯೊಂದು ಗಂಡು ಹೆಣ್ಣಿನಲ್ಲಿ ಕುಳಿತು ಯುಗಚಕ್ರವನ್ನು ತಿರುಗಿಸುವ ಭಗವಂತ ಯುಗಾವರ್ತಃ.
302) ನೈಕಮಾಯಃ
ಭಗವಂತನ ಮಾಯೆ ಅನೇಕ. ವೈದಿಕ ಸಾಹಿತ್ಯದಲ್ಲಿ 'ಮಾಯ' ಎನ್ನುವ ಪದಕ್ಕೆ 'ಜ್ಞಾನ, ಇಚ್ಚೆ, ಮಹಿಮೆ ಇತ್ಯಾದಿ ಅರ್ಥವಿದೆ. ಭಗವಂತನ ಮಾಯೆಯಿಂದ ಈ ಜಗತ್ತು ಸೃಷ್ಟಿಯಾಯಿತು ಎಂದರೆ ಭಗವಂತನ ಅನಂತ ಜ್ಞಾನಶಕ್ತಿ ಹಾಗು ಇಚ್ಚಾ ಶಕ್ತಿಯಿಂದ ಈ ಜಗತ್ತು ಆವಿಷ್ಕಾರವಾಯಿತು ಎಂದರ್ಥ. ಭಗವಂತ ಅನಂತ ಮಹಿಮ; ಅವನ ಮಹಿಮೆಗೆ ಎಣೆಯಿಲ್ಲ, ಅದು ಅಪರಂಪಾರವಾದದ್ದು. ಇನ್ನು ಮಾಯೆ ಎಂದರೆ ಮೋಹಕ ಶಕ್ತಿ ; ನೈಕಮಾಯ ಎಂದರೆ ನಮ್ಮನ್ನು ಎರಡು ಮೋಹಕ ಶಕ್ತಿಗಳಿಂದ ಕಟ್ಟಿಹಾಕಿದ ಭಗವಂತ. ಅವುಗಳೆಂದರೆ ನಮಗೆ ನಮ್ಮ ಸ್ವರೂಪದ ಅರಿವೇ ಇಲ್ಲದ ಹರಿಯುವ ಪರದೆ ಮತ್ತು ಭಗವಂತನಿಗೂ ಹಾಗು ನಮ್ಮ ನಡುವಿನ ಸರಿಯುವಂತಹ ಪರದೆ. ಹೀಗೆ ಜ್ಞಾನಸ್ವರೂಪನಾಗಿದ್ದು, ಜ್ಞಾನಿಗಳಿಗೆ ತನ್ನ ಅರಿವನ್ನು ಕರುಣಿಸುವ ಭಗವಂತ ನೈಕಮಾಯಃ
303) ಮಹಾಶನಃ
ಮಹಾ+ಅಶನ- ಅಂದರೆ ಇಡೀ ಜಗತ್ತನ್ನು ಕಬಳಿಸಿ ಯೋಗನಿದ್ರೆಯಲ್ಲಿ ಪವಡಿಸುವ ಭಗವಂತ. ಕಠೋಪನಿಷತ್ತಿನಲ್ಲಿ ಹೇಳುವಂತೆ,ಪ್ರಳಯ ಕಾಲದಲ್ಲಿ ಭಗವಂತನಿಗೆ ಬ್ರಹ್ಮ-ವಾಯು ಕೇವಲ ಒಂದು ತುತ್ತು ! ಪ್ರಳಯ ಕಾಲದಲ್ಲಿ ಸಮಸ್ತ ವಿಶ್ವವನ್ನು ಕಬಳಿಸಿ ತನ್ನ ಉದರದಲ್ಲಿ ಪೋಷಿಸುವ ಹಾಗು ಪುನಃ ತನ್ನ ನಾಭಿಯಿಂದ ಸೃಷ್ಟಿಯ ನಿರ್ಮಾಣ ಮಾಡುವ ಭಗವಂತ ಮಹಾಶನಃ. ಇನ್ನು ಈ ನಾಮವನ್ನು ಮಹಾ+ಶ+ನ ಎಂದು ಅರ್ಥೈಸಬಹುದು. ಇಲ್ಲಿ 'ಶ' ಅಥವಾ 'ಶಂ' ಎಂದರೆ ಅಂತರಂಗದ ಆನಂದ. 'ನ' ಎಂದರೆ ನಯತಿ ಜೀವರಿಗೆ ಅಂತರಂಗದ ಮಹದಾನಂದವನ್ನು ಕೊಡುವವ ಮಹಾಶನಃ. ಮಹತ್ತಾದ ಆಸೆ ಉಳ್ಳವರು ಮಹಾಶರು. ಇಲ್ಲಿ ಮಹತ್ತಾದ ಆಸೆ ಎಂದರೆ ಯಾವುದೇ ರಾಗ-ದ್ವೇಷವಿಲ್ಲದೆ ಇಡೀ ಜಗತ್ತಿನ ಕಲ್ಯಾಣ ಬಯಸುವುದು. ಜ್ಞಾನಿಗಳಿಗೆ ಇಂತಹ ಸ್ಥಿತಿಯನ್ನು ಕರುಣಿಸುವ ಭಗವಂತ ಮಹಾಶನಃ.

Saturday, August 21, 2010

Vishnu sahasranama 300

ವಿಷ್ಣು ಸಹಸ್ರನಾಮ: ಯುಗಾದಿಕೃತ್

300) ಯುಗಾದಿಕೃತ್
ಈ ಪ್ರಪಂಚ ಸೃಷ್ಟಿಯಾದಂದಿನಿಂದ ಒಂದು ಯುಗದ ಕಲ್ಪನೆಯಿದೆ. ಯುಗಗಳ ನಾಲ್ಕು ಗುಂಪು ಸೇರಿ ಯುಗಚಕ್ರವಾಗುತ್ತದೆ. ಎಲ್ಲಕ್ಕಿಂತ ಚಿಕ್ಕ ಯುಗ ಕಲಿಯುಗ. ಇದರ ಅವಧಿ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷ. ದ್ವಾಪರ ಯುಗದ ಅವಧಿ ಕಲಿಯುಗದ ಎರಡರಷ್ಟು ಅಂದರೆ ಎಂಟು ಲಕ್ಷದ ಅರವತ್ನಾಲ್ಕು ಸಾವಿರ ವರ್ಷಗಳು. ಕಲಿಯುಗದ ಮೂರರಷ್ಟು ಅವಧಿ ತ್ರೇತಾಯುಗ ಅಂದರೆ ಹನ್ನೆರಡು ಲಕ್ಷದ ತೊಂಬತ್ತಾರು ಸಾವಿರ ವರ್ಷ. ಯುಗದ ಆದಿ ಕೃತಯುಗ, ಇದರ ಅವಧಿ ಕಲಿಯುಗದ ನಾಲ್ಕುಪಟ್ಟು ಅಂದರೆ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರ್ಷಗಳು. ಆದ್ದರಿಂದ ಒಂದು ಯುಗಚಕ್ರದಲ್ಲಿ ನಲವತ್ಮೂರು ಲಕ್ಷದ ಇಪ್ಪತ್ತು ಸಾವಿರ ವರ್ಷಗಳಿರುತ್ತವೆ. ಇಂತಹ ಇಪ್ಪತ್ತೊಂದು ಯುಗಚಕ್ರಗಳಿಗೆ ಹದಿನೆಂಟು ಲಕ್ಷದ ಐವತ್ತು ಸಾವಿರ ವರ್ಷಗಳನ್ನು ಸೇರಿಸಿದರೆ ಒಂದು ಮನ್ವಂತರ(30,67,20,000+18,50,000). ಇಂತಹ ಹದಿನಾಲ್ಕು ಮನ್ವಂತರಗಳು ಹಾಗು ಜೊತೆಗೆ ಮನ್ವಂತರಗಳ ನಡುವಿನ ಹದಿಮೂರು ಪ್ರಳಯಕಾಲದ ಇಪ್ಪತ್ತುಸಾವಿರ ವರ್ಷಗಳು, ಒಟ್ಟಿಗೆ 432 ಕೋಟಿ (30,85,70,000x14+20,000) ವರ್ಷಗಳು. ಇದು ಚತುರ್ಮುಖನ ಒಂದು ಹಗಲು. ಆದ್ದರಿಂದ ಚತುರ್ಮುಖನ ಒಂದು ದಿನ ಅಂದರೆ 864 ಕೋಟಿ ವರ್ಷಗಳು. ಚತುರ್ಮುಖನ ಆಯಸ್ಸು 100 ವರ್ಷ ಅಂದರೆ 31 ಸಾವಿರದ 104 ಸಾವಿರ ಕೋಟಿ ವರ್ಷ (864,0000000x30x12x100=31,104,0000000000) ಈ ರೀತಿ ಕಾಲ ಚಕ್ರ ತಿರುಗುತ್ತಿರುತ್ತದೆ. ಕಲಿ ಯುಗ ಕಲಹಗಳ ಯುಗ, ಆದರೆ ತ್ರೇತಾಯುಗದಲ್ಲೂ ಕೂಡ ರಾವಣನಂತ ದುಷ್ಟ ರಾಕ್ಷಸರಿದ್ದಿದ್ದನ್ನು ಕಾಣುತ್ತೇವೆ. ಆದ್ದರಿಂದ ಭಗವಂತನ ನಿರಂತರ ಉಪಾಸನೆ ನಮ್ಮ ಬದುಕನ್ನು ಕೃತಯುಗಕ್ಕೆ ಕೊಂಡೋಯ್ಯಬಲ್ಲುದೇ ಹೊರತು ಕಾಲವಲ್ಲ. ಕಲಿಯುಗದಲ್ಲಿದ್ದು ಕೃತಯುಗದ ಆನಂದವನ್ನು ಭಗವಂತನ ನಿರಂತರ ಉಪಾಸನೆಯಿಂದ ಪಡೆಯಬಹುದು. ಇದು ಭಗವಂತನ ' ಯುಗಾದಿಕೃತ್' ನಾಮ ಉಪಾಸನೆಯ ತಾತ್ಪರ್ಯ.

Friday, August 20, 2010

Vishnu Sahasranamam 294-299

ವಿಷ್ಣು ಸಹಸ್ರನಾಮ: ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ
294) ಕಾಮಹಾ

ಇಲ್ಲಿ ಕಾಮ ಅಂದರೆ ಕಾ+ಅ+ಮ; 'ಕಾ' ಎಂದರೆ ಕುಸ್ಸಿತ, 'ಅ' ಎಂದರೆ ಅಜ್ಞಾನ ಹಾಗು 'ಮ' ಎಂದರೆ ಬಯಕೆ. 'ಹ' ಎಂದರೆ 'ಹಂತಿ ಅಥವಾ ನಾಶ'. ಆದ್ದರಿಂದ ಕಾಮಹಾ ಎಂದರೆ ಅಜ್ಞಾನದಿಂದ ಬರುವ ಕೆಟ್ಟ ಬಯಕೆಯನ್ನು ನಾಶ ಮಾಡುವವನು. ಕೆಟ್ಟ ಕಾಮನೆಗಳನ್ನು ಹೊತ್ತ ದುರ್ಜನರನ್ನು ನಾಶಮಾಡುವವನು ಕಾಮಹಾ. ಕೃಷ್ಣನಾಗಿ ಕಂಸ ಹಾಗು ಜರಾಸಂದನನ್ನು, ರಾಮನಾಗಿ ರಾವಣ-ಕುಂಭಕರ್ಣನನ್ನು, ವರಾಹನಾಗಿ ಹಿರಣ್ಯಾಕ್ಷನನ್ನು, ನರಸಿಂಹನಾಗಿ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ಭಗವಂತ ದುಷ್ಟ ಕಾಮನೆಗಳನ್ನು ಎಂದೂ ನೆರವೇರಿಸಿಲ್ಲ. ಭಕ್ತರ ಅಭೀಷ್ಟವನ್ನು ಪೂರೈಸುವ ಆತನಲ್ಲಿ ನಾವು ನಮ್ಮ 'ಕೆಟ್ಟ ಬಯಕೆಗಳಿಂದ' ಮುಕ್ತಿ ಕರುಣಿಸೆಂದು ಬೇಡಬೇಕು.
295) ಕಾಮಕೃತ್
ಸದ್ಬಯಕೆಗಳ ತಂದೆ ಭಗವಂತ ! ಬಯಕೆಗಳ ಅಭಿಮಾನಿ ಕಾಮನನ್ನು ಹುಟ್ಟಿಸಿದವ. ಕೆಟ್ಟ ಕಾಮನೆಗಳ ಅಭಿಮಾನಿ 'ಕಾಲನೇಮಿ' ಕಂಸನನ್ನು ಸಂಹರಿಸಿದ ಭಗವಂತ ಕಾಮಕೃತ್.
296) ಕಾಂತಃ
ಭಗವಂತ ಎಲ್ಲರೂ ಬಯಸುವ ಚಲುವ. ಮನ್ಮಥನಿಗೂ ಸೌಂದರ್ಯವನ್ನು ಕೊಟ್ಟ ಭಗವಂತ ಚಲುವರ ಚಲುವ. ಕಂ+ಅಂತಃ -ಕಾಂತಃ ಇಲ್ಲಿ ಕಂ ಎಂದರೆ ತುದಿ ಆದ್ದರಿಂದ ಕಾಂತಃ ಎಂದರೆ ಆನಂದದ ತುತ್ತ-ತುದಿ. ಭಗವಂತ ಆನಂದದ ಪರಾಕಾಷ್ಟೆ. ಜ್ಞಾನಿಗಳಿಗೆ ಆನಂದವನ್ನು ಕೊಡುವ ಭಗವಂತ ಪಾಪಿಗಳಿಗೆ ಅದರ ಅಂತ! ಪರಂಪರೆಯಲ್ಲಿ ಆನಂದವನ್ನು ಪಡೆದ ಅತೀ ದೊಡ್ಡ ಶತಾನಂದನಿಗಿಂತಲೂ ಆಚೆಗಿನ ಶಕ್ತಿಯಾದ ಭಗವಂತ ಕಾಂತಃ.
297) ಕಾಮಃ
ಭಗವಂತ ಎಲ್ಲರೂ ಬಯಸುವಂತವನು. ಅಳತೆ ಮಾಡಲು ಅಸಾಧ್ಯವಾದ ಜ್ಞಾನಾನಂದಗಳ ಪರಿಪೂರ್ಣ ಸ್ವರೂಪ.
298) ಕಾಮಪ್ರದಃ
ಸದ್ಬಯಕೆಗಳನ್ನು ನಮ್ಮ ಕರ್ಮಫಲಕ್ಕನುಸಾರವಾಗಿ ಈಡೇರಿಸುವ, ಎಲ್ಲಾ ವಿವೇಕಿಗಳು ಬಯಸುವ ಅತ್ಯಂತ ಅಮೂಲ್ಯ ವಸ್ತು ಭಗವಂತ. ಭಕ್ತರ ಬಯಕೆಗಳನ್ನು ಈಡೇರಿಸುವಲ್ಲಿ ಭಗವಂತನಿಗೆ ತೃಪ್ತಿಯೇ ಇಲ್ಲ. ತನ್ನ ಸಹಸ್ರಾರು ತೋಳುಗಳಿಂದ ಭಕ್ತಕೋಟಿಯ ಅಭೀಷ್ಟವನ್ನು ಈಡೇರಿಸುವ ಭಗವಂತ ಕಾಮಪ್ರದಃ.
299) ಪ್ರಭುಃ
ಭಕ್ತಕೋಟಿಯ ಸರ್ವಾಭೀಷ್ಟವನ್ನು ನೆರವೇರಿಸುವ ಭಗವಂತ ಸರ್ವ ಸಮರ್ಥ. ಯಾರಿಗೆ ಯಾವ ಕಾಲದಲ್ಲಿ ಏನನ್ನು ಕೊಡಬೇಕು, ಏನನ್ನು ಕೊಡಬಾರದು ಎನ್ನುವುದು ಅವನಿಗೆ ತಿಳಿದಿದೆ. ನಾವು ನಮ್ಮ ಮಕ್ಕಳು ಬಯಸಿದ್ದನ್ನೆಲ್ಲ ಕೊಡುವುದಿಲ್ಲ. ಏಕೆಂದರೆ ಮಕ್ಕಳಿಗೆ ಯಾವುದೂ ಒಳ್ಳೆಯದು ಹಾಗು ಯಾವುದು ಕೆಟ್ಟದ್ದು ಎನ್ನುವ ಅರಿವಿರುವುದಿಲ್ಲ. ಹೀಗೆ ಭಗವಂತ ತನ್ನ ಭಕ್ತರ ಅಭೀಷ್ಟವನ್ನು ಅವರ ಒಳಿತಿಗನುಗುಣವಾಗಿ ಕೊಟ್ಟು ಉದ್ದರಿಸುವ ಪ್ರಭುಃ.

Thursday, August 19, 2010

Vishnusahasranama 290-293

ವಿಷ್ಣು ಸಹಸ್ರನಾಮ: ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ
290) ಭೂತಭವ್ಯಭವನ್ನಾಥಃ

ಭಗವಂತನ ಈ ನಾಮ ಓಂಕಾರದ ಅರ್ಥವನ್ನು ಕೊಡುತ್ತದೆ. ಭೂತ+ಭವ್ಯ+ಭವತ್+ನಾಥ ಅಂದರೆ ಪ್ರಪಂಚ ಸೃಷ್ಟಿಗೆ ಮೊದಲು, ವರ್ತಮಾನ ಹಾಗು ಸೃಷ್ಟಿ ನಿರ್ಮಾಣವಾದಾಗ, ಹೀಗೆ ಎಲ್ಲಾ ಕಾಲದಲ್ಲೂ ಇರುವಂತಹದ್ದು; ಭೂತ ಭವ್ಯ ಹಾಗು ಭವತಿಗಳ ನಾಥ (ನಿಯಾಮಕ ಶಕ್ತಿ). ಓಂಕಾರದಲ್ಲಿ 'ಅ' ಎಂದರೆ ಅತೀತ ಅಂದರೆ ಭೂತಕಾಲ, 'ಉ' ಎಂದರೆ 'ಉತ್ಪನ್ನವಾದ ಕ್ಷಣ' ಹಾಗು 'ಮ್' ಎಂದರೆ ಇನ್ನು ನಿರ್ಮೆಯವಾಗುವ ಕಾಲ. 'ನಾಥ' ಎಂದರೆ ಒಡೆಯ. ನಾವು ಯಾರಿಂದ ಬೇಡಿ ಪಡೆಯಬೇಕೋ ಅವನು 'ನಾಥ'. ನಮ್ಮ ಸಮಸ್ಯೆ-ಗಳಿಗೆ ಏಕೈಕ ಪರಿಹಾರ ಹಾಗು ಏನೇ ಕೇಳಿದರು ಕೊಡಬಲ್ಲ ಶಕ್ತಿ.
ಇನ್ನೊಂದು ವಿಧದಲ್ಲಿ ಈ ನಾಮವನ್ನು ಹೀಗೆ ಬಿಡಿಸಬಹುದು. ಭೂತ+ಭವಿ+ಅಭವತ್+ನಾಥ. ಭಗವಂತ ಎಲ್ಲರ ಒಡೆಯ. 'ಭೂತಿಗಳು' ಎಂದರೆ ಭಗವಂತನೆಡೆಗೆ ಚಲಿಸುವ ಸಾತ್ವಿಕರು; ಭವಿಗಳು ಎಂದರೆ ಭಗವಂತನಿಂದ ನಿರ್ದಿಷ್ಟ ದೂರದಲ್ಲಿದ್ದು ಅಲ್ಲೇ ಸುತ್ತುವ ಸಂಸಾರಿಗಳು ಹಾಗು 'ಅಭವತ್' ಎಂದರೆ ಭಗವಂತನ ವಿರುದ್ದ ಕತ್ತಲಿನೆಡೆಗೆ ಚಲಿಸುವ ತಾಮಸರು; ಎಲ್ಲರಿಗೂ ಆತನೇ ನಾಥ (ಒಡೆಯ).
291) ಪವನಃ
'ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ಸನ್ನಿಹಿತನಾಗಿರುವ ಭಗವಂತ ಪವನಃ. ಈ ನಾಮದ ಇನ್ನೊಂದು ಅರ್ಥ 'ಚಲನೆ'. ಪವತೇ ಇತಿ ಪವನಃ ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿ-ಯಾಗಿರುವ ಭಗವಂತ ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ 'ಪ' ಎಂದರೆ 'ಪಾಲನೆ';ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.
292) ಪಾವನಃ
ಭಗವಂತನಿರುವ ಪ್ರತಿಯೊಂದು ವಸ್ತು ಪಾವನವಾಗಿರುತ್ತದೆ. ಪ್ರಾಣದೇವರಲ್ಲಿ ಸನ್ನಿಹಿತನಾಗಿ ಆತ ನಮ್ಮೊಳಗಿರುವ ತನಕ ನಮ್ಮ ದೇಹ ಪಾವನವಾಗಿರುತ್ತದೆ. ಆತ ಹೊರಟುಹೋದ ಮರುಕ್ಷಣದಲ್ಲಿ ನಮ್ಮ ಮೃತದೇಹ 'ಅಪವಿತ್ರವೆನಿಸುತ್ತದೆ'. ಭಗವಂತ ಪಾ+ವನಃ; ಇಲ್ಲಿ 'ಪಾ' ಎಂದರೆ 'ಪಾನ' ಹಾಗು ವನಃ ಎಂದರೆ ರಕ್ಷಕ. ಸೂರ್ಯನಲ್ಲಿ ಸನ್ನಿಹಿತನಾಗಿದ್ದು; ಸೂರ್ಯಕಿರಣ ರೂಪದಲ್ಲಿ ಭೂಮಿಯಿಂದ ನೀರನ್ನು ಪಾನ ಮಾಡಿ; ಮೋಡಗಳ ಮುಖೇನ ಮಳೆಸುರಿಸಿ, ನಿರಂತರವಾಗಿ ಋತುಗಳ ಮುಖೇನ ನಮ್ಮನ್ನು ರಕ್ಷಿಸುವ ಭಗವಂತ ಪಾವನಃ.
293) ಅನಲಃ
ಅನಲಃ ಎಂದರೆ ಪ್ರಸಿದ್ಧವಾದ ಅರ್ಥ 'ಬೆಂಕಿ'. ಶಾಸ್ತೀಯ ನಿರ್ವಚನದಲ್ಲಿ ಇದಕ್ಕೆ ವಿಶಿಷ್ಟವಾದ ಅರ್ಥವಿದೆ. ಅನಲಃ ಎಂದರೆ ಎಷ್ಟು ಕೊಟ್ಟರೂ ಸಾಕು ಎನ್ನದವನು! ನಮ್ಮಲ್ಲಿ ಎರಡನ್ನು ಅನಲಃ ಎನ್ನುತ್ತಾರೆ. ಒಂದು 'ಬೆಂಕಿ' ಹಾಗು ಇನ್ನೊಂದು 'ಮನುಷ್ಯನ ಆಸೆ' ! ಅಗ್ನಿ ಭೂಮಿಯಲ್ಲಿ ಭಗವಂತನ ಆರಾದನೆಯ ಮುಖ್ಯ ಪ್ರತೀಕ. ಅಗ್ನಿಹೋತ್ರ ಮುಖೇನ ಭಗವಂತನ ಆರಾಧನೆ ಅತ್ಯಂತ ಶ್ರೇಷ್ಠ. ಅಗ್ನಿಗೆ ನಾವು ಎಷ್ಟೇ ಹವಿಸ್ಸುಗಳನ್ನು ಹಾಕಿದರೂ ಅದು ಸ್ವೀಕರಿಸುತ್ತದೆ. ಅಗ್ನಿ ಮಣ್ಣು ಹಾಗು ನೀರಿಗಿಂತ ಶುದ್ಧ. ಇದಕ್ಕಾಗಿ ಶಾಸ್ತ್ರದಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ. ಋಗ್ವೇದದಲ್ಲಿ "ಅಗ್ನಿಮೀಳೇ ಪುರೋಹಿತಂ " ಎಂದಿದ್ದಾರೆ. ಅಗ್ನಿಯಲ್ಲಿ ಸನ್ನಿಹಿತನಾಗಿ ಆಹುತಿಯನ್ನು ಸ್ವೀಕರಿಸುವ ಜೋತಿರ್ಮಯನಾದ ಭಗವಂತ ಅನಲಃ. ಇನ್ನು ಅನಲಃ ಎಂದರೆ ತೃಪ್ತಿ ಇಲ್ಲದವನು ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಭಕ್ತರ ಅಧೀನ; ಭಕ್ತರಿಗೆ ಎಷ್ಟು ಕೊಟ್ಟರೂ ಆತನಿಗೆ ತೃಪ್ತಿ ಇಲ್ಲ! ಆದ್ದರಿಂದ ಭಕ್ತರ ಪರಾದೀನನಾದ ಭಗವಂತ ಅನಲಃ.

Wednesday, August 18, 2010

Vishnu Sahasranamam 287-289


ವಿಷ್ಣು ಸಹಸ್ರನಾಮ: ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ
287) ಔಷಧಂ

ಇಡೀ ವಿಶ್ವದಲ್ಲಿ ಎಲ್ಲಾ ರೋಗಗಳಿಗೆ, ಮೂಲಭೂತವಾಗಿ ಸಂಸಾರ ಬಂಧನವೆಂಬ ರೋಗಕ್ಕೆ ಔಷಧ ಕೇವಲ ಭಗವಂತ. ಆತ ಭವರೋಗ ವೈದ್ಯ. ಅವನೇ ವೈದ್ಯ, ಅವನೇ ಔಷಧ! ಈ ನಾಮವನ್ನು ಒಡೆದು ನೋಡಿದರೆ ಔಷ+ಧ. ಇಲ್ಲಿ ಔಷ ಎಂದರೆ ಉಷ ಎಂದರೆ ಉಷ್ಣ ಅಥವಾ ಸುಡುವಂತಹದ್ದು ಎನ್ನುವ ಅರ್ಥವನ್ನು ಕೊಡುತ್ತದೆ. ಔಷರು ಎಂದರೆ ಸಂಸಾರ ತಾಪತ್ರಯದಲ್ಲಿ ಸುಟ್ಟು ಹೋಗುತ್ತಿರುವವರು. 'ಧ' ಎಂದರೆ ರಕ್ಷಕ ಅಥವಾ ಗುಣಪಡಿಸುವವ. ಔಷಧಂ ಎಂದರೆ ಸಂಸಾರ ಸಾಗರದಲ್ಲಿ ಸಿಲುಕಿ ಬೆಂದು ಬಸವಳಿದ ಜೀವರ ರಕ್ಷಕನಾದ ವೈದ್ಯ ಹಾಗು ಸ್ವಯಂ ಔಷಧ. He is the Doctor and He is the Medicine!
288) ಜಗತಃ ಸೇತುಃ
ಭಗವಂತ ಜಗತ್ತಿನಿಂದ ಮೋಕ್ಷದ ಕಡೆಗೆ ಬಿಗಿದ ಸೇತುವೆ. ಅವನೇ ಜಗತ್ತೆಂಬ ಕಡಲಿನ ಆಚೆಯ ದಢ. He is the Means and He is the End. He is the Bridge and He is the Destination! 'ಸೇತು' ಎಂದರೆ ಬಂಧನ ಶಕ್ತಿ. ನಮ್ಮನ್ನು ಈ ಸಂಸಾರವೆಂಬ ಬಂಧನದಲ್ಲಿ ಹಾಕಿದವನೂ ಅವನೇ. ಸಂಸಾರ ಸಾಗರವನ್ನು ದಾಟಲು ಸೇತುವು ಅವನೇ. ದಾಟಿದ ನಂತರ ಸೇರಬೇಕಾದ ಗಮ್ಯವು ಅವನೇ. ಇಂತಹ ಭಗವಂತ ಜಗತಃ ಸೇತುಃ
289) ಸತ್ಯಧರ್ಮಪರಾಕ್ರಮಃ
ಭಗವಂತನಲ್ಲಿ ಎರಡು ಮುಖ್ಯವಾದ ಗುಣಗಳನ್ನು ಹೇಳುತ್ತಾರೆ. ಅವುಗಳೆಂದರೆ ಧರ್ಮ ಮತ್ತು ಪರಾಕ್ರಮ. ಇಲ್ಲಿ ಧರ್ಮ ಎಂದರೆ ಧಾರಣ ಶಕ್ತಿ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವುದು ಪರಾಕ್ರಮ. ಭಗವಂತನ ಮಹಿಮೆ ಯಥಾರ್ಥವಾದದ್ದು ಆದ್ದರಿಂದ ಆತ ಸತ್ಯಧರ್ಮಪರಾಕ್ರಮಃ. ಭಗವಂತ ಸತ್ಯ ಅಂದರೆ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಕರ್ತ. ಆತ ನಮಗೆ ಜ್ಞಾನವನ್ನು ಕೊಡುವವ. ಭಾಗವತದಲ್ಲಿ ಹೇಳುವಂತೆ "ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ ಸತ್ಯಂ ಪರಮ್ ಧೀಮಹಿ". ಸತ್ಯ ನಾಮಕನಾದ ಭಗವಂತನನ್ನು ತನ್ನ ಹೃದಯದಲ್ಲಿ ಹೊತ್ತ ಭಕ್ತರಿಗೆ ಜ್ಞಾನವೆಂಬ ಪರಾಕ್ರಮವನ್ನು ಕೊಟ್ಟು ಅನ್ಯಾಯದ ವಿರುದ್ದ ಹೋರಾಡುವ ಪರಾಶಕ್ತಿಯಾದ ಭಗವಂತ ಸತ್ಯಧರ್ಮಪರಾಕ್ರಮಃ.

Tuesday, August 17, 2010

Vishnusahasranama 283-286

ವಿಷ್ಣು ಸಹಸ್ರನಾಮ: ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ
283) ಅಮೃತಾಂಶೂದ್ಭವಃ

ಅಮೃತಾಂಶು ಎಂದರೆ ಅಮೃತದ ಕಿರಣಗಳುಳ್ಳ ಚಂದ್ರ. ಚಂದ್ರನನ್ನು ಸೃಷ್ಟಿ ಮಾಡಿದ ಶಕ್ತಿ ಅಮೃತಾಂಶೂದ್ಭವಃ. ಪೌರಾಣಿಕವಾಗಿ, ಸಪ್ತರ್ಷಿಗಳಲ್ಲಿ ಒಬ್ಬನಾದ ಅತ್ರಿ ಮುನಿ ಹಾಗು ಆತನ ಹೆಂಡತಿ ಅನುಸೂಯೆ ತಪಸ್ಸಿನಲ್ಲಿ ತಮಗೆ ತ್ರಿಮೂರ್ತಿಗಳೇ ಮಕ್ಕಳಾಗಬೇಕು ಎಂದು ಪ್ರಾರ್ಥಿಸಿದಾಗ, ನಾರಾಯಣ-ದತ್ತನಾಗಿ, ಶಿವ-ಧುರ್ವಾಸನಾಗಿ ಅವತರಿಸುತ್ತಾರೆ. ಬ್ರಹ್ಮನಿಗೆ ಭೂಲೋಕದಲ್ಲಿ ಅವತಾರವಿಲ್ಲ. ಅದಕ್ಕಾಗಿ ಚಂದ್ರನಲ್ಲಿ ಸನ್ನಿಹಿತನಾಗಿ ಸೋಮನಾಗಿ ಅತ್ರಿಯಲ್ಲಿ ಜನಿಸುತ್ತಾನೆ. ದತ್ತಾತ್ರಯ ಎಂದರೆ ದತ್ತ, ದುರ್ವಾಸ ಹಾಗು ಸೋಮ.
ಇನ್ನೊಂದು ರೀತಿಯಲ್ಲಿ ನೋಡಿದಾಗ ಅಮೃತರು ಎಂದರೆ ಮೃತಿ ಇಲ್ಲದ ಮುಕ್ತರು. ಮುಕ್ತರನ್ನು ಹುಟ್ಟು-ಸಾವುಗಳ ಸಂಕೋಲೆಯಿಂದ ಬಿಡಿಸಿ ಮರು ಹುಟ್ಟು ಇಲ್ಲದ ಉನ್ನತ ಸ್ಥಿತಿ ಕೊಟ್ಟ ಭಗವಂತ ಅಮೃತಾಂಶೂದ್ಭವಃ.
284) ಭಾನುಃ
'ಭಾ' ಎಂದರೆ ಜ್ಞಾನ, ಬೆಳಕು, ಆನಂದ, ಇತ್ಯಾದಿ. ಜಗತ್ತಿನಲ್ಲಿರುವ ಎಲ್ಲಾ ಜ್ಞಾನಾನಂದಗಳು ಯಾರಿಗೆ ಸೇರಿವೆಯೋ ಅವನು ಭಾನುಃ. ಜಗತ್ತನ್ನು ಬೆಳಗುವವನು, ಸೂರ್ಯನಲ್ಲಿ, ಸೂರ್ಯಕಿರಣದಲ್ಲಿ ಸನ್ನಿಹಿತನಾದ ಭಗವಂತ ಭಾನುಃ
285) ಶಶಬಿಂದುಃ
ಮೇಲ್ನೋಟಕ್ಕೆ ಶಶಬಿಂದು ಎಂದರೆ 'ಮೊಲದ ಬಿಂದು'. ಇದು ಯಾವುದೇ ನಿರ್ದಿಷ್ಟ ಅರ್ಥವನ್ನು ಕೊಡುವುದಿಲ್ಲ. ಕಾಡಿನಲ್ಲಿದ್ದಾಗ ಶ್ರೀರಾಮಚಂದ್ರ ಮೊಲದ ಭೇಟೆಯಾಡುತ್ತಾನೆ. ಆಗ ಆ ಮೊಲದ ಒಂದು ಹನಿ ನೆತ್ತರು ಆತನ ಮೇಲೆ ಬೀಳುತ್ತದೆ. ಮೊಲದ ನೆತ್ತರಿನಿಂದ ತೊಯ್ದ ಶ್ರೀರಾಮನನ್ನು ಶಶಬಿಂದುಃ ಎಂದು ಕರೆದರು ಎನ್ನುವುದು ಮೇಲ್ನೋಟದ ಅರ್ಥ. ಆದರೆ ಈ ನಾಮದಲ್ಲಿ ಇನ್ನೂ ಅರ್ಥ ಪೂರ್ಣವಾದ ವಿಷಯವಿದೆ. 'ಶಶ' ಎಂದರೆ ಆನಂದದ-ಆನಂದ ಅಂದರೆ ಮಹದಾನಂದ, 'ಬಿಂದು' ಎಂದರೆ ಅವಯವ. ಭಗವಂತನ ಸರ್ವ ಅವಯವ ಆನಂದಪೂರ್ಣ. ಸ್ವಯಂ ಆನಂದಪೂರ್ಣನಾಗಿದ್ದು ನಮ್ಮನ್ನು ಪರಮಾನಂದದ ಸ್ಥಿತಿಗೆ ಕೊಂಡೊಯ್ಯುವ ಭಗವಂತ ಶಶಬಿಂದುಃ.
286) ಸುರೇಶ್ವರಃ
ನಮ್ಮಲ್ಲಿ ಸತ್ಕರ್ಮ ಮಾಡಿಸಿ ನಮ್ಮನ್ನು ಊರ್ಧ್ವಮುಖ ನಡೆಸಿ ಉದ್ದಾರಮಾಡುವವರು ಸುರರು. ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುವ ಎಲ್ಲಾ ದೇವತೆಗಳನ್ನು ನಿಯಂತ್ರಿಸುವ ಪರಮೇಶ್ವರನಾದ ಭಗವಂತ ಸುರೇಶ್ವರಃ. ಇಂದ್ರಾದಿ ದೇವತೆಗಳು ನಮಗೆ ಸುಖ ಕೊಡಬೇಕಾದರೆ ನಮ್ಮಲ್ಲಿ ಕರ್ಮಫಲ ಬೇಕು ಹಾಗು ಭಗವಂತನ ಅನುಗ್ರಹ ಬೇಕು. ನಮಗೆ ಯಾವ ಗ್ರಹ-ದೇವತೆಗಳು ತೊಂದರೆ ಕೊಡುವುದಿಲ್ಲ. ನಮ್ಮ ಕರ್ಮಕ್ಕನುಸಾರವಾಗಿ ನಮ್ಮ ಗ್ರಹಗತಿ ನಿರ್ಧಾರವಾಗುತ್ತದೆ. ಕೆಲವರಿಗೆ 'ಶನಿಕಾಟ' ಎಂದು ಜೋತಿಷಿಗಳು ಹೇಳುತ್ತಾರೆ. ಆದರೆ ಯಾವ ದೇವತೆಗಳೂ ನಮಗೆ 'ಕಾಟ' ಕೊಡುವುದಿಲ್ಲ. ಗ್ರಹಗತಿ ಕೇವಲ ನಮ್ಮ ಪ್ರರಾಬ್ದಕರ್ಮವನ್ನು ಹೇಳುತ್ತದೆ. ನಮ್ಮನ್ನು ನಿಯಂತ್ರಿಸುವ ಸರ್ವ ದೇವತೆಗಳ ಈಶ್ವರ ಎಲ್ಲವುದರ ಸೂತ್ರದಾರ. ನಮ್ಮ ಜೀವನ ಒಂದು ನಾಟಕ ಹಾಗು ಇಲ್ಲಿ ನಾವು 'ಪಾತ್ರಧಾರಿಗಳು'. ಈ ನಾಟಕ ಸೂತ್ರದಾರನ ನಿಯಮದಂತೆ ನಡೆಯುತ್ತದೆ. ಸೂತ್ರದಾರನ ನಿಯಮದ ಚೌಕಟ್ಟಿನಲ್ಲಿ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸುವುದೊಂದೇ ನಮ್ಮ ಕರ್ತವ್ಯ. ಇಷ್ಟು ತಿಳಿದು ಬದುಕಿದರೆ ನಾವು ನಮ್ಮ ಜೀವನವನ್ನು ಸಂಪೂರ್ಣ ಆನಂದಿಸಬಹುದು.
ನಮ್ಮನ್ನು ನಿಯಂತ್ರಿಸುವ ಸುರರನ್ನು ನಿಯತ್ರಿಸುವವರು ಬ್ರಹ್ಮಾದಿಗಳು. ಈ ಬ್ರಹ್ಮಾದಿಗಳ ಒಡೆಯ ಭಗವಂತ . ನಾವು ಸುಖ ಪಡುವುದು ದುಃಖಪಡುವುದು ಎಲ್ಲವೂ ಆತನಿಂದ ಹಾಗು ಇದು ಭಗವಂತನ ಶಿಕ್ಷಣ ಕ್ರಮ. ನಮ್ಮ ಎಲ್ಲಾ ಪೂಜೆಗಳನ್ನು ಸ್ವೀಕರಿಸುವವನು ಹಾಗು ನಡೆಸುವವನು ಆ 'ಸುರೇಶ್ವರ'. ಗೀತೆಯಲ್ಲಿ ಸ್ವಯಂ ಭಗವಂತನೇ ಈ ಮಾತನ್ನು ಹೇಳಿದ್ದಾನೆ "ಅಹಂ ಹಿ ಸರ್ವ ಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ" (ಅ-೯, ಶ್ಲೊ-೨೪). ಹೀಗೆ ಸರ್ವ ಬ್ರಹ್ಮಾದಿ ದೇವತೆಗಳ ಒಡೆಯನಾಗಿದ್ದು ಎಲ್ಲರ ಸುಖದ ಈಶ್ವರನಾದ ಭಗವಂತ ಸುರೇಶ್ವರಃ.

Monday, August 16, 2010

Vishnusahasranama 279-282

ವಿಷ್ಣು ಸಹಸ್ರನಾಮ: ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ
279) ಋದ್ಧಃ
ಋದ್ಧಃ ಎಂದರೆ ಪೂರ್ಣನಾದವನು. ಭಗವಂತನೊಬ್ಬನೇ ಎಂದೆಂದೂ ಪರಿಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಅದೂ ಪೂರ್ಣ ಹಾಗು ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ. ಇಂತಹ ಭಗವಂತ ಋದ್ಧಃ.
280) ಸ್ಪಷ್ಟಾಕ್ಷರೋ ಮಂತ್ರಃ (ಸ್ಪಷ್ಟಾಕ್ಷರಃ+ಮಂತ್ರಃ)
ಸ್ಪಷ್ಟವಾಗಿ ಭಗವದ್ ವಾಚಕಗಳಾದ ಅಕ್ಷರಗಳುಳ್ಳ ಮಂತ್ರಗಳಿಂದ ವಾಚ್ಯನಾದವನು. ಉದಾಹರಣೆಗೆ ಮೂಲ ಮಂತ್ರವಾದ "ಓಂ ನಮೋ ನಾರಾಯಣಾಯ" ಈ ಅಷ್ಟಾಕ್ಷರಿ ಮಂತ್ರದಲ್ಲಿ 'ಓಂ', 'ನಮೋ', 'ನಾರಾಯಣಾಯ' ಎಲ್ಲವೂ ಭಗವಂತನ ನಾಮ. ಇಷ್ಟೇ ಅಲ್ಲದೆ ಪ್ರತಿಯೊಂದು ಅಕ್ಷರ ಕೂಡಾ ಭಗವಂತನ ನಾಮವನ್ನೇ ಹೇಳುತ್ತದೆ. ಇಂತಹ ಭಗವಂತ ಸ್ಪಷ್ಟಾಕ್ಷರೋ ಮಂತ್ರಃ.
281) ಚಂದ್ರಾಂಶುಃ
'ಚಂದ್ರ' ಮತ್ತು 'ಚಂದ' ಎರಡೂ ಒಂದೇ ಅರ್ಥವನ್ನು ಕೊಡುವ 'ಚದಿ' ಧಾತುವಿನಿಂದ ಬಂದ ಪದ. 'ಚಡಿ' ಧಾತುವಿನಿಂದ ಇದು 'ಚಂಡಾ' ಆಗುತ್ತದೆ. ಚಂದ್ರ ಎಂದರೆ ಬಹಳ ತಂಪಾದ ತುಂಬಾ ಖುಷಿಯನ್ನು ಕೊಡುವ ಅಹ್ಲಾದಕರ ಎಂದರ್ಥ. ಚಂದ್ರ+ಅಂಶ ಎಂದರೆ ಜಗತ್ತಿಗೆಲ್ಲಾ ತಂಪನ್ನೀಯುವವ. ಭಗವಂತನನ್ನು ಧನ್ವಂತರಿಯಲ್ಲಿ ಹೀಗೆ ಹೇಳುತ್ತಾರೆ "ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ತಂ" ಎಂದರೆ ಚಂದ್ರಮಂಡಲದಲ್ಲಿ ಕುಳಿತು ಚಂದ್ರನ ಕಿರಣಗಳ ಮೂಲಕ ಅಮೃತವನ್ನು ಕೆಳಕ್ಕೆ ಹರಿಸಿ ನಮಗೆ ಬದುಕಲು ಬೇಕಾದ ಚೈತನ್ಯ ಶಕ್ತಿ ಕೊಡುವವ. ನಮ್ಮ ಒಳಗೆ ಕತ್ತಲು ತುಂಬಿದೆ. ಆ ಕತ್ತಲನ್ನು ಹೋಗಲಾಡಿಸಲು ಚಂದ್ರಾಂಶುವಾದ ಭಗವಂತನ ಬೆಳದಿಂಗಳು ಅಗತ್ಯ.
282) ಭಾಸ್ಕರದ್ಯುತಿಃ
ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ಚಂದ್ರಾಂಶುವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪಾದ ಭಗವಂತ ಭಾಸ್ಕರದ್ಯುತಿಃ.

Sunday, August 15, 2010

Vishnu Sahasranama 276-278


ವಿಷ್ಣು ಸಹಸ್ರನಾಮ: ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ
276) ಓಜಸ್ತೇಜೋದ್ಯುತಿಧರಃ

ಆತ್ಮಭಲ, ಪರಾಕ್ರಮ ಹಾಗು ಕಾಂತಿಗಳಿಗಾಸರೆಯಾದ ಭಗವಂತ ಓಜಸ್ತೇಜೋದ್ಯುತಿಧರಃ
277) ಪ್ರಕಾಶಾತ್ಮಾ
ಭಗವಂತ ಪ್ರಕಾಶ ಸ್ವರೂಪ; ಪರಿಶುದ್ಧವಾದ ಜ್ಞಾನದ ಬೆಳಕು ನೀಡುವವ. ಗೀತೆಯಲ್ಲಿ ಹೇಳುವಂತೆ:

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ (ಅ-೫, ಶ್ಲೋ-೧೬)

ಅಂದರೆ ಭಗವಂತನ ಅರಿವಿನಿಂದ ಅವಿಧ್ಯೆಯನ್ನು ಅಳಿಸಿಕೊಂಡವರ ಆ 'ಅರಿವು' ಸೂರ್ಯನಂತೆ ಪರತತ್ತ್ವವನ್ನು ಬೆಳಗಿಸುತ್ತದೆ. ಹೀಗೆ ಪ್ರಕಾಶ ಸ್ವರೂಪನಾದ ಭಗವಂತ ಪ್ರಕಾಶಾತ್ಮಾ.
278) ಪ್ರತಾಪನಃ
ಶತ್ರುಗಳನ್ನು ಸದೆಬಡಿಯುವ ಪ್ರತಾಪಶಾಲಿ ;ಬೆಂಕಿಯೊಳಗಿರುವವ, ಸೂರ್ಯನೋಳಗಿರುವ ಭಗವಂತ ಪ್ರತಾಪನಃ. ಅರ್ಜುನನಿಗೆ ವಿಶ್ವರೂಪ ದರ್ಶನದಲ್ಲಿ ಭಗವಂತ ಕಾಣಿಸಿದ್ದು ಹೀಗೆ:

ಲೇಲಿ ಹೈಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿ:
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾ: ಪ್ರತಪಂತಿ ವಿಷ್ಣೋ (ಅ-೧೧,ಶ್ಲೋ-೩೦)

ಎಲ್ಲೆಲ್ಲೂ ತುಂಬಿರುವ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯು ನುಂಗಿ ನೋಣೆಯುತ್ತಿರುವ, ವಿಶ್ವವನ್ನು ಕೋರೈಸಿ ಸುಡುವ ಮೈಯ ಹೊಳಪುಳ್ಳ ಭಗವಂತ. ಇದು ಭಗವಂತನ ದುಷ್ಟ ನಿಗ್ರಹ ರೂಪ. ಇಂತಹ ಭಗವಂತ ಪ್ರತಾಪನಃ.

Saturday, August 14, 2010

Vishnu Sahasranamam 272-275


ವಿಷ್ಣು ಸಹಸ್ರನಾಮ: ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ
272) ನೈಕರೂಪಃ

ನೈಕರೂಪ ಎಂದರೆ ಅನಂತ ರೂಪ. ಭಗವಂತ ಒಬ್ಬೊಬ್ಬರೊಳಗೆ ಬಿಂಬರೂಪನಾಗಿ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ:

ತಸ್ಯಾಂತೆ ಸುಶಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಟಿತಂ

ಅಂದರೆ ನಮ್ಮ ಹೃದಯ ಮಧ್ಯದಲ್ಲಿ ಸೂಜಿಮೊನೆಯಷ್ಟು ಸೂಕ್ಷ್ಮವಾದ ಅತ್ಯಂತ ಪವಿತ್ರವಾದ ಸ್ಥಾನದಲ್ಲಿ ಭಗವಂತನಿದ್ದಾನೆ. ಇಡೀ ಬ್ರಹ್ಮಾಂಡವನ್ನು ಯಾವ ಶಕ್ತಿ ನಿಯಂತ್ರಿಸುತ್ತದೋ ಅದೇ ಸರ್ವಸಮರ್ಥ ಶಕ್ತಿ ನಮ್ಮ ಹೃತ್ಕಮಲದಲ್ಲಡಗಿದೆ. ಇದೇ ಶಕ್ತಿ ಇಡೀ ವಿಶ್ವದಲ್ಲಿ ತುಂಬಿರುವ ಸಮಗ್ರಶಕ್ತಿ. ಹೀಗೆ ಬಿಂಬರೂಪಿಯಾಗಿ ಅನಂತರೂಪಿಯಾಗಿರುವ ಭಗವಂತ ನೈಕರೂಪಃ.
273) ಬೃಹದ್ರೂಪಃ
ಬೃಹತ್ ಎಂದರೆ ನಮಗೆ ಕಾಣುವ ಬೆಳಕುಗಳಲ್ಲೆಲ್ಲಾ ಅತ್ಯಂತ ದೊಡ್ಡ ಬೆಳಕಾದ 'ಸೂರ್ಯ'. ಇಡೀ ಬ್ರಹ್ಮಾಂಡಕ್ಕೆ ಬೆಳಕು ನೀಡುವ ಸೂರ್ಯನೊಳಗಿರುವ ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿ ಕೂಡಾ ಹೌದು. ಇದನ್ನೇ ಗಾಯತ್ರಿ ಉಪಾಸನೆಯಲ್ಲಿ ಹೀಗೆ ಹೇಳಿದ್ದಾರೆ:

ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್

ಬ್ರಹ್ಮಾಂಡ ಹಾಗೂ ಪಿಂಡಾ೦ಡದ ಸಮನ್ವಯ ಗಾಯತ್ರಿಯಲ್ಲಿದೆ. ಯಾವ ಶಕ್ತಿ ಸೂರ್ಯಮಂಡಲದಲ್ಲಿ ಬೃಹತ್ ಆಗಿ ಇಡೀ ವಿಶ್ವಕ್ಕೆ ಜೀವದಾನ ಮಾಡುತ್ತಿದೆಯೋ ಅದೇ ಶಕ್ತಿ ನನ್ನೊಳಗಿದ್ದು ಸದ್ಬುದ್ಧಿಯನ್ನು ಕೊಡಲಿ, ವಿಶ್ವಕ್ಕೆ ಬದುಕನ್ನು ನೀಡುವ ಶಕ್ತಿ ನನ್ನೊಳಗಿದ್ದು ನನ್ನ ಇಂದ್ರಿಯವನ್ನು ಒಳ್ಳೆಯ ವಿಷಯದತ್ತ ಪ್ರೇರೇಪಿಸಲಿ, ಒಳ್ಳೆಯದಕ್ಕೊಸ್ಕರ ಬದುಕುವಂತೆ ಮಾಡಲಿ ಎನ್ನುವುದೇ ಈ ಪ್ರಾರ್ಥನೆ. ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಅವತಾರಪುರುಷ ಭಗವಂತ ಕಾಣಿಸಿಕೊಂಡಿದ್ದಾನೆ. ವಾಮನ ರೂಪಿಯಾಗಿ ಬಂದು ಬ್ರಹದ್ರೂಪಿಯಾದ ನಾರಾಯಣ, ವೈವಸ್ವತ ಮನುವಿಗೆ ಚಿಕ್ಕ ಮೀನಿನ ರೂಪದಲ್ಲಿ ಕಾಣಿಸಿಕೊಂಡು ನಂತರ ಮಹಾ ಮತ್ಸ್ಯವಾಗಿ ದರ್ಶನಕೊಟ್ಟ ಭಗವಂತ ಹಾಗು ಅರ್ಜುನನ ಸಾರಥಿಯಾಗಿ ತನ್ನ ವಿಶ್ವರೂಪವನ್ನು ತೋರಿದ ಕೃಷ್ಣ, ತಾಯಿಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ ಭಗವಂತ ಬೃಹದ್ರೂಪಃ.
274) ಶಿಪಿವಿಷ್ಟಃ
'ಶಿಪಿ' ಎನ್ನುವ ಪದ ಅರ್ವಾಚೀನ ಸಂಸ್ಕೃತ ಭಾಷೆಯಲ್ಲಿ ಪ್ರಚಲಿತದಲ್ಲಿಲ್ಲ. ಇದು ವೈದಿಕ ಪದ. ಶಿಪಿ ಎಂದರೆ ಪ್ರಾಣಿಗಳು. ಶಿಪಿವಿಷ್ಟಃ ಎಂದರೆ ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ. ಇದೊಂದು ವಿಶಿಷ್ಟವಾದ ಯಾಜ್ಞಿಕ ಉಪಾಸನೆ. ವೇದದಲ್ಲಿ ವಿಶೇಷವಾಗಿ ಐದು ಪ್ರಾಣಿಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳೆಂದರೆ ಅಶ್ವ, ಗೋವು, ಕುರಿ ಆಡು ಹಾಗು ಮನುಷ್ಯ. ಈ ಪಂಚ ಪ್ರಾಣಿಗಳಲ್ಲಿ ಪಂಚರೂಪದಲ್ಲಿ ಭಗವಂತ ಸನ್ನಿಹಿತನಾಗಿದ್ದಾನೆ ಪುರುಷ ಸೂಕ್ತದಲ್ಲಿ ಈ ಐದು ಪ್ರಾಣಿಗಳ ಉಲ್ಲೇಖವಿದೆ.

ತಸ್ಮಾದಶ್ವಾ ಅಜಾಯನ್ತ ಯೇ ಕೇ ಚೋಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ
ಯತ್ಪುರುಷಂ ವ್ಯದಧುಃ

ಈ ಐದು ಪ್ರಾಣಿಗಳಲ್ಲಿ ಭಗವಂತನ ಸೃಷ್ಟಿಯ ವೈಶಿಷ್ಟ್ಯ ಕಾಣಬಹುದು. ಅಶ್ವ ಹಾಗು ಎತ್ತು ಮನುಷ್ಯನ ಸಂಚಾರದ ಸಾಧನವಾಗಿದ್ದರೆ, ದನ ಯಜ್ಞದ ಮೂಲ ದ್ರವ್ಯವಾದ ಹಾಲು-ಮೊಸರು-ಬೆಣ್ಣೆ-ತುಪ್ಪವನ್ನು ಕೊಡುವ ಸಾಕು ಪ್ರಾಣಿ. ಅಶ್ವ ತನ್ನ ಜೀವದ ಪಣತೊಟ್ಟು ಯಜಮಾನನ ರಕ್ಷಣೆ ಮಾಡುವ ವಿಶಿಷ್ಟ ಪ್ರಾಣಿ. ಅಶ್ವದಲ್ಲಿ ಕಾಣುವ ಇನ್ನೊಂದು ವಿಶೇಷ ಲಕ್ಷಣವೆಂದರೆ ಅದು ಈ ಪ್ರಪಂಚದಂತೆ ನಿರಂತರ ಚಲನೆಯಲ್ಲಿರುತ್ತದೆ. ಅದು ಎಂದೂ ಚಲನೆ ರಹಿತವಾಗಿರುವುದಿಲ್ಲ. ಇದಕ್ಕಾಗಿ ಈ ಪ್ರಪಂಚವನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ಅಶ್ವತ್ಥಮರ ಕೂಡ ಎಂದೂ ಚಲನೆ ರಹಿತವಾಗಿರುವುದಿಲ್ಲ. ಅಶ್ವ ನಿರಂತರ ಎಷ್ಟೇ ದೂರವಾದರೂ ಆಯಾಸವಿಲ್ಲದೆ ಚಲಿಸಬಲ್ಲದು. ಚಲನೆ ಅದರ ಸಹಜ ಕ್ರಿಯೆ. ಅಶ್ವ ಮನುಷ್ಯನ ಚಾಪಲ್ಯದ ಸಂಕೇತ ಕೂಡ ಹೌದು. ಅದಕ್ಕಾಗಿ ಹಿಂದೆ ಅಶ್ವಮೇಧಯಾಗ ಮಾಡಿ ಕುದುರೆಯನ್ನು ಭಲಿ ಕೊಡುತ್ತಿದ್ದರು ಹಾಗು ಆನಂತರ ತಮ್ಮ ಚಾಪಲ್ಯದಿಂದ ಮುಕ್ತಿಯನ್ನು ಪಡೆದು ರಾಜರ್ಶಿಯಾಗಿ ಬದುಕುತ್ತಿದ್ದರು. ಮಾಂಸಹಾರಿಗಳು ತಾವು ತಿನ್ನುವ ಆಹಾರವನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಾಮಾನ್ಯ ಹಾಗು ಶಾಸ್ತ್ರ ಸಮ್ಮತ.
ಆಡು ಸೋಮಯಾಗದಲ್ಲಿ ಪ್ರಮುಖ ದ್ರವ್ಯ. ಆದರೆ ಸೋಮಯಾಗವನ್ನು ಕೇವಲ ಮಾಂಸಾಹಾರಿಗಳು ಮಾತ್ರ ಮಾಡಬಹುದು. ಆಡಿನ ಹಾಲನ್ನು ಈಗಲೂ ಆಹಾರವಾಗಿ ಉಪಯೋಗಿಸುತ್ತಾರೆ. ಇನ್ನು ಕುರಿ ಪ್ರಮುಖವಾಗಿ ಮನುಷ್ಯನ ಬಟ್ಟೆಯ ಸಾಧನ. ವೈದಿಕ ಸಂಪ್ರದಾಯ ಬೆಳೆದುಬಂದಿದ್ದು ಹಿಮಾಲಯದಲ್ಲಿ. ಅದಕ್ಕಾಗಿ 'ಸಿಂಧೂ ಕಣಿವೆಯ ಸಂಸ್ಕೃತಿ' ಎನ್ನುವ ಹೆಸರು ಬಂದಿರುವುದು. ಈ ಸಿಂಧೂ ಎನ್ನುವ ಹೆಸರು ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಆಗಿ ನಂತರ ಬ್ರಿಟೀಷರಿಂದ 'ಇಂದು' ಆಗಿ ಇದೀಗ ಇಂಡಿಯಾ ಆಗಿದೆ!
ಈ ಸಿಂಧೂ ಕಣಿವೆಯಲ್ಲಿ ಕೊರೆಯುವ ಚಳಿಗೆ ಮನುಷ್ಯನ ರಕ್ಷಣೆ 'ಕುರಿಯಿಂದ' ತಯಾರಾದ ಬಟ್ಟೆಯಿಂದಾಗುತ್ತಿತ್ತು. ಹೀಗೆ ಈ ಮೇಲಿನ ನಾಲ್ಕು ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ ಶಿಪಿವಿಷ್ಟಃ.
275) ಪ್ರಕಾಶನಃ
ಪ್ರಕಾಶನ ಎಂದರೆ ಎಲ್ಲವನ್ನೂ ಬೆಳಗುವವನು. ಗೀತೆಯಲ್ಲಿ ಹೇಳುವಂತೆ :

ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ (ಅ-೧೫ ಶ್ಲೋ-೧೨)

ಅಗ್ನಿ, ನಕ್ಷತ್ರ ಹಾಗು ಪ್ರಪಂಚದ ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ ಭಗವಂತ. ಈ ನಾಮವನ್ನು ಒಡೆದು ನೋಡಿದರೆ 'ಪ್ರಕಾ+ಅಶನ' ಎಂದರೆ ಸರ್ವೋತ್ಕ್ರುಷ್ಟವಾದ ಆನಂದ ಸ್ವರೂಪ. ಪ್ರಕಾಶರು ಎಂದರೆ ಮುಕ್ತಿ ಯೋಗ್ಯ ಜ್ಞಾನಿಗಳು. ಅವರಿಗೆ 'ನಯತಿ' ಎಂದರೆ ಮೋಕ್ಷವನ್ನು ಕೊಡುವವನು ಪ್ರಕಾಶನಃ

Friday, August 13, 2010

Vishnusahasranama 268-271

ವಿಷ್ಣು ಸಹಸ್ರನಾಮ: ...ವಾಗ್ಮೀ ಮಹೇಂದ್ರೋ ವಸುದೋ ವಸುಃ
268) ವಾಗ್ಮೀ
ವಾಗ್ಮೀ ಎಂದರೆ ಮಾತುಬಲ್ಲ ಮಾತುಗಾರ ನಿಜವಾದ ವಾಗ್ಮಿ ಮಿತಭಾಷಿಯಾಗಿದ್ದು ಹೆಚ್ಚು ಮಾತನಾಡುವುದಿಲ್ಲ ಆದರೆ ಆಡುವ ಮಾತನ್ನು ಎಲ್ಲಿ ಹೇಗೆ ಎಷ್ಟು ಮಾತನಾಡಬೇಕೆಂದು ತಿಳಿದಿರುತ್ತಾರೆ. ಮಾತು ನಮಗೆ ಗೊತ್ತಿರುವ ವಿಷಯವನ್ನು ಅಭಿವ್ಯಕ್ತ ಮಾಡುವ ಸಾಧನ. ಎಲ್ಲವನ್ನೂ ತಿಳಿದವ ಮಾತ್ರ ಎಲ್ಲಾ ವಿಷಯವನ್ನು ನಿರರ್ಗಳವಾಗಿ ಮಾತನಾಡಬಲ್ಲ ಕೆಲವೊಮ್ಮೆ ವಿಷಯ ತಿಳಿದಿದ್ದರೂ ಮಾತನಾಡುವುದು ಕಷ್ಟ! ಭಗವಂತನೊಬ್ಬನೇ ಎಲ್ಲವನ್ನೂ ತಿಳಿದವ, ಎಲ್ಲರ ನಾಲಿಗೆಯಲ್ಲಿ ಕುಳಿತು ನುಡಿಸುವವನೂ ಅವನೇ ಸಾಧಕನ ಅತೀ ದೊಡ್ಡ ಬಯಕೆ ದೇವರ ಜೊತೆ ಮಾತನಾಡಬೇಕು ಎನ್ನುವುದು. ಆದರೆ ಅದಕ್ಕಾಗಿ ಕಲ್ಪಗಳನ್ನೇ ಕಾಯಬೇಕಾಗಬಹುದು. ಸಮಸ್ತ ವೇದವನ್ನು ಬ್ರಹ್ಮನಿಗೆ ಮೊಟ್ಟಮೊದಲು ಉಪದೇಶ ಮಾಡಿದ ಭಗವಂತನ ಇನ್ನೊಂದು ಹೆಸರು 'ವಾಗೀಶ' ಅಂದರೆ ಮಾತುಗಳ ಒಡೆಯ. ಎಲ್ಲಾ ವೇದಗಳನ್ನು ನೀಡಿದ, ಎಲ್ಲರೊಳಗಿದ್ದು ಎಲ್ಲಾ ನುಡಿಗಳನ್ನು ನುಡಿಸುವ ಮಾತುಗಾರ ಭಗವಂತ ವಾಗ್ಮೀ.
269) ಮಹೇಂದ್ರಃಸಂಸ್ಕೃತದಲ್ಲಿ 'ಇಂದ್ರ' ಎಂದರೆ ಸರ್ವಸಮರ್ಥ (Omnipotent). ಭಗವಂತ ಸರ್ವಸಮರ್ಥ ಪರಮೇಶ್ವರ. ದೇವತೆಗಳ ರಾಜ 'ಇಂದ್ರನಿಗೆ' ಆ ಪದವಿಯನ್ನು ಕೊಟ್ಟ ಭಗವಂತ ಮಹೇಂದ್ರ. ಒಡೆಯರಿಗೂ ಒಡೆಯ; ಸಮರ್ಥರಿಗೂ ಸಮರ್ಥ ಭಗವಂತ ಮಹೇಂದ್ರಃ.
270) ವಸುದಃ
ವಸುದ ಎಂದರೆ ಸಂಪತ್ತನ್ನು ಕೊಡುವವ. ಹಿಂದೆ ಹೇಳಿದಂತೆ ಸಂಪತ್ತಿನಲ್ಲಿ ಎರಡು ವಿಧ. ಒಂದು ಬಾಹ್ಯ ಸಂಪತ್ತು ಹಾಗು ಇನ್ನೊಂದು ಅಂತರಂಗದ ಸಂಪತ್ತು. ಜ್ಞಾನ ಅಂತರಂಗದ ಸಂಪತ್ತು. ನಮಗೆ ನಮ್ಮ ಕರ್ಮಕ್ಕನುಗುಣವಾಗಿ ಬಡತನ-ಶ್ರೀಮಂತಿಕೆ, ಜ್ಞಾನ-ಅಜ್ಞಾನ ಕೊಡುವ ಭಗವಂತ ವಸುದಃ. ಜ್ಞಾನ ಗಳಿಸಬೇಕಾದರೆ ನಮಗೆ ಇಚ್ಚಾಶಕ್ತಿ, ಗ್ರಹಣಶಕ್ತಿ ಹಾಗು ಧಾರಣಶಕ್ತಿ ಬೇಕು. ಎಲ್ಲವನ್ನೂ ಕೊಡುವ ಭಗವಂತ ವಸುದಃ. ಗೀತೆಯಲ್ಲಿ ಹೇಳುವಂತೆ:
ಮತ್ತಃ ಸ್ಮೃತಿರ್ಜ್ಞಾನ ಮಪೋಹನಂ ಚ (ಅ-೧೫ ಶ್ಲೋ-೧೫) ಎಂದರೆ 'ನೆನಪು, ಅರಿವು, ಮರೆವು ಎಲ್ಲಾ ಭಗವಂತನ ಕೊಡುಗೆ'. ಅಷ್ಟೇ ಅಲ್ಲದೆ ಭಗವಂತನನ್ನು ನಂಬಿದ ಭಕ್ತರ ಯೋಗ-ಕ್ಷೇಮದ ಹೊಣೆ ಭಗವಂತನದ್ದು.

ಅನನಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ-೨೨)

ಜ್ಞಾನದ ಬಾಗಿಲನ್ನು ತೆರೆದು ಮೋಕ್ಷವನ್ನು ಕರುಣಿಸುವ, ಭಕ್ತರ ಯೋಗ-ಕ್ಷೇಮದ ಹೊಣೆ ಹೊತ್ತಿರುವ ಭಗವಂತ ವಸುದಃ.
271) ವಸುಃ
ದೇವತೆಗಳಲ್ಲಿ ವಸು ಎನ್ನುವ ಗಣವಿದೆ ಹಾಗು ಅವರನ್ನು ಅಷ್ಟವಸುಗಳೆನ್ನುತ್ತಾರೆ. ಇವರಲ್ಲಿ ಅಗ್ನಿ ಪ್ರಮುಖನಾದವನು. ಅಗ್ನಿಯಲ್ಲಿ ಭಗವಂತನ ಮುಖ್ಯ ಪ್ರತೀಕವಿದೆ. ಭೂಮಿಯಲ್ಲಿ ಭಗವಂತನ ಉಪಾಸನೆಯನ್ನು ಪ್ರಮುಖವಾಗಿ ಅಗ್ನಿಸ್ತರದಲ್ಲಿ ಮಾಡುತ್ತಾರೆ. ಅಗ್ನಿಗೆ ಈ ಸ್ಥಾನವನ್ನು ಕೊಟ್ಟ ಭಗವಂತ ವಸುಃ. ಭಕ್ತರಿಗೆ ಹಿರಿಯ ಸಂಪತ್ತಾದ ಹಾಗು ಆಕಾಶದಲ್ಲಿ ತುಂಬಿ ನಿಂತರುವ ಭಗವಂತ ವಸುಃ.

Thursday, August 12, 2010

Vishnusahasranama 267

ವಿಷ್ಣು ಸಹಸ್ರನಾಮ: ದುರ್ಧರಃ
267) ದುರ್ಧರಃ
ಭಗವಂತನನ್ನು ನಮ್ಮ ಮನಸ್ಸಿನಲ್ಲಿ ಧಾರಣೆ ಮಾಡುವುದು ಸುಲಭದ ಕೆಲಸವಲ್ಲ. ಆತನನ್ನು ನಮ್ಮ ಒಳಗಣ್ಣಿನಿಂದ ನೋಡಬೇಕಾದರೆ ಬಹಳ ಕಷ್ಟ. ಇದಕ್ಕಾಗಿ ಹಠಬೇಕು. ಧ್ಯಾನ ಮಾಡದೆ ಆತ ಮನಸ್ಸಿಗೆ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ನಾವು ಧ್ಯಾನಕ್ಕೆ ಕುಳಿತಾಗ ನಮಗೆ ಧ್ಯಾನಕ್ಕೆ ಬಾಧಕವಾದ ನೂರಾರು ಸಂಗತಿಗಳು(Running thoughts) ಕಾಣಿಸುತ್ತವೆ. ಇದಕ್ಕೆ ಕಾರಣವೇನೆಂದರೆ ನಾವು ನಮ್ಮೊಳಗೆ ಬೇಡವಾದ ನೂರಾರು ವಿಚಾರಗಳನ್ನು ತುಂಬಿಸಿ ಮನಸ್ಸನ್ನು ಬೇಡವಾದ ರೀತಿಯಲ್ಲಿ ತರಬೇತಿಗೊಳಿಸಿರುತ್ತೇವೆ. ಮನಸ್ಸು ನಮ್ಮ ತರಬೇತಿಗೆ ತಕ್ಕಂತೆ ಪೋಳಗಿರುತ್ತದೆ ಹಾಗು ಅದನ್ನು ಭಗವಂತನತ್ತ ಒಮ್ಮೆಗೆ ತಿರುಗಿಸುವುದು ಕಷ್ಟ. ಹಠ ಬಿಡದೆ ನಿರಂತರ ದೇವರ ಜ್ಞಾನ ನಮಗೆ ದೇವರ ದರ್ಶನ ಮಾಡಬಲ್ಲದು. ದ್ಯಾನಕ್ಕೆ ಕುಳಿತಾಗ ನಮಗೆ ಕೆಟ್ಟ ವಿಚಾರ ಬಂದರೆ ಅದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಒಳಗೆ ತುಂಬಿರುವ ಕೆಟ್ಟ ವಿಚಾರ ಹೊರ ಹೋಗುವಾಗ ಹೀಗಾಗುತ್ತದೆ. ಒಮ್ಮೆ ಒಳಗೆ ತುಂಬಿದ್ದ ಕೊಳೆ ಹೊರ ಹೋದ ಮೇಲೆ ಮನಸ್ಸು ನಿರ್ಮಲವಾಗುತ್ತದೆ ಹಾಗು ಈ ಸ್ಥಿತಿಯಲಿ ಧ್ಯಾನ ಸುಲಭ. ಮನಸ್ಸಿನ ಕೊಳೆಯನ್ನು ತೆಗೆಯುವ ಏಕೈಕ ಸಾಧನ ನಿರಂತರ ಭಗವದ್ ಚಿಂತನೆ. ಪ್ರತಿಯೊಂದು ಕರ್ಮದಲ್ಲಿ, ಪ್ರತಿಯೊಂದು ವಸ್ತುವಿನಲ್ಲಿ ಭಗವಂತನನ್ನು, ಆತನ ವಿಶಿಷ್ಟ ಸೃಷ್ಟಿಯನ್ನು ಕಾಣುವ ಪ್ರಯತ್ನಮಾಡಿದರೆ ಫಲ ನಿಶ್ಚಯ. ಭಗವಂತನನ್ನು ಕಾಣುವುದು ಒಂದು ಜನ್ಮದ ಸಾಧನೆಯಲ್ಲ ಅದಕ್ಕಾಗಿ ಅನೇಕಾನೇಕ ಜನ್ಮದ ಸಾಧನೆ ಅಗತ್ಯ. ಆದರೆ ಪ್ರತಿ ಜನ್ಮದ ಸಾಧನೆಯ ಒಂದು ಹೆಜ್ಜೆ ಕೂಡಾ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:


ನೇಹಾಭಿಕ್ರ ಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ (ಅ-೨ ಶ್ಲೋ-೪೦)

ಅಂದರೆ ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ. ಈ ಧರ್ಮದ ತುಣುಕು ಕೂಡಾ ದೊಡ್ಡ ಆಘಾತ ಅಥವಾ ಭಯದಿಂದ ನಮ್ಮನ್ನು ಪಾರುಮಾಡಬಲ್ಲದು.

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ (ಅ-೦೭ ಶ್ಲೋ-೦೩)

ಅಂದರೆ ಸಾವಿರಾರು ಮಂದಿಯಲ್ಲಿ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿ ಮುಟ್ಟಿದವರಲ್ಲಿ ಯಾರೋ ಒಬ್ಬ ಭಗವಂತನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ. ಆದ್ದರಿಂದ ಭಗವಂತನನ್ನು ನೋಡುವುದು ದುರ್ಧರ. ಸರ್ವಾಂಗ ಸುಂದರನಾದ ಆತನನ್ನು ನೋಡಬೇಕಾದರೆ ಎಷ್ಟೋ ಜನ್ಮದ ಕರ್ಮಬೇಕು.

Wednesday, August 11, 2010

Vishnu Sahasranamam 266

ವಿಷ್ಣು ಸಹಸ್ರನಾಮ: ಸುಭುಜಃ
266) ಸುಭುಜಃ
ಸುಭುಜ ಎಂದರೆ ಸುಂದರವಾದ ತೊಳುಳ್ಳವನು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ವೇದವ್ಯಾಸರು ಹೇಳುವಂತೆ "ಭಗವಂತನ ತೋಳುಗಳಿಗೆ ಈ ಜಗತ್ತಿನ ರಕ್ಷಣೆಯಲ್ಲದೆ ಇನ್ನೇನು ಕೆಲಸವಿಲ್ಲ!" ನಿರಂತರ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ಭಗವಂತನನ್ನು ಸುಭುಜ ಎನ್ನುತ್ತಾರೆ. ನಮ್ಮ ತೋಳಿಗೂ ಹಾಗು ದೇಹದ ಎತ್ತರಕ್ಕೂ ಸಂಭಂದವಿದೆ. ವ್ಯಕ್ತಿಯ ಎರಡು ಕೈಗಳನ್ನು ಚಾಚಿದಾಗ ಅದರ ಒಟ್ಟು ಉದ್ದ ಒಂದು ಮಾರು. ಒಂದು ಮಾರು ಎಂದರೆ ನಾಲ್ಕು ಮೊಳ. ಒಂದು ಮೊಳ ಎಂದರೆ ಇಪ್ಪತ್ನಾಲ್ಕು ಅಂಗುಲ.ವ್ಯಕ್ತಿಯ ಎತ್ತರ ಒಂದು ಮಾರು=ನಾಲ್ಕು ಮೊಳ=ತೊಂಬತ್ತಾರು ಅಂಗುಲ=ಹತ್ತು ಗೇಣು ಉದ್ದವಿದ್ದರೆ ಆತ ಸುಭುಜ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿತ್ವವನ್ನು ಕೇವಲ ಭಗವಂತನ ಅವತಾರದಲ್ಲಿ ಮಾತ್ರ ನೋಡುತ್ತೇವೆ. ಸಾಮಾನ್ಯ ಮಾನವನಲ್ಲಿ ಈ ಮಾಪನ ನೂರಕ್ಕೆ ನೂರು ಸಮನಾಗಿರುವುದಿಲ್ಲ. ಇಷ್ಟೇ ಅಲ್ಲದೆ ವ್ಯಕ್ತಿಯ ಪಾದ ಕೂಡ ದೇಹದ ಎತ್ತರದ ಏಳನೇ ಒಂದರಷ್ಟು ಉದ್ದವಿರುತ್ತದೆ. ಭೂಭುಜರು ಎಂದರೆ ಭೂಮಿಯಲ್ಲಿ ಆಡಳಿತ ಮಾಡುವ ಕ್ಷತ್ರಿಯರು, ಸುಭುಜ ಎಂದರೆ ಜಗತ್ತಿನ ಪಾಲನೆ ಹಾಗು ಸಂಹಾರಕರ್ತ.ಎಂದೂ ಕೆಟ್ಟದ್ದನ್ನು ಬಯಸದ ಸುಖವನ್ನು ಮಾತ್ರ ಭೋಗಿಸುವ ಭಗವಂತ ಸುಭುಜಃ.

Tuesday, August 10, 2010

Vishnu sahasranama 262-265

ವಿಷ್ಣು ಸಹಸ್ರನಾಮ: ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ
262) ವರ್ಧನಃ

ವೃದ್ಧಿ ಎಂದರೆ ಬೆಳೆಸುವವನು. ನಮ್ಮನ್ನು, ಈ ಸೃಷ್ಟಿಯನ್ನು ಭಗವಂತ ಪೋಷಿಸಿ ಬೆಳೆಸುತ್ತಾನೆ. ಬೆಳೆಯುವುದು ಅಂದರೆ ಸಾವಿಗೆ ಹತ್ತಿರವಾಗುವುದು. ಆದ್ದರಿಂದ ವರ್ಧನ ಎಂದರೆ ಸಂಹಾರ ಮಾಡುವವನು ಎನ್ನುವ ಅರ್ಥವನ್ನು ಕೂಡಾ ಕೊಡುತ್ತದೆ. ಧಾನ್ಯ, ಭತ್ತ ಬಾಳೆ, ಇತ್ಯಾದಿ ಗಿಡಗಳು ಅವುಗಳ ಸಂತಾನವಾದಾಕ್ಷಣ ಜೀವನ ಅಂತ್ಯವಾಗುತ್ತದೆ. ಬೆಳವಣಿಗೆ ಸಾರ್ಥಕವಾಗುವುದು ಸಾವಿನಲ್ಲಿ. ಆದ್ದರಿಂದ ಸಾವು ಒಂದು ಸಹಜ ಸ್ಥಿತಿ.
ವರ+ಧನ-ವರ್ಧನ. ಶ್ರೇಷ್ಠವಾದ ಸಂಪತ್ತನ್ನು ನಾವು ಯಾರಿಂದ ಪಡೆಯುತೇವೋ ಅವನು ವರ್ಧನ. ಇಲ್ಲಿ ಶ್ರೇಷ್ಠವಾದ ಸಂಪತ್ತು ಎಂದರೆ "ಹಂಚಿದಾಗ ಹೆಚ್ಚಾಗುವ ಸಂಪತ್ತು-ಅಂದರೆ ಜ್ಞಾನ". ಒಳ್ಳೆಯ ದಾರಿಯಲ್ಲಿ ಪಡೆಯಬಹುದಾದ ಶ್ರೇಷ್ಠವಾದ ಸಂಪತ್ತು ಮೋಕ್ಷ. ಹೀಗೆ ನಮ್ಮನ್ನು ಬೆಳೆಸುವವನು, ಸಂಹಾರ ಮಾಡುವವನು, ಜ್ಞಾನಪ್ರದ ಹಾಗು ಮೊಕ್ಷಪ್ರದನಾದ ಭಗವಂತ ವರ್ಧನಃ.

263) ವರ್ಧಮಾನಃ
ವರ್ಧಮಾನ ಎಂದರೆ ಬೆಳೆಯುತ್ತಿರುವವನು. ಇಲ್ಲಿ ಭಗವಂತ ಬೆಳೆಯುತ್ತಿರುವವನಲ್ಲ. ಆತ ಎಲ್ಲಾ ಕಾಲದಲ್ಲೂ ಪೂರ್ಣತೆಯನ್ನು ಹೊಂದಿದವ. ತನ್ನ ಅವತಾರಗಳ ಮೂಲಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ಆತ ತೋರಿಸಿ ಕೊಟ್ಟಿದ್ದಾನೆ.ಆತ ಯಾವುದೇ ಮಾನ ಹಾಗು ಮಾಪನಗಳ ಅಳತೆಗೆ ನಿಲುಕುವವನಲ್ಲ.
264) ವಿವಿಕ್ತಃ
ವಿವಿಕ್ತ ಎಂದರೆ ಅತ್ಯಂತ ಪವಿತ್ರವಾದ ಹಾಗು ವಿಲಕ್ಷಣವಾದ ಎಂದರ್ಥ. ಭಗವಂತನ ವ್ಯಕ್ತಿತ್ವ ತೀರಾ ಭಿನ್ನ. ಸೃಷ್ಟಿ ಮಾಡುವ ಭಗವಂತ ಯಾವುದೇ ಲೇಪವೂ ಇಲ್ಲದೆ ನಿರ್ಲಿಪ್ತನಾಗಿ ಸಂಹಾರ ಕೂಡ ಮಾಡುತ್ತಾನೆ. ಈ ರೀತಿ ಪವಿತ್ರನೂ, ವಿಲಕ್ಷಣನೂ ಆಗಿರುವ ವಿಶಿಷ್ಟ ವ್ಯಕ್ತಿತ್ವವುಳ್ಳ ಭಗವಂತ ವಿವಿಕ್ತಃ. 265) ಶ್ರುತಿಸಾಗರಃ
ಎಲ್ಲಾ ಶಾಸ್ತ್ರ ಸಮಸ್ತ ವೇದ ಹರಿದು ಹೋಗಿ ಸೇರಬೇಕಾದ ಕಡಲು ಭಗವಂತ. ಈ ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳು ಹಾಗು ಎಲ್ಲಾ ಪದಗಳು ಭಗವಂತನನ್ನು ಹೇಳುತ್ತವೆ. ಶಬ್ಧದ ಜೊತೆಗಿರುವ ನಾದ ಶ್ರುತಿ. ನಾದದಲ್ಲಿ ಮೂಲಭೂತವಾಗಿ ನಾಲ್ಕು ವಿಧ. ಉದಾತ್ತ, ಅನುದಾತ್ತ, ಸ್ವರಿತ ಮತ್ತು ಪ್ರಚಯ. ಉದಾತ್ತ ಎಂದರೆ ಕಂಠದಿಂದ ಮೇಲಕ್ಕೆ ಎತ್ತಿ ಮಾತನಾಡುವುದು, ಅನುದಾತ್ತ ಎಂದರೆ ನಾದವನ್ನು ಕೆಳಗೆ ಒತ್ತಿ ಮಾತನಾಡುವುದು, ಸ್ವರಿತ ಎಂದರೆ ಉದಾತ್ತ ಮತ್ತು ಅನುದಾತ್ತದ ಸಮೀಕರಿಸಿದ ರೂಪ. ಪ್ರಚಯ ಎಂದರೆ ಉದಾತ್ತ ಮತ್ತು ಅನುದಾತ್ತವನ್ನು ಕಳಚಿ ಸಮಾನಾಂತರವಾಗಿ ಮೂಡುವ ನಾದ. ಸಪ್ತ ಸ್ವರಗಳೂ ಕೂಡ ಈ ಮೇಲಿನ ನಾಲ್ಕು ಮೂಲಭೂತ ನಾದದಿಂದಾಗಿದೆ. ನಾದ ಬದಲಾದಂತೆ ಅರ್ಥ ಬದಲಾಗುತ್ತದೆ. ಭಾಷೆಗೆ ಅರ್ಥ ಕೊಡುವುದು ನಾದ. ಎಲ್ಲಾ ನಾದಗಳೂ ಭಗವಂತನನ್ನು ಹೇಳುವುದರಿಂದ ಆತ ಶ್ರುತಿಸಾಗರಃ.

Monday, August 9, 2010

Vishnu Sahasranama 259-261

ವಿಷ್ಣು ಸಹಸ್ರನಾಮ: ವಿಷ್ಣುರ್ವೃಷಪರ್ವಾ ವೃಷೋದರಃ
259) ವಿಷ್ಣುಃ
ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ. ಈ ಹಿಂದೆ ಹೇಳಿದಂತೆ ವಿಷತಿ ಇತಿ ವಿಷ್ಣುಃ. ಅಂದರೆ ಯಾರು ಎಲ್ಲರ ಒಳಗೆ ಪ್ರವೇಶಿಸಬಲ್ಲನೋ ಅವನು ವಿಷ್ಣು. ಸರ್ವಾಂತರ್ಯಾಮಿ ಭಗವಂತ. ವಿಷ್ಣು ಸೂಕ್ತದಲ್ಲಿ ಹೇಳಿರುವಂತೆ:

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಸಮೂ(ಲ)ಢಮಸ್ಯ ಪಾಗೇಂಸುರೇಪ್ರಪಂಚದಲ್ಲಿ ಏನೇನು ವಸ್ತುಗಳಿವೆ ಅದರೊಳಗಿರುವ ಹಾಗು ನಮ್ಮೊಳಗಿರುವ ಭಗವಂತ ಒಬ್ಬನೇ. ಹಿಂದೂ-ಮುಸಲ್ಮಾನ್-ಕ್ರಿಸ್ತ ಎಲ್ಲರ ದೇವರು ಒಬ್ಬನೇ. ವೈಷ್ಣವ-ಶೈವ ಅನ್ನುವ ಬೇದ-ಭಾವ ಮನುಷ್ಯನ ಸೃಷ್ಟಿ. ಸರ್ವಾಂತರ್ಯಾಮಿ, ಸರ್ವಗತ ಹಾಗು ಸರ್ವಸಮರ್ಥನಾದ ದೇವರು ಇಬ್ಬರಿರಲು ಸಾದ್ಯವಿಲ್ಲ. ಸರ್ವಶಬ್ದ ವಾಚ್ಯನಾದ ಭಗವಂತನನ್ನು ಯಾವ ಹೆಸರಿನಿಂದ ಕೂಡ ಕರೆಯಬಹುದು, ಹೆಸರಿನ ಹಿಂದಿರುವ ಅರ್ಥ ತಿಳಿದಿರಬೇಕು ಅಷ್ಟೇ! ಮದ್ವಾಚಾರ್ಯರ ಜೀವನ ಚರಿತ್ರೆಯಲ್ಲಿನ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ. ಒಮ್ಮೆ ಆಚಾರ್ಯರು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ದಾರಿಯಲ್ಲಿ ಹಿಂದೂ ಸನ್ಯಾಸಿಗಳಿಗೆ ನಿಷಿದ್ಧವಿದ್ದ ಮುಸ್ಲಿಂ ರಾಜ್ಯವನ್ನು ಪ್ರವೇಶಿಸುತ್ತಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ತಪ್ಪಿಗಾಗಿ ಅವರನ್ನು ಸೈನಿಕರು ಬಂಧಿಸಿ ರಾಜನ ಮುಂದೆ ಪ್ರಸ್ತುತಿಪಡಿಸುತ್ತಾರೆ. ಪ್ರಶ್ನಿಸಿದ ರಾಜನಿಗೆ ಆಚಾರ್ಯರು ಈ ರೀತಿ ಉತ್ತರ ಕೊಡುತ್ತಾರೆ. "ನೀನು ಪೂಜಿಸುವ ಹಾಗು ನಾನು ಪೂಜಿಸುವ ದೇವರು ಒಬ್ಬನೇ, ಹೆಸರು ಮಾತ್ರ ಬೇರೆ ಬೇರೆ. ಒಂದೇ ದೇವರ ಮಕ್ಕಳಾದ ನಾವು ಸಹೋದರರಲ್ಲವೇ?" ಆಚಾರ್ಯರ ಈ ಮಾತಿನಿಂದ ವಿಸ್ಮಿತನಾದ ರಾಜ ಅವರನ್ನು ತನ್ನ ರಾಜ್ಯದಲ್ಲಿ ನೆಲೆಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಆಚಾರ್ಯರು ರಾಜನನ್ನು ಹರಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಜಾತಿ-ಧರ್ಮ-ದೇವರು ಎಂದು ಕಚ್ಚಾಡುವ ನಮಗೆ ಭಗವಂತನ ಈ ನಾಮ ಮಹತ್ತಾದ ಸಂದೇಶವನ್ನು ಕೊಡುತ್ತದೆ.
ಸೂಕ್ತಗಳನ್ನು ಒಮ್ಮೆ ಕಣ್ಣಾಡಿಸಿ ನೋಡಿದರೆ ಅದರಲ್ಲಿ 'ಷ' ಮತ್ತು 'ಣ' ಇಲ್ಲದ ಸೂಕ್ತಗಳಿಲ್ಲ. ವಿ-ಷ-ಣು ಎಂದರೆ ವಿಶಿಷ್ಟನಾದ(ವಿ),ಸರ್ವಾಂತರ್ಯಾಮಿ(ಷ) ಹಾಗು ಸರ್ವಬಲಪೂರ್ಣನಾದ(ಣು) ಭಗವಂತ.
260) ವೃಶಪರ್ವಾ
'ವೃಶ' ಎಂದರೆ ಬಯಸಿದ್ದನ್ನು ಕೊಡುವ ಶಕ್ತಿ, 'ಪರ್ವ' ಎಂದರೆ ನಮ್ಮ ಅಭೀಷ್ಟಗಳ ಸಾಧಕದ ನಾಲ್ಕು ಮಜಲು. ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕು ಪರ್ವಗಳು. ನಾವು ಧರ್ಮದ ಮೆಟ್ಟಲೇರಿದರೆ ಮಾತ್ರ ಭಗವಂತ ನಮ್ಮ ಸಕಲ ಅಭೀಷ್ಟವನ್ನು ಪೂರೈಸುತ್ತಾನೆ. ಅಧರ್ಮದ ಮಾರ್ಗ ಕ್ಷಣಿಕ. ವೇದವ್ಯಾಸರು "ನಾನು ಕೈಯತ್ತಿ ಹೇಳುತ್ತಿದ್ದೇನೆ-ಧರ್ಮದ ಮಾರ್ಗವನ್ನು ಹಿಡಿದವರ ಹಿಂದೆ ಅರ್ಥ-ಕಾಮ-ಮೊಕ್ಷಗಳು ತಾನೆ ತಾನಾಗಿ ಹಿಂಬಾಲಿಸುತ್ತವೆ" ಎಂದಿದ್ದಾರೆ. ಹೀಗೆ ಧರ್ಮಪರ್ವ, ಅರ್ಥಪರ್ವ, ಕಾಮಪರ್ವ ಹಾಗು ಮೋಕ್ಷಪರ್ವನಾಗಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಶಪರ್ವಾ.
261) ವೃಷೋದರಃ
ಇಳೆಗೆ ಮಳೆಯನ್ನು ಕೊಡುವ ಭಗವಂತ ವೃಷೋದರ. ನೆಲದಲ್ಲಿನ ನೀರನ್ನು ಆವಿಯನ್ನಾಗಿ ಮಾಡಿ ಪುನಃ ಮೋಡದಿಂದ ಮಳೆ ಸುರಿಸುವ ಹಾಗು ಈ ಚಕ್ರವನ್ನು ನಿರಂತರ ತಿರುಗಿಸುವ, ದೋಷರಹಿತ-ನಾದ ಅಭೀಷ್ಟಪ್ರದ ಭಗವಂತ ವೃಷೋದರಃ

Sunday, August 8, 2010

Vishnusahasranama 257-258


ವಿಷ್ಣು ಸಹಸ್ರನಾಮ: ವೃಷಾಹೀ ವೃಷಭೋ.....
257) ವೃಷಾಹೀ

ಧರ್ಮ ಸಾಧನವಾದ ಯಜ್ಞಗಳಿಂದ ಆರಾಧ್ಯನಾದವನು, ಯಜ್ಞವನ್ನು ಸ್ವೀಕರಿಸಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಷಾಹೀ.ಈ ಹಿಂದೆ ಹೇಳಿದಂತೆ ಯಜ್ಞದಲ್ಲಿ ಮೂರು ವಿಧ. ಕಾಲ ಕುಂಡದಲ್ಲಿ ಮಾಡುವ ಯಜ್ಞ, ದೇಹ ಕುಂಡದಲ್ಲಿ ಮಾಡುವ ಯಜ್ಞ ಹಾಗು ಅಗ್ನಿ ಕುಂಡದಲ್ಲಿ ಮಾಡುವ ಯಜ್ಞ. ಈ ರೀತಿ ಭಗವಂತನ ಉಪಾಸನೆ 'ವೃಷಾಹ'. ನಾವು ಮಾಡುವ ಸಮಸ್ತ ಕರ್ಮ, ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆ ಯಜ್ಞವಾಗಬೇಕು. ಕೆಲವೊಮ್ಮೆ ಶಾಸ್ತ್ರ ಓದುವುದರಿಂದ ಅಜ್ಞಾನಿಗಳಾಗುವ ಹಾಗು ಯಜ್ಞ-ಯಾಗಾದಿಗಳನ್ನು ಮಾಡಿಯೂ ದುರ್ಬುದ್ಧಿ ಬೆಳೆಯುವ ಸಾಧ್ಯತೆ ಇದೆ! ಅದಕ್ಕಾಗಿ ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನೆಡೆಸು ಎನ್ನುವುದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಗಣಪತಿ ಆಕಾಶದ ದೇವತೆ ಹಾಗು ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ, ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.

ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್

ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು ಮೂಲಾಧಾರ ,ಸ್ವಾದಿಷ್ಟಾನ ಹಾಗು ಮಣಿಪುರ. ನಾಭಿಯಿಂದ ಮೇಲಕ್ಕೆ ಹ್ರುತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ ,ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು.ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹ್ರುತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸಿ ನಮ್ಮನ್ನು ಉದ್ದಾರ ಮಾಡುತ್ತಾನೆ. ಇಂತಹ ಹ್ರುತ್ಕಮಲ ನಿವಾಸಿ ಭಗವಂತ ವೃಷಾಹೀ.
258) ವೃಷಭಃ
ವೃಷಭ ಎಂದರೆ ಗೂಳಿ. ಇದು ಪೌರುಷದ ಸಂಕೇತ. ಯಾವುದಕ್ಕೂ ಬಗ್ಗದೆ ಎದೆ ಸೆಟೆದು ನಿಲ್ಲುವ, ತಮ್ಮ ಎದುರಾಳಿಯನ್ನು ಎದುರಿಸುವ ಕೆಚ್ಚು. ಇದು ಪ್ರಕೃತಿದತ್ತವಾಗಿ ಪುರುಷ ಸ್ವಭಾವ. ಸಾಮಾನ್ಯವಾಗಿ ಈ ಗುಣ ಮಹಿಳೆಯರಿಗಿರುವುದಿಲ್ಲ. ಹೊಂದಿಕೆ, ಸಾಮರಸ್ಯ ಮತ್ತು ಅರ್ಪಣೆ ಸ್ತ್ರೀ ಲಕ್ಷಣ. ಸ್ತ್ರೀಗೆ ಬಾಲ್ಯದಲ್ಲಿ ತಂದೆ-ತಾಯಿ, ಯೌವನದಲ್ಲಿ ಗಂಡ ಹಾಗು ಮುಪ್ಪಿನಲ್ಲಿ ಮಕ್ಕಳ ಸಾಂಗತ್ಯ ಅತ್ಯಗತ್ಯ. ಆದ್ದರಿಂದ ಪೌರುಷದ ಸಂಕೇತವಾದ ಗೂಳಿ, ಸಿಂಹ ಹಾಗು ಹುಲಿಗಳನ್ನು ಕೇವಲ ಪುರುಷರಿಗೆ ಹೋಲಿಸುತ್ತಾರೆ. ಭಗವಂತ ಸರ್ವ ವೀರರ ವೀರ. ಅವನನ್ನು ಎದುರಿಸುವ ವೀರರು ಯಾರೂ ಇಲ್ಲ. ಎಂತಹ ಸಿದ್ಧ ಪುರುಷ ಕೂಡ ಒಮ್ಮೆ ಸಾವಿಗೆ ಶರಣಾಗಬೇಕು. ಆದರೆ ಭಗವಂತ ಎಲ್ಲವನ್ನೂ ಮೀರಿ ನಿಂತ ಸರ್ವ ಶಕ್ತ. ಜಗತ್ತಿನಲ್ಲಿ ಏನು ಕೇಳಿದರೂ ಕೊಡುವಂತಹ ಸಾಮರ್ಥ್ಯವಿರುವ ಭಗವಂತ ವೃಷಭಃ

Saturday, August 7, 2010

Vishnu Sahasranama 253-256



ವಿಷ್ಣು ಸಹಸ್ರನಾಮ: ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ
253) ಸಿದ್ಧಾರ್ಥಃ

ಭಗವಂತ ಸಾಧಿಸಬೇಕಾದ ವಸ್ತುವಲ್ಲ ಅವನು ಸಿದ್ಧ. ವೇದ ಸಿದ್ಧನಾದ ಭಗವಂತನನ್ನು ಹೇಳುತ್ತದೆ. ಈ ಹಿಂದೆ ಹೇಳಿದಂತೆ ಪ್ರತಿಯೊಂದು ನಾಮವೂ ಭಗವಂತನ ಅನ್ವರ್ಥ ನಾಮ. ಎಲ್ಲಾ ನಾಮಗಳ ಅರ್ಥಗಳು ಯಾರಲ್ಲಿ ಪರಿಪೂರ್ಣವಾಗಿ ಸಿದ್ಧವಾಗಿದೆಯೋ ಅವನು ಸಿದ್ಧಾರ್ತ. ಜಗತ್ತಿನಲ್ಲಿರುವ ಪ್ರಸಿದ್ಧವಾದ ಸರ್ವ ಶಾಸ್ತ್ರಗಳಿಂದ ಪ್ರಸಿದ್ಧನಾದ ಪರಮ ಪುರುಷಾರ್ಥ ರೂಪ ಹಾಗು ಸರ್ವವನ್ನು ತೇಜಿಸಿದವರಿಗೂ ಬೇಕಾಗಿರುವ ಅರ್ಥ(ವಸ್ತು) ಸಿದ್ಧಾರ್ಥಃ
254) ಸಿದ್ಧಸಂಕಲ್ಪಃ
ನಾವು ಏನನ್ನಾದರು ನಿರ್ಮಾಣ ಮಾಡಬೇಕಾದರೆ ನಮಗೆ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ ಬೇಕು.ಆದರೆ ಭಗವಂತ ಕೇವಲ ತನ್ನ ಸಂಕಲ್ಪದಿಂದ ಏನನ್ನಾದರೂ ಸೃಷ್ಟಿ ಮಾಡಬಲ್ಲ. ನೀವು ಸಿದ್ಧ ಪುರುಷರ ಬಗ್ಗೆ ಕೇಳಿರಬಹುದು. ಸಿದ್ಧಪುರುಷರು ಇಚ್ಚಿಸಿದಂತೆ ಅವರ ಸಂಕಲ್ಪ ನೆರವೇರುತ್ತದೆ. ಪ್ರತಿಯೊಬ್ಬರಲ್ಲೂ ಸಹ ಇಂತಹ ಅಪೂರ್ವ ಶಕ್ತಿ (Mind Power) ಇದೆ. ಆದರೆ ಅದು ಜಾಗ್ರತವಾಗಿರುವುದಿಲ್ಲ! ಯಾರು ಏಕಾಗ್ರತೆಯಿಂದ ಮನಸ್ಸಿನ ಶಕ್ತಿಯನ್ನು ಗುರುತಿಸಿಕೊಳ್ಳುತಾರೋ ಅವರು ಸಿದ್ಧರು. ಸಿದ್ಧರ ಸಂಕಲ್ಪ ಯಾರಿಂದ ಈಡೇರುತ್ತದೋ, ಯಾರ ಸಂಕಲ್ಪ ಮಾತ್ರದಿಂದ ಇಡೀ ವಿಶ್ವ ಸೃಷ್ಟಿಯಾಗಿದೆಯೋ ಅವನು ಸಿದ್ಧಸಂಕಲ್ಪಃ
255) ಸಿದ್ಧಿದಃ
ನಾವು ಸಿದ್ಧರಾಗಬೇಕಾದರೆ ಅದನ್ನು ಭಗವಂತ ನಮಗೆ ಕೊಡಬೇಕು. ಅವರವರ ಸ್ವಭಾವ ಹಾಗು ಕರ್ಮಕ್ಕೆ ತಕ್ಕಂತೆ ಸಿದ್ಧಿಯನ್ನು ಕೊಡುವ ಅಥವಾ ಕಸಿದುಕೊಳ್ಳುವ ಭಗವಂತ ಸಿದ್ಧಿದಃ

256) ಸಿದ್ಧಿಸಾಧನಃ
ಮೋಕ್ಷ ಒಂದು ಸಿದ್ಧಿ. ಇಂತಹ ಸಿದ್ಧಿಯನ್ನು ಪಡೆಯಬೇಕಾದರೆ ನಮಗಿರುವ ಏಕಮಾತ್ರ ಸಾಧನ ಭಗವಂತ. ಪರಮ ಪುರುಷಾರ್ಥಕವಾದ ಮೋಕ್ಷಕ್ಕೆ ಸಾಧನಾಭೂತನಾದವ ಭಗವಂತನೊಬ್ಬನೆ. ಸಿದ್ಧಿ ಪಡೆಯಲು ಇರುವ ಸಾಧನ ಭಗವಂತ ಮಾತ್ರ. ಭಗವಂತ ಎಲ್ಲಾ ಸಿದ್ಧಿಗಳ ಸ್ವರೂಪ. ಭಗವಂತನ ಉಪಾಸನೆಯಿಂದ ಮಾತ್ರ ನಾವು ಸಿದ್ಧಿಯನ್ನು ಆಂಶಿಕವಾಗಿ ಪಡೆಯಬಹುದು. ಸಿದ್ಧಿಗಳು ಅನೇಕ. ಅಷ್ಟ ಸಿದ್ಧಿಗಳ ಬಗ್ಗೆ ನೀವು ಕೇಳಿರಬಹುದು. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯಂ, ಈಶಿತ್ವಂ ಮತ್ತು ವಶಿತ್ವಂ ಇವು ಅಷ್ಟ ಸಿದ್ಧಿಗಳು. ಅಣಿಮಾ ಎಂದರೆ ಅತ್ಯಂತ ಸೂಕ್ಷ್ಮ ರೂಪ ಧಾರಣೆ ಮಾಡುವುದು. ಮಹಿಮಾ ಎಂದರೆ ದೊಡ್ಡಗಾಗುವುದು, ಗರಿಮಾ ಎಂದರೆ ಭಾರವಾಗುವುದು, ಲಘಿಮಾ ಎಂದರೆ ಹಗುರಾಗುವುದು, ಪ್ರಾಪ್ತಿಃ ಎಂದರೆ ಬೇಕಾದ್ದನ್ನು ಪಡೆಯುವುದು, ಪ್ರಾಕಾಮ್ಯಂ ಎಂದರೆ ಬೇಕಾದ ರೂಪ ಧರಿಸುವುದು, ಈಶಿತ್ವಂ ಎಂದರೆ ಒಡೆತನ, ವಶಿತ್ವಂ ಎಂದರೆ ಎಲ್ಲರನ್ನು ಎಲ್ಲವನ್ನು ತನ್ನ ವಶಕ್ಕೆ ಒಳಪಡಿಸಿಕೊಳ್ಳುವುದು. ಈ ಎಲ್ಲಾ ಸಿದ್ಧಿಗಳು ಭಗವಂತನ ಮೂಲಭೂತ ಗುಣಗಳು ಹಾಗು ಭಗವಂತನಲ್ಲಿ ಮಾತ್ರ ಇರತಕ್ಕಂತಹ ಶಕ್ತಿ. ಭಗವಂತನ ಉಪಾಸನೆಯಿಂದ ಸಿದ್ಧಪುರುಷರಿಗೆ ಕಿಂಚಿತ್ ಬರುತ್ತದೆ ಅಷ್ಟೇ. ಸಿದ್ಧಿಯ ಬಗ್ಗೆ ಹೇಳುವಾಗ ಮಧ್ವಾಚಾರ್ಯರ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಒಮ್ಮೆ ಗೋವಾದಲ್ಲಿ ಆಚಾರ್ಯರು ತಂಗಿದ್ದಾಗ "ಸಂಗೀತದಿಂದ ಗಿಡ ಬಳ್ಳಿಗಳು ಚಿಗುರಬಲ್ಲವು" ಎಂದು ಜನರಿಗೆ ತೋರಿಸಿ ಕೊಟ್ಟರು. ಈ ವಿಷಯ ರಾಜನ ಬಳಿಗೆ ತಲುಪಿದಾಗ ಅಹಂಕಾರಿ ರಾಜ ಆಚಾರ್ಯರನ್ನು ಒಂದು ದಿನ ಸೈನಿಕರ ಪಹರೆ ಇರುವ ಒಂದು ಕೋಣೆಯಲ್ಲಿ ಇರಿಸಲು ಆಜ್ಞೆ ಕೊಡುತ್ತಾನೆ! ಹೀಗೆ ಆಚಾರ್ಯರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಸಿದ್ಧ ಪುರುಷರಾದ ಆಚಾರ್ಯರು ತಮ್ಮ "ಅಣಿಮಾ" ಸಿದ್ಧಿಯಿಂದ ಅಲ್ಲಿಂದ ಹೊರಬಂದು ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಇನ್ನೊಮ್ಮೆ ಕಾಂತಾವರದಲ್ಲಿ ಅಹಂಕಾರಿ ಜಟ್ಟಿಗಳನ್ನು ತಮ್ಮ "ಗರಿಮಾ" ಸಿದ್ಧಿಯಿಂದ ಸೋಲಿಸಿದ್ದಲ್ಲದೆ "ಲಘಿಮಾ" ಸಿದ್ದಿಯಿಂದ ಆಚಾರ್ಯರು ಒಬ್ಬ ಪುಟ್ಟ ಬಾಲಕನ ಹೆಗಲ ಮೇಲೆ ಕುಳಿತು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಜಟ್ಟಿಗಳ ಅಹಂಕಾರವನ್ನು ಮುರಿಯುತ್ತಾರೆ. ಭಗವಂತನೊಬ್ಬನೇ ಇಂತಹ ಸಿದ್ಧಿಗಳಿಗೆ ಸಾಧನ. ಭಗವಂತನನ್ನು ಸಂಪೂರ್ಣ ನಂಬಿದವರಿಗೆ ಆತ ಸಿದ್ಧಿಸಾಧನಃ.

Friday, August 6, 2010

Vishnu sahasranama 248-252


ವಿಷ್ಣು ಸಹಸ್ರನಾಮ: ಅಸಂಖ್ಯೇಯೋsಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ
248) ಅಸಂಖ್ಯೇಯಃ

ಸಂಖ್ಯೆಗೆ ಒಳಪಡದವನು ಅಸಂಖ್ಯೇಯಃ. ಭಗವಂತನ ರೂಪ ಅನಂತ. ಅದು ನಮ್ಮ ಎಣಿಕೆಗೊಳಪಟ್ಟದ್ದಲ್ಲ. ಗಣಿತದಿಂದ ಅಳೆಯಲು ಅಸಾಧ್ಯವಾದ ಗುಣ ಕ್ರಿಯೆ ಮಹಿಮೆ ಭಗವಂತನದ್ದು. ವೇದದಲ್ಲಿ ಹೇಳುವಂತೆ " ಈ ಭೂಮಿ ಎಷ್ಟು ಪರಮಾಣುಗಳಿಂದಾಗಿದೆ ಎಂದು ಲೆಕ್ಕ ಹಾಕಿದರೂ ಹಾಕಬಹುದು ಆದರೆ ಭಗವಂತನನ್ನು, ಆತನ ಗುಣ, ರೂಪ, ಕ್ರಿಯೆ, ಯಾವುದನ್ನೂ ಲೆಕ್ಕ ಹಾಕುವುದು ಅಸಾದ್ಯ. ಪ್ರತಿಯೊಂದು ಜೀವದಲ್ಲಿ, ಪಂಚ ಜ್ಞಾನೇದ್ರಿಯದಲ್ಲಿ, ಪಂಚ ಕರ್ಮೇಂದ್ರಿಯದಲ್ಲಿ, ಪಂಚ ಭೂತಗಳಲ್ಲಿ, ಪಂಚ ಕೋಶದಲ್ಲಿ, ಸಪ್ತ ಧಾತುವಿನಲ್ಲಿ, ಸರ್ವ ನರಕೋಶದಲ್ಲಿ, ಹೀಗೆ ಅನಂತ ರೂಪನಾಗಿ ನಮ್ಮೊಳಗೆ ನಮ್ಮ ಹೊರಗೆ ಅನಂತ ಶಕ್ತಿಯಾಗಿ ಭಗವಂತನಿದ್ದಾನೆ. ಭಗವಂತನ ಸೃಷ್ಟಿ ಕೂಡ ಅನಂತ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ಅನಂತ ನಕ್ಷತ್ರಮಂಡಲ ಭಗವಂತನ ಸೃಷ್ಟಿ. ವಿಜ್ಞಾನಕ್ಕೆ ತಿಳಿದಿರುವುದು ಕೇವಲ ಭೂಮಿಯ ಹತ್ತಿರದಲ್ಲಿರುವ ಗ್ರಹ ಗೋಲಗಳ ಪರಿಚಯ ಮಾತ್ರ. ಅದರಿಂದಾಚೆಗಿನ ಭಗವಂತನ ಸೃಷ್ಟಿ ಅನಂತ. ಹೀಗೆ ಭಗವಂತನ ಸೃಷ್ಟಿಯನ್ನೇ ತಿಳಿಯಲು ಅಸಾದ್ಯವಾಗಿರುವಾಗ, ಆತನನ್ನು ಗಣಿತದ ಮಿತಿಯಲ್ಲಿ ಅಳೆಯುವುದು ಎಂದಿಗೂ ಸಾದ್ಯವಿಲ್ಲ.
ಇನ್ನು ಸಂಸ್ಕೃತದಲ್ಲಿ 'ಸಂಖ್ಯಾ' ಎನ್ನುವ ಪದದ ಮೂಲಾರ್ಥ ಜ್ಞಾನಿ, ಪಂಡಿತ, ವಿದ್ವಾಂಸ ಇತ್ಯಾದಿ. ವೇದದಲ್ಲಿ ಹಾಗು ಗೀತೆಯಲ್ಲಿ ಹೆಚ್ಚಾಗಿ 'ಸಂಖ್ಯಾ' ಎನ್ನುವ ಪದವನ್ನು ಈ ಮೇಲಿನ ಅರ್ಥದಲ್ಲಿ ಬಳಸಲಾಗಿದೆ. 'ಅ' ಎನ್ನುವುದು 'ಅನಂತ', 'ಅಪಾರ' ಎನ್ನುವ ಅನೇಕ ಅರ್ಥವನ್ನು ಕೊಡುವ ಓಂಕಾರದ ಮೊದಲ ಅಕ್ಷರ. ಆದ್ದರಿಂದ ಅಸಂಖ್ಯೇಯಃ ಎಂದರೆ ಅನಂತಜ್ಞಾನ ಸಾಗರ. ಅಜ್ಞಾನಿಗಳಿಗೆ ಜ್ಞಾನವನ್ನು, ಜ್ಞಾನಿಗಳಿಗೆ ಮೋಕ್ಷವನ್ನು ಕೊಡುವ ಭಗವಂತ ಅಸಂಖ್ಯೇಯಃ
249) ಅಪ್ರಮೇಯಾತ್ಮಾ
ಅಪ್ರಮೇಯಾತ್ಮಾ ಎಂದರೆ ತಿಳಿಯಲಾಗದ ಅಥವಾ ಅಳೆಯಲಾಗದ ಸ್ವರೂಪ. ಭಗವಂತ ಸಂಪೂರ್ಣವಾಗಿ ನಮ್ಮ ತಿಳಿವಿಗೆ ಗೋಚರವಾಗುವ ವಸ್ತುವಲ್ಲ, ಆತನನ್ನು ಸಂಪೂರ್ಣ ತಿಳಿಯುವುದು ಅಸಾದ್ಯ. ದೋಷರಹಿತನಾದ, ಪರಿಪೂರ್ಣ ಹಾಗು ಎಲ್ಲರೂ ತಿಳಿಯಬೇಕಾಗಿರುವ ಭಗವಂತ ಅಪ್ರಮೇಯಾತ್ಮಾ.
250) ವಿಶಿಷ್ಟಃ
ವಿಶಿಷ್ಟ ಎಂದರೆ "Something Unique and Extraordinary". ಎಲ್ಲರಿಗಿಂತ ಮಿಗಿಲಾದವನು, ವಿಲಕ್ಷಣ ರೂಪವುಳ್ಳವನು. ಆತನ ವಿಶಿಷ್ಟತೆಯನ್ನು ಆತನ ಅವತಾರದ ಘಟನೆಗಳಲ್ಲಿ ನೋಡಬಹುದು. ಕಂಬವನ್ನೊಡೆದು ಬಂದ ನಾರಸಿಂಹ, ಗೋವರ್ದನ ಬೆಟ್ಟವನ್ನೆತ್ತಿದ ಸಾಮಾನ್ಯ ಗೋಪಾಲ ರೂಪಿ ಭಗವಂತ, ಮತ್ಸ್ಯವತಾರದಲ್ಲಿ ಮನುವಿನ ಮೂಲಕ ಜೀವದ ಮರುಸೃಷ್ಟಿಮಾಡಿದ ಭಗವಂತ, ಹೀಗೆ ಆತನ ವಿಶಿಷ್ಟತೆಯನ್ನು ನಾವು ಲೆಕ್ಕ ಹಾಕಲು ಬರುವುದಿಲ್ಲ. ಹೀಗೆ ಎಲ್ಲರಿಗಿಂತ ವಿಶಿಷ್ಟವಾಗಿದ್ದು, ಸಧಾಭಿಚಾರದಲ್ಲಿರುವವರನ್ನು ರಕ್ಷಿಸಿ ಉದ್ದರಿಸುವ ಭಗವಂತ ವಿಶಿಷ್ಟಃ
251) ಶಿಷ್ಟಕೃತ್
'ಶಿಷ್ಟ' ಎಂದರೆ ಶಾಸ್ತ್ರದ ಮರ್ಮವನ್ನು ತಿಳಿದು ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡವರು. ಇಂತಹ 'ಶಿಷ್ಟರನ್ನು' ಪಾಲಿಸಿ ಉದ್ದಾರ ಮಾಡುವ ಹಾಗು ವೇದಗಳ ಮೂಲಕ ಧರ್ಮ ಶಾಸನವನ್ನು ಮಾಡಿದ ಭಗವಂತ ಶಿಷ್ಟಕೃತ್.
252) ಶುಚಿಃ
ಶುಚಿ ಎಂದರೆ ಶುದ್ದ, ಪವಿತ್ರ, ಪ್ರಕಾಶ, ಬೆಳಕು, ನಿರ್ಮಲ ಇತ್ಯಾದಿ ಅರ್ಥವನ್ನು ಕೊಡುತ್ತದಾದರೂ, ಮೂಲ ಅರ್ಥ 'ಬೆಂಕಿ'. ಅಗ್ನಿ ಮೂಲಭೂತವಾಗಿ ಪವಿತ್ರ ಹಾಗು ನಿರ್ಮಲವಾಗಿದ್ದು, ಬೆಳಕನ್ನು ಕೊಡುತ್ತದೆ. ಬೆಂಕಿ ಶುದ್ದ ಹಾಗು ಬೆಂಕಿಗೆ ಹಾಕಿದ ಅಶುದ್ದ ಕೂಡ ಶುದ್ದವಾಗುತ್ತದೆ. ಬೆಂಕಿ ಯಾವಾಗಲೂ ಊರ್ದ್ವಮುಖವಾಗಿ ಉರಿಯುತ್ತದೆ. ಆದ್ದರಿಂದ ಅಗ್ನಿ ಸತ್ವಗುಣದ ಸಂಕೇತ. ಭಗವಂತ ಯಾವುದೇ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದು ಅಗ್ನಿ ಮುಖೇನ. ಅಗ್ನಿ ಪ್ರತೀಕದಲ್ಲಿ ಮಾಡುವ ಪೂಜೆ ಅತಿಶ್ರೇಷ್ಠ. ಅಗ್ನಿಯಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶುಚಿಃ.

Thursday, August 5, 2010

Vishnu sahasranama 242-247

ವಿಷ್ಣು ಸಹಸ್ರನಾಮ: ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ
242) ಸತ್ಕರ್ತಾ

ಗುಣದಲ್ಲಿ ಜ್ಞಾನದಲ್ಲಿ ಹಿರಿಯರಾದವರನ್ನು ಮೇಲು-ಕೀಳು ಎನ್ನುವ ಭೇದವಿಲ್ಲದೆ ಗೌರವಿಸುವುದನ್ನು ಸತ್ಕಾರ ಎನ್ನುತ್ತಾರೆ. ಭಗವಂತನ ಪೂಜೆ ಸಹ ಸತ್ಕಾರ. ಜೀವನದಲ್ಲಿ ಸತ್ಕಾರ ಹೇಗಿರಬೇಕು ಎನ್ನುವುದನ್ನು ಭಗವಂತ ತನ್ನ ಅವತಾರ ರೂಪದಲ್ಲಿ ನಮಗೆ ತೋರಿಸಿ ಕೊಟ್ಟಿದ್ದಾನೆ. ನಿಜವಾಗಿ ಹಿರಿಯ ವ್ಯಕ್ತಿಗಳು ಅಹಂಕಾರ ರಹಿತರಾಗಿರುತ್ತಾರೆ. ತಾನು ದೊಡ್ಡವ ಎನ್ನುವ ಅಹಂಕಾರ ಅವರಲ್ಲಿರುವುದಿಲ್ಲ. ರಾಜಸೂಯ ಯಜ್ಞದಲ್ಲಿ ಯಾರಿಗೆ ಮೊದಲು ಪಾದ ಪೂಜೆ ಮಾಡಬೇಕು ಎಂದು ಚರ್ಚೆಯಾದಾಗ ಭೀಷ್ಮಾಚಾರ್ಯರು ಶ್ರೀಕೃಷ್ಣನೊಬ್ಬನೇ ಅಗ್ರಪೂಜೆಗೆ ಅರ್ಹ ಎನ್ನುವ ಸಲಹೆಯನ್ನು ಮುಂದಿಡುತ್ತಾರೆ. ಆ ಸಮಯದಲ್ಲಿ ಕೃಷ್ಣನನ್ನು ಹುಡುಕಾಡಿದರೆ ಆತ ಬಂದ ಅತಿಥಿಗಳ ಕಾಲು ತೊಳೆಯಲು ನೀರು ಕೊಡುತ್ತಿದ್ದನಂತೆ! ನಿಜವಾದ ಜ್ಞಾನಿಗಳು ಎಂದೂ ಅಹಂಕಾರಿಗಳಾಗಿರುವುದಿಲ್ಲ. ಇನ್ನೊಬ್ಬರನ್ನು ಸತ್ಕಾರ ಮಾಡುವುದನ್ನು ಭಗವಂತ ತನ್ನ ರಾಮಾವತಾರದಲ್ಲಿ ತೋರಿಸಿ ಕೊಟ್ಟಿದ್ದಾನೆ. ಮೇಲು-ಕೀಳು ಬಡವ-ಬಲ್ಲಿದ ಎನ್ನುವ ಬೇಧವಿಲ್ಲದೆ ಸ್ನೇಹಿತ ಸುಧಾಮನನ್ನು ಭಗವಂತ ಸತ್ಕರಿಸಿದ ಬಗೆ ಎಲ್ಲರಿಗೂ ತಿಳಿದಿದೆ. ದುರ್ವಾಸಮುನಿ ದ್ವಾರಕೆ ನೋಡಲು ಬಂದಾಗ ಸ್ವತಃ ಶ್ರೀಕೃಷ್ಣ ಅವರನ್ನು ಗಾಡಿಯಲ್ಲಿ ಕುಳ್ಳಿರಿಸಿ ತಾನೇ ಎಳೆದುಕೊಂಡು ಹೋಗಿ ಇಡೀ ದ್ವಾರಕೆಯನ್ನು ದುರ್ವಾಸರಿಗೆ ತೋರಿಸಿ ಕಳುಹಿಸಿ ಕೊಡುತ್ತಾನೆ. ತನ್ನ ಪೂಜೆಯನ್ನು ನಮ್ಮೊಳಗಿದ್ದು ತಾನೇ ಮಾಡಿಕೊಳ್ಳುವವ, ಪೂಜಾ ಫಲವನ್ನು ಭಕ್ತಕೋಟಿಗೆ ಕರುಣಿಸುವವ, ಸತ್ಕಾರ ಮಾಡುವುದು ಹೇಗೆ ಎನ್ನುವುದನ್ನು ಅವತಾರಗಳ ಮೂಲಕ ನಮಗೆ ತೋರಿಸಿಕೊಟ್ಟ ಭಗವಂತ ಸತ್ಕರ್ತಾ.

243) ಸತ್ಕೃತಃ
ಈ ಜಗತ್ತಿನಲ್ಲಿ ಇರುವ ಸರ್ವ ವಸ್ತುಗಳ ಕರ್ತನಾದ ಭಗವಂತ ಸತ್ಕೃತಃ. ಜ್ಞಾನ, ದುಃಖ, ಅಜ್ಞಾನ, ಸಂಹಾರ, ಮೋಕ್ಷದ 'ಕರ್ತ' ಭಗವಂತ ಸತ್ಕೃತಃ. 'ಸತ್' ಎಂದರೆ ಕಣ್ಣಿಗೆ ಕಾಣುವ ವಸ್ತು. ಸೃಷ್ಟಿಯ ಆದಿಯಲ್ಲಿ ಭಗವಂತ ಪ್ರಾಣ ತತ್ವವನ್ನು ಸೃಷ್ಟಿ ಮಾಡಿದ. ಭಗವಂತ ಸೃಷ್ಟಿ ಮಾಡಿರುವ 'ಮಣ್ಣು, ನೀರು, ಮತ್ತು ಬೆಂಕಿ 'ಸತ್'. ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ಸರ್ವ ವಸ್ತುಗಳು ಈ ಮೂರು ಮೂಲ ವಸ್ತುಗಳ ಮಿಶ್ರಣ. ಸದಾ ಕೆಳಮುಖವಾಗಿ ಚಲಿಸುವ ಮಣ್ಣು ತಮೋಗುಣವನ್ನು, ತಗ್ಗಿದ್ದ ಕಡೆ ಹರಿಯುವ ನೀರು ರಜೋಗುಣವನ್ನು ಹಾಗು ಸದಾ ಮೇಲ್ಮುಖವಾಗಿ ಉರಿಯುವ ಬೆಂಕಿ ಸತ್ವಗುಣವನ್ನು ಪ್ರತಿಬಿಂಬಿಸುತ್ತದೆ. ಮಣ್ಣು-ನೀರು-ಬೆಂಕಿ ಇಡೀ ವಿಶ್ವದ ಮೂಲದ್ರವ್ಯ. ಗೊಬ್ಬರದಲ್ಲಿರುವುದೂ ಮಣ್ಣು-ನೀರು-ಬೆಂಕಿ ಹಾಗು ಅದರಿಂದ ಅರಳಿನಿಲ್ಲುವ ಸುಂದರವಾದ ಗುಲಾಬಿ ಕೂಡ ಮಣ್ಣು-ನೀರು-ಬೆಂಕಿಯಿಂದಾಗಿದೆ. ಇಲ್ಲಿ ಬೆಂಕಿ ಎಂದರೆ ಶಾಖ. ಸೂರ್ಯನ ಬೆಳಕಿನಿಂದ ನಮಗೆ ಬೇಕಾದ ಶಾಖ ದೊರೆಯುತ್ತದೆ. ಹೀಗೆ ಅನಂತ ಆಕಾಶ, ಮೂಲದ್ರವ್ಯವಾದ ಮಣ್ಣು-ನೀರು-ಬೆಂಕಿ, ಗಾಳಿ, ಚರ-ಅಚರ, ಜಡ-ಚೇತನ, ಎಲ್ಲವುದರ ಸೃಷ್ಟಿಕರ್ತ ಭಗವಂತ ಸತ್ಕೃತಃ. ಆತ ಮಾಡುವ ಯಾವ ಕರ್ಮವೂ ಕೆಟ್ಟ ಕೆಲಸವಾಗಿರುವುದಿಲ್ಲ. ಈ ಜಗತ್ತಿನಲ್ಲಿ ಎಂದೂ ಆಗಬಾರದ್ದು ಆಗಿಲ್ಲ ಹಾಗು ಆಗುವುದೂ ಇಲ್ಲ!
244) ಸಾಧುಃ
ಭಗವಂತ ಸದ್ಗುಣಮೂರ್ತಿ. ಯಾವ ಕಾಲದಲ್ಲೂ ಆತನಿಗೆ ಕೆಟ್ಟ ಗುಣದ ಲೇಪವಿಲ್ಲ. ಸದ್ಗುಣಗಳಿಂದ ಪರಿಪೂರ್ಣನಾದ, ಸಾತ್ವಿಕ ಮೂರ್ತಿ ಹಾಗು ಸಕಲ ಗುಣಪೂರ್ಣ ಭಗವಂತ ಸಾಧುಃ.

245) ಜಹ್ನು

'ಜಹ್ನು' ಎಂದಾಗ ನಮಗೆ ನೆನಪಿಗೆ ಬರುವುದು ಋಷಿ ಜಹ್ನು. ಗಂಗೆಯು ಭಗೀರಥ ಪ್ರಯತ್ನದಿಂದ ಭೂಮಿಗಿಳಿದು ಬರುತ್ತಿದ್ದಾಗ, ರಭಸದಿಂದ ಬಂದು ಜಹ್ನು ಋಷಿಗಳ ತಪೋವನ ಪ್ರವೇಶಿಸುತ್ತಾಳೆ. ಕೋಪಗೊಂಡ ಜಹ್ನು ಋಷಿಗಳು ಇಡೀ ಗಂಗೆಯನ್ನು ಸ್ವೀಕರಿಸಿ ಹಿಡಿದಿಡುತ್ತಾರೆ. ನಂತರ ಋಷಿಮುನಿಗಳ ಪ್ರಾರ್ಥನೆಯಂತೆ ಮತ್ತು ದೇವಾನುದೇವತೆಗಳ ಅನುಜ್ಞೆಯಂತೆ ಗಂಗಾದೇವಿಯನ್ನು ಹರಿದು ಬಿಡುತ್ತಾರೆ. ಈ ಕಾರಣಕ್ಕಾಗಿ ಗಂಗೆಯನ್ನು ಜಾನ್ಹವಿ ಎನ್ನುತ್ತಾರೆ. ಭಗವಂತನನ್ನು 'ಜಹ್ನು' ಎನ್ನಲು ಕಾರಣವೇನು? ಯಾವುದೇ ಅರ್ಥವಿಲ್ಲದೆ ವ್ಯರ್ಥವಾದ ಪದವನ್ನು ಜಹ್ನುವಿನ ತಂದೆ ನಾಮಕರಣ ಮಾಡಿಲ್ಲ. ಜಹ್ನು ಭಗವಂತನ ಗುಣವಾಚಕ ನಾಮ. ಇಲ್ಲಿ 'ಜಃ' ಧಾತು 'ಬಿಟ್ಟವನು' ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಯಾವುದು ಬೇಡವೋ ಅದನ್ನು ಬಿಟ್ಟವನು.ಇಲ್ಲಿ ಬೇಡವಾದದ್ದು ಅಂದರೆ ಪ್ರಮುಖವಾಗಿ ಅಹಂಕಾರ ಮತ್ತು ಮಮಕಾರ. ಆತನಿಗೆ ಅಹಂಕಾರ ಮತ್ತು ಮಮಕಾರದ ಸ್ಪರ್ಶವೇ ಇಲ್ಲ. ಆದ್ದರಿಂದ ಆತ ಜಹ್ನು. 'ಜ' ಎಂದರೆ ‘ಜನನ’, 'ಹಂತಿ' ಎಂದರೆ ಸಂಹಾರ. ಸೃಷ್ಟಿ-ಸ್ಥಿತಿ-ಸಂಹಾರಗಳ ಕರ್ತ ಜಹ್ನು.

246) ನಾರಾಯಣಃ
ಸೃಷ್ಟಿಗೆ ಮೊದಲು ಭಗವಂತ ಸೂಕ್ಷ್ಮ ರೂಪದ ಪ್ರಕೃತಿಯನ್ನು ನಿರ್ಮಾಣ ಮಾಡಿದ. ಇದೇ ಸೃಷ್ಟಿಯ ಮೂಲ ದ್ರವ್ಯ ಹಾಗು ಇದನ್ನು 'ನಾರ' ಎನ್ನುತ್ತಾರೆ. ಸೃಷ್ಟಿಗೆ ಮೊದಲು ಇದ್ದವ ನಾರಾಯಣ. ಸೃಷ್ಟಿ ನಿರ್ಮಾಣದ ನಂತರ ನರರ ಸಮುದಾಯವೇ ಅವನ ಅಯನ. ನಾರಸ್ಯ ಅಯನಃ ನಾರಾಯಣಃ. ಅಂದರೆ ಜೀವ ಸಮುದಾಯಕ್ಕೆ ಆಶ್ರಯದಾತ. "ನಾರಂ ಅಯನಂ ಯಸ್ಸ್ಯ ನಾರಾಯಣಃ. ಅಂದರೆ ಜೀವ ಸಮುದಾಯವನ್ನು ಆಶ್ರಯಿಸಿ ಕೊಂಡಿರುವವ. ನಾರಾಣಾಂ ಅಯನಃ ನಾರಾಯಣಃ. ಅಂದರೆ ಜೀವರನ್ನು ನಿಯಂತ್ರಿಸುವ ಸರ್ವ ದೇವತೆಗಳ ಆಶ್ರಯದಾತ. "ಅರ" ಎಂದರೆ ದೋಷ. ದೋಷದ ಸ್ಪರ್ಶವೇ ಇಲ್ಲದ ಗುಣಪೂರ್ಣ ನಾರಾಯಣ. ಹೀಗೆ ಸೃಷ್ಟಿಗೆ ಮೊದಲು ಇದ್ದವ, ಸೃಷ್ಟಿಯಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವವ,ದೋಷಗಳಿಲ್ಲದ ಗುಣಪೂರ್ಣ, ಸರ್ವ ನರರೂ ತಿಳಿಯಬೇಕಾದವ, ದೇವತೆಗಳ ಆಶ್ರಯದಾತ, ಮತ್ತು ಎಲ್ಲಾ ನರರು ಕೊನೆಯದಾಗಿ ಸೇರಬೇಕಾದ ತಾಣ ಭಗವಂತ ನಾರಾಯಣಃ.

247) ನರಃ
'ನರ' ಎಂದರೆ ನರರಲ್ಲಿ ಶೇಷಾಭೀಷ್ಟನಾದ ಭಗವಂತನ ಆವೇಶ. ಅರ್ಜುನನಲ್ಲಿ ನರನ ಆವೇಶವಿತ್ತು ಎನ್ನುವ ವಿಷಯವನ್ನು ನಾವು ಹಿಂದೆ ವಿಶ್ಲೇಷಿಸಿದ್ದೇವೆ. ಶೇಷ ನಮ್ಮ ದೇಹದಲ್ಲಿರುವ ಕುಂಡಲಿನಿ ಶಕ್ತಿಯ ಸಂಕೇತ. ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರ ಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರ ಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಶೇಷನಲ್ಲಿ ವಿಶೇಷವಾಗಿ ಅಭಿಷ್ಟನಾದ ಶೇಷ ಶಯನನಾಗಿರುವ ಭಗವಂತ ನಮ್ಮಲ್ಲಿರುವ ವೇದಪುರುಷ (ಗರುಡ) ಜಾಗೃತನಾಗುವಂತೆ ಮಾಡಿ ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಹೀಗೆ ಛಂದಃಪುರುಷನಲ್ಲಿ ಅಭೀಷ್ಟನಾಗಿದ್ದು, ಎಲ್ಲವನ್ನೂ ತಿಳಿದ, 'ಅರಿಗಳಿಗೆ' ನರನಾದ ಭಗವಂತ ನರಃ

Wednesday, August 4, 2010

Vishnusahasranama 237-241

ವಿಷ್ಣು ಸಹಸ್ರನಾಮ: ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ
237) ಸುಪ್ರಸಾದಃ
ಪ್ರಸಾದ ಎಂದರೆ ಒಳಮನಸ್ಸಿನ ಆನಂದ (Internal Bliss). ಪೂರ್ಣಪ್ರಮಾಣದ ಸ್ವರೂಪಾನಂದನಾದ ಭಗವಂತ ಸುಪ್ರಸಾದಃ. ಭಗವಂತನಿಗೆ ದುಃಖದ ಸ್ಪರ್ಶವೇ ಇಲ್ಲ. ಆತನನ್ನು ಸ್ವಚ್ಛ ಮನಸ್ಸಿನಿಂದ, ಫಲಾಪೇಕ್ಷೆ ಇಲ್ಲದೆ ಉಪಾಸನೆ ಮಾಡುವವರಿಗೆ ಸದಾ ಆನಂದವನ್ನು ಕೊಡುತ್ತಾನೆ. 'ಸುಪ್ರ' ಎಂದರೆ ಪೂರ್ಣತೆ ಪಡೆದವರು ಅಥವಾ ಜ್ಞಾನಿಗಳು. ಇಂತಹ ಜ್ಞಾನಿಗಳನ್ನು ಸಂಸಾರಬಂಧನದಿಂದ ಪಾರು ಮಾಡುವವನು ಸುಪ್ರಸಾದಃ. ಸುಪ್ರ+ಸಾದಃ-ಅಂದರೆ ಆನಂದದಿಂದ ಸಂಹಾರ ಮಾಡುವವನು! ಭಗವಂತ ಸಂಹಾರ ಮಾಡುವುದು ಬೇಸರದಿಂದ ಹಾಗು ದ್ವೇಷದಿಂದಲ್ಲ. ಸಂಹಾರ ಆತನ ಕರುಣಾಮಯ ಕರ್ಮ ಹಾಗು ಆತ ಅದನ್ನು ಯಾವಾಗಲೂ ಆನಂದ ಸ್ವರೂಪನಾಗಿ ಮಾಡುತ್ತಾನೆ.
238) ಪ್ರಸನ್ನಾತ್ಮಾ
ತಿಳಿಯಾದ ಬಗೆಯವನು ಹಾಗು ರೋಷ ರಹಿತನು ಆದ ಭಗವಂತ ಪ್ರಸನ್ನಾತ್ಮಾ .ಇಂಗ್ಲೀಷಿನ " Pleasant" ಎನ್ನುವ ಪದದ ಮೂಲ ಪದ ಭಾಗಶಃ ಸಂಸ್ಕೃತದ 'ಪ್ರಸನ್ನ' ಎನ್ನುವ ಪದದಿಂದ ಬಂದಿರಬಹುದು! ಭಗವಂತ ಭಕ್ತರಿಗೆ ಎಂದೂ ರೋಷಚಿತ್ತನಲ್ಲ. ಎಂದೆಂದೂ ಪ್ರಸನ್ನತೆಯ ಭಾವದಿಂದ ಸದಾ ಭಕ್ತರ ರಕ್ಷಣೆ ಮಾಡುವ ಭಗವಂತ ಪ್ರಸನ್ನಾತ್ಮಾ. ಭಗವಂತನ ಪ್ರಸನ್ನಚಿತ್ತ ರೂಪಕ್ಕೆ ಆತನ ಕೃಷ್ಣಾವತಾರವೇ ಸಾಕ್ಷಿ. ಕೃಷ್ಣಾವತಾರದಲ್ಲಿ ಭಗವಂತ ಯಾವಾಗಲೂ ನಗುನಗುತ್ತ ತನ್ನ ಪ್ರಸನ್ನತೆಯ ಸ್ವರೂಪವನ್ನು ತನ್ನ ಭಕ್ತಕೋಟಿಗೆ ತೋರಿಸಿಕೊಟ್ಟಿದ್ದಾನೆ.
239) ವಿಶ್ವಧೃಕ್
ಈ ಹಿಂದೆ ವಿಶ್ಲೇಶಿಸಿದಂತೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನನ್ನು 'ವಿಶ್ವ' ಎನ್ನುತ್ತಾರೆ. ಈ ಬ್ರಹ್ಮಾಂಡವೆಂಬ ಕಮಲವನ್ನು ತನ್ನ ನಾಭಿಯಲ್ಲಿ ಧರಿಸಿರುವ ಸರ್ವಧಾರಕ ಭಗವಂತ ವಿಶ್ವಧೃಕ್.

240) ವಿಶ್ವಭುಕ್
ಪ್ರಳಯ ಕಾಲದಲ್ಲಿ ಈ ವಿಶ್ವವನ್ನು ಸಂಪೂರ್ಣವಾಗಿ ಸಂಹಾರಮಾಡಿ ( ಭೋಕ್ತಾ) ತನ್ನ ಉದರದಲ್ಲಿ ಸಲಹುವವನು. ವಿಶ್ವವನ್ನು ಪಾಲಿಸಿ ನಂತರ ಕಬಳಿಸುವ ಭಗವಂತ ವಿಶ್ವಭುಕ್.
241) ವಿಭುಃ
ವಿವಿಧ+ಭವತಿ- ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ. ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭುಃ
.

Tuesday, August 3, 2010

Vishnu sahasranama 233-236

ವಿಷ್ಣು ಸಹಸ್ರನಾಮ: ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ
233) ಅಹಃಸಂವರ್ತಕಃ

ಅಹಃ ಎನ್ನುವುದನ್ನು 'ಅಹಹ' ಹಾಗು ಅಹಂ ಎಂದು ಎರಡು ರೂಪದಲ್ಲಿ ಅರ್ಥೈಸಬಹುದು. ಬೆಳಕು ಹಾಗು ಬೆಳಕಿಗೆ ಕಾರಣಕರ್ತ ಸೂರ್ಯ 'ಅಹಹ' ಹಾಗು ನಾವು ಯಾವುದನ್ನು ಬಿಟ್ಟು ಇರಲು ಅಸಾದ್ಯವೋ ಅದು 'ಅಹಂ'. ಗೀತೆಯಲ್ಲಿ ಹೇಳುವಂತೆ:
ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಂ (ಅ-೧೦, ಶ್ಲೋ-೩೯)
ಅಂದರೆ "ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ-ತಾನಾಗಿ ಇಲ್ಲ".
ಹೀಗೆ ಪಿಂಡಾಂಡ ಹಾಗು ಬ್ರಹ್ಮಾಂಡದಲ್ಲಿರುವ ಪ್ರವರ್ತಕ ಭಗವಂತ ಅಹಃಸಂವರ್ತಕಃ.
234) ವಹ್ನಿ
ವಹ್ನಿ ಎಂದರೆ ವಾಹನ ಅಥವಾ ಕೊಂಡೋಯ್ಯುವವ. ನಮ್ಮ ಪಾಪ ಪುಣ್ಯಕ್ಕನುಸಾರವಾಗಿ ನಾವು ಯಾವ ಎತ್ತರಕ್ಕೇರಬೇಕೋ ಅಲ್ಲಿಗೆ ಕೊಂಡೋಯ್ಯುವವ. ಮೋಕ್ಷ ಯೋಗ್ಯ ಜೀವರನ್ನು ಮೋಕ್ಷಕ್ಕೆ ಕೊಂಡೋಯ್ಯುವ ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳ ನಿಯಾಮಕನಾದ ಭಗವಂತ ವಹ್ನಿ.
235) ಅನಿಲಃ
ಅನಿಲ ಎಂದರೆ ಪಂಚಭೂತಗಳಲ್ಲಿ ಒಂದಾದ "ಗಾಳಿ" ಎನ್ನುವುದು ರೂಡಾರ್ಥ. ಆದರೆ ಇದರ ಶಬ್ದನಿಷ್ಪತ್ತಿ (Etymological meaning) ತೀರಾ ಭಿನ್ನವಾದ ಅರ್ಥವನ್ನು ಕೊಡುತ್ತದೆ. "ನಿಲ" ಎಂದರೆ "ನಿಲಯನ". ಅಂದರೆ ನೆಲೆ ಅಥವಾ ಆಶ್ರಯ. ಭಗವಂತ "ಅ-ನಿಲ", ಎಂದರೆ ಸರ್ವರಿಗೂ ನೆಲೆಯಾಗಿ ಕಾಪಾಡುವ ಭಗವಂತ ಸ್ವಯಂ ಇನ್ನೊಬ್ಬರ ಆಶ್ರಯದಲ್ಲಿರುವವನಲ್ಲ. ಆತ ಅನಿಲಃ.
236) ಧರಣೀಧರಃ
ಧರಣೀಧರ ಎಂದರೆ ಭೂಮಿಯನ್ನು ಹೊತ್ತವನು. ಭಗವಂತ ವಾಮನಾವತಾರದಲ್ಲಿ ಕಕ್ಷೆ ತಪ್ಪಿದ್ದ ಭೂಮಿಯನ್ನು ಪುನಃ ಕಕ್ಷೆಯಲ್ಲಿಟ್ಟು ರಕ್ಷಿಸಿದ ಕರುಣಾಮಯಿ. ಸರ್ವ ಗ್ರಹ-ಗೋಲವನ್ನು ನಿರ್ದಿಷ್ಟವಾಗಿ ಹಿಡಿದಿಟ್ಟು ನಡೆಸುವ ಭಗವಂತ ಧರಣೀಧರಃ.

Monday, August 2, 2010

Vishnu sahasranama 229-232

ವಿಷ್ಣು ಸಹಸ್ರನಾಮ : ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ
229) ಆವರ್ತನಃ

ಆವರ್ತನ ಎಂದರೆ ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುತ್ತಿರುವವನು ಎಂದರ್ಥ. ಈ ವಿಶ್ವ ಎಂದೋ ಒಮ್ಮೆ ಸೃಷ್ಟಿಯಾಯಿತು, ಇನ್ನು ಎಷ್ಟೋ ಕೋಟಿ ವರ್ಷಗಳ ನಂತರ ಪ್ರಳಯವಾಗಿ ನಾಶವಾಗುತ್ತದೆ. ಯಾವುದಕ್ಕೆ ಆದಿ ಇದೆಯೋ ಅದಕ್ಕೆ ಅಂತ್ಯ ಕೂಡಾ ಇದೆ. ೩೧,೧೦೪ ಸಾವಿರ ಕೋಟಿ ವರ್ಷಗಳಿಗೊಮ್ಮೆ ಮಹಾ ಪ್ರಳಯವಾಗುತ್ತದೆ. ಆಗ ಈ ಕಣ್ಣಿಗೆ ಕಾಣುವ ಸೃಷ್ಟಿ ನಾಶವಾಗುತ್ತದೆ. ಪುನಃ ೩೧,೧೦೪ ಸಾವಿರ ಕೋಟಿ ವರ್ಷಗಳ ನಂತರ ಮರು ಸೃಷ್ಟಿಯಾಗುತ್ತದೆ. ಈ ಸೃಷ್ಟಿ-ಪ್ರಳಯ ಎನ್ನುವ ಕ್ರಿಯೆ ನಿರಂತರ. ಈ ಮಹಾ ಪ್ರಳಯವಲ್ಲದೆ ೪೩೨ ಕೋಟಿ ವರ್ಷಕ್ಕೊಮ್ಮೆ ಮದ್ಯಮ ಪ್ರಳಯ ಹಾಗು ಸುಮಾರು ೩೧ ಕೋಟಿ ವರ್ಷಕ್ಕೊಮ್ಮೆ ಚಿಕ್ಕ ಪ್ರಳಯ. ಈ ರೀತಿ ಸೃಷ್ಟಿ-ಪ್ರಳಯಗಳು ಆವರ್ತನಗೊಳ್ಳುತ್ತವೆ. ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುವ ಭಗವಂತ ಆವರ್ತನಃ. ಈ ಕಾರಣಕ್ಕಾಗಿ ಭಗವಂತನನ್ನು “ಅನಂತ ಕೋಟಿ ಬ್ರಹ್ಮಾಂಡ ನಾಯಕ” ಎನ್ನುತ್ತಾರೆ. ಈ ಸೃಷ್ಟಿಯ ನಿಯಾಮಕ ಶಕ್ತಿಗಳು ನಿವೃತ್ತಿಯಾದ ಮೇಲೆ ನಿರಂತರವಾಗಿ ಅನಾದಿ ಅನಂತಕಾಲದವರೆಗೆ ಆವೃತ್ತಿಯಾಗುತ್ತಿರುತ್ತಾರೆ. ಪ್ರತಿಯೊಂದು ಶಕ್ತಿಯೊಳಗೆ ಭಗವಂತ ನಿಯಾಮಕನಾಗಿ ಆವರ್ತನಾಗುತ್ತಿರುತ್ತಾನೆ. ಆವರ್ತ ಎಂದರೆ "ಸುಳಿ" ಎನ್ನುವ ಇನ್ನೊಂದು ಅರ್ಥವಿದೆ. ಬದುಕಿನಲ್ಲಿ ಆಗಾಗ ನಾವು ಆಪತ್ತಿನ ಸುಳಿಗೆ ಸಿಕ್ಕಿಹಾಕಿಕೊಂಡಾಗ, ಮುಂದಾಳಾಗಿ ನಮ್ಮನ್ನು ಪಾರುಮಾಡುವ ("ಆವರ್ತ-ನಯತಿ") ಭಗವಂತ ಆವರ್ತನಃ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಯ ಸುಳಿ ಇದ್ದೇ ಇರುತ್ತದೆ. ದೇವಾದಿ ದೇವತೆಗಳಿಗೂ ಇದು ತಪ್ಪಿದ್ದಲ್ಲ. ಇದಕ್ಕೆ ಉತ್ತಮ ಉದಾಹರಣೆ ಯುದಿಷ್ಟಿರ ಹಾಗು ದ್ರೌಪದಿ. ಸ್ವತಃ ಧರ್ಮರಾಯನ ಅವತಾರಿಯಾದ ಯುದಿಷ್ಟಿರ, ಭಾರತಿಯ ಅವತಾರಿಣಿ ದ್ರೌಪದಿ ಪಟ್ಟ ಕಷ್ಟ ನಮಗೆಲ್ಲ ಗೊತ್ತೇ ಇದೆ. ಭಗವಂತ ನಮ್ಮ ಜೀವಿತ ಕಾಲದಲ್ಲಿ ನಮಗೆ ಕೊಡುವ ಪಾತ್ರವನ್ನು ನಾವು ನಮ್ಮ ಕರ್ತವ್ಯವೆಂದು ನಿಭಾಯಿಸಬೇಕು. ಜೀವನದಲ್ಲಿ ಏನು ಬರುತ್ತದೋ ಅದನ್ನು ಆಸ್ವಾದಿಸಬೇಕು. ಅದನ್ನು ಹೊಂದಿಸಿಕೊಂಡು ನೆಡೆಯುವುದೇ ಜೀವನ. ಆವರ್ತನನಾದ ಭಗವಂತ ಸದಾ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ ಎನ್ನುವ ನಂಬಿಕೆ ‘ಭಗವಂತನ ಶ್ರೀರಕ್ಷೆ’
230) (ಅ)ನಿವೃತ್ತಾತ್ಮಾ
ಈ ನಾಮವನ್ನು ನಿವೃತ್ತಾತ್ಮಾ ಹಾಗು ಅನಿವೃತ್ತಾತ್ಮಾ ಎನ್ನುವ ಎರಡು ರೂಪದಲ್ಲಿ ಉಚ್ಚರಿಸಬಹುದು. ಯಾವ ನಂಟೂ ಇಲ್ಲದೆ ಯಾವುದಕ್ಕೂ ಅಂಟಿಕೊಳ್ಳದ ನಿಷ್ಪಕ್ಷಪಾತಿ ಹಾಗು ಯಾರಿಂದ ನಾವು ನಿವೃತ್ತಿ ಕಡೆ ತಿರುಗಬಹುದೋ ಅವನು ನಿವೃತ್ತಾತ್ಮಾ.ಇನ್ನು ಅನಿವೃತ್ತಾತ್ಮಾ ಅನ್ನುವ ನಾಮದಲ್ಲಿ 'ಅನಿ' ಎಂದರೆ 'ಜೀವಿ'. ಸರ್ವ ಜೀವಿಗಳಲ್ಲಿ ಅಂತರ್ಯಾಮಿಯಾಗಿ ಕುಳಿತಿರುವ ಭಗವಂತ ಅನಿವೃತ್ತಾತ್ಮಾ. ಪ್ರಾಣದೇವರನ್ನು 'ಅನಿ' ಎಂದು ಕರೆಯುತ್ತಾರೆ. ಯಾವಾಗಲೂ ಪ್ರಾಣದೇವರನ್ನು ತನ್ನ ಅಂತರಂಗದ ಸಚಿವನಾಗಿರಿಸಿಕೊಂಡಿರುವ ಭಗವಂತ ಅನಿವೃತ್ತಾತ್ಮಾ.

231) ಸಂವೃತಃ

ಹೃದಯಗುಹೆಯೊಳಗೆ ಅಡಗಿ ಕುಳಿತವನು; ಸಮೀಚೀನವಾದ ಸದ್ಗುಣಗಳ ಸಾಗರನಾದ ಭಗವಂತ ಸಂವೃತಃ.

232) ಸಂಪ್ರಮರ್ದನಃ

ಸಂ+ಪ್ರ+ಮರ್ದನ-ಸಂಪ್ರಮರ್ದನ; ಏಕಾಕ್ಷರ ಕೋಶದಲ್ಲಿ ವಿಷ್ಣುವಾಚಕ ಹನ್ನೊಂದು ನಾಮಗಳಿವೆ; ಅವುಗಳೆಂದರೆ: ಅ,ಕಾ, ಯ, ಪ್ರ, ವಿ, ಸಂ, ಭೂ, ಮಾ, ಸ, ಕ ಮತ್ತು ಹ. ಈ ಪ್ರತಿಯೊಂದು ಪದಕ್ಕೂ ವಿಶಿಷ್ಟವಾದ ಅರ್ಥವಿದೆ. ಸಾಮಾನ್ಯವಾಗಿ ಉಪಸರ್ಗ ಧಾತುವಿನೊಂದಿಗೆ ಸೇರಿದಾಗ ಧಾತುವಿನಲ್ಲಿ ನಿಗೂಡವಾಗಿ ಅಡಗಿರುವ ಅರ್ಥ ವ್ಯಂಜನವಾಗುತ್ತದೆ. ಉದಾಹರಣೆಗೆ "ಹಾರ" ಇದಕ್ಕೆ 'ಸಂ' ಸೇರಿದರೆ ಸಂಹಾರ, 'ಪ್ರ' ಸೇರಿದರೆ ಪ್ರಹಾರ, ವಿ ಸೇರಿದರೆ ವಿಹಾರ! ಹೀಗೆ ಇಲ್ಲಿ 'ಸಂ' ಎಂದರೆ ಸಂಪೂರ್ಣವಾದ, ಸಮಾನವಾದ ಎನ್ನುವ ಅರ್ಥವನ್ನು ಕೊಡುತ್ತದೆ. 'ಪ್ರ' ಎಂದರೆ ಪ್ರಕೃಷ್ಟವಾದ ಅರಿವು. ಆದ್ದರಿಂದ ಸಂಪ್ರಮರ್ದನಃ ಎಂದರೆ ನಮಗೆ ಯಾವುದೇ ತಾರತಮ್ಯವಿಲ್ಲದೆ, ಪರಿಪೂರ್ಣವಾದ ಅರಿವನ್ನು ಕೊಟ್ಟು, ತರಬೇತಿಗೊಳಿಸಿ ಕೊನೆಗೆ ಈ ಬೌದ್ದಿಕ ಶರೀರವನ್ನು "ಮರ್ದನ" ಮಾಡಿ ಮುಕ್ತಿಯನ್ನು ಕರುಣಿಸುವವ.

Sunday, August 1, 2010

Vishnu sahasranama 225-228

ವಿಷ್ಣು ಸಹಸ್ರನಾಮ: ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್
ಈ ಶ್ಲೋಕದ ಈ ಮೇಲಿನ ಸಾಲು ಸರ್ವವ್ಯಾಪಿ ಭಗವಂತನ ಸಹಸ್ರ ರೂಪವನ್ನು ಹೇಳುತ್ತದೆ. ಪುರುಷ ಸೂಕ್ತದಲ್ಲಿ ಹೇಳುವಂತೆ:
ಓಂ ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್
ಸ ಭೂಮಿಂ ವಿಶ್ವತೋ ವ್ರತ್ವಾsತ್ಯತಿಷ್ಠದ್ದಶಾಂಗುಲಮ್
ಇಲ್ಲಿ 'ಸಹಸ್ರ' ಎಂದರೆ 'ಅನಂತ'. ಅದೇ ರೀತಿ ಶೀರ್ಷಾ, ಅಕ್ಷ, ಪಾತ್ ಪದಗಳು ಸರ್ವವ್ಯಾಪಿ, ಸರ್ವಸಮರ್ಥ ಭಗವಂತನ 'ವಿಶ್ವವ್ಯಾಪಕತೆ' ಯ ಕಲ್ಪನೆ. ಭಗವದ್ಗೀತೆಯಲ್ಲಿ ಅರ್ಜುನನಿಗೆ ಭಗವಂತನ ವಿಶ್ವರೂಪ ಕಾಣಿಸಿಕೊಂಡ ಬಗೆ ಹೀಗಿದೆ:
ಸರ್ವತಃಪಾಣಿಪಾದಂ ತತ್ ಸರ್ವತೋsಕ್ಷಿಶಿರೋಮುಖಮ್
ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ (ಅ-೧೩, ಶ್ಲೋ-೧೩)
ಅಂದರೆ "ಎಲ್ಲೆಡೆಯು ಕೈ-ಕಾಲುಗಳು; ಎಲ್ಲೆಡೆಯು ಕಣ್ಣು-ತಲೆ-ಬಾಯಿಗಳು; ಎಲ್ಲೆಡೆಯು ಕಿವಿ; ಲೋಕದೊಳಗೆಲ್ಲವನ್ನು ಆವರಿಸಿ ನಿಂತ ಅನಂತ ರೂಪ" ಅಂದರೆ ಪರಮಾತ್ಮ ಬ್ರಹ್ಮಾಂಡದಲ್ಲೆಲ್ಲ ಹಾಸುಹೊಕ್ಕಾಗಿದ್ದಾನೆ. ಬ್ರಹ್ಮಾಂಡದ ಪ್ರತಿಯೊಂದು ಅಣುಅಣುವಿನಲ್ಲೂ ಪರಮಾತ್ಮನ ಅಂಶವಿದೆ, ಪರಮಾತ್ಮನಿಲ್ಲದ ಸ್ಥಳ ಈ ಬ್ರಹ್ಮಾಂಡದಲ್ಲಿ ಎಲ್ಲೂ ಇಲ್ಲ! ತಸ್ಯ ಇದಮೇವ ಶಿರಃ ಅಯಂ ದಕ್ಷಿಣಪಕ್ಷಃ ಅಯಂ ಉತ್ತರಪಕ್ಷಃ ಅಯಂ ಆತ್ಮಾ ಇದಂ ಪುಚ್ಚಂ ಪ್ರತಿಷ್ಟಾ ಅಂದರೆ ಸರ್ವ ಜೀವ ಜಂತುವಿನಲ್ಲಿ ಅಂತರ್ಯಾಮಿಯಾಗಿರುವ ಭಗವಂತ ಇರದ ಸ್ಥಳವಿಲ್ಲ, ಕಾಣದ ಸಂಗತಿಯಿಲ್ಲ, ಅವನು ಹೋಗದ ಜಾಗವಿಲ್ಲ. ಎಲ್ಲಾ ಪಿಂಡಾಂಡದೊಳಗೂ ಅವನೇ ತುಂಬಿರುವುದರಿಂದ ಎಲ್ಲಾ ಪ್ರಾಣಿಗಳ ತಲೆಯೊಳಗೆ ಅವನ ತಲೆ; ಕಾಲೊಳಗೆ ಕಾಲು.ಆದ್ದರಿಂದ ಅವನಿಗೆ ಅನಂತ ತಲೆಗಳು; ಅನಂತ ಕಣ್ಣುಗಳು; ಅನಂತ ಕಾಲುಗಳು. ಅವನ ಅನಂತ ಗುಣಗಳೇ ಅವನ ಅನಂತ ರೂಪಗಳು; ಅನಂತ ಅವಯವಗಳು. ಅವನು ಬೇರೆ ಅಲ್ಲ , ಅವನ ಅವಯವಗಳು ಬೇರೆ ಅಲ್ಲ.ಅವನೂ ಜ್ಞಾನಾನಂದಮಯ; ಅವನ ಶರೀರವಯಗಳೂ ಜ್ಞಾನಾನಂದಮಯ. ಕಣ್ಣುಗಳು ಎಲ್ಲಾ ಜ್ಞಾನೇಂದ್ರಿಯಗಳಿಗೆ ಉಪಲಕ್ಷಣ. ಕಾಲುಗಳು ಕರ್ಮೆಂದ್ರಿಯಗಳಿಗೆ. ಅವನಿಗೆ ಅನಂತ ಜ್ಞಾನೇಂದ್ರಿಯಗಳು; ಅನಂತ ಕರ್ಮೆಂದ್ರಿಯಗಳು. ಹೀಗೆ ಸರ್ವ ಜೀವಗಳ ಅನ್ನಮಯಕೋಶ ಮತ್ತು ಪ್ರಾಣಮಯಕೋಶದಲ್ಲಿ ತುಂಬಿರುವ ಭಗವಂತ "ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್ "

ಈ ಮೇಲಿನ ಅರ್ಥದೊಂದಿಗೆ ಈ ಶ್ಲೋಕದಲ್ಲಿರುವ ನಾಲ್ಕು ನಾಮಗಳನ್ನು ಈ ಕೆಳಗಿನಂತೆ ಸಂಕ್ಷಿಪ್ತವಾಗಿ ಅರ್ಥೈಸಬಹುದು:
225) ಸಹಸ್ರಮೂರ್ಧಾ
ಸಾವಿರಾರು ತಲೆಯವನು; ಅಂದರೆ ಸರ್ವ ಜೀವ-ಜಂತುವಿನಲ್ಲಿ ಅಂತರ್ಯಾಮಿ.
226) ವಿಶ್ವಾತ್ಮಾ
ಜಗದ ಅಂತರ್ಯಾಮಿ; ಎಲ್ಲೆಡೆ ವ್ಯಾಪಿಸಿರುವವನು; ಬ್ರಹ್ಮಾದಿ ಪ್ರಾಣದೇವರಿಗೂ ಅಂತರ್ಯಾಮಿ.
227) ಸಹಸ್ರಾಕ್ಷಃ
ಸಾವಿರಾರು ಕಣ್ಣುಳ್ಳವನು; ಅಂದರೆ ಅವನು ಕಾಣದ ಸಂಗತಿಯಿಲ್ಲ
228) ಸಹಸ್ರಪಾತ್
ಸಾವಿರಾರು ಕಾಲುಗಳುಳ್ಳವನು; ಅಂದರೆ ಅವನು ಹೋಗದ ಜಾಗವಿಲ್ಲ.