Wednesday, September 29, 2010

Vishnu sahasranama 406-411


ವಿಷ್ಣು ಸಹಸ್ರನಾಮ: ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ
406) ವೈಕುಂಠಃ

ಮುಕ್ತರಿಗೆ ಆನಂದಪ್ರದನಾದ ಭಗವಂತ ವೈಕುಂಠ ಪತಿ. ನಮಗೆ ತಿಳಿದಿರುವಂತೆ 'ಕುಂಠ' ಎಂದರೆ ಅಸಾಮರ್ಥ್ಯ, 'ವಿಕುಂಠ' ಎಂದರೆ ಬದುಕಿನ ನಡೆಯಲ್ಲಿ ಎಂದೂ ಜಾರದವರು, ಅಂದರೆ ಭಗವಂತನ ಸಾಕ್ಷಾತ್ಕಾರವಾದ ಮುಕ್ತರು. 'ಆಗಾಮಿ' ಹಾಗು 'ಸಂಚಿತ' ಕರ್ಮವಿಲ್ಲದ ಅಪರೂಕ್ಷ ಜ್ಞಾನಿಗಳನ್ನೂ ಕೂಡಾ 'ಪ್ರರಾಬ್ಧ ಕರ್ಮ' ಬಿಡುವುದಿಲ್ಲ. ಪ್ರರಾಬ್ಧ ಕರ್ಮ ಬಿಟ್ಟ ಬಾಣದಂತೆ. ಆದರೆ ಮುಕ್ತಿಗೆ ಹೋದವರಿಗೆ ಯಾವ ಕರ್ಮದ ಲೇಪವೂ ಇಲ್ಲ. ಇಂತಹ ವೈಕುಂಠ ಲೋಕದ ಪತಿಯಾದ ಭಗವಂತ ವೈಕುಂಠಃ. "ನೆಡೆಯುವವರಿಗೂ ಭೂಮಿ ಆಸರೆ, ಜಾರಿ ಬೀಳುವವರಿಗೂ ಭೂಮಿ ಆಸರೆ" ಎಂಬಂತೆ 'ವಿಕುಂಠರಿಗೆ' ಆಸರೆಯಾದ ಭಗವಂತ 'ವಿವಿಧ ಕುಂಠರಿಗೂ' ಆಶ್ರಯದಾತ. ಪಂಚಭೂತಗಳಿಂದಾದ ಈ ಪ್ರಪಂಚವನ್ನು 'ವಿಕುಂಠ' ಎನ್ನುತ್ತಾರೆ. ಮೂಲ ದ್ರವ್ಯಗಳಾದ ಮಣ್ಣು-ನೀರು-ಬೆಂಕಿಗಳಿಂದ ನಾನಾ ಪದಾರ್ಥಗಳನ್ನು ಸೃಷ್ಟಿ ಮಾಡಿದ ಭಗವಂತ ವೈಕುಂಠಃ
407) ಪುರುಷಃ
ಪುರದಲ್ಲಿ ವಾಸಿಸುವವನು "ಪುರುಷಃ" ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ "ಪುರುಷ ಸೂಕ್ತ" ಭಗವಂತನನ್ನು ‘ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ. ಭಗವಂತನೊಬ್ಬನೇ ನಿಜವಾದ ಪುರುಷ. ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರಾ+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ. ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ, ಒಂದೊಂದು ಪಿಂಡಾ೦ಡದೊಳಗೆ ಒಂದೊಂದು ರೂಪದಲ್ಲಿ ಬಿಂಬ ರೂಪನಾಗಿ ತುಂಬಿ ಆ ಪಿಂಡಾ೦ಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ. ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸ್ರಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಇರುವ ಹೃತ್ಕಮಲ ಮಧ್ಯ ನಿವಾಸಿ ಭಗವಂತ ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರವಾದವ. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮವನ್ನು ಅನೇಕ ರೀತಿಯಲ್ಲಿ ಅರ್ಥೈಸಬಹುದು.
408) ಪ್ರಾಣಃ
ಎಲ್ಲರ ಒಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವವ ಪ್ರಾಣಃ. ಈ ಎಲ್ಲಾ ಚೇಷ್ಟೆಗಳು ಆತನ ಆನಂದದ ಅಭಿವ್ಯಕ್ತವೇ ಹೊರತು ಇನ್ನೇನನ್ನೋ ಪಡೆಯುವುದಕ್ಕೊಸ್ಕರ ಅಲ್ಲ. ಹೀಗೆ ಪೂರ್ಣವಾದ ಆನಂದದ ಸೆಲೆಯಾದ ಭಗವಂತ ಪ್ರಾಣಃ.
409) ಪ್ರಾಣದಃ
ಪ್ರಾಣ+ದಃ, ಇಲ್ಲಿ 'ದ' ಎಂದರೆ ದ್ಯತಿ; ನಮ್ಮೊಳಗಿದ್ದು ಸಮಸ್ತ ಚೇಷ್ಟೆಗಳನ್ನು ಮಾಡುವ ಭಗವಂತ ಒಂದು ದಿನ ಪ್ರಾಣನೊಂದಿಗೆ ನಮ್ಮ ದೇಹವನ್ನು ತ್ಯೆಜಿಸುತ್ತಾನೆ, ಯಾವುದೂ ನಮ್ಮ ಕೈಯಲ್ಲಿಲ್ಲ, ನಾವು ಭಗವಂತ ನೆಡೆಸಿದಷ್ಟು ಕಾಲ ಮಾತ್ರ ನಡೆಯಬಹುದು. ವ್ಯರ್ಥವಾಗಿ ಅಹಂಕಾರದ ಮೊರೆ ಹೋಗುವ ದುಷ್ಟರ ಆನಂದವನ್ನು ಸಂಹಾರ ಮಾಡುವ ಭಗವಂತ ಪ್ರಾಣದಃ.
410) ಪ್ರಣವಃ
ಎಲ್ಲರಿಂದ ಸ್ತುತನಾದ ಓಂಕಾರ ಪ್ರತಿಪಾದ್ಯ ಭಗವಂತ ಪ್ರಣವಃ. ಭಗವಂತನ ಹಿರಿಮೆಯನ್ನರಿತವರು ಆತನತ್ತ ಮುಖ ಹಾಕುತ್ತಾರೆ. ತಮ್ಮ ಅಹಂಕಾರವನ್ನು ಕಳಚಿಕೊಂಡು ಆತನ ಹತ್ತಿರ ಹೋಗುತ್ತಾರೆ. ಭಗವಂತನ ಸ್ತುತಿಯಿಂದ ಭಗವಂತನಿಗೇನೂ ಲಾಭವಿಲ್ಲ. ಆತನನ್ನು ತಿಳಿದಾಗ ನಮ್ಮ ರಾಗ-ದ್ವೇಷ ಹೊರಟು ಹೋಗಿ ಆತನ ಸ್ತೋತ್ರದತ್ತ ಮನಸ್ಸು ಹರಿಯುತ್ತದೆ. ಹೀಗೆ ಜ್ಞಾನಿಗಳಿಂದ ಸ್ತುತನಾದ, ಮೂರು ಕಾಲದಲ್ಲೂ ಇರುವ ಅವಿನಾಶಿ ತತ್ವ ಭಗವಂತ ಪ್ರಣವಃ.
411) ಪೃಥುಃ
ಭೂಮಿ (ಪೃಥ್ವಿ) ಹೇಗೆ ಎಲ್ಲವನ್ನೂ ಹೊತ್ತು ಸಲಹುತ್ತದೋ ಅದೇ ರೀತಿ ಭಗವಂತ ಇಡೀ ವಿಶ್ವವನ್ನು ಹೊತ್ತು ಸಲಹುತ್ತಾನೆ. ಎಲ್ಲವನ್ನೂ ಹೊರುವ ವೈಶಾಲ್ಯವುಳ್ಳ ಭಗವಂತ ಸರ್ವ ವ್ಯಾಪ್ತನಾದವನು. ಇಂತಹ ವಿಶಾಲವಾದ ಸರ್ವವ್ಯಾಪಿ ಭಗವಂತ ಪೃಥುಃ.

Tuesday, September 28, 2010

Vishnu sahasranama 402-405


ವಿಷ್ಣು ಸಹಸ್ರನಾಮ: ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ
402) ವೀರಃ

ಇಡೀ ಜಗತ್ತನ್ನು ತನ್ನ ಪರಾಕ್ರಮದಿಂದ ಮಣಿಸಬಲ್ಲ ಶೌರ್ಯ ಉಳ್ಳವನು ವೀರಃ. ಈ ನಾಮವನ್ನು ಬಿಡಿಸಿ ನೋಡಿದಾಗ ವೀ+ಈರ ಎಂದಾಗುತ್ತದೆ. ವೀ ಎಂದರೆ ವಿಶಿಷ್ಟ, ಆದ್ದರಿಂದ ವೀರಃ ಎಂದರೆ ವಿಶಿಷ್ಟ ಜ್ಞಾನವನ್ನು ಪಡೆದ ಅಪರೋಕ್ಷ ಜ್ಞಾನಿಗಳನ್ನೂ ಪ್ರೇರೇಪಿಸುವ ಭಗವಂತ ವೀರಃ. 'ಈರ' ಎಂದರೆ ಅಪರೋಕ್ಷ ಜ್ಞಾನಿಗಳಲ್ಲಿ ಅತೀ ಎತ್ತರದಲ್ಲಿರುವ ಪ್ರಾಣ ದೇವರು. ಇಂತಹ ಪ್ರಾಣದೇವರಿಗೆ ಜ್ಞಾನದ ವಿಶಿಷ್ಟ ಸ್ಥಾನವನ್ನು ಕೊಟ್ಟ ಭಗವಂತ ವೀರಃ. ಸಮಸ್ತ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು 'ವೀ' (ಹಕ್ಕಿ) ಎನ್ನುತ್ತಾರೆ. ಗರುಡ ವಾಹನನಾಗಿ ಬರುವ ವೇದ ವೇಧ್ಯನಾದ ಭಗವಂತನನ್ನು ತಿಳಿಯಬೇಕಾದರೆ ಮೊದಲು ವೇದವನ್ನು ತಿಳಿಯಬೇಕು. ಇಂತಹ ಭಗವಂತ ವೀರಃ.
403) ಶಕ್ತಿಮತಾಂ ಶ್ರೇಷ್ಠಃ
ಜಗತ್ತಿನಲ್ಲಿರುವ ಸರ್ವ ಶಕ್ತಿಗಳ ಮೂಲ ಭಗವಂತ. ಆರ್ಥಿಕಶಕ್ತಿ , ದೈಹಿಕಶಕ್ತಿ, ಬೌದ್ಧಿಕಶಕ್ತಿ, ಜನಶಕ್ತಿ, ಹೀಗೆ ಯಾವುದೇ ರೂಪದ ಶಕ್ತಿಯಿರಲಿ ಅದನ್ನು ನಮಗೆ ಕೊಟ್ಟವ ಭಗವಂತ. ಭಗವಂತನ ಶಕ್ತಿ ನಮ್ಮಂತೆ ಬಾಹ್ಯವಲ್ಲ. ಆತ ಸ್ವರೂಪಭೂತವಾದ, ಶಾಶ್ವತವಾದ, ಅನಂತವಾದ, ಸ್ಥಿರವಾದ ಶಕ್ತಿ. ನಾವು ಭಗವಂತ ನಮಗೆ ಕೊಟ್ಟ ಶಕ್ತಿಯ ಅಹಂಕಾರದಲ್ಲಿ ಬದುಕುತ್ತೇವೆ, ಆದರೆ ನಮ್ಮ ಯಾವ ಶಕ್ತಿಯೂ ಸ್ಥಿರವಲ್ಲ. ಇಡೀ ಜಗತ್ತನ್ನು ಗೆದ್ದವ ಕೂಡಾ ಒಂದು ದಿನ ಸಾವಿಗೆ ಸೋಲಬೇಕು. ಭಗವಂತನ ಕಾಲ ಚಕ್ರ ಬ್ರಹ್ಮಾದಿ ದೇವತೆಗಳನ್ನೂ ಬಿಡುವುದಿಲ್ಲ. ಆದ್ದರಿಂದ ನಮ್ಮ ಶಕ್ತಿ ಕ್ಷಣಿಕ. ಹೀಗೆ ಶಕ್ತಿವಂತರಿಗೆಲ್ಲ ಹಿರಿಯ ಶಕ್ತಿಶಾಲಿ, ಮೂಲಶಕ್ತಿ ಸ್ವರೂಪ ಭಗವಂತ ಶಕ್ತಿಮತಾಂ ಶ್ರೇಷ್ಠಃ.
404) ಧರ್ಮಃ
ಯಾವುದು ನಮ್ಮ ಬದುಕಿಗೆ ಆದಾರವಾಗಿದೆಯೋ ಅದು ಧರ್ಮ; ಆದ್ದರಿಂದ ನಿಜವಾದ ಧರ್ಮ ಭಗವಂತ. ಭಗವಂತ ಒಂದು ವಸ್ತುವಿನ ಸ್ವರೂಪಭೂತವಾದ ಗುಣವನ್ನು ಅಭಿವ್ಯಕ್ತ ಮಾಡಿಸುತ್ತಾನೆ ಹೊರತು ಅಲ್ಲಿ ಇಲ್ಲದ ಗುಣವನ್ನಲ್ಲ. ವೈವಿಧ್ಯತೆ ಪ್ರಪಂಚ ಸೃಷ್ಟಿಯ ಸಹಜ ಕ್ರಿಯೆ. ವಸ್ತುವಿನ ಸಹಜ ಗುಣಕ್ಕನುಗುಣವಾಗಿ ಪ್ರಪಂಚ ಸೃಷ್ಟಿ ಮಾಡಿದ ಭಗವಂತ ಧರ್ಮಃ.
405) ಧರ್ಮವಿದುತ್ತಮಃ
ನಿಜವಾದ ಧರ್ಮಜ್ಞ ಭಗವಂತನೊಬ್ಬನೇ. ಏಕೆಂದರೆ ಧರ್ಮ ಕಾಲ ಬಾದಿತ. ಒಂದು ಕಾಲದ ಧರ್ಮ ಇನ್ನೊಂದು ಕಾಲದಲ್ಲಿ ಅಧರ್ಮವಾಗಬಹುದು. ಒಂದು ವ್ಯಕ್ತಿಗೆ ಧರ್ಮವಾಗಿರುವ ವಿಷಯ ಇನ್ನೊಬ್ಬನಿಗೆ ಅಧರ್ಮವಾಗಬಹುದು, ಒಂದು ದೇಶದ ಧರ್ಮ ಇನ್ನೊಂದು ದೇಶಕ್ಕೆ ಅಧರ್ಮವಾಗಬಹುದು. ಆದ್ದರಿಂದ ಧರ್ಮ ಯಾವುದು ಎಂದು ಸಮಷ್ಟಿಯಾಗಿ ಹೇಳಲಾಗದು. ಧರ್ಮಕ್ಕೆ ಯಾವುದೇ ಮಾನದಂಡವಿಲ್ಲ. ಧರ್ಮ ಯಾವುದು ಎನ್ನುವುದು ಹೊರನೋಟದಿಂದ ಹೇಳಲಾಗದು. ಯಾವ ಕ್ರಿಯೆಯಿಂದ ನಮ್ಮ ಮನಸ್ಸು ಭಗವಂತನೆಡೆಗೆ ಒಲಿಯುತ್ತದೋ ಅದು ಧರ್ಮ. ಯಾವುದರಿಂದ ನಾವು ಭಗವಂತನನ್ನು ಮರೆಯುತ್ತೆವೋ ಅದು ಅಧರ್ಮ. ಮಹಾಭಾರತದಲ್ಲಿ ಶ್ರೀಕೃಷ್ಣ ಧರ್ಮವನ್ನು ವಿಶಿಷ್ಟವಾಗಿ ಎಲ್ಲರಿಗೂ ತಿಳಿಹೇಳಿದ್ದನ್ನು ನಾವು ಕಾಣುತ್ತೇವೆ.ಇನ್ನೊಬ್ಬರ ಒಳಿತಿಗಾಗಿ ನಾವು ಸುಳ್ಳು ಹೇಳಿದರೆ ಅದು ಅಧರ್ಮವಲ್ಲ ಧರ್ಮ ಎನ್ನುವ ವಿಷಯ ಕೃಷ್ಣ ಹೇಳುವ ತನಕ ಇನ್ಯಾರಿಗೂ ತಿಳಿದಿರಲಿಲ್ಲ. ಧರ್ಮವನ್ನು ತಿಳಿದವರಲ್ಲಿ ಉತ್ತಮನು ಭಗವಂತ. ಈ ಕಾರಣದಿಂದ ಧರ್ಮವಿದುತ್ತಮಃ ಎನ್ನುವುದು ಭಗವಂತನಿಗೆ ಅನ್ವರ್ಥ ನಾಮ.

Monday, September 27, 2010

Vishnu sahasranama 395-401


ವಿಷ್ಣು ಸಹಸ್ರನಾಮ: ರಾಮೋ ವಿರಾಮೋ ವಿರಜೋ ಮಾರ್ಗೋ ನೇಯೋ ನಯೋನಯಃ
395) ರಾಮಃ

ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದ ಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣ ಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರೂ ಕೂಪಗೊಂಡಾಗಲೂ ಸಹ ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ, ಬದಲಿಗೆ "ಸಲಿಗೆಯಿಂದ ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಭಾಂದವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ.
ರಂ+ಅಮ, ಇಲ್ಲಿ ರಂ 'ಅಗ್ನಿಬೀಜ' 'ಅಮ' ಎಂದರೆ ಅಜ್ಞಾನ. ಆದ್ದರಿಂದ ರಾಮ ಎಂದರೆ ಅಜ್ಞಾನವನ್ನು ಸುಟ್ಟುಬಿಡುವ ಶಕ್ತಿ. ಆದ್ದರಿಂದ ನಿರಂತರ ರಾಮ ಜಪದಿಂದ ನಮ್ಮ ಅಜ್ಞಾನ ಹಾಗು ದುರ್ಗುಣಗಳು ಸುಟ್ಟು ಹೋಗುತ್ತವೆ.

396) ವಿರಾಮಃ
ಒಬ್ಬೊಬ್ಬರಲ್ಲಿ ಒಂದೊಂದು ರೀತಿ ವಿಹರಿಸುವ, ಒಂದೊಂದು ಅವತಾರದಲ್ಲಿ ಒಂದೊಂದು ರೀತಿ ನಡೆದುಕೊಳ್ಳುವ, ವೈವಿಧ್ಯವಾಗಿ ಆನಂದವನ್ನು ಹಂಚುವ ಶಕ್ತಿ ವಿರಾಮಃ. ವಿರ+ಆಮಃ; ಇಲ್ಲಿ 'ವಿರರು' ಎಂದರೆ ಮುಕ್ತಿ ಯೋಗ್ಯರು; 'ಆಮ' ಎಂದರೆ ಜ್ಞಾನ. ಮುಕ್ತಿಯೋಗ್ಯರಿಗೆ ಪೂರ್ಣ ಜ್ಞಾನವನ್ನು ಕರುಣಿಸಿ ಉದ್ಧಾರ ಮಾಡುವ ಭಗವಂತ ವಿರಾಮಃ.
397) ವಿರಜಃ
'ರಜ' ಎಂದರೆ ಕೊಳೆ. ವಿರಜಃ ಎಂದರೆ ಯಾವ ಕೊಳೆಯ ಸ್ಪರ್ಶವೂ ಇಲ್ಲದ ನಿತ್ಯ ಪವಿತ್ರವಾದ ಪರಿಶುದ್ಧ ವಸ್ತು. ಇದಕ್ಕೆ ಉತ್ತಮ ಉದಾಹರಣೆ 'ಬೆಂಕಿ'. ಬೆಂಕಿ ಎಂದೆಂದೂ ಪರಮ ಪವಿತ್ರ ಹಾಗು ಬೆಂಕಿಗೆ ಯಾವ ವಸ್ತುವನ್ನು ಹಾಕಿದರೂ ಅದು ಪವಿತ್ರವಾಗುತ್ತದೆ. ಭಗವಂತನಿಂದ ಸೃಷ್ಟಿಯಾದ 'ಬೆಂಕಿಗೆ' ಇಂತಹ ಗುಣವಿರಬೇಕಾದರೆ ಇನ್ನು ಭಗವಂತ ಎಷ್ಟು ಪವಿತ್ರ ಎನ್ನುವುದನ್ನು ನಾವು ಊಹಿಸಬಹುದು.ಹೀಗೆ ಅಪವಿತ್ರವಾಗದ,ನಿತ್ಯ ಶುದ್ಧ ಸ್ವರೂಪ ಭಗವಂತ ವಿರಜಃ.
398) ಮಾರ್ಗಃ
ಇಲ್ಲಿ ಮಾರ್ಗಃ ಎಂದರೆ 'ಅನ್ವೇಷಣ'; ಎಲ್ಲರೂ ಹುಡುಕುತ್ತಿರುವ ವಸ್ತು. ವೇದಗಳಿಗೆ ಪೂರ್ತಿ ಎಟುಕದ, ವೇದಾಭಿಮಾನಿ ದೇವತಗಳಿಗೆ ಇನ್ನೂ ಪೂರ್ತಿ ತಿಳಿಯಲಾಗದ, ಎಷ್ಟು ಹುಡುಕಿದರೂ ಬಾಕಿ ಉಳಿಯುವ ಭಗವಂತ ಮಾರ್ಗಃ.
399) ನೇಯಃ
ಎಷ್ಟು ಹುಡುಕಿದರೂ ಸಿಗದ ಭಗವಂತ ತನ್ನ ಭಕ್ತರು ಭಕ್ತಿಯಿಂದ ಕರೆದಾಗ ಕರೆದಲ್ಲಿಗೆ ಬಂದು ಸಲಹುತ್ತಾನೆ. ಇಂತಹ ಹೃತ್ಕಮಲ ಮಧ್ಯ ನಿವಾಸಿಯಾಗಿರುವ ಭಗವಂತ ನೇಯಃ.
400) ನಯಃ
ಎಲ್ಲರನ್ನೂ ಪ್ರೇರೇಪಿಸುವ, ಎಲ್ಲ ನೀತಿ-ನಿಯಮಗಳನ್ನು ಮಾಡುವ ಸ್ವರೂಪ ನಯಃ.

401) ಅನಯಃ
ಎಲ್ಲರನ್ನೂ ನಿಯಂತ್ರಿಸುವ, ಅಜ್ಞಾನಿಗಳ ಅರಿವಿಗೆ ಬರದ, ಜ್ಞಾನಿಗಳ ಬಳಿ ಸದಾ ಮಗುವಿನಂತಿರುವ, ಯಾರ ನೀತಿ-ನಿಯಮಗಳ ಕಟ್ಟುಪಾಡಿಗೆ ಸಿಲುಕದ, ತನ್ನ ನೀತಿಗೆ ತಾನು ಬದ್ಧನಾಗಿರುವ ಭಗವಂತ ಅನಯಃ.

Sunday, September 26, 2010

Vishnu sahasranama 390-394

ವಿಷ್ಣು ಸಹಸ್ರನಾಮ: ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ
390) ಪರರ್ದ್ಧಿಃ

ಸಂಸ್ಕೃತದಲ್ಲಿ 'ರದ್ಧಿ' ಎಂದರೆ ಸಮೃದ್ಧಿ,ಅಥವಾ ಪೂರ್ಣತೆ. ಭಗವಂತ ಸಮೃದ್ಧಿಯ ತುತ್ತತುದಿ ಹಾಗು ಅದು ಅನಂತ. ನಮಗೆ ಸಮೃದ್ಧಿಯನ್ನು (ಜ್ಞಾನ, ಭಲ, ಐಶ್ವರ್ಯ, ಸಜ್ಜನಿಕೆ,ಇತ್ಯಾದಿ) ಕೊಡುವವನೂ ಅವನೇ. ಇಂತಹ ಪರಿಪೂರ್ಣ ಸ್ವರೂಪ ಭಗವಂತ ಪರರ್ದ್ಧಿಃ.
391) ಪರಮಸ್ಪಷ್ಟಃ
ಭಗವಂತ ಸ್ಪಷ್ಟ ಹಾಗು ಯಾರಿಗೂ ತಿಳಿಯದ್ದನ್ನು ನೋಡಿ ತಿಳಿದವನು. ಜ್ಞಾನಿ ಅಜ್ಞಾತನಾದ ಭಗವಂತನನ್ನು ಕೊನೆಗೊಮ್ಮೆ ನಿಚ್ಚಳವಾಗಿ ಕಾಣುತ್ತಾನೆ. ಭಗವಂತ ನಾವು ಹೊರಗಿನಿಂದ ಕಾಣುವ ವಸ್ತುವಿನಂತಲ್ಲ , ಆತನಿಗೆ ಇಂತದ್ದೇ ಎನ್ನುವ ರೂಪವೊಂದಿಲ್ಲ, ಆತ ಆಕಾಶದಂತೆ.ಆತ ಕಾಣಿಸಿಕೊಂಡರೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಾನೆ, ಆಗ ನಮಗೆ ಕಾಣುವ ಇತರ ಎಲ್ಲಾ ವಸ್ತುಗಳು ಅಸ್ಪಷ್ಟವಾಗುತ್ತವೆ.ಕಾಣದವರ ಸಂಶಯಕ್ಕೆ ಆತ ಕಾಣಿಸುವ ತನಕ ಪರಿಹಾರವಿಲ್ಲ, ಕಂಡವರಿಗೆ ಕಂಡ ಮೇಲೆ ಸಂಶಯ ಬರುವ ಸಂಭವವಿಲ್ಲ, ಅಷ್ಟು ನಿಚ್ಚಳವಾಗಿ ಕಾಣಿಸಿಕೊಳ್ಳುತ್ತಾನೆ. 'ಯಸ್ಮಿನ್ ವಿಜ್ಞಾತೇ ಸರ್ವವಿದಂ ವಿಜ್ಞಾತಂ' ಭಗವಂತನನ್ನು ತಿಳಿದವನಿಗೆ ಯಾವ ವಿಧದ ಪ್ರಶ್ನೆ ಇಲ್ಲ, ಅಷ್ಟು ಸ್ಪಷ್ಟವಾಗಿ ವಿಶ್ವದ ರಹಸ್ಯವನ್ನು ತೆರೆದು ಬಿಡುತ್ತಾನೆ ಭಗವಂತ. ಹೀಗೆ ಜ್ಞಾನಿಗಳಿಗೆ ನಿಚ್ಚಳವಾಗಿ ಗೋಚರಿಸುವ ಭಗವಂತ ಪರಮಸ್ಪಷ್ಟಃ.
392) ಸ್ತುಷ್ಟಃ
ಭಗವಂತ ನಿತ್ಯ ತೃಪ್ತ. ಮಾನವರಾದ ನಮಗೆ ಯಾವುದೂ ಸಾಕು ಅನ್ನಿಸುವುದಿಲ್ಲ, ಒಂದು ವೇಳೆ ಅನ್ನಿಸಿದರೂ ಅದು ತಾತ್ಕಾಲಿಕ. ಬಯಕೆ ನಮ್ಮ ಬೆನ್ನನ್ನು ಬಿಡುವುದಿಲ್ಲ, ಆದರೆ ಭಗವಂತ ಎಲ್ಲವುದರಲ್ಲೂ ನಿತ್ಯ ತೃಪ್ತ. ಯಾವುದನ್ನೂ ಬಯಸದ ಅಸಾಧಾರಣ ಸ್ವರೂಪನಾದ ಭಗವಂತ ಸ್ತುಷ್ಟಃ.
393) ಪುಷ್ಟಃ
ಎಲ್ಲ ಗುಣಗಳಿಂದ ತುಂಬಿದ ಭಗವಂತ ಎಲ್ಲವುದರಿಂದ ಪೂರ್ಣ. ಸ್ವಯಂ ಪರಿಪೂರ್ಣನಾದ ಭಗವಂತ ಪುಷ್ಟಃ
394) ಶುಭೇಕ್ಷಣಃ
ಶುಭೇಕ್ಷಣ ಎಂದರೆ ಮಂಗಳಕರವಾದ ಕಣ್ಣು ಅಥವಾ ನೋಟವುಳ್ಳವನು. ಭಗವಂತನ ನೋಟ ಪರಮಾನುಗ್ರಹ ಮಾಡತಕ್ಕಂತಹ ನೋಟ. ಆತನ ಮಾಂಗಲಿಕ ನೋಟ ಯಾರ ಮೇಲೆ ಬಿತ್ತೋ ಆತ ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಭಗವಂತ ಎಲ್ಲೆಲ್ಲೂ ಶುಭವನ್ನು ಕಾಣುತ್ತಾನೆ, ಆತ ಎಂದೂ ಕೆಟ್ಟದ್ದನ್ನು ಕಾಣುವುದಿಲ್ಲ. ಸಾಮಾನ್ಯರಾದ ನಮಗೆ ಹುಟ್ಟು ಮಾಂಗಲಿಕ ಹಾಗು ಸಾವು ಅಶುಭ. ಆದರೆ ಭಗವಂತನಿಗೆ ಹುಟ್ಟು ಎಷ್ಟು ಸಹಜ ಘಟನೆಯೋ, ಸಾವೂ ಕೂಡಾ ಅಷ್ಟೇ ಸಹಜ ಘಟನೆ. ಯಾದವರು ಹೊಡೆದಾಡಿ ಸಾಯುತ್ತಿರುವಾಗ ಕೃಷ್ಣ ನಗುತ್ತ ನಿಂತಿದ್ದನಂತೆ. ಏಕೆಂದರೆ ಭಗವಂತನಿಗೆ ಯಾವುದೂ ಅಶುಭವಲ್ಲ. ವೇದವ್ಯಾಸರು ಹೇಳುವಂತೆ "ಈ ಸೃಷ್ಟಿಯಲ್ಲಿ ಈ ತನಕ ಯಾವುದೂ ಆಗಬಾರದ್ದು ಆಗಿಲ್ಲ ಹಾಗು ಇನ್ನು ಆಗುವುದೂ ಇಲ್ಲ" ಯಾವ ಘಟನೆ ಏಕೆ ಸಂಭವಿಸುತ್ತದೆ ಎನ್ನುವ ಪರಿಜ್ಞಾನ ಮಾತ್ರ ನಮಗಿಲ್ಲ ಅಷ್ಟೇ.ಶುಭ+ಈಕ್ಷ+ಣ, ಇಲ್ಲಿ ಶುಭ ಎಂದರೆ ಭಗವಂತ. ಏಕೆಂದರೆ ಆತನಿಗಿಂತ ಶುಭ ಇನ್ನೊಂದಿರಲು ಸಾದ್ಯವಿಲ್ಲ. 'ಶುಭೇಕ್ಷರು' ಎಂದರೆ ಭಗವಂತನನ್ನು ತಿಳಿದವವರು, ತಿಳಿದು ಕಂಡವರು. 'ಣ' ಎಂದರೆ 'ಭಲ' ಆದ್ದರಿಂದ ಶುಭೇಕ್ಷಣಃ ಎಂದರೆ ಜ್ಞಾನಿಗಳಿಗೆ ಪರಮಾನಂದದ ನಿತ್ಯ ಪದವಿಯನ್ನು ಕೊಡುವವ. ಹೀಗೆ ಜ್ಞಾನಿಗಳಿಗೆ ಬೆಂಬಲವನ್ನೀಯುವ, ಬರಿಯ ಕಣ್ಣ ನೋಟದಿಂದ ಸಕಲ ಪುರುಷಾರ್ಥವನ್ನೀಯುವ ಭಗವಂತ ಶುಭೇಕ್ಷಣಃ

Friday, September 24, 2010

Vishnu sahasranama 385-389


ವಿಷ್ಣು ಸಹಸ್ರನಾಮ: ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ
385) ವ್ಯವಸಾಯಃ

ವ್ಯವಸಾಯ ಎಂದರೆ 'ನಿಶ್ಚಯ ಜ್ಞಾನ ಸ್ವರೂಪ'. ಭಗವಂತನನ್ನು ಬಿಟ್ಟರೆ ಬೇರೆ ಯಾರಿಗೂ ನಿಶ್ಚಯ ಜ್ಞಾನವಿಲ್ಲ. ಒಂದು ವಸ್ತುವನ್ನು ನಿಖರವಾಗಿ ತಿಳಿಯಲು ಇಡೀ ವಿಶ್ವ ರಚನೆಯ ಗಣಿತ ತಿಳಿದಿರಬೇಕು. ಎಲ್ಲವನ್ನೂ ಕರಾರುವಕ್ಕಾಗಿ ತಿಳಿದಿರುವ ಭಗವಂತ ವ್ಯವಸಾಯಃ.
386) ವ್ಯವಸ್ಥಾನಃ
ವಿವಿಧ ರೂಪಗಳಿಂದ ಪಿಂಡಾ೦ಡ ಬ್ರಹ್ಮಾಂಡಗಳಲ್ಲಿ ತುಂಬಿದವನು. ಬೇರೆ ಬೇರೆ ದೇವತೆಗಳಿಗೆ ಈ ಪಿಂಡಾ೦ಡ ಮತ್ತು ಬ್ರಹ್ಮಾಂಡದಲ್ಲಿ ಬೇರೆ ಬೇರೆ ವ್ಯವಸ್ಥೆಯಿದೆ. ದೇವತೆಗಳಿಗಲ್ಲದೆ ಪ್ರತಿಯೊಬ್ಬ ಮನುಷ್ಯನಿಗೂ ಸಹ ನಿಯಾಮಕ ವ್ಯವಸ್ಥೆ ಭಗವಂತ ಮಾಡುತ್ತಾನೆ. ಯಾರು ಏಲ್ಲಿ ಹುಟ್ಟಬೇಕು, ಏನು ಕೆಲಸ ಮಾಡಬೇಕು ಎನ್ನುವ ವ್ಯವಸ್ಥೆ ಭಗವಂತ ಮಾಡಿಯೇ ನಮ್ಮನ್ನು ಭೂಲೋಕಕ್ಕೆ ಕಳುಹಿಸುತ್ತಾನೆ . ಇಂತಹ ಭಗವಂತನಿಗೆ ವ್ಯವಸ್ಥಾನಃ ಅನ್ವರ್ಥ ನಾಮ.
387) ಸಂಸ್ಥಾನಃ
ಜ್ಞಾನಿಗಳ ಹೃದಯದಲ್ಲಿ ಚೆನ್ನಾಗಿ ನೆಲೆಸಿದವನು; ಸರ್ವ ದೇವತೆಗಳೊಳಗಿದ್ದು, ಅವರು ನಿರ್ವಹಿಸಬೇಕಾದ ಕಾರ್ಯವನ್ನು ಮಾಡಿಸುವ ಭಗವಂತ ಸಂಸ್ಥಾನಃ.
388) ಸ್ಥಾನದಃ
ಅವರವರ ಯೋಗ್ಯತೆಗೆ ತಕ್ಕಂತೆ ಅವರವರಿಗೆ ತಾಣವನ್ನು ಕೊಟ್ಟು ಸಲಹುವವನು;
389) ಧ್ರುವಃ
ಸ್ಥಿರನಾದವನು. ಭಗವಂತನೊಬ್ಬನೇ ಶಾಶ್ವತ, ಇನ್ಯಾರೂ ಶಾಶ್ವತವಲ್ಲ. ದೇವತೆಗಳ ಅವದಿ ಕೇವಲ ಒಂದು ಕಲ್ಪ ಆದರೆ ಭಗವಂತನ ಸ್ಥಾನಕ್ಕೆ ಆದಿ ಅಂತ್ಯವಿಲ್ಲ. ಜ್ಞಾನಿಗಳನ್ನು ಧ್ರುವ ಲೋಕಕ್ಕೆ ಕಳುಹಿಸುವ ಭಗವಂತ ಧ್ರುವಃ .

Thursday, September 23, 2010

Vishnu sahasranama 379-384


ವಿಷ್ಣು ಸಹಸ್ರನಾಮ: ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ
379) ಕರಣಂ

ಎಲ್ಲಕ್ಕೂ ಮುಖ್ಯ ಕಾರಣನು ಕರಣ. ಕರಣ-ಅಸಾಧಾರಣವಾದದ್ದು. ಉದಾಹರಣೆಗೆ ರೂಪವನ್ನು ನೋಡಲು ಕಣ್ಣು 'ಕರಣ'; ಕೇಳುವುದಕ್ಕೆ ಕಿವಿ 'ಕರಣ'. ಈ ನಾಮವನ್ನು ಒಡೆದು ನೋಡಿದರೆ ಕ+ರ+ಣ; ಇಲ್ಲಿ 'ಕ'ಎಂದರೆ ಆನಂದ, 'ರ' ಎಂದರೆ ಕ್ರೀಡೆ, 'ಣ' ಎಂದರೆ ಭಲ. ಆದ್ದರಿಂದ ಕರಣಂ ಎಂದರೆ ಆನಂದ ಸ್ವರೂಪ, ಭಲ ಸ್ವರೂಪ ಹಾಗು ಕ್ರೀಡಾ ಸ್ವರೂಪ ಭಗವಂತ.
380) ಕಾರಣಂ
ಎಲ್ಲಕ್ಕೂ ನಿಮಿತ್ತಕಾರಣನು. ಕ+ಅರ+ಣ. ಇಲ್ಲಿ 'ಅರ' ಎಂದರೆ 'ನಾಶವಿಲ್ಲದ್ದು'. ಭಗವಂತ ಎಂದೂ ನಾಶವಿಲ್ಲದ ಆನಂದ ಸ್ವರೂಪ. ಆತನ ಕ್ರೀಡೆಯೇ ಈ ಜಗತ್ತಿನ ನಿಯಮನ. ಕ+ಆ+ರಣ- ಇಲ್ಲಿ 'ರಣ' ಎಂದರೆ ಘೋಷಣೆ. ಭಗವಂತ ಆನಂದ ಸ್ವರೂಪ ಎಂದು ವೇದಗಳಿಂದ ಘೋಷಿಸಲ್ಪಟ್ಟ ಅಸಾಧಾರಣ ಶಕ್ತಿ.
381) ಕರ್ತಾ
ಎಲ್ಲವನ್ನೂ ಇನ್ನೊಬ್ಬರ ಸಹಾಯವಿಲ್ಲದೆ ಸ್ವತಂತ್ರವಾಗಿ ಮಾಡಬಲ್ಲವ ಕರ್ತಾ. ನಾವು ಭಗವಂತನ ಮುಂದೆ ಕೇವಲ ಸೂತ್ರದ ಗೊಂಬೆಗಳಂತೆ. ನಮಗೆ ಸ್ವಾತಂತ್ರ್ಯವಿಲ್ಲ, ಸೂತ್ರದಾರ ಆಡಿಸುವಂತೆ ಆಡುತ್ತೇವೆ. ಮನಸ್ಸಿಗೆ ಸ್ಪೂರಣ ಕೊಡುವ ನಿಜವಾದ ಕರ್ತ ಭಗವಂತ.
382) ವಿಕರ್ತಾ
ವಿವಿಧವಾದ ಸೃಷ್ಟಿಯನ್ನು ಮಾಡುವವನು ವಿಕರ್ತಾ. ಭಗವಂತನ ಸೃಷ್ಟಿ ವಿಸ್ಮಯ ಹಾಗು ವೈವಿದ್ಯಪೂರ್ಣ. ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಮರದ ಒಂದು ಎಲೆಯಂತೆ ಇನ್ನೊಂದು ಎಲೆ ಇರುವುದಿಲ್ಲ. ಒಬ್ಬ ಮನುಷ್ಯನಂತೆ ಇನ್ನೋಬ್ಬನಿರುವುದಿಲ್ಲ. ಹೀಗೆ ವೈವಿಧ್ಯಪೂರ್ಣ ಸೃಷ್ಟಿಯನ್ನು ನಿರ್ಮಿಸಿದ ಭಗವಂತ ವಿಕರ್ತಾ.
383) ಗಹನಃ
ಭಗವಂತ ಅತ್ಯಂತ ನಿಗೂಢನಾದವನು. ಆತ ಮಾಡಿದ ಸೃಷ್ಟಿ ಮಾತ್ರ ನಮಗೆ ಕಾಣುತ್ತದೆ ಆದರೆ ಆತ ಕಾಣಿಸುವುದಿಲ್ಲ. ಆತನನ್ನು ತಿಳಿಯಬೇಕಾದರೆ ಶಾಸ್ತ್ರದ ಒಳಹೊಕ್ಕು ಪ್ರಯತ್ನಿಸಬೇಕು.
384) ಗುಹಃ
ಹೃದಯ ಗುಹೆಯಲ್ಲಿ ಅವಿತವನು-ಹ್ರತ್ಕಮಲ ಮಧ್ಯ ನಿವಾಸಿ . ಆತ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಜೀವದ ಸಾಧನೆ ಪೂರ್ತಿಯಾಗುವ ತನಕ ಆತ ಕಾಣಿಸಿಕೊಳ್ಳುವುದಿಲ್ಲ. ಆತ್ಮ ಸಾಕ್ಷಾತ್ಕಾರವಾದ ಮೇಲೆ ಜೀವ ಸ್ವರೂಪದಿಂದ ಆತನನ್ನು ನೋಡಬಹುದು.

Wednesday, September 22, 2010

Vishnusahasranama 374-378

ವಿಷ್ಣು ಸಹಸ್ರನಾಮ: ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ 374) ಉದ್ಭವಃ ಇಡೀ ವಿಶ್ವ ಪ್ರಳಯಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ಭಗವಂತನೊಳಗಿರುತ್ತದೆ. ಸೃಷ್ಟಿ ಕಾಲದಲ್ಲಿ ಸ್ಪೋಟವಾಗಿ ಈ ಬ್ರಹ್ಮಾಂಡ ಭಗವಂತನ ನಾಭಿಯಿಂದ ಉದ್ಭವವಾಗುತ್ತದೆ. ಹೀಗೆ ನಾಮ ರೂಪಾತ್ಮಕವಾದ ಈ ಪ್ರಪಂಚವನ್ನು ಸೃಷ್ಟಿಸುವ ಭಗವಂತ ಉದ್ಭವಃ. 375) ಕ್ಷೋಭಣಃ ದುಷ್ಟರನ್ನು ಕ್ಷೋಭೆಗೊಳಿಸುವ ಭಗವಂತ ಕ್ಷೋಭಣಃ. 376) ದೇವಃ ಈ ನಾಮ ಎಲ್ಲರಿಗೂ ಚಿರ ಪರಿಚಿತ. ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಭಗವಂತನನ್ನು 'ದೇವ' ಎಂದು ಸಂಭೋದಿಸುತ್ತಾರೆ. ವಿಶೇಷವೆಂದರೆ ಚಿರಪರಿಚಿತವಾದ ಈ ನಾಮದ ಹಿಂದಿನ ಅರ್ಥ ಮಾತ್ರ ಎಲ್ಲರಿಗೂ ಅಪರಿಚಿತ! ಈಗ ದೇವ ಪದದ ಅರ್ಥವೇನು ಎನ್ನುವುದನ್ನು ನೋಡೋಣ. ದೇವಃ ಎನ್ನುವ ಪದ ಮೂಲತಃ 'ದಿವು' ಎನ್ನುವ ದಾತುವಿನಿಂದ ಹುಟ್ಟಿದ ಶಬ್ದ. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ದಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ. ೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ. ೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ. ೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ. ೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ. ೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ. ೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ. ೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ' ಹೀಗೆ ಅನೇಕ ಅರ್ಥಗಳನ್ನು 'ದೇವ' ಎನ್ನುವ ನಾಮದಲ್ಲಿ ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ಅದಕ್ಕಾಗಿ ಪುರಂದರ ದಾಸರು 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಭಲ ಒಂದಿದ್ದರೆ ಸಾಕೋ" ಎಂದು ಭಗವಂತನನ್ನು ವಿನೋದ ಮಾಡಿದ್ದಾರೆ". 377) ಶ್ರೀಗರ್ಭಃ 'ಶ್ರೀ' ಎಂದರೆ ಸಂಪತ್ತು. ಎಲ್ಲಾ ಸಂಪತ್ತು ಭಗವಂತನ ಒಡಲಿಂದ ಉದ್ಭವವಾದದ್ದು. ಸಮಸ್ತ ವೇದಗಳು ಯಾರ ಗರ್ಭದಿಂದ ಉದ್ಭವವಾಯಿತೋ ಅವನು ಶ್ರೀಗರ್ಭಃ. ಸಮಸ್ತ ವೇದದ, ಸರ್ವ ಸಂಪತ್ತಿನ ಅಭಿಮಾನಿಯಾದ ಲಕ್ಷ್ಮಿಗೆ ನೆಲೆಯಾಗಿರುವ ಭಗವಂತ ಶ್ರೀಗರ್ಭಃ 378) ಪರಮೇಶ್ವರಃ ಈಶ, ಈಶ್ವರ, ಪರಮೇಶ ಹಾಗು ಪರಮೇಶ್ವರ ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುವ ಪದಗಳು. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವವರು ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ-ವಾಯು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೆಶ್ವರಃ.

Tuesday, September 21, 2010

Vishnusahasranama 372-373

ವಿಷ್ಣು ಸಹಸ್ರನಾಮ: …..ವೇಗವಾನಮಿತಾಶನಃ
372) ವೇಗವಾನ್

ಭಗವಂತನ ವೇಗ ನಮ್ಮ ಮನಸ್ಸಿನ ವೇಗಕ್ಕಿಂತ ಮಿಗಿಲು. ಆತನನ್ನು ಹೊರ ಪ್ರಪಂಚದಲ್ಲಿ ಬೆನ್ನೆಟ್ಟುವುದು ಅಸಾಧ್ಯ. ಇಂತಹ ಭಗವಂತ ನಮ್ಮ ಅಂತರಂಗದಲ್ಲೇ ಇರುತ್ತಾನೆ. ಆದ್ದರಿಂದ ಆತನನ್ನು ಹೊರ ಪ್ರಪಂಚದಲ್ಲಿ ಹುಡುಕಾಡದೆ ನಮ್ಮೊಳಗೆ ಹುಡುಕಬೇಕು.
373) ಅಮಿತಾಶನಃ
ಅಮಿತ+ಅಶನ- ಅಂದರೆ ತುಂಬಾ ತಿನ್ನುವವ! ಭಗವಂತ ಎಲ್ಲವನ್ನೂ ತಿನ್ನುತ್ತಾನೆ ಆದರೆ ಏನನ್ನೂ ತಿನ್ನುವುದಿಲ್ಲ! ನಾವು ಭಗವಂತನಿಗೆ ಅರ್ಪಿಸುವ ವಸ್ತುವನ್ನು ಆತ ಸ್ವೀಕರಿಸುತ್ತಾನೆ ಆದರೆ ಅದು ನಮಗೆ ತಿಳಿಯುವುದಿಲ್ಲ.
ಭಗವಂತ ಅಮಿತ+ಆಶಾ+ನ; ಅಮಿತವಾದ ಆಸೆಯಲ್ಲಿ ಬದುಕುವ ನಮ್ಮ ಆಸೆಯನ್ನು ಪೂರೈಸುವವ ಹಾಗು ನಮಗೆ ಬಯಕೆಗಳೇ ಇಲ್ಲದಂತೆ ಮಾಡಿ ಮೋಕ್ಷವನ್ನು ಕರುಣಿಸುವವ.

Vishnu sahasranama 370-371


ವಿಷ್ಣು ಸಹಸ್ರನಾಮ: ಮಹೀಧರೋ ಮಹಾಭಾಗೋ......
37) ಮಹೀಧರಃ

ನಿಘಂಟಿನಲ್ಲಿ ಮಹೀಧರ ಪದದ ಅರ್ಥವನ್ನು ಹುಡುಕಿದರೆ ಭೂಮಿಯನ್ನು ಹೊತ್ತ ಬೆಟ್ಟಗಳು ಎನ್ನುವ ಅರ್ಥವನ್ನು ಕಾಣಬಹುದು. ಬೆಟ್ಟಗಳು ಭೂಮಿಯ ಮೇಲಿದ್ದರೂ ಸಹ ಭೂಮಿಯ ಸ್ಥಿರತೆಯನ್ನು ಕಾಪಾಡಲು ಬೆಟ್ಟಗಳು ಅತ್ಯಗತ್ಯ. ಆದರೆ ಇದು ಕೇವಲ ಲೌಕಿಕ ಅರ್ಥ. ನಿಜವಾಗಿ ಈ ಭೂಮಿಯನ್ನು ಹೊತ್ತವನು ಯಾರು? ಭೂಮಿ ಆಕಾಶದಲ್ಲಿ ಸಂಕರ್ಷಣ ಶಕ್ತಿಯಿಂದ ನಿಂತಿದೆ. ಈ ಸಂಕರ್ಷಣ ಶಕ್ತಿ (ಶೇಷ ಶಕ್ತಿ) ವಾತಾವರಣದಲ್ಲಿ (ವಾಯು ಶಕ್ತಿ) ನಿಂತಿದೆ. ಇವೆಲ್ಲವನ್ನು ಭಗವಂತ ಹೊತ್ತಿದ್ದಾನೆ.ಹೀಗೆ ಭೂಮಿಯನ್ನು ಈ ಸಂಪೂರ್ಣ ಜಗತ್ತನ್ನು ಧರಿಸಿರುವ ಭಗವಂತ ಮಹೀಧರಃ. "ನಾನು" ,"ನನ್ನಿಂದ" ಎನ್ನುವ ಅಹಂಕಾರವನ್ನು ಬಿಟ್ಟು, ನಮ್ಮೆಲ್ಲರನ್ನೂ, ಈ ಪ್ರಕೃತಿಯನ್ನು ಹೊತ್ತ ಸರ್ವ ಸಮರ್ಥ ಶಕ್ತಿ ಭಗವಂತ ಎಂದು ತಿಳಿದಾಗ ಮಾತ್ರ ಈ ಸತ್ಯ ಹೊಳೆಯುತ್ತದೆ.
371) ಮಹಾಭಾಗಃ
ನಾವು ಪೂಜೆಯಲ್ಲಿ ಅರ್ಪಿಸುವ ಪೂಜಾ ದ್ರವ್ಯಗಳ ಮುಖ್ಯ ಭಾಗ ಸೇರುವುದು ಭಗವಂತನನ್ನು. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ
ನತು ಮಾಮಭಿಜಾನಂತಿ ತತ್ವೇನಾತಸ್ಚ್ಯವಂತಿ ತೇ (ಅ-೯ ಶ್ಲೋ ೨೪)
ನಾವು ಪೂಜೆ ಮಾಡುವಾಗ ನಮಗೆ ಈ ಎಚ್ಚರ ಬೇಕು. ತಿಳಿದು ಮಾಡಿದಷ್ಟು ಉತ್ತಮ. ಯಾವ ದೇವತೆಗಳೂ ಭಗವಂತನಿಗೆ ಅರ್ಪಿಸದ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದಿಲ್ಲ.
ಭಗವಂತ ಮಹಾ ಭಾಗ್ಯ ಕೂಡಾ ಹೌದು. ಇಲ್ಲಿ ಭಾಗ್ಯ ಎಂದರೆ ಜ್ಞಾನ, ಶಕ್ತಿ, ಭಲ, ಐಶ್ವರ್ಯ,ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ.

Sunday, September 19, 2010

Vishnu sahasranama 366-369


ವಿಷ್ಣು ಸಹಸ್ರನಾಮ: .....ಮಾರ್ಗೋ ಹೇತುರ್ದಾಮೋದರಸ್ಸಹಃ
366) ಮಾರ್ಗಃ

ಭಗವಂತ ಜ್ಞಾನಿಗಳು ಹುಡುಕುವ ತತ್ವ; ಮುಕ್ತಿಗೆ ಹೆದ್ದಾರಿ. ಎಲ್ಲರೂ ಕೊನೆಗೆ ಕಂಡು ಹುಡುಕಬೇಕಾದ ಶಕ್ತಿ. ಸಂಸಾರ ಸಾಗರವನ್ನು ದಾಟಿಸುವ ದೂಣಿಯೂ ಅವನೇ, ಹೋಗಿ ಸೇರಬೇಕಾದ ದಡವೂ ಅವನೇ. ಅವನನ್ನು ಸೇರುವ ಒಂದೇ ಒಂದು ಮಾರ್ಗ ಶರಣಾಗತಿ, ಆಗ ಆತ ಮುಕ್ತಿಯ ದಾರಿ ತೋರುತ್ತಾನೆ. ಆತನನ್ನು ಸೇರುವ ದಾರಿಯನ್ನು ನಮ್ಮ ಹೊರಗೆ ಹುಡುಕಿದರೆ ಸಿಗುವುದಿಲ್ಲ. ನಮ್ಮ ಹೊರಪ್ರಪಂಚವನ್ನು ಬಿಟ್ಟು ನಮ್ಮೊಳಗಿರುವ ಭಗವಂತನನ್ನು ನೋಡುವ ಪ್ರಯತ್ನ ನಮ್ಮನ್ನು ಭಗವಂತನತ್ತ ಕೊಂಡೊಯ್ಯಬಲ್ಲುದು.
367) ಹೇತುಃ
ಎಲ್ಲಕ್ಕೂ ಕಾರಣಕರ್ತ. ಇಡೀ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ-ಎಲ್ಲಕ್ಕೂ ಕಾರಣಕರ್ತ ಭಗವಂತ ಹೇತುಃ.
368) ದಾಮೋದರಃ
ಮೇಲ್ನೋಟಕ್ಕೆ ದಾಮೋದರ ಎಂದರೆ ತಾಯಿಯಿಂದ ಹೊಟ್ಟೆಗೆ ಹಗ್ಗ ಬಿಗಿಸಿಕೊಂಡವನು. ಇದು ಭಗವಂತನ ಕೃಷ್ಣಾವತಾರದ ಬಾಲ್ಯಕ್ಕೆ ಸಂಭಂದಪಟ್ಟ ಕಾಲಬದ್ಧ ಘಟನೆಗನುಗುಣವಾದ ಅರ್ಥ; ಆದರೆ ಭಗವಂತ ಮೂಲತಃ ದಾಮೋದರ, ಆದ್ದರಿಂದ ಈ ನಾಮಕ್ಕೆ ವಿಶಿಷ್ಟವಾದ ಅರ್ಥವಿದೆ. ಆತ ದಾಮ+ಉದರ; ಇಲ್ಲಿ ದಾಮ ಎಂದರೆ 'ದಮ' ಉಳ್ಳವರಿಗೆ ಒಲಿಯುವವನು. ದಮ ಎಂದರೆ 'ಮದ' ಎನ್ನುವ ಪದದ ವಿರುದ್ದ ಪದ. 'ಮದ' ಇಲ್ಲದಿರುವುದು 'ದಮ' ಅಂದರೆ ಇಂದ್ರಿಯಗಳನ್ನು ಸ್ವಾದೀನದಲ್ಲಿಟ್ಟುಕೊಳ್ಳುವುದು. ಉದರ ಎಂದರೆ ಉತ್+ಅರ; 'ಅರ' ಎಂದರೆ ದೋಷ, ಉದರ ಎಂದರೆ ಸರ್ವ ದೋಷಗಳನ್ನು ದಾಟಿನಿಂತ ಪರಿಪೂರ್ಣವಾದ ವಸ್ತು. ಆದ್ದರಿಂದ ದಾಮೋದರ ಎಂದರೆ ಇಂದ್ರಿಯ ನಿಗ್ರಹ ಉಳ್ಳವರು ತಿಳಿಯಬಹುದಾದ, ಅಳತೆಗೆ ಸಿಗದ, ಎಂದೂ ನಾಶವಿಲ್ಲದ, ಎಲ್ಲಕ್ಕಿಂತ ಮಿಗಿಲಾದ ಅಮಿತವನ್ನು ಕೊಡಬಲ್ಲ, ದೋಷರಹಿತವಾದ ತತ್ವ.
369) ಸಹಃ
ಭಗವಂತ ಎಂದೂ ತಾಳ್ಮೆಗೆಡುವುದಿಲ್ಲ. ಆತ ಸಹನೆಯ ಮೂರ್ತಿ.ದುಷ್ಟ ಶಕ್ತಿಯನ್ನು ಗೆದೆಯುವ ಭಗವಂತ ಭಕ್ತರ ಅಪರಾಧವನ್ನು ಕ್ಷಮಿಸುವ ಕರುಣಾಳು. ಇಂತಹ ಭಗವಂತ "ಸಹಃ"

Vishnu sahasranama 364-365


ವಿಷ್ಣು ಸಹಸ್ರನಾಮ: ವಿಕ್ಷರೋ ರೋಹಿತೋ................

364) ವಿಕ್ಷರಃ
'ಕ್ಷರ' ಎನ್ನುವ ಪದದ ಒಂದು ಅರ್ಥ "ನಿರಂತರವಾಗಿ ಕೊಡುವುದು" ಹಾಗು ಇನ್ನೊಂದು ಅರ್ಥ "ನಾಶವಾಗುವುದು". ವಿಕ್ಷರ ಎಂದರೆ ವಿವಿಧ ಫಲವನ್ನೀಯುವವನು ಹಾಗು ನಾಶವಿಲ್ಲದವನು ಎಂದರ್ಥ. ಭಗವಂತ ನಿರಂತರವಾಗಿ ಬಯಸಿದ್ದನ್ನು ಕೊಡುವ ನಾಶವಿಲ್ಲದ ಶಕ್ತಿ. "ಕೇಳಿದರೆ ಕೇಳಬೇಕು-ಭಗವಂತನನ್ನು ಕೇಳಬೇಕು" ಇನ್ನೊಬ್ಬರನ್ನು ಕೇಳಿದರೆ ಅವರೆಷ್ಟು ಕೊಟ್ಟಾರು? ನಿರಂತರವಾಗಿ ಭಕ್ತರು ಕೇಳಿದ್ದನ್ನು ಕೊಡುವ ಭಗವಂತ ವಿಕ್ಷರಃ. ನಾವು ಭಗವಂತನಲ್ಲಿ ಕೇಳುವಾಗ "ನನಗೆ ಇದು ಬೇಕು , ನನಗೆ ಅದು ಬೇಕು ಎಂದು ಕೇಳದೆ "ಓ ಭಗವಂತ ನನಗೆ ಏನು ಬೇಕು ಎನ್ನುವುದು ನನಗೆ ಗೊತ್ತಿಲ್ಲ, ನನಗೇನು ಬೇಕೋ ಅದನ್ನು ಕೊಡು ಎಂದು ಕೇಳಬೇಕು". ಹೀಗೆ ಅನಂತ ಕಾಲದಲ್ಲಿ ನಿರಂತರವಾಗಿ ಕೊಡುವ ಭಗವಂತ ಕೊಟ್ಟ ಫಲವನ್ನು ದುರುಪಯೋಗ ಮಾಡಿಕೊಂಡರೆ ಅದನ್ನು ಕಸಿದುಕೊಳ್ಳುತ್ತಾನೆ ಎನ್ನುವ ಎಚ್ಚರ ಅಗತ್ಯ!
365) ರೋಹಿತಃ
ಭಗವಂತ ಕೆಂಪು ಬಣ್ಣದವನು ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಉಪನಿಷತ್ತಿನಲ್ಲಿ ಹೇಳುವಂತೆ: "ಅಜಂ ಏಕಮ್ ಲೋಹಿತ-ಶುಕ್ಲ-ಕೃಷ್ಣಂ" ಅಂದರೆ ಒಂದು ಅಜ ಅದಕ್ಕೆ ಮೂರು ಬಣ್ಣಗಳು! ಇಲ್ಲಿ ಅಜ ಎಂದರೆ 'ಆಡು' ಅಲ್ಲ. ಅಜ ಎಂದರೆ 'ಹುಟ್ಟಿಲ್ಲದ ಆದಿ ತತ್ವ'. ಮೂರು ಬಣ್ಣಗಳಾದ ಕೆಂಪು-ಬಿಳಿ-ಕಪ್ಪು ಕ್ರಮವಾಗಿ ಸೃಷ್ಟಿ-ಸ್ಥಿತಿ-ಸಂಹಾರವನ್ನು ಸೂಚಿಸುತ್ತವೆ. ಸೃಷ್ಟಿಗೆ ಕಾರಣನಾದ ಭಗವಂತನ ಬಣ್ಣ ಕೆಂಪು, ಆದ್ದರಿಂದ ಆತ ರೋಹಿತಃ.

Saturday, September 18, 2010

Vishnusahasranama 361-363

ವಿಷ್ಣು ಸಹಸ್ರನಾಮ : ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ ಸಮಿತಿಂಜಯಃ
361) ಸರ್ವಲಕ್ಷಣಲಕ್ಷಣ್ಯಃ

ಭಗವಂತನ ರೂಪ ನಮ್ಮ ಕಲ್ಪನೆಗೆ ಮಿಗಿಲು. ಒಂದು ದೇಹದ ಸೌಂದರ್ಯದ ಲಕ್ಷಣಗಳು ಎಂದು ನಾವು ಏನನ್ನೂ ಕಲ್ಪನೆ ಮಾಡಬಹುದೋ ಅದರ ಪರಾಕಾಷ್ಠೆ ಆತನ ರೂಪ. ಜಗತ್ತಿನ ಎಲ್ಲಾ ಬಣ್ಣ ಅವನ ಬಣ್ಣ. ಆತ ವಿಶ್ವವರ್ಣ. ಅಸಾದಾರಣ ಗುಣಗಳಿಂದ ತುಂಬಿದ ಸರ್ವ ಲಕ್ಷಣಗಳ ನೆಲೆಯಾದ, ಸೌಂದರ್ಯದ ಪರಾಕಾಷ್ಠೆಯ ಸ್ವರೂಪ ಹಾಗು ಸರ್ವ ಸೌಂದರ್ಯದ ಸಾರನಾದ ಭಗವಂತ ಸರ್ವಲಕ್ಷಣಲಕ್ಷಣ್ಯಃ.
362) ಲಕ್ಷ್ಮೀವಾನ್
ಭಗವಂತ ಪೃಕೃತಿ ಮಾತೆ ಶ್ರಿಲಕ್ಷ್ಮಿಯನ್ನು ಸದಾ ತನ್ನ ಎದೆಯಲ್ಲಿ ಧರಿಸಿರುತ್ತಾನೆ. ಲಕ್ಷ್ಮಿ ರಹಿತ ನಾರಾಯಣನನ್ನು ನಾವು ಎಂದೂ ನೋಡುವುದಿಲ್ಲ. ಈ ಸೃಷ್ಟಿಯನ್ನು ಭಗವಂತ ಲಕ್ಷ್ಮಿ ಸಮೇತನಾಗಿ ನಿರ್ಮಿಸಿದ. ಇಂತಹ ಭಗವಂತನಿಗೆ ಲಕ್ಷ್ಮೀವಾನ್ ಅನ್ವರ್ಥ ನಾಮ.
363) ಸಮಿತಿಂಜಯಃ
"ಸಮಿತಿ" ಎಂದರೆ ಯುದ್ದ. ಭಗವಂತ ಅಸುರರನ್ನು ಯದ್ದದಲ್ಲಿ ಗೆಲಿದವನು. ನಮ್ಮ ದೈನಂದಿನ ಸಂಸಾರಿಕ ಯುದ್ದದಲ್ಲಿ ನಮಗೆ ಜಯವನ್ನು ತಂದು ಕೊಟ್ಟು ನಮ್ಮನ್ನು ಸಂಸಾರ ಸಾಗರದಿಂದ ಮುಕ್ತ ಮಾಡುವವನು. ನಮ್ಮ ನೋವನ್ನು ನಾಶಮಾಡುವ ಭಗವಂತ ಸಮಿತಿಂಜಯಃ.

Friday, September 17, 2010

Vishnu sahasranama 360


ವಿಷ್ಣು ಸಹಸ್ರನಾಮ: ...ಹವಿರ್ಹರಿಃ

360) ಹವಿರ್ಹರಿಃ
ಹವಿಸ್ಸು ಎಂದರೆ ಭಗವಂತನಿಗೆ ಅರ್ಪಿಸುವ ಹೋಮ ದ್ರವ್ಯ. ನಾವು ಅರ್ಪಿಸುವ ಹವಿಸ್ಸು ಎಂದೂ ವ್ಯರ್ಥವಲ್ಲ. ಅಗ್ನಿಗೆ ಅರ್ಪಿಸಿದ ಹವಿಸ್ಸು ಅಗ್ನಿಯಿಂದ ಹೊರ ಹೊಮ್ಮುವ ಏಳು ಬಣ್ಣಗಳ ಮುಖೇನ ವಾತಾವರಣದಲ್ಲಿನ ಸೂರ್ಯ ಕಿರಣದೊಂದಿಗೆ ಸೇರಿ ಸಮಾಜಕ್ಕೆ ಫಲವನ್ನು ಕೊಡುತ್ತದೆ. ಹವಿರ್ಭಾಗವನ್ನು ಸ್ವೀಕರಿಸುವ ಭಗವಂತ ಹವಿರ್ಹರಿಃ . ನಾವು ಯಾವುದೇ ನಾಮವನ್ನುಚ್ಚರಿಸಿ ಹವಿಸ್ಸನ್ನು ಅರ್ಪಿಸಿದರೂ ಅದು ಸೇರುವುದು ಸರ್ವಶಬ್ದ ವಾಚ್ಯನಾದ ಭಗವಂತನನ್ನು. "ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ". ಭಗವಂತ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. ಆದ್ದರಿಂದ ಯಾವ ಶಬ್ದವನ್ನು ಹೇಳಿದರೂ ಅದು ಸೇರುವುದು ಅವನನ್ನೇ. ಹೀಗೆ ಹವಿಸ್ಸನ್ನು ಸ್ವೀಕರಿಸಿ ಭಕ್ತರ ಪಾಪವನ್ನು ಪರಿಹರಿಸುವ ಭಗವಂತ ಹವಿರ್ಹರಿಃ. ಭಗವಂತನನ್ನು ಗಾಢವಾದ ಭಕ್ತಿಯಿಂದ ಪೂಜಿಸಿದಾಗ ಆತ ನಮ್ಮ ಒಳಗಣ್ಣಿಗೆ ಕಾಣಿಸುತ್ತಾನೆ. ಹೀಗೆ ಜ್ಞಾನದಲ್ಲಿ ಕಾಣುವ ಭಗವಂತನ ಪ್ರಭೆ ನೀಲ ವರ್ಣ. ಇಲ್ಲಿ ನೀಲ ಜ್ಞಾನದ ಸಂಕೇತ. ಇದು ದೇಹದ ಬಣ್ಣವಲ್ಲ, ದೇಹದ ಸುತ್ತಲಿನ ಪ್ರಭೆ. ಹೀಗೆ ನೀಲವರ್ಣನಾಗಿ ಜ್ಞಾನದಲ್ಲಿ ಕಾಣಿಸುವ ಭಗವಂತ ಹವಿರ್ಹರಿಃ

Thursday, September 16, 2010

Vishnu sahasranama 356-359


ವಿಷ್ಣು ಸಹಸ್ರನಾಮ : ಅತುಲಃ ಶರಭೋ ಭೀಮಃ ಸಮಯಜ್ಞೋ.......
356) ಅತುಲಃ

ಭಗವಂತ ಯಾವುದೇ ತುಲನೆಗೆ ನಿಲುಕುವವನಲ್ಲ. ಆತನನ್ನು ಇನ್ನೊಂದು ವಸ್ತುವಿನೊಂದಿಗೆ ತುಲನೆ ಮಾಡಲು ಸಾದ್ಯವಿಲ್ಲ; ಏಕೆಂದರೆ ಭಗವಂತ ನಮಗೆ ತಿಳಿದ ಯಾವುದೇ ವಸ್ತುವಿನಂತಿಲ್ಲ. ಭಗವಂತನನ್ನು ತಿಳಿಸುವ ಅತಿದೊಡ್ಡ ಬೀಜಾಕ್ಷರ ಓಂಕಾರದಲ್ಲಿ(ಅ+ಉ+ಮ) ಬರುವ ಮೊದಲ ಅಕ್ಷರ ಅ 'ಅಲ್ಲ' ಎನ್ನುವ ಅರ್ಥವನ್ನು ಕೊಡುತ್ತದೆ. ಅಂದರೆ ಭಗವಂತ ನಿನಗೆ ತಿಳಿದ ಯಾವುದೇ ವಸ್ತುವಲ್ಲ ಹಾಗು ಆತನನ್ನು ಪೂರ್ಣವಾಗಿ ತಿಳಿಯಲು ಸಾದ್ಯವಿಲ್ಲ ಎಂದರ್ಥ. ಭಗವಂತನಿಗೆ ಸದೃಶವಾದ ಯಾವುದೇ ವಸ್ತುವಿಲ್ಲ. ಹೀಗೆ ಸರಿಸಾಟಿಯಿಲ್ಲದ, ಎಲ್ಲಾ ಪ್ರಶ್ನೆಗೂ ಪ್ರಶ್ನೆಯಾಗಿ ಉಳಿಯುವ ಭಗವಂತ ಅತುಲಃ.
357) ಶರಭಃ
ಇಲ್ಲಿ ಶರ ಎಂದರೆ ಒಂದು ದಿನ ಬಿದ್ದು ಹೋಗುವ ಶರೀರ. ಶರಭ ಎಂದರೆ ನಮ್ಮ ಶರೀರದೊಳಗೆ ಬೆಳಗುವ ಶಕ್ತಿ. ಹೊರಗಣ್ಣನ್ನು ಮುಚ್ಚಿ ಒಳಗಣ್ಣಿನಿಂದ ನೋಡಿದಾಗ ಮಾತ್ರ ಶರೀರದೊಳಗಿನ ಪ್ರಕಾಶಮಾನವಾಗಿರುವ ಭಗವಂತನನ್ನು ಕಾಣಬಹುದು. ಇಡೀ ಪ್ರಪಂಚದಲ್ಲಿ ತುಂಬಿರುವ; ಪ್ರಳಯ ಕಾಲದಲ್ಲಿ ಇಡೀ ಪ್ರಪಂಚವನ್ನು ಸಂಹಾರ ಮಾಡುವ ಶಕ್ತಿ, ಅಣುವಿನೊಳಗೆ ಅಣುವಾಗಿ ಎಲ್ಲರಲ್ಲೂ ತುಂಬಿದ್ದಾನೆ. ಇಂತಹ ಭಗವಂತನನ್ನು ತಿಳಿಯಬೇಕಾದರೆ ನಮ್ಮ ಮನಸ್ಸನ್ನು ಶರ(ಬಾಣ)ವಾಗಿಸಿ ಆತನೆಡೆಗೆ ಗುರಿಯಿಟ್ಟು ಸಾಗಬೇಕು.(ಇಲ್ಲಿ ಬಾಣ ಎಂದರೆ ಏಕಾಗ್ರತೆ). ಮನಸ್ಸು ಮತ್ತು ಆತ್ಮ ಬಾಣವಾಗಿ ಭಗವಂತನ ಪಾದವನ್ನು ಸೇರಿದಾಗ ಆತ ನಮಗೆ ತಿಳಿಯುತ್ತಾನೆ.
ಪುರಾಣಗಳಲ್ಲಿ ಶರಭ ಎನ್ನುವ ಪ್ರಾಣಿಯ ಉಲ್ಲೇಖವಿದೆ. ಈ ಪ್ರಾಣಿ ಎಂಟು ಕಾಲುಗಳುಳ್ಳ ಅತ್ಯಂತ ಬಲಿಷ್ಠ ಪ್ರಾಣಿಯಾಗಿತ್ತು. ಆದರೆ ಈ ಪ್ರಾಣಿಯ ಯಾವುದೇ ಕುರುಹು ನಮಗೆ ದೊರೆತಿಲ್ಲ. ಇಂತಹ ವಿಶಿಷ್ಟ ಪ್ರಾಣಿಯಲ್ಲಿ ಸನ್ನಿಹಿತನಾಗಿರುವ ಭಗವಂತನಿಗೆ ಶರಭಃ ಎನ್ನುವುದು ಅನ್ವರ್ಥ ನಾಮ.
358) ಭೀಮಃ (ಅಭೀಮಃ)
ಯಾರು ಒಳಗಿನ ಪ್ರಪಂಚವನ್ನು ಮರೆತು ಹೊರಪ್ರಪಂಚದಲ್ಲಿ ಬದುಕುತ್ತಾರೋ ಅವರಿಗೆ ಭಗವಂತ ಭಯಂಕರ(ಭೀಮಃ). ಯಾರು ಒಳಪ್ರಪಂಚದ ಅರಿವಿನಿಂದ ಬದುಕುತ್ತಾರೋ ಅವರಿಗೆ ಭಗವಂತ ಅಭಯ(ಅಭೀಮಃ). ಅವನು ಭಯಂಕರನೂ ಹೌದು; ಅಭಯಂಕರನೂ ಹೌದು. ಹಿರಣ್ಯಕಶಿಪುವಿಗೆ ನರಸಿಂಹ ಅವತಾರದಲ್ಲಿ ಭಯಂಕರನಾದ ಭಗವಂತ ಪ್ರದ್ಯುಮ್ನನಿಗೆ ಅದೇ ರೂಪದಲ್ಲಿ ಅಭಯಂಕರನಾದ. ಇಂತಹ ಭಗವಂತ ಭೀಮಃ ಅಥವಾ ಅಭೀಮಃ.
359) ಸಮಯಜ್ಞಃ
ಈ ನಾಮವನ್ನು ಸಮಯ+ಜ್ಞಾ ಮತ್ತು ಸಮ+ಜ್ಞಾ ಎಂದು ಎರಡು ಬಗೆಯಲ್ಲಿ ಅರ್ಥೈಸಬಹುದು. ಭಗವಂತ ಸಮಯ ಅಥವಾ ಹೊತ್ತು ತಿಳಿದವನು. ಸೃಷ್ಟಿಯಿಂದ ಸಂಹಾರ ತನಕದ ಸ್ಥಿತಿ ಕಾಲದಲ್ಲಿ ನಿರಂತರ ಹುಟ್ಟು-ಸಾವು ನಡೆಯುತ್ತಿರುತ್ತದೆ. ಯಾವುದು ಯಾವಾಗ ನಡೆಯುತ್ತದೆ ಎನ್ನುವ ಅರಿವು ನಮಗಿರುವುದಿಲ್ಲ. ಯಾವುದೂ ನಮಗೆ ತಿಳಿದಿಲ್ಲವೋ ಅದನ್ನು ನಾವು ಆಕಸ್ಮಿಕ ಎನ್ನುತ್ತೇವೆ. ಆದರೆ ಭಗವಂತನಿಗೆ ಯಾವುದೂ ಆಕಸ್ಮಿಕವಲ್ಲ. ಆತ ಸರ್ವಜ್ಞ. ಯಾವ ಕಾಲದಲ್ಲಿ ಏನು ನಡೆಯುತ್ತದೆ ಎನ್ನುವ ಸಂಪೂರ್ಣ ಅರಿವು ಇರುವುದು ಭಗವಂತನೊಬ್ಬನಿಗೆ. ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆ ಹಿಂದೆ ಒಂದು ಕಾರಣವಿರುತ್ತದೆ. ಇಂತಹ ಕಾಲ ಜ್ಞಾನಿ ಭಗವಂತ ಸಮಯ-ಜ್ಞ.
ಸಮಯ ಎನ್ನುವುದಕ್ಕೆ ಇನ್ನೊಂದು ಅರ್ಥ "ವೇದಾದಿ ಶಾಸ್ತ್ರಗಳು" ಯಾವುದರಿಂದ ನಮಗೆ ಸಮೀಚೀನವಾದ ಜ್ಞಾನ ಬರುತ್ತದೋ ಅದು ಸಮಯ. ಸಮಗ್ರ ವೇದದ, ಶಾಸ್ತ್ರದ ಅಂತರಂಗದ ರಹಸ್ಯ ತಿಳಿದವನು ಭಗವಂತನೊಬ್ಬನೇ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ಸರ್ವಸ್ಯ ಚಾಹಂ ಹೃದಿ ಸನ್ನಿ ವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ
ವೇದೈಸ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ ವೇದವಿದೇವ ಚಾಹಮ್ (ಅ-೧೫, ಶ್ಲೋ-೧೫)
"ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ, ನೆನಪು, ಅರಿವು, ಮರೆವು ಎಲ್ಲ ನನ್ನ ಕೊಡುಗೆ. ಎಲ್ಲ ವೇದಗಳಿಂದ ಅರಿಯಬೇಕಾದವನು ನಾನೆ. ವೇದಾಂತಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ".
ಭಗವಂತ ಸಮ-ಯಜ್ಞ. ಯಜ್ಞ ಎಂದರೆ ಪೂಜೆ; ಒಳ್ಳೆಯ ಕಾರ್ಯಕ್ಕಾಗಿ ಒಟ್ಟಿಗೆ ಸೇರುವುದು; ದಾನ ಮಾಡುವುದು ಇತ್ಯಾದಿ . ನಮ್ಮಲ್ಲೇನಿದೆ ಅದನ್ನು ಇಲ್ಲದವರಿಗೆ ಕೊಡುವುದು ಒಂದು ಯಜ್ಞ. ಭಗವಂತನನ್ನು ಅಂತರಂಗದ ಸಮದೃಷ್ಟಿಯಿಂದ ಪೂಜಿಸಬೇಕು. ಸಮಾಜದಲ್ಲಿ ಎಲ್ಲರನ್ನೂ ಅವರ ಯೋಗ್ಯತೆಗೆ ತಕ್ಕಂತೆ ದ್ವೇಷವಿಲ್ಲದೆ, ಅವರೊಳಗಿರುವ ಭಗವಂತನನ್ನು ಹಾಗು ಅವನ ಅಭಿವ್ಯಕ್ತವನ್ನು ತಿಳಿದು ಗೌರವಿಸಬೇಕು.ಎಲ್ಲರ ಒಳಗಿರುವ ಭಗವಂತ ಒಬ್ಬನೇ. ಕೇವಲ ಅವನ ಅಭಿವ್ಯಕ್ತ ಮಾತ್ರ ಬೇರೆ ಬೇರೆ. ಈ ಸಮಭಾವಕ್ಕೆ ಯೋಗವೆಂದು ಹೆಸರು. (ಸಮತ್ವಂ ಯೋಗ ಉಚ್ಯತೇ ಅ-೨, ಶ್ಲೋ-೪೮)
ಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ:
ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ (ಅ-೦೫, ಶ್ಲೋ-೧೮)
"ಪಾಂಡಿತ್ಯ-ಸೌಜನ್ಯಗಳ ನೆಲೆಯಾದ ಬ್ರಹ್ಮಜ್ಞಾನಿ, ಆಕಳು, ಆನೆ, ನಾಯಿ, ಹೊಲಗೇಡಿಯಾದ ಹೀನ ಮಾನವನಲ್ಲಿ ಕೂಡಾ ಏಕರೂಪದ ಭಗವಂತನನ್ನು ಕಾಣಬಲ್ಲರು"
ಭಗವಂತ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಸಮ ದೃಷ್ಟಿಯಿಂದ ನೋಡುತ್ತಾನೆ. ಇಲ್ಲಿ ಸಮ ದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ, ಯೋಗ್ಯತೆಗನುಗುಣವಾದ ಸಮ ದೃಷ್ಟಿ. ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಬೇದವಿಲ್ಲದೆ ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಹೀಗೆ ಸಮ ದೃಷ್ಟಿಯಿಂದ ಮಾಡುವ ಕ್ರಿಯೆ ಮಹಾನ್ ಯಜ್ಞ, ಹಾಗು ಭಗವಂತನಿಗೆ ಅತ್ಯಂತ ಪ್ರಿಯವಾದದ್ದು. ಹೀಗೆ ಸಮದೃಷ್ಟಿಯ ಯಜ್ಞಪ್ರಿಯ ಭಗವಂತ ಸಮಯಜ್ಞಃ

Wednesday, September 15, 2010

Vishnu sahasranama 351-355


ವಿಷ್ಣು ಸಹಸ್ರನಾಮ : ಮಹರ್ದ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ
351) ಮಹರ್ದ್ಧಿಃ

ಮಹರ್ದ್ಧಿ ಎಂದರೆ ಪೂರ್ಣತೆಯ ಪರಾಕಾಷ್ಠೆ. ಪೂರ್ಣತೆಯಲ್ಲಿ ಎರಡು ವಿಧ; ಒಂದು ಸಾಪೇಕ್ಷವಾದ ಪೂರ್ಣತೆ ಹಾಗು ಇನ್ನೊಂದು ನಿರಪೇಕ್ಷವಾದ ಅಥವಾ ಅನಂತವಾದ ಪೂರ್ಣತೆ. ಬಿಂದಿಗೆಯಲ್ಲಿ ನೀರನ್ನು ತುಂಬಿಸಿದರೆ ಅದು ಪೂರ್ಣ ಆದರೆ ಭಗವಂತನ ಪೂರ್ಣತೆ ಸಮುದ್ರದಂತೆ (ಇಲ್ಲಿ ಸಮುದ್ರ ಎನ್ನುವುದು ಕೇವಲ ದೃಷ್ಟಾಂತ); ಅನಂತವಾದ ಪೂರ್ಣತೆ.
352) ಋದ್ಧಃ
ಎಲ್ಲಾ ಸಮೃದ್ದಿಗಳಿಂದ ಪೂರ್ಣನಾದವನು ಋದ್ಧ. ಒಂದು ಅಮೂಲ್ಯವಾದ ಗಿಡಮೂಲಿಕೆಯನ್ನೂ ಕೂಡಾ ಋದ್ಧ ಎನ್ನುತ್ತಾರೆ; ಹಾಗೆ ಕುಟ್ಟಿ ಮಾಡಿದ ತೌಡು ಮಿಶ್ರಿತ ಪೋಷಕಾಂಶಗಳಿಂದ ಕೂಡಿದ ಅಕ್ಕಿ ಕೂಡಾ ಋದ್ಧ. ಗಿಡಮೂಲಿಕೆಯಲ್ಲಿ, ಕುಟ್ಟಣದ ಅಕ್ಕಿಯಲ್ಲಿ ಭಗವಂತನ ವಿಶೇಷವಾದ ವಿಭೂತಿ ಅಡಗಿದೆ. ಆತ ಪರಿಪೂರ್ಣ ಅದಕ್ಕಾಗಿ ಋದ್ಧಃ.
353) ವೃದ್ಧಾತ್ಮಾ
ಭಗವಂತ ಇಂದ್ರಿಯಗಳಿಗೆ ಎಟುಕದವನು. ಆತನ ದೇಹ ಎಲ್ಲಾ ಕಡೆ ಆಕಾಶದಂತೆ ತುಂಬಿದೆ. ಆಕಾಶಕ್ಕೂ ಭಗವಂತನಿಗೂ ಇರುವ ಒಂದು ವೆತ್ಯಾಸ ಎಂದರೆ ಆಕಾಶಕ್ಕೆ ಆತ್ಮವಿಲ್ಲ ಭಗವಂತನಿಗೆ ಇದೆ. ಭಗವಂತನ ದೇಹ ಪಂಚಭೂತಗಳಿಂದಾದದ್ದಲ್ಲ. ಅದು ಜ್ಞಾನಾನಂದಗಳಿಂದಾದ ಶರೀರ. ಮನುಷ್ಯ ತನ್ನ ಸಾಧನೆ ಮುಖೇನ ತನ್ನ ಸ್ವರೂಪವನ್ನು ತಿಳಿದಾಗಮಾತ್ರ ಈ ಸಂಗತಿ ಅರ್ಥವಾಗುತ್ತದೆ. ಭಗವಂತನ ಬಣ್ಣ ಆಕಾರ ಎಲ್ಲವೂ ಜ್ಞಾನಾನಂದಮಯವಾದದ್ದು. ಆತ ತುಂಬಿದ ಅನಾದಿಮೂರ್ತಿ. ಹೀಗೆ ಜ್ಞಾನಾನಂದಮಯವಾದ ಶರೀರ ಮತ್ತು ಆತ್ಮದಿಂದ ಎಲ್ಲೆಡೆ ವ್ಯಾಪ್ತನಾಗಿರುವ ಭಗವಂತ ವೃದ್ಧಾತ್ಮಾ.
ವೃದ್ಧರು ಎಂದರೆ ತಲೆ ಹಣ್ಣಾದವರು. ಇಲ್ಲಿ ತಲೆ ಎಂದರೆ ಒಳಗಿನ ತಲೆ. ಹಣ್ಣಾಗುವುದು ಎಂದರೆ ಜ್ಞಾನದ ಉತ್ತುಂಗಕ್ಕೇರುವುದು; ಆದ್ದರಿಂದ ವೃದ್ಧಾ ಎಂದರೆ ಜ್ಞಾನಿ. ಹೀಗೆ ಸ್ವಯಂ ಪೂರ್ಣಜ್ಞಾನಿ ಹಾಗು ಯಾರಲ್ಲಿ ಜ್ಞಾನವಿದೆ ಅವರನ್ನು ಪ್ರೀತಿಸುವ ಭಗವಂತ ವೃದ್ಧಾತ್ಮಾ.
354) ಮಹಾಕ್ಷಃ
ಎಲ್ಲೆಡೆಯೂ ಕಣ್ಣಿಟ್ಟವನು; ಸರ್ವಗತವಾದ ಕಣ್ಣಿನವನು; ಭಗವಂತನಿಗೆ ತಿಳಿಯದಂತೆ ಯಾವುದೇ ಕ್ರಿಯೆ ನಡೆಯಲು ಅಸಾಧ್ಯ. ಭಗವಂತ ಸರ್ವಗತವಾದ ಇಂದ್ರಿಯಗಳುಳ್ಳವನು.
355) ಗರುಡದ್ವಜಃ
ಗರುಡನ ಮೇಲೇರಿ ವಿಹರಿಸುವವನು. ಗರುಡಾರೂಢ ಭಗವಂತನ ಅನೇಕ ರೂಪದ ಉಪಾಸನೆ ನಮ್ಮಲ್ಲಿ ರೂಢಿಯಲ್ಲಿದೆ. ಇದರಲ್ಲಿ ಒಂದು "ಶ್ರೀಕರ" ರೂಪ. ಎರಡು ಕೈಗಳಿಂದ ಸುವರ್ಣವನ್ನೀಯುವ ಗರುಡಾರೂಢ ಭಗವಂತನ ಮೂರ್ತಿ. ಇಲ್ಲಿ "ಸು-ವರ್ಣ" ಎಂದರೆ ಅಕ್ಷರಗಳ ಮೂಲಕ ಅಕ್ಷರನಾದ ಭಗವಂತನನ್ನು ತಿಳಿಯುವ ಜ್ಞಾನ. ಇಂತಹ ಭಗವಂತನ ಅರಿವನ್ನು ಕೊಡತಕ್ಕ ರೂಪ ಗರುಡಾರೂಢ ಸಂಸ್ಥಿತಿ.
ನಮ್ಮ ದೇಹವನ್ನು ನಿಯಂತ್ರಿಸುವ ಅನೇಕ ಶಕ್ತಿಗಳನ್ನು ಪ್ರಾಚೀನರು ಗುರುತಿಸಿದರು. ಮುಖ್ಯವಾಗಿ ನಾಲ್ಕು ಪುರುಷರು ನಮ್ಮ ದೇಹವನ್ನು ನಿಯಂತ್ರಿಸುತ್ತಾರೆ. ಶರೀರ ನಿಯಂತ್ರಿಸುವ 'ಶರೀರಪುರುಷ' ಶಿವ; ಪ್ರಾಣಮಯ ಕೋಶವನ್ನು ನಿಯಂತ್ರಿಸಿ ನಮ್ಮ ಮಾತನ್ನು ನಿಯಂತ್ರಿಸುವ "ಛಂದಪುರುಷ" ಶೇಷ; ನಮ್ಮ ಮನೋಮಯ ಕೋಶವನ್ನು ನಿಯಂತ್ರಿಸುವ "ವೇದ ಪುರುಷ" ಗರುಡ. ಆದ್ದರಿಂದ ಗರುಡ "ವೇದ-ಜ್ಞಾನದ" ಸಂಕೇತ. ಗರುಡ ದ್ವಜ ಎಂದರೆ ಸಾಕ್ಷಾತ್ ವೇದಗಳ ಮೇಲೆ ಸವಾರಿ ಮಾಡಿಕೊಂಡು ಬರುವವ. ಇಂತಹ ಭಗವಂತನನ್ನು ತಿಳಿಯ ಬೇಕಾದರೆ ವೇದದ ಅರಿವೊಂದೇ ನಮಗಿರುವ ಮಾರ್ಗ.

Tuesday, September 14, 2010

Vishnu sahasranama 347-350


ವಿಷ್ಣು ಸಹಸ್ರನಾಮ: ಪದ್ಮನಾಭೋರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್

347) ಪದ್ಮನಾಭಃ
ಸೃಷ್ಟಿಯ ಮೊದಲು ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡ ಸಂಪೂರ್ಣವಾಗಿ ಭಗವಂತನೊಳಗೆ ಸೇರಿರುತ್ತದೆ. ಸೃಷ್ಟಿಕಾಲದಲ್ಲಿ ಅದು ಭಗವಂತನ ನಾಭಿಯಿಂದ ಕಮಲರೂಪದಲ್ಲಿ ಹೊರಬರುತ್ತದೆ. ಈ ಬ್ರಹ್ಮಾಂಡ ಅಂಡ ರೂಪದಲ್ಲಿ ಅಥವಾ ಕಮಲದ ಮೊಗ್ಗಿನ ರೂಪದಲ್ಲಿ ಸೃಷ್ಟಿಯಾಗುತ್ತದೆ. ಈ ಕಮಲ ರೂಪಿ ಬ್ರಹ್ಮಾಂಡದಲ್ಲಿ ಹದಿನಾಲ್ಕು ಎಸಳುಗಳಿರುತ್ತವೆ, ಅವೇ ಹದಿನಾಲ್ಕು ಲೋಕಗಳು. ಹೀಗೆ ತನ್ನ ನಾಭಿಯಿಂದ ಕಮಲರೂಪಿ ಬ್ರಹ್ಮಾಂಡ ಸೃಷ್ಟಿ ಮಾಡುವ ಭಗವಂತ ಪದ್ಮನಾಭಃ.
348) ಅರವಿಂದಾಕ್ಷಃ
ಅರವಿಂದ ಎಂದರೆ ದಳಗಳು. ಮೇಲೆ ಹೇಳಿದಂತೆ ಭಗವಂತ ಕಮಲದ ಮೊಗ್ಗಿನಂತಹ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ; ಆ ಕಮಲ ಅರಳಿದಾಗ ಹದಿನಾಲ್ಕು ಲೋಕವಾಯಿತು; ಆ ನಂತರ ಈ ಅರಳಿನಿಂತ ಬ್ರಹ್ಮಾಂಡದೊಳಗೆ ಸ್ವಯಂ ತಾನೇ ತುಂಬಿದ. ಇಂತಹ ಭಗವಂತ ಅರವಿಂದಾಕ್ಷಃ.
'ರವಿ' ಎಂದರೆ ಸೂರ್ಯ 'ಅರವಿ' ಎಂದರೆ ಕತ್ತಲು; 'ದಾ' ಎಂದರೆ 'ಧ್ಯತಿ ಅಥವಾ 'ನಾಶ' ; ಅಕ್ಷ ಎಂದರೆ ಕಣ್ಣು. ಆದ್ದರಿಂದ ಅರವಿಂದಾಕ್ಷಃ ಎಂದರೆ ಕತ್ತಲನ್ನು ನಾಶಮಾಡುವ ಸೂರ್ಯ ಹಾಗು ಚಂದ್ರರೆಂಬ ಎರಡು ಕಣ್ಣುಗಳನ್ನು ಈ ಜಗತ್ತಿಗೆ ಕೊಟ್ಟವನು. ಹೀಗೆ ನಮ್ಮ ಒಳಗೆ ಹಾಗು ಹೊರಗಿರುವ ಕತ್ತಲನ್ನು ನಿವಾರಿಸುವ ಭಗವಂತ ಅರವಿಂದಾಕ್ಷಃ.
349) ಪದ್ಮಗರ್ಭಃ
ಸೃಷ್ಟಿಗೆ ಮೊದಲು ಸಂಪೂರ್ಣ ಬ್ರಹ್ಮಾಂಡ ಹಾಗು ಜೀವ ಜಂತುಗಳು ಸೂಕ್ಷ್ಮರೂಪದಲ್ಲಿ ಭಗವಂತನ ಉದರದಲ್ಲಿದ್ದು, ಸೃಷ್ಟಿ ಕಾಲದಲ್ಲಿ ಎಲ್ಲವೂ ಆತನ ನಾಭಿಯಿಂದ ಪದ್ಮ ರೂಪದಲ್ಲಿ ಹೊರ ಚಿಮ್ಮುತ್ತದೆ. ಹೀಗೆ ಇಡೀ ಬ್ರಹ್ಮಾಂಡವನ್ನು ತನ್ನ ಉದರದಲ್ಲಿ ಧರಿಸಿದ ಭಗವಂತ ಪದ್ಮಗರ್ಭಃ. ಚತುರ್ಮುಖನ ಗರ್ಭದೊಳಗೆ ನಿಂತು ಈ ಸೃಷ್ಟಿಯನ್ನು ನಡೆಸುವ ಭಗವಂತ ಪದ್ಮಗರ್ಭಃ
350) ಶರೀರಭೃತ್
ಶರೀರಭೃತ್ ಎಂದರೆ ಶರೀರವನ್ನು ಧಾರಣೆ ಮಾಡುವವನು. ಭಗವಂತ ನಮ್ಮೊಳಗೆ ಪ್ರಾಣದೇವರೊಂದಿಗೆ ಪ್ರವೇಶಿಸುವುದು 'ಹುಟ್ಟು' ಹಾಗು ನಮ್ಮ ಶರೀರದಿಂದ ನಿರ್ಗಮಿಸುವುದು 'ಸಾವು'. ಭಗವಂತ ನಮ್ಮ ಶರೀರದಿಂದ ಹೊರಟನೆಂದರೆ ನಮ್ಮ ಪ್ರಾಣ ಪಕ್ಷಿ ಹಾರಿಹೋಗುತ್ತದೆ; ಈ ಶರೀರ ಶವವಾಗುತ್ತದೆ.
ಶರೀರ ಎನ್ನುವುದಕ್ಕೆ ಇನ್ನೊಂದು ಅರ್ಥ ಬ್ರಹ್ಮಾಂಡ. ಹೀಗೆ ನಮ್ಮ ಶರೀರವನ್ನು ಹಾಗು ಸಂಪೂರ್ಣ ಬ್ರಹ್ಮಾಂಡವನ್ನು ಧಾರಣೆ ಮಾಡಿದ ಭಗವಂತ, ಅನಾದಿನಿತ್ಯವಾದ ಜೀವರನ್ನು ಸದಾ ಧಾರಣೆ ಮಾಡಿರುತ್ತಾನೆ. ಇಂತಹ ಭಗವಂತ ಶರೀರಭೃತ್.

Monday, September 13, 2010

Vishnu sahasranama 344-346


ವಿಷ್ಣು ಸಹಸ್ರನಾಮ : ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ
344) ಶತಾವರ್ತಃ

ಇಲ್ಲಿ ಆವರ್ತ ಎಂದರೆ ಅವತರಣ. ಭಗವಂತ ಶತಾವರ್ತ, ಅಂದರೆ ನೂರಾರು ಬಾರಿ ನಮಗಾಗಿ ಭೂಮಿಯಲ್ಲಿ ಇಳಿದು ಬಂದವ. ರಾಮನಾಗಿ, ಕೃಷ್ಣನಾಗಿ, ಬುದ್ದನಾಗಿ, ಪರಶುರಾಮನಾಗಿ, ವಾಮನನಾಗಿ, ನರಸಿಂಹನಾಗಿ, ವರಾಹನಾಗಿ, ಮತ್ಸ್ಯನಾಗಿ, ಕೂರ್ಮನಾಗಿ, ಕಪಿಲನಾಗಿ, ದತ್ತಾತ್ರಯನಾಗಿ, ವ್ಯಾಸನಾಗಿ, ಹೀಗೆ ನೂರಾರು ಅವತಾರದಲ್ಲಿ ಭೂಮಿಗೆ ಇಳಿದು ಬಂದವ. ಕೇವಲ ರಾವಣನನ್ನು ಕೊಲ್ಲಲು ಭಗವಂತ ಅವತಾರವೆತ್ತಬೇಕಿರಲಿಲ್ಲ. ಆತನ ಅವತಾರದ ಹಿಂದೆ ಅನೇಕ ರಹಸ್ಯವಡಗಿದೆ. ನಾವು ಆತನನ್ನು ನೋಡುವಷ್ಟು ಎತ್ತರಕ್ಕೆ ಏರಲು ಆಗದಿದ್ದಾಗ ಆತ ಸ್ವಯಂ ಭೂಮಿ ಮೇಲೆ ಅವತಾರವೆತ್ತುತ್ತಾನೆ ಅಥವಾ ಸಿದ್ಧ ಜ್ಞಾನಿಗಳನ್ನು ನಮ್ಮ ಉದ್ದಾರಕ್ಕಾಗಿ ಕಳುಹಿಸುತ್ತಾನೆ. ಇಂತಹ ಭಗವಂತನ ವರ್ತನೆ ಅನೇಕ ಹಾಗು ತಿಳಿದು ಕೊಳ್ಳುವುದು ಕಷ್ಟ. ಭಗವಂತನ ವರ್ತನೆಯನ್ನು ಸಾಮಾನ್ಯ ಮನುಷ್ಯನೊಂದಿಗೆ ಹೋಲಿಸಲಾಗದು. ಆತನ ವರ್ತನೆ ಹಿಂದೆ ಒಂದು ಮಹತ್ತಾದ ಸಂದೇಶವಿರುತ್ತದೆ. ಹೀಗೆ ನೂರಾರು ಬಾರಿ ಅವತರಿಸುವ, ವಿಶಿಷ್ಟವಾದ ವರ್ತನೆಯುಳ್ಳ ಹಾಗು ಸಂಸಾರದಲ್ಲಿರುವ ಲೆಕ್ಕವಿಲ್ಲದಷ್ಟು ಸುಳಿಯನ್ನು ನಿಯಂತ್ರಿಸುವ ಭಗವಂತ ಶತಾವರ್ತಃ
345) ಪದ್ಮೀ
ಪದ್ಮೀ ಎಂದರೆ ತಾವರೆಯನ್ನು ಕೈಯಲ್ಲಿ ಹಿಡಿದವನು. ನಾವು ಸಹಸ್ರಬಾಹು ಭಗವಂತನನ್ನು ನಾಲ್ಕು ಕೈಗಳ ಮೂರ್ತಿಯಾಗಿ ಉಪಾಸನೆ ಮಾಡುತ್ತೇವೆ. ಈ ನಾಲ್ಕು ಕೈಗಳು ನಾಲ್ಕು ಪುರುಷಾರ್ಥಕದ ಸಂಕೇತ. ನಾಲ್ಕು ಕೈಗಳಲ್ಲಿ ಹಿಡಿದಿರುವ ಚಕ್ರ, ಶಂಖ, ಗಧಾ ಹಾಗು ಪದ್ಮ ಕ್ರಮವಾಗಿ ಧರ್ಮ, ಅರ್ಥ, ಕಾಮ ಹಾಗು ಮೋಕ್ಷದ ಸಂಕೇತ. ಈ ಕಾರಣಕ್ಕಾಗಿ ಮೋಕ್ಷಪ್ರದನಾದ ಭಗವಂತನನ್ನು ಪದ್ಮೀ ಎಂದು ಸಂಭೋದಿಸುತ್ತಾರೆ. ಇಷ್ಟೇ ಅಲ್ಲದೆ ಜಗತ್ತಿನ ಮೂಲ ಪ್ರಕೃತಿಯಾದ ಲಕ್ಷ್ಮಿಯನ್ನು ಪದ್ಮಾ ಎಂದೂ ಹಾಗು ಚತುರ್ಮುಖ ಬ್ರಹ್ಮನನ್ನು ಕೂಡಾ ಪದ್ಮಾ ಎಂದು ಕರೆಯುತ್ತಾರೆ. ಲಕ್ಷ್ಮೀಪತಿಯಾದ ಭಗವಂತ ಪದ್ಮೀ; ಜಗತ್ತಿನ ಮೂಲಸೃಷ್ಟನಾದ ಚತುರ್ಮುಖನ ತಂದೆ ಪದ್ಮೀ. ಈ ರೀತಿ ಮೊಕ್ಷಪ್ರದನಾಗಿ ಕೈಯಲ್ಲಿ ತಾವರೆ ಹಿಡಿದಿರುವ, ಜಗತ್ತಿನ ಮೂಲಶಕ್ತಿಯಾದ ಪ್ರಕೃತಿಯ ಸ್ವಾಮಿ ಹಾಗು ಚತುರ್ಮುಖನ ತಂದೆ ಭಗವಂತ ಪದ್ಮೀ.
346) ಪದ್ಮನಿಭೇಕ್ಷಣಃ
ಪದ್ಮನಿಭೇಕ್ಷಣ ಎಂದರೆ ತಾವರೆಯ ಎಸಳಿನಂತೆ ಕಣ್ಣುಳ್ಳವ. ಇಲ್ಲಿ ತಾವರೆಯ ಎಸಳು 'ಅನುಗ್ರಹವನ್ನು' ಸಂಕೇತಿಸುವ ಉಪಮಾನ. 'ದೇವರು ಕಣ್ಣುಬಿಟ್ಟ' ಎಂದರೆ ಭಗವಂತ ಅನುಗ್ರಹಿಸಿದ ಎಂದರ್ಥ. ತಾವರೆಯ ಎಸಳು ಏನನ್ನೂ ಅಂಟಿಸಿಕೊಳ್ಳುವುದಿಲ್ಲ; ಅದೇ ರೀತಿ ಏನನ್ನೂ ಅಂಟಿಸಿಕೊಳ್ಳದ ನಿರ್ಲಿಪ್ತ ಭಗವಂತ ಪದ್ಮನಿಭೇಕ್ಷಣಃ

Vishnu Sahasranama 343

ವಿಷ್ಣು ಸಹಸ್ರನಾಮ: ಅನುಕೂಲಃ......
343) ಅನುಕೂಲಃ
ಭಗವಂತ ಎಂದೂ ಯಾರಿಗೂ ಪ್ರತಿಕೂಲ ಅಲ್ಲ. ನಾವು ಕೆಲವೊಮ್ಮೆ ಹೇಳುವುದಿದೆ "ಜೀವನದಲ್ಲಿ ನಾನು ಎಂದೂ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ, ಆದರೆ ಭಗವಂತ ನನಗೆ ಇಂತಹ ಕಷ್ಟ ಕೊಟ್ಟ; ಅವನು ಅನುಗ್ರಹಿಸಲಿಲ್ಲ; ಆತನನ್ನು ಪೂಜಿಸುವುದು ವ್ಯರ್ಥ.." ಇತ್ಯಾದಿ. ಆದರೆ ನಮಗೆ ಪ್ರತಿಕೂಲ ದೇವರಲ್ಲ, ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ! ವೇದದಲ್ಲಿ ಭಗವಂತನನ್ನು "ಅಗ್ನಿಮೀಳೇ ಪುರೋಹಿತಂ" ಎನ್ನುತ್ತಾರೆ. ಇಲ್ಲಿ ಪುರೋಹಿತಂ ಎಂದರೆ ಮೊದಲೇ ನಮ್ಮ ಹಿತದ ದಾರಿಯನ್ನು ತಿಳಿದು, ಅದಕ್ಕೆ ತಕ್ಕಂತೆ ನಮ್ಮನ್ನು ನಡೆಸುವ ಶಕ್ತಿ. ಭಗವಂತನಿಗೆ ಯಾರಮೇಲೂ ದ್ವೇಷವಿಲ್ಲ,ಅವರವರ ಜೀವ ಸ್ವರೂಪಕ್ಕೆ ಸಂಬಂಧಪಟ್ಟ ಯೋಗ್ಯತೆ ಏನಿದೆ ಅದಕ್ಕೆ ತಕ್ಕಂತೆ ಕ್ರಿಯೆ ಏನಾಗುತ್ತದೋ ಅದನ್ನು ಮಾಡಿಸುತ್ತಾನೆ. ಎಷ್ಟೋ ಸಲ ನಮಗೆ ಜೀವನದಲ್ಲಿ ಕಷ್ಟಬಂದಾಗ, ಹಿಡಿದ ಕಾರ್ಯ ವಿಫಲವಾದಾಗ, "ಭಗವಂತ ನಮಗೆ ಕೆಟ್ಟದ್ದನ್ನು ಮಾಡಿದ" ಎಂದುಕೊಳ್ಳುತ್ತೇವೆ. ಆದರೆ ನಮ್ಮ ಕಷ್ಟದ ಹಿಂದೆ ನಮ್ಮ ಉದ್ದಾರದ ಬೀಜವಿರುತ್ತದೆ ಎನ್ನುವ ವಿಷಯ ನಮಗೆ ತಿಳಿದಿರುವುದಿಲ್ಲ. ಶಾಲೆಯಲ್ಲಿ ಅದ್ಯಾಪಕರು ವಿದ್ಯಾರ್ಥಿಗೆ ಕೊಡುವ ಶಿಕ್ಷೆ, ತಂದೆ ತಾಯಿ ಮಗುವಿಗೆ ಕೊಡುವ ಶಿಕ್ಷೆ- ಮಗುವಿನ ಉದ್ದಾರಕ್ಕೆ ಹೊರತು ಇನ್ಯಾವುದೋ ದ್ವೇಷದಿಂದಲ್ಲ. ಭಗವಂತ ಕೊಡುವ ಕಷ್ಟದಲ್ಲಿ ನಮ್ಮನ್ನು ತಿದ್ದುವ ಕಾರುಣ್ಯವಿದೆ ಹಾಗು ನಮ್ಮ ಉದ್ದಾರದ ರಹಸ್ಯ ಅಡಗಿದೆ. ಅವನು ಎಂದೂ ಪ್ರತಿಕೂಲ ಅಲ್ಲ, ಆತ ಎಂದೆಂದೂ ಎಲ್ಲರಿಗೂ ಅನುಕೂಲ.

Vishnu Sahasranama 340-342


ವಿಷ್ಣು ಸಹಸ್ರನಾಮ: ಶೂರಃ ಶೌರಿರ್ಜನೇಶ್ವರಃ
340) ಶೂರಃ

ಈ ಜಗತ್ತಿನಲ್ಲಿ ಯಾರಲ್ಲಿ ಏನೇನು ಪರಾಕ್ರಮವಿದೆ, ಪೌರುಷವಿದೆ, ಅದೆಲ್ಲವೂ ಭಗವಂತನ ಕೊಡುಗೆ. ನಿಜವಾದ ಶೂರ ಭಗವಂತ. ಒಂದು ಶಕ್ತಿಯಾಗಿ ಭಗವಂತ ನಮ್ಮೊಳಗೆ ತುಂಬಿದರೆ ಮಾತ್ರ ಶತ್ರುಗಳನ್ನು ಗೆದೆಯುವ ಸಾಮರ್ಥ್ಯ ನಮಗೆ ಬರುತ್ತದೆ. 'ಶೂ' ಎಂದರೆ ಆನಂದವುಳ್ಳವರು ಅಥವಾ ಮುಕ್ತರು. ಮುಕ್ತರನ್ನು ಸ್ವೀಕರಿಸಿ ತನ್ನ ಬಳಿಯಲ್ಲಿರಿಕೊಂಡು ನಿತ್ಯಾನಂದವನ್ನು ಕೊಡುವ ಭಗವಂತ ಶೂರಃ.
341) ಶೌರಿಃ
ವಾಸುದೇವನ ತಂದೆ ಶೂರಸೇನ; ಈ ವಂಶದಲ್ಲಿ ಅವತರಿಸಿದ ಭಗವಂತನನ್ನು ಶೌರಿ ಎನ್ನುತ್ತಾರೆ. ಶೌರಿ ಎಂದರೆ ಶೂರರಲ್ಲಿ ಇರುವವನು. ಗೀತೆಯಲ್ಲಿ ಹೇಳುವಂತೆ:
ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾವಗಚ್ಛ ತ್ವಂ ಮಮ ತೆಜೋಂಶಸಂಭವಂಮ್ (ಅ-೧೦, ಶ್ಲೋ-೪೧)
"ಏಲ್ಲಿ ಯಾರಲ್ಲಿ ವಿಶಿಷ್ಟ ಶಕ್ತಿಯಿದೆ ಆ ಶಕ್ತಿಯಲ್ಲಿ ನಾನೇ ಅಡಗಿದ್ದೇನೆ ; ನನ್ನ ತೇಜಸ್ಸಿನ ಕಿಡಿ ಆತನ ಶೌರ್ಯವಾಗಿ ಮೂಡಿಬರುತ್ತದೆ" ಎಂಬ ಕೃಷ್ಣನ ನುಡಿ ಆತನ ಈ ನಾಮವನ್ನು ನೆನಪಿಸುತ್ತದೆ. ಪುರಾಣದಲ್ಲಿ ಕಾಣುವ ಪ್ರತಿಯೊಬ್ಬ ಶೂರರ ಶೌರ್ಯಕ್ಕೆ ಮೂಲ ಕಾರಣ ಅವರೊಳಗೆ ಕುಳಿತ 'ಶೌರಿ' ನಾಮಕ ಭಗವಂತನ ವಿಭೂತಿ.
342) ಜನೇಶ್ವರಃ
ಭಗವಂತ ಬರೀ ಶೂರರಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿ ಜನಿಸುವ ಎಲ್ಲಾ ಜೀವಜಾತದೊಳಗೆ ತುಂಬಿರುವ ಈಶ್ವರ(ನಿಯಾಮಕ ಶಕ್ತಿ). ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ವಸ್ತುವಿನೊಳಗೆ ಭಗವಂತ ನಿಯಾಮಕ ಶಕ್ತಿಯಾಗಿ ತುಂಬಿದ್ದಾನೆ. ಈ ಜಗತ್ತಿನಲ್ಲಿ ಹುಟ್ಟುವ ಒಂದು ಹುಲ್ಲು ಕಡ್ಡಿ ಕೂಡಾ ವ್ಯರ್ಥವಲ್ಲ, ಅದರಲ್ಲಿ ಭಗವಂತನ ವಿಭೂತಿಯಾದ ವಿಶಿಷ್ಟ ಶಕ್ತಿ ಅಡಗಿರುತ್ತದೆ.
ಉದಾಹರಣೆಗೆ :
(೧)ದರ್ಬೆ:-ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೇಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ಇಡುತ್ತಾರೆ.
(೨)ಅಶ್ವತ್ತಮರ:-ಮರಗಳಲ್ಲಿ ಅತ್ಯಂತ ಹೆಚ್ಚು ಆಮ್ಲಜನಕ(Oxygen) ಕೊಡುವ ವೃಕ್ಷ ಅಶ್ವತ್ತ. ಇದಕ್ಕಾಗಿ ಈ ಮರವನ್ನು ಸುತ್ತುವುದರಿಂದ ಸ್ತ್ರೀಯರ ಗರ್ಭಕೋಶ ಸ್ವಚ್ಚವಾಗಿ ತಾಯ್ತನದ ಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ ಹಾಗು ಇದು ನಿಜ.
(೩)ಮುಟ್ಟಿದರೆ ಮುನಿ ಗಿಡ (Touch me not):- ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.
ಹೀಗೆ ಈ ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ ನಿಯಾಮಕ ಶಕ್ತಿ ಭಗವಂತ ಜನೇಶ್ವರಃ.

Sunday, September 12, 2010

Vishnu sahasranama 337-339

ವಿಷ್ಣು ಸಹಸ್ರನಾಮ: ಅಶೋಕಸ್ತಾರಣಸ್ತಾರಃ....
337) ಅಶೋಕಃ

ಅ+ಶೋಕ; ಅಂದರೆ ದುಃಖವಿಲ್ಲದವನು ಹಾಗೂ ದುಃಖವಿಲ್ಲದಂತೆ ಮಾಡುವವನು. ಭಗವಂತನಿಗೆ ಸೃಷ್ಟಿಯಲ್ಲಾಗಲಿ-ಸಂಹಾರದಲ್ಲಾಗಲಿ ಹುಟ್ಟಿನಲ್ಲಾಗಲಿ-ಸಾವಿನಲ್ಲಾಗಲಿ ಯಾವುದೇ ರೀತಿಯ ಮೋಹವಿಲ್ಲ; ಆತ ಎಲ್ಲಾ ಮೋಹ ಪಾಶಗಳಿಂದ ಮುಕ್ತನಾದ ವಿರಕ್ತ. ರೈತ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸಿ ಕೊನೆಗೆ ಹೇಗೆ ಕತ್ತರಿಸುತ್ತನೋ ಅದೇ ರೀತಿ ಭಗವಂತನ ಸೃಷ್ಟಿ ಹಾಗೂ ಸಂಹಾರ ಕ್ರಿಯೆ. ಇಲ್ಲಿ ದುಃಖಕ್ಕೆ ಎಡೆಯಿಲ್ಲ. ಒಂದು ಪುಟ್ಟ ಮಗು ಹುಟ್ಟು ಹಾಗು ಸಾವನ್ನು ಹೇಗೆ ಸಮನಾಗಿ ಕಾಣುತ್ತದೋ ಹಾಗೆ. ಈ ರೀತಿ ಶೋಕ ರಹಿತನಾದ ಭಗವಂತ ಅಶೋಕಃ.
338) ತಾರಣಃ
ಭಗವಂತ ಈ ಸಂಸಾರದ ಬಂಧನದ ಕಡಲೆಂಬ ತಾಪತ್ರಯಗಳಿಂದ ನಮ್ಮನ್ನು ಪಾರುಮಾಡುವ ತಾರಣಃ.
339) ತಾರಃ
ಸರ್ವ ತಾರಕವಾದ; ಬ್ರಹ್ಮಾದಿ ದೇವತೆಗಳು ತಮ್ಮ ಉದ್ದಾರಕ್ಕೊಸ್ಕರ ಜಪಿಸುವ 'ಓಂಕಾರ' ಪ್ರತಿಪಾದ್ಯನಾದ ಭಗವಂತ ತಾರಃ.

Saturday, September 11, 2010

Vishnu sahasranama 334-336


ವಿಷ್ಣು ಸಹಸ್ರನಾಮ: ಬೃಹದ್ಭಾನುರಾದಿದೇವಃ ಪುರಂದರಃ

334) ಬೃಹದ್ಭಾನುಃ
ಈ ಜಗತ್ತಿನಲ್ಲಿ ಇರುವ ಎಲ್ಲಾ ಬೃಹತ್ತಾದ ಬೆಳಕುಗಳನ್ನು ಬೆಳಗಿಸುವವ ಬೃಹದ್ಭಾನು. ಹೊರಪ್ರಪಂಚದಲ್ಲಿ ಹಾಗು ನಮ್ಮೊಳಗೆ ಐದು ಪ್ರಮುಖವಾದ ಬೆಳಕುಗಳಿವೆ. (೧) ಮನುಷ್ಯನ ಕಣ್ಣಿಗೆ ಗೋಚರವಾಗುವ ಅತೀ ದೊಡ್ಡ ಬೆಳಕು ಸೂರ್ಯ; ಆತನೇ ನಮ್ಮ ಕಣ್ಣಿನ ಅಭಿಮಾನಿ ದೇವತೆ. (೨) ತಂಪಾದ ಆಹ್ಲಾದಕರ ಬೆಳದಿಂಗಳನ್ನೀಯುವ ಹಾಗು ನಮ್ಮ ಕಿವಿಯ ಅಭಿಮಾನಿ ದೇವತೆ ಚಂದ್ರ. (೩) ಭೂಮಿಯಲ್ಲಿರುವ ಅತ್ಯಂತ ಮಹತ್ತಾದ ಬೆಳಕು ಹಾಗು ನಮ್ಮ ಬಾಯಿಯ ಅಭಿಮಾನಿ ದೇವತೆ ಬೆಂಕಿ. (೪)ಚಂದ್ರನ ಸುತ್ತಲೂ ಇರುವ ನಕ್ಷತ್ರಗಳು; ನಾವು ನಮ್ಮ ಕಣ್ಣಿನಿಂದ ನೋಡುವ ಮುಖೇನ, ಕಿವಿಯಿಂದ ಕೇಳುವ ಮುಖೇನ ಹಾಗೂ ಬಾಯಿಯಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳುವ ಮುಖೇನ, ನಮ್ಮೊಳಗೆ ತಿಳುವಳಿಕೆಯ ನಕ್ಷತ್ರಗಳು ಬೆಳಗುತ್ತವೆ. ಹೀಗೆ ಜ್ಞಾನ ವೃದ್ದಿಯಾಗಿ ನಮ್ಮಲ್ಲಿ ಅತ್ಯಂತ ಪ್ರಮುಖವಾದ ಐದನೇ ಬೆಳಕು ಚಿಮ್ಮುತ್ತದೆ. (೫) ಈ ಐದನೇ ಅತ್ಯಂತ ಪ್ರಮುಖ ಬೆಳಕು 'ಮಿಂಚು' ಅದೇ ನಮ್ಮೊಳಗಿನ ಸತ್ಯದ ಸ್ಪೂರಣ. ಹೀಗೆ ನಮ್ಮಲ್ಲಿನ ಕಣ್ಣು, ಕಿವಿ, ಬಾಯಿ,ಮನೋವೃತ್ತಿ ಮತ್ತು ಅಂತಃಸ್ಪೂರಣ ಹಾಗು ಹೊರಗಿನ ಸೂರ್ಯ, ಚಂದ್ರ, ಅಗ್ನಿ ನಕ್ಷತ್ರ ಮತ್ತು ಮಿಂಚನ್ನು ಬೆಳಗುವ ಭಗವಂತ ಬೃಹದ್ಭಾನುಃ.
335) ಆದಿದೇವಃ
ಸೃಷ್ಟಿಯ ಪೂರ್ವದಲ್ಲಿದ್ದವ, ಆದಿತ್ಯನೊಳಗೆ ಅಂತಃರ್ಯಮಿಯಾಗಿದ್ದು ಬೆಳಗುವ ಹಾಗು ಎಲ್ಲಕ್ಕೂ ಮೂಲಕಾರಣನಾದ ಭಗವಂತ ಆದಿದೇವಃ.
336) ಪುರಂದರಃ
ಚತುರ್ಮುಖನ ಪುರ ಈ ಬ್ರಹ್ಮಾಂಡ, ನಮ್ಮ ಪುರ ಈ ನಮ್ಮ ದೇಹ. ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡವನ್ನು ಬೇಧಿಸುವವನು; ನಮ್ಮ ಗತಿಗನುಗುಣವಾಗಿ ನಮ್ಮ ಶರೀರವೆಂಬ ಪುರವನ್ನು ಬೇಧಿಸುವವ; ಮೋಕ್ಷ ಯೋಗ್ಯರ ಸೂಕ್ಷ್ಮ ಶರೀರವನ್ನು ಭೇಧಿಸಿ ನಮ್ಮ ಸ್ವರೂಪ ರೂಪಿ ಆತ್ಮವನ್ನು ಧಾರಣೆ ಮಾಡುವವ; ಶತ್ರುಗಳ ಪುರವನ್ನು ಪುಡಿಗಟ್ಟುವ ಭಗವಂತ ಪುರಂದರಃ.

Friday, September 10, 2010

Vishnu sahasranama 333

ವಿಷ್ಣು ಸಹಸ್ರನಾಮ: ವಾಸುದೇವೋ......
333) ವಾಸುದೇವಃ

ಭಗವಂತನ ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ (333, 699 ಮತ್ತು 713). ಈ ನಾಮವನ್ನು ಈ ರೀತಿ ಒಡೆದು ಅರ್ಥೈಸಬಹುದು. ವ+ಅಸು+ದೇವ. ಹಿಂದೆ ಹೇಳಿದಂತೆ 'ವ' ಅಂದರೆ ಜ್ಞಾನ; 'ಅಸು' ಎಂದರೆ ಪ್ರೇರಕ; ದೇವ ಎಂದರೆ ಆಟ. ಜ್ಞಾನ ಸ್ವರೂಪನಾದ ಭಗವಂತನಿಗೆ ಇಡೀ ವಿಶ್ವವನ್ನು ನಿಯಂತ್ರಿಸುವುದು ಒಂದು ಕ್ರೀಡೆ!. ಇಡೀ ವಿಶ್ವದ ಸೃಷ್ಟಿ-ಸ್ಥಿತಿ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷ ಎಲ್ಲವೂ ಅವನಿಗೆ ಲೀಲಾಮಾತ್ರ. ಇದೇ ನಾಮವನ್ನು ಇನ್ನೊಂದು ರೀತಿಯಲ್ಲಿ ನೋಡಿದರೆ ವಾ+ಸೂ+ದೇ+ಅವ. ಇಲ್ಲಿ 'ವಾ' ಎಂದರೆ ಎಲ್ಲೆಡೆ ತುಂಬಿರುವವನು (ಸರ್ವಗತ-ಸರ್ವಜ್ಞ); 'ಸೂ' ಅಥವಾ 'ಸೂತೇ' ಎಂದರೆ ಎಲ್ಲವನ್ನೂ ಹೆತ್ತವನು (ಸರ್ವ ಸೃಷ್ಟಿಕರ್ತ); 'ದೇ' ಎಂದರೆ ಎಲ್ಲವನ್ನೂ ಕೊಡುವವನು(ಸರ್ವ ಧಾತಾ); 'ಅವ' ಎಂದರೆ ಎಲ್ಲರ ರಕ್ಷಕ (ಸರ್ವ ರಕ್ಷಕ).
ವಸುದೇವ ಎಂದರೆ 'ಬೆಳಗುವ ಸಂಪತ್ತು'; ಸಾತ್ವಿಕ ಮನಸ್ಸನ್ನು ಕೊಡುವ ಬೆಳಕು. ಕೇವಲ ಶುದ್ಧವಾದ ಸಾತ್ವಿಕ ಮನಸ್ಸಿಗೆ ಅಭಿವ್ಯಕ್ತವಾಗುವವ ವಾಸುದೇವ. ಅಷ್ಟವಸುಗಳಲ್ಲಿ ಪ್ರಧಾನನಾದ ಅಗ್ನಿ ಪ್ರತೀಕದಲ್ಲಿ ಉಪಾಸ್ಯನಾದವ ಹಾಗೂ ಎಲ್ಲೆಡೆ ನೆಲೆಸಿ ಎಲ್ಲವನ್ನೂ ಆವರಿಸಿ ವಿಹರಿಸುವ ಭಗವಂತ ವಾಸುದೇವಃ.

Thursday, September 9, 2010

Vishnu sahasranama 331-332


ವಿಷ್ಣು ಸಹಸ್ರನಾಮ: ವರದೋ ವಾಯುವಾಹನಃ

331) ವರದಃ
ಭಗವಂತ ವರವನ್ನು ಕೊಡುವವನು ಹಾಗೂ ಅಯೋಗ್ಯರಿಗೆ ಸಿಕ್ಕ ವರವನ್ನು ನಾಶ ಮಾಡುವವನು. ಆತ ತನ್ನ ಯೋಗ್ಯ ಭಕ್ತರಿಗೆ ಅವರು ಬಯಸಿದ ವರವನ್ನು ಕೊಡುತ್ತಾನೆ, ಹಾಗೆಯೇ ಹಿರಣ್ಯಕಶಿಪುವಂತಹ ದುಷ್ಟರು ತಮಗೆ ಸಿಕ್ಕ ವರದ ದುರುಪಯೋಗ ಮಾಡಿದಾಗ ಅವರನ್ನು ನಾಶ ಮಾಡಿ ಭಕ್ತಕೂಟಿಯ ರಕ್ಷಣೆ ಮಾಡುತ್ತಾನೆ. ಹೀಗೆ ಭಕ್ತರು ಬಯಸಿದ್ದನ್ನೀಯುವ ಭಗವಂತ ವರದಃ.
332) ವಾಯುವಾಹನಃ
ಪ್ರಾಣ ತತ್ವದ ತೇರನ್ನೇರಿದವನು ಹಾಗೂ ವಾಯುವಿನ ಸಾರಥ್ಯದಲ್ಲಿ ದೇಹದ ತೇರನ್ನೇರಿದ ಭಗವಂತ ವಾಯುವಾಹನಃ. ವಾಯುವನ್ನು ನಮ್ಮೊಳಗಿರಿಸಿ ನಮಗೆ ಬದುಕನ್ನು ಕೊಟ್ಟ ಭಗವಂತ ಸ್ವಯಂ ವಾಯುವಾಹನ. "ವಾಯು" ಎಂದರೆ ಇಡೀ ಜಗತ್ತನ್ನು ಹೆಣೆಯುವ ಶಕ್ತಿ. ಪಂಚಭೂತಗಳನ್ನು ನಿರ್ಧಿಷ್ಟವಾಗಿ ಹೆಣೆದು ನಮಗೆ ಈ ದೇಹವನ್ನು ಭಗವಂತ ಕರುಣಿಸಿದ್ದಾನೆ; ಅದೇ ರೀತಿ ಈ ಬ್ರಹ್ಮಾಂಡವನ್ನು ನಿರ್ದಿಷ್ಟವಾಗಿ ಹೆಣೆದು ಜೋಡಿಸಿಟ್ಟಿದ್ದಾನೆ. ಜ್ಞಾನದಿಂದ ತುಂಬಿದ ಶಕ್ತಿಯಾಗಿ ಇಡೀ ಜಗತ್ತನ್ನು ಧರಿಸಿದ ಭಗವಂತನಿಗೆ ವಾಯುವಾಹನವೆಂಬುದು ಅನ್ವರ್ಥನಾಮ.

Wednesday, September 8, 2010

Vishnu sahasranama 328-330


ವಿಷ್ಣು ಸಹಸ್ರನಾಮ: ಸ್ಕಂದಃ ಸ್ಕಂದಧರೋ ಧುರ್ಯೋ.....
328) ಸ್ಕಂದಃ

ಶಿವ ಪುತ್ರನಾದ ಕಾರ್ತಿಕೇಯ ,ಸುಬ್ರಹ್ಮಣ್ಯ ಅಥವಾ ಷಣ್ಮುಖನನ್ನು ಸ್ಕಂದ ಎನ್ನುತ್ತಾರೆ; ಇದು ರೂಢಾರ್ಥ. ಸ್ಕಂದ ಎಂದರೆ ಚಲಿಸುವುದು, ಹೊರಹೊಮ್ಮುವುದು ಹಾಗೂ ಚಿಮ್ಮುವುದು ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ.ಯಾರ ನಾಭಿಯಿಂದ ಈ ಜಗತ್ತು ಹೊರಹೊಮ್ಮಿತೋ ಅವನು ಸ್ಕಂದಃ. ಈ ನಾಮವನ್ನು ಒಡೆದು ನೋಡಿದರೆ ಸ+ಕ+ದ; ಈ ಹಿಂದೆ ಹೇಳಿದಂತೆ 'ಸ' ಎಂದರೆ ಸಾರ ಅಥವಾ ಜ್ಞಾನ; 'ಕ' ಅಥವಾ 'ಕಂ' ಎಂದರೆ ಆನಂದ; 'ದ' ಎಂದರೆ ಕೊಡುವವನು ಅಥವಾ ಕೊಡದೇ ಇರುವವನು. ಆದ್ದರಿಂದ ಸ್ಕಂದಃ ಎಂದರೆ ಸಾತ್ವಿಕರಿಗೆ ಸದಾ ಜ್ಞಾನಾನಂದವನ್ನು ಕೊಡುವವನು ಹಾಗೂ ದುಷ್ಟರನ್ನು ಜ್ಞಾನಾನಂದದಿಂದ ದೂರವಿರಿಸುವವನು.
329) ಸ್ಕಂದಧರಃ
ಸ್ಕಂದಧರಃ ಎಂದರೆ ಸ್ಕಂದನನ್ನು ಧರಿಸಿದವನು. ಸ್ಕಂದ ಶಿವನಲ್ಲಿ 'ಷಣ್ಮುಖನಾಗಿ', ಚತುರ್ಮುಖನಲ್ಲಿ 'ಸನತ್ ಕುಮಾರನಾಗಿ' ಹಾಗೂ ವಿಷ್ಣುವಿನಲ್ಲಿ 'ಕಾಮನಾಗಿ' ಹುಟ್ಟದ. ಹೀಗೆ ಸ್ಕಂದನನ್ನು ಧರಿಸಿ ಆತನನ್ನು ಮಗನಾಗಿ ಪಡೆದ ಭಗವಂತ ಸ್ಕಂದಧರಃ. ಮೇಲೆ ಹೇಳಿದಂತೆ ಸ್ಕಂದ ಎಂದರೆ ಜ್ಞಾನಾನಂದವನ್ನು ಕೊಡುವವರು. ನಮಗೆ ಜ್ಞಾನಾನಂದದ ಅನುಭವವನ್ನು ಕೊಡುವವರು ನಮ್ಮ ಆತ್ಮಾಭಿಮಾನಿ ದೇವತೆಗಳಾದ ಚತುರ್ಮುಖ ಹಾಗೂ ಪ್ರಾಣ. ಈ ಜೀವಾಭಿಮಾನಿ ದೇವತೆಗಳನ್ನು ಧರಿಸಿದ ಭಗವಂತ ಸ್ಕಂದಧರಃ.
330) ಧುರ್ಯಃ
ಧುರ್ಯ ಎಂದರೆ 'ಮುಂದಾಳು'. ಈ ಪ್ರಪಂಚದಲ್ಲಿನ ಪ್ರತಿಯೊಂದು ಪ್ರಾಣಿಸಂಕುಲದಲ್ಲಿ ಒಬ್ಬ ಮುಂದಾಳುವನ್ನು ಕಾಣುತ್ತೇವೆ. ಆನೆಗಳ ಗುಂಪಿನಲ್ಲಿ ಒಂದು ಆನೆ ಮುಂದಾಳಾಗಿರುತ್ತದೆ ಹಾಗೂ ಇತರ ಆನೆಗಳು ಅದನ್ನು ಅನುಸರಿಸುತ್ತವೆ. ಮಂಗಗಳ ಗುಂಪನ್ನು ಒಂದು ಮುಂದಾಳು ಮಂಗ ಮುನ್ನೆಡೆಸುತ್ತದೆ ಹಾಗೂ ಇತರೆ ಮಂಗಗಳು ಅದನ್ನು ಅನುಸರಿಸುತ್ತವೆ. ವೈರಿಯನ್ನು ಸದೆಬಡಿಯುವಾಗ 'ಮುಂದಾಳು' ಎದೆಯೊಡ್ಡಿ ಹೋರಾಡಿದರೆ ಇತರರು ಆತನ ಅಪ್ಪಣೆಯಂತೆ ಹೋರಾಟ ಮಾಡುತ್ತಾರೆ; ಮಹಾಭಾರತ ಯುದ್ಧದಲ್ಲಿ ಭೀಮಾರ್ಜುನರು 'ಮುಂದಾಳಾಗಿದ್ದು' ಹೋರಾಟ ಮಾಡಿ ಧರ್ಮರಾಯನಿಗೆ ಜಯವನ್ನು ತಂದುಕೊಡುತ್ತಾರೆ; ಅರ್ಜುನನ ರಥದ 'ಧುರ್ಯ' ಸ್ವಯಂ ಶ್ರೀಕೃಷ್ಣನಾಗಿದ್ದ. ಹೀಗೆ ಭಗವಂತ ಪ್ರತಿಯೊಂದು ಮುಂದಾಳುವಿನಲ್ಲಿ 'ಧುರ್ಯ' ರೂಪನಾಗಿ ಸನ್ನಿಹಿತನಾಗಿರುತ್ತಾನೆ. ಪ್ರತಿಯೊಂದು ಮಹತ್ಕಾರ್ಯವನ್ನು ಮುಂದಾಳಾಗಿ ಮಾಡುವ ಹಾಗೂ ಮಾಡಿಸುವ ಭಗವಂತ ಧುರ್ಯಃ

Tuesday, September 7, 2010

Vishnu sahasranama 326-327

ವಿಷ್ಣು ಸಹಸ್ರನಾಮ: ಅಪ್ರಮತ್ತಃ ಪ್ರತಿಷ್ಠಿತಃ
326) ಅಪ್ರಮತ್ತಃ

ಅಪ್ರಮತ್ತಃ ಎಂದರೆ ಎಂದೂ ಎಚ್ಚರ ತಪ್ಪದವನು. ಭಗವಂತ ಎಂದೂ ಎಚ್ಚರ ತಪ್ಪುವುದಿಲ್ಲ, ಎಂದೂ ಪ್ರಮಾದ ಮಾಡುವುದಿಲ್ಲ. ಸದಾ ನಮ್ಮನ್ನು ಪ್ರಮಾದದಿಂದ ಪಾರುಮಾಡುವ ಭಗವಂತ ಗುಣಾತೀತ ಹಾಗೂ ಆನಂದಮಯ.
327) ಪ್ರತಿಷ್ಠಿತಃ

ಭಗವಂತ ತನ್ನಲ್ಲೇ ತಾನು ನೆಲೆನಿಂತವನು; ಎಲ್ಲವೂ ಆತನಲ್ಲಿ ಪ್ರತಿಷ್ಟಿತ. ಪ್ರತಿಯೊಂದು ಜೀವರೊಳಗೂ ಭಗವಂತ ಬಿಂಬ ರೂಪದಲ್ಲಿ ಪ್ರತಿಷ್ಟಿತ. ನಮ್ಮೊಳಗೆ ನಮ್ಮ ಅತರ್ಯಾಮಿಯಾಗಿದ್ದು, ನಮ್ಮ ಸ್ವರೂಪದೊಳಗೆ ನಮ್ಮ ಬಿಂಬರೂಪನಾಗಿ ಅತ್ಯಂತ ಸಮೀಪದಲ್ಲಿರುವವನು ಆತ. ಹೀಗೆ ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ ಪ್ರತಿಷ್ಟಿತನಾಗಿರುವ ಭಗವಂತ ಪ್ರತಿಷ್ಠಿತಃ

Monday, September 6, 2010

Vishnu Sahasranama 324-325


ಅಪಾಂ ನಿಧಿರಧಿಷ್ಠಾನಮಪ್ರಮತ್ತಃ.......
324) ಅಪಾಂನಿಧಿಃ

ಅಪಾಂನಿಧಿಃ ಎಂದರೆ "ನೀರಿನ ನೆಲೆ". ನೀರಿನ ನೆಲೆಯಾದ ಕಡಲಿನಲ್ಲಿ, ಕಡಲಿನ ದೇವತೆಯಾದ ವರುಣನಲ್ಲಿ, ಸಮಸ್ತ ಜಲರಾಶಿಯಲ್ಲಿ ಸನ್ನಿಹಿತನಾದ ಭಗವಂತ ಅಪಾಂನಿಧಿಃ. 'ಆಪ್' ಎಂದರೆ ಪಾನ ಮಾಡುವ ವಸ್ತು. ನಾವು ಬದುಕುವುದಕ್ಕೊಸ್ಕರ ಪಾನ ಮಾಡುವ ವಸ್ತು 'ನೀರು'. ಜ್ಞಾನಿಗಳು ಸದಾ ಪಾನ(ಶ್ರವಣ) ಮಾಡುವ ವಸ್ತು ಭಗವಂತನ 'ಅನಂತ ಗುಣ'. ಅನಂತ ಗುಣಗಳ ನೆಲೆ ಭಗವಂತನೋಬ್ಬನೆ. ಇನ್ನು ನಾವು ಮಾಡುವ ಸತ್ಕರ್ಮ ಕೊನೆಗೆ ಸೇರುವುದು ಭಗವಂತನನ್ನು. ಇದಕ್ಕಾಗಿ ಪ್ರತೀ ಪೂಜೆಯ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎನ್ನುತ್ತೇವೆ. ಆದ್ದರಿಂದ ಸರ್ವ ಸತ್ಕರ್ಮಗಳ ನೆಲೆ ಭಗವಂತ. ಹೀಗೆ ಕರ್ಮಗಳ, ಗುಣಗಳ, ದೇವತೆಗಳ ಹಾಗೂ ನೀರಿನ ನೆಲೆಯಾದ ಭಗವಂತ ಅಪಾಂನಿಧಿಃ.
325) ಅಧಿಷ್ಟಾನಮ್
ಅಧಿಷ್ಟಾನಮ್ ಎಂದರೆ ಎಲ್ಲವುದಕ್ಕೂ ಆಧಾರ. ಪ್ರತಿಯೊಂದು ವಸ್ತುವಿನ ಮೂಲಾಧಾರ ಭಗವಂತ. ಭೂಮಿಯನ್ನು "ಶೇಷ" ಹೊತ್ತಿದ್ದಾನೆ. ಶೇಷನನ್ನು "ವಾಯು" ಹೊತ್ತಿದ್ದಾನೆ, ವಾಯುವಿಗೆ ಪೂರ್ಣಾಧಾರ ಭಗವಂತ. ಹೀಗೆ ಎಲ್ಲ ವಿಶ್ವಕ್ಕು ಆಧಾರವಾದ, ಎಲ್ಲಕ್ಕೂ ಅಧಿಕವಾದ ಸ್ಥಾನದಲ್ಲಿರುವ ಭಗವಂತ ಅಧಿಷ್ಟಾನಮ್.

Sunday, September 5, 2010

Vishnu sahasranama 321-323


ವಿಷ್ಣು ಸಹಸ್ರನಾಮ: ಪ್ರಾಣಃ ಪ್ರಾಣದೋ ವಾಸವಾನುಜಃ
321) ಪ್ರಾಣಃ

ಭಗವಂತ 'ಸರ್ವಪ್ರೇರಕ' ಶಕ್ತಿ. ಎಲ್ಲರ ಒಳಗಿದ್ದು ಎಲ್ಲರನ್ನೂ ಪ್ರೇರಣೆಮಾಡುವ, ಎಲ್ಲ ಚಲನೆಯನ್ನು ನಿಯಂತ್ರಿಸುವ ಶಕ್ತಿ. ಈ ಜಗತ್ತಿಗೆ ಮೊದಲು ಚಲನೆಯನ್ನು ಕೊಟ್ಟವ ಭಗವಂತ. ಈ ಹಿಂದೆ ಹೇಳಿದಂತೆ 'ಣ' ಎಂದರೆ ಭಲ ಹಾಗೂ ಆನಂದ ಎನ್ನುವ ಅರ್ಥವನ್ನು ಕೊಡುತ್ತದೆ. ಪರಿಪೂರ್ಣವಾದ ಆನಂದ ಹಾಗೂ ಭಲ ಸ್ವರೂಪ ಭಗವಂತ ಪ್ರಾಣಃ.
322) ಪ್ರಾಣದಃ
ಪ್ರಾಣದಃ ಎಂದರೆ ಪ್ರಾಣವನ್ನು ಕೊಡುವವ. ಜಗತ್ತಿನ ನಿಯಾಮಕ ಶಕ್ತಿಯಾದ ಪ್ರಾಣನನ್ನು ನಮಗೆ ಕೊಟ್ಟವ. ಪ್ರಾಣನಿಗೆ ಉಪನಿಷತ್ತಿನಲ್ಲಿ 'ಪ್ರಾತಃ' ಎಂದಿದ್ದಾರೆ. ಅಂದರೆ ಭಗವಂತನ ಗುಣವನ್ನು ಬಿತ್ತರಿಸುವ ಶಕ್ತಿ. ಇಂತಹ ಜಗದ್ಗುರುವನ್ನು ಜಗತ್ತಿಗೆ ಕೊಟ್ಟ ಭಗವಂತ ಪ್ರಾಣದಃ.
323) ವಾಸವಾನುಜಃ
ವಾಸವಾನುಜಃ ಎಂದರೆ ಇಂದ್ರನ ತಮ್ಮ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಇಲ್ಲಿ ‘ವಾಸವ’ ಎಂದರೆ ವಸುಗಳ ಸಮುದಾಯ. ವಸುಗಳೆಂದರೆ ಅಷ್ಟವಸುಗಳಲ್ಲ "ದೇವತೆಗಳ ಸಮುದಾಯ". ಬ್ರಹ್ಮಾಂಡದಲ್ಲಿದ್ದು ಬ್ರಹ್ಮಾಂಡವನ್ನು, ಪಿಂಡಾಂಡದಲ್ಲಿದ್ದು ಪಿಂಡಾಂಡವನ್ನು ನಿಯಂತ್ರಿಸುವ ತತ್ವಾಭಿಮಾನಿ ದೇವತೆಗಳ ನಿಯಾಮಕನಾದ ಭಗವಂತ ವಾಸವಃ. ಇಂತಹ ದೇವತೆಗಳು ಪ್ರಾರ್ಥನೆ ಮಾಡಿದಾಗ, ಪ್ರಾರ್ಥನೆಗನುಗುಣವಾಗಿ ಜ್ಞಾನಿಗಳ ಅನುಕೂಲಕ್ಕಾಗಿ ಭೂಮಿಯಲ್ಲಿ ಅವತರಿಸುವ ಭಗವಂತ ವಾಸವಾನುಜಃ.

Friday, September 3, 2010

Vishnusahasranama 320

ವಿಷ್ಣು ಸಹಸ್ರನಾಮ: ಪ್ರಥಿತಃ

320) ಪ್ರಥಿತಃ
ಪ್ರಥಿತಃ ಎಂದರೆ ವಿಖ್ಯಾತನಾದವನು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ:
ಯಾಸ್ಮಾತ್ ಕ್ಷರಮತೀತೋssಹಮಕ್ಷರಾದಪಿ ಚೋತ್ತಮಃ
ಅತೋssಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ (ಅ-೧೫ ಶ್ಲೋ-೧೮)
ಅಂದರೆ "ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು. ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದೇ ಹೆಸರಾಗಿದ್ದೇನೆ". ಹೀಗೆ ಸರ್ವ ಆತ್ಮಗಳಲ್ಲಿ ಶ್ರೇಷ್ಠ ಆತ್ಮ, ಸರ್ವ ವೇದ ವಾಚ್ಯ ಹಾಗೂ ಸರ್ವ ಶಬ್ದ ವಾಚ್ಯ ಭಗವಂತ ಪ್ರಥಿತಃ.

Thursday, September 2, 2010

Vishnu sahasranama 319


ವಿಷ್ಣು ಸಹಸ್ರನಾಮ: ಅಚ್ಯುತಃ...

319) ಅಚ್ಯುತಃ
ಭಗವಂತನ ಈ ನಾಮ ಸಹಸ್ರನಾಮದಲ್ಲಿ ಮೂರು ಭಾರಿ ಪುನರುಕ್ತಿಯಾಗಿದೆ (100,319 ಹಾಗೂ 556). ನಮ್ಮಲ್ಲಿ ಯಾವುದೇ ಮಂತ್ರ, ಜಪ ಪಾರಾಯಣ ಮಾಡಿ ಮುಗಿಸಿದ ಮೇಲೆ ಸ್ವರ-ವರ್ಣದ ಲೋಪದ ಪ್ರಾಯಶ್ಚಿತಕ್ಕಾಗಿ ಹೇಳುವ ಪ್ರಾಯಶ್ಚಿತ ಮಂತ್ರದಲ್ಲಿನ ಮೂರು ನಾಮಗಳಲ್ಲಿ ಈ ನಾಮವೂ ಒಂದು ‘ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ’ ಚ್ಯುತಿ ಇಲ್ಲದ ಅಚ್ಚುತ ನಾಮಕ ಭಗವಂತ ನಮ್ಮ ಸರ್ವಉಚ್ಚಾರ ದೋಷಹರ. ಇಷ್ಟೇ ಅಲ್ಲದೆ ಪುರಾಣದಲ್ಲಿ ವೇದವ್ಯಾಸರು ಹೇಳಿದಂತೆ :
"ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಬೀಶಿತಾಃ ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂವದಾಮ್ಯಹಂ" ಎಂದರೆ ಭಗವಂತನ ಈ ನಾಮೋಚ್ಚಾರಣೆಯಿಂದ ಸರ್ವ ರೋಗಗಳು ಹೆದರಿ ಬಿಟ್ಟೋಡುತ್ತವೆ ಇದು ಸತ್ಯ. ಇದಕ್ಕಾಗಿ ನಮಗೆ ಭಗವಂತನಲ್ಲಿ ಅಗಾಧವಾದ ನಂಬಿಕೆ(Involvement) ಹಾಗು ಸ್ವೀಕರಿಸುವ ಸಾಮರ್ಥ್ಯ(Receiving Power) ಬೇಕು. ಪರಿಪೂರ್ಣನಾದ ಭಗವಂತ ಸರ್ವ ರೋಗಹರ. ಹೀಗೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ ಅಚ್ಯುತಃ.

Wednesday, September 1, 2010

Vishnu Sahasranama 317-318

ವಿಷ್ಣು ಸಹಸ್ರನಾಮ: ವಿಶ್ವಬಾಹುರ್ಮಹೀಧರಃ
317) ವಿಶ್ವಬಾಹುಃ
ಮೇಲ್ನೋಟಕ್ಕೆ ವಿಶ್ವಬಾಹು ಎಂದರೆ ಪರಿಪೂರ್ಣವಾದ ತೋಳು ಉಳ್ಳವನು ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಅನಂತ ಹಾಗು ಪರಿಪೂರ್ಣವಾದ ತೊಳುಗಳುಳ್ಳವನು. ಇಲ್ಲಿ ಅನಂತ ಎಂದರೆ ಪರಿಪೂರ್ಣವಾದ ಸ್ವರೂಪಭೂತವಾದ ತೋಳು. ಭಗವಂತ ಹಾಗು ಅವನ ತೋಳುಗಳು ಭಿನ್ನವಲ್ಲ, ಆತನಿಗೆ ಬೌತಿಕವಾದ ಅಂಗಗಳಿಲ್ಲ. ನಮಗೆ ಬೌತಿಕವಾದ ಎರಡು ಕೈಗಳು; ನಮ್ಮೊಳಗಿರುವ ಸೂಕ್ಷ್ಮ ಶರೀರಕ್ಕೆ ಎರಡು ತೋಳುಗಳು; ಲಿಂಗ ಶರೀರಕ್ಕೆ ಎರಡು ತೋಳುಗಳು ಹಾಗು ನಮ್ಮ ಜೀವ ಸ್ವರೂಪಕ್ಕೆ ಎರಡು ಭುಜಗಳು. ನಮ್ಮ ಬೌತಿಕ ಇಂದ್ರಿಯ ಶಾಶ್ವತವಲ್ಲ ಆದರೆ ಸ್ವರೂಪಭೂತವಾದ ಇಂದ್ರಿಯ ಮೊಕ್ಷದಲ್ಲೂ ನಮ್ಮೊಂದಿಗಿರುತ್ತದೆ. ಭಗವಂತನ ಅನಂತ ಅವಯವಗಳು ಸ್ವರೂಪಭೂತವಾದದ್ದು ಹಾಗು ಪರಿಪೂರ್ಣವಾದದ್ದು. ಇಲ್ಲಿ ವಿಶ್ವ ಬಾಹು ಎಂದರೆ ಇಡೀ ವಿಶ್ವವನ್ನು ರಕ್ಷಣೆ ಮಾಡುವ ತೋಳು. ಪ್ರಾಣದೇವರ ಮುಖೇನ ಇಡೀ ವಿಶ್ವವನ್ನು ಧಾರಣೆ ಮಾಡಿದ ಭಗವಂತ ವಿಶ್ವಬಾಹುಃ.
318) ಮಹೀಧರಃ
'ಮಹೀ' ಎಂದರೆ ಭೂಮಿ. ಭಗವಂತ ಇಡೀ ಜಗತ್ತನ್ನು ಧರಿಸಿರುವುದಷ್ಟೇ ಅಲ್ಲದೆ ಪ್ರತಿಯೊಂದು ವಸ್ತುವಿನೊಳಗಿದ್ದು ಅದನ್ನು ಪ್ರತ್ಯೇಕವಾಗಿ ಧರಿಸಿದ್ದಾನೆ. ಭೂಮಿಯೊಳಗಿದ್ದು ಭೂಮಿಯನ್ನು ಧರಿಸಿರುವ ಭಗವಂತ ಮಹೀಧರಃ. ಗಾಯತ್ರಿಯಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಒಂದು ರೂಪ 'ಮಹೀರೂಪ'. ಗಾಯತ್ರಿಯಲ್ಲಿ ಸಮಸ್ತ ವಾಗ್ಮಯಗಳಿಗೆ ಕಾರಣನಾದ ವಾಕ್ ನಾಮಕ ಭಗವಂತನ ರೂಪ, ಪ್ರಥ್ವಿಯಲ್ಲಿರುವ ಪ್ರಥ್ವಿ ನಾಮಕ ಭಗವಂತನ ರೂಪ, ನಮ್ಮೊಳಗಿರುವ ಬಿಂಬರೂಪಿ ಭಗವಂತನ ರೂಪ ಹಾಗು ಸೂರ್ಯಮಂಡಲದಲ್ಲಿ ಸನ್ನಿಹಿತನಾದ ಭಗವಂತನ ರೂಪವನ್ನು ಸ್ತ್ರೀ ಹಾಗು ಪುರುಷ ರೂಪದಲ್ಲಿ ಉಪಾಸನೆ ಮಾಡುತ್ತಾರೆ. ಹೀಗೆ ಗಾಯತ್ರಿ ಪ್ರತಿಪಾದ್ಯನಾದ, ತನ್ನ ಎದೆ ಹಾಗು ತೊಡೆಯಲ್ಲಿ ಲಕ್ಷ್ಮಿಯನ್ನು ಧರಿಸಿರುವ ಭಗವಂತ ಮಹೀಧರಃ.