Saturday, July 31, 2010

Vishnusahasranama 222-224

ವಿಷ್ಣು ಸಹಸ್ರನಾಮ: ನ್ಯಾಯೋ ನೇತಾ ಸಮೀರಣಃ

222) ನ್ಯಾಯಃ

ನಿ+ಆಯ-ನ್ಯಾಯ. ಆಯವ್ಯಯ ಅನ್ನುವ ಪದ ಎಲ್ಲರಿಗೂ ತಿಳಿದ ಸಾಮಾನ್ಯ ಪದ. ಇಲ್ಲಿ ಆಯ ಎಂದರೆ ಲಾಭ. ಎಲ್ಲಾ ನೀತಿಗಳ ಮೂಲ ಪ್ರವರ್ತಕನಾದ ಭಗವಂತ ಭಕ್ತರ ದೊಡ್ಡ ಲಾಭ ಆದ್ದರಿಂದ ಆತ ನ್ಯಾಯಃ.

223) ನೇತಾ

ನೇತಾ ಎಂದರೆ ನೇತಾರ ಅಥವಾ ನಾಯಕ. ಸಮಸ್ತ ಚರಾಚರಾತ್ಮಕ ಪ್ರಪಂಚದ, ಬ್ರಹ್ಮಾದಿ ದೇವತೆಗಳ, ಇಂದ್ರಿಯಗಳ, ಪಂಚಭೂತಗಳ ಮತ್ತು ಪಂಚಭೂತಾತ್ಮಕ ಪ್ರಪಂಚದ ನಾಯಕನಾದ ಭಗವಂತ ನೇತಾ. ಅನೇಕ ಅವತಾರಗಳ ಮೂಲಕ ನೇತಾರನಾಗಿ ಭೂಮಿಯನ್ನು ಹಾಗು ನಮ್ಮನ್ನು ರಕ್ಷಿಸಿದ ಭಗವಂತ ನೇತಾ.

224) ಸಮೀರಣಃ

ಈರಣ ಎಂದರೆ ಪ್ರೇರಣೆಮಾಡುವವನು. ನಮ್ಮೊಳಗೆ ಅನೇಕ ಅಸುರ ಶಕ್ತಿಗಳು ಹಾಗು ದೇವತಾ ಶಕ್ತಿಗಳು ಪ್ರೇರಣೆ ಮಾಡುತ್ತಿರುತ್ತವೆ. ನಾವು ಈ ಶಕ್ತಿಗಳ ಪ್ರೇರಣೆಗೊಳಗಾಗುತ್ತೇವೆ. ಆದರೆ ಈ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ಒಬ್ಬ ಸಮೀರಣ ನಮ್ಮಲ್ಲಿದ್ದಾನೆ. "ಧಿಯೋ ಯೋನಃ ಪ್ರಚೋದಯಾತ್" ಅಂದರೆ ಯಾವ ಭಗವಂತ ಮನೋತತ್ವಗಳನ್ನು ಪ್ರೇರಣೆ ಮಾಡುತ್ತಾನೋ ಅವನು ನಮ್ಮನ್ನು ಒಳ್ಳೆಯ ದಾರಿಯತ್ತ ಪ್ರೇರೇಪಿಸಲಿ ಎಂದರ್ಥ.

Friday, July 30, 2010

Vishnu sahasranama 219-221

ವಿಷ್ಣು ಸಹಸ್ರನಾಮ: ಅಗ್ರಣೀರ್ಗ್ರಾಮಣೀಃ ಶ್ರೀಮಾನ್
219) ಅಗ್ರಣೀಃ
ಅಗ್ರ ಎಂದರೆ ಮುಂದಾಳು. ಅಗ್ರಣೀ ಎಂದರೆ ಎಲ್ಲರ ಮುಂದಾಳಾಗಿ ನಿಂತು, ಅಥವಾ ಮುಂದಾಳುವಿನ ಒಳಗೆ ಕುಳಿತು ದುಷ್ಟ ನಿಗ್ರಹ ಮಾಡುವವ. ಇದಕ್ಕೆ ಉತ್ತಮ ಉದಾಹರಣೆ ಮಹಾಭಾರತ ಯುದ್ದ. ಧರ್ಮ ಸಂಸ್ಥಾಪನೆಗಾಗಿ ಪಾಂಡವ ಸೇನೆಯ ಸಾರಥಿಯಾಗಿ, ನರನ ಆವೇಷವಿರುವ ಅರ್ಜುನನಲ್ಲಿ ವಿಶೇಷ ರೀತಿಯಲ್ಲಿ ಆವಿರ್ಭೂತನಾಗಿ, ದುಷ್ಟ ಸಂಹಾರ ಮಾಡಿ, ಪ್ರಪಂಚಕ್ಕೆ ಗೀತೆಯ ಮೂಲಕ ವಿಶೇಷ ಸಂದೇಶವನ್ನು ಕರುಣಿಸಿದ ಭಗವಂತ ಅಗ್ರಣೀಃ. ಮಹಾಭಾರತ ಮೇಲ್ನೋಟಕ್ಕೆ ಒಂದು ಮಹಾಯುದ್ದ. ಆದರೆ ಈ ಯುದ್ದಕ್ಕೂ ನಮ್ಮ ಜೀವನಕ್ಕೂ ನೇರ ಸಂಭಂಧವಿದೆ. ಜೀವನವೇ ಒಂದು ಹೋರಾಟ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿತಪ್ಪಿಸುವ ಕೌರವರೂ ಇದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಕಣ್ಣಿಲ್ಲದ ಧೃತರಾಷ್ಟ್ರ ಅಥವಾ ಕಣ್ಣಿದ್ದೂ ಕುರುಡಿಯಾದ ಗಾಂಧಾರಿಯಂತೆ ನಾವು ನಮ್ಮನ್ನು ದಾರಿ ತಪ್ಪಿಸುವ ಶಕ್ತಿಗಳ ಮೋಹಪಾಶಕ್ಕೆ ಬಲಿಯಾಗಿ, ನಮ್ಮಲ್ಲಿರುವ ಅಮೂಲ್ಯ ಸಂಪತ್ತಾದ ಇಂದ್ರಿಯಗಳನ್ನು ದುರುಪಯೋಗ ಮಾಡಿಕೊಂಡು ದಾರಿ ತಪ್ಪಿದಾಗ, ನಮ್ಮೊಳಗಿರುವ ಬಿಂಬ ರೂಪಿ ಭಗವಂತ ಅಗ್ರಣಿಯಾಗಿ ನಿಂತು ದುಷ್ಟಶಕ್ತಿಗಳ ನಿರ್ಮೂಲ ಮಾಡುತ್ತಾನೆ. ಭಗವಂತನ ಶರಣಾಗತಿಯೊಂದೇ ನಮ್ಮನ್ನು ಉದ್ದಾರ ಮಾಡಬಲ್ಲದು ಎನ್ನುವುದು ಮಹಾಭಾರತದ ಮೂಲ ಸಂದೇಶ.
220) ಗ್ರಾಮಣೀಃ
ಗ್ರಾಮ ಎಂದರೆ ಸಮುದಾಯ. ಗ್ರಾಮಣಿ ಎಂದರೆ ಸಮುದಾಯದ ಒಡೆಯನಾಗಿದ್ದು ದುಷ್ಟ ನಿಗ್ರಹ ಮಾಡುವ ಭಗವಂತ. ಎಲ್ಲಾ ಜೀವ ಸಮುದಾಯಕ್ಕೆ, ದೇವತೆಗಳ ಸಮುದಾಯಕ್ಕೆ, ಆತ ನಿಯಾಮಕ. ಅಮಿತವಾದ ಜ್ಞಾನಾನಂದಗಳಿಂದ ತುಂಬಿರುವ ಹಾಗು ಪ್ರಪಂಚದಲ್ಲಿ ಅತೀ ಹೆಚ್ಚು ಸಂಖ್ಯಯಲ್ಲಿರುವ, ಆಸ್ತಿಕತೆಯ ಸೋಗಿನಲ್ಲಿ ಬದುಕುವ ತಾಮಸರನ್ನು ನಿಗ್ರಹಿಸಿ, ಸಾತ್ವಿಕತೆಯ ರಕ್ಷಣೆ ಮಾಡುವ ಭಗವಂತ ಗ್ರಾಮಣೀಃ.
221) ಶ್ರೀಮಾನ್
ನಮ್ಮಲ್ಲಿ ಶ್ರೀಮಂತರು ಎಂದರೆ ಅತೀ ಹೆಚ್ಚು ಹಣವುಳ್ಳವರು ಎನ್ನುವುದು ಜನರ ಅಭಿಪ್ರಾಯ. ಆದರೆ ನಿಜವಾದ ಸಂಪತ್ತು ಹಣವಲ್ಲ! ಏಕೆಂದರೆ ಹಣ "ಕರಗುವ ಸಂಪತ್ತು". ಒಮ್ಮೆ ಕೋಟ್ಯಾಧಿಪತಿಯಾಗಿರುವ ವ್ಯಕ್ತಿಗಳು ಇಂದು ಭಿಕ್ಷಾಧಿಪತಿಯಾಗಿರುವ ಅನೇಕ ಘಟನೆಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ನೋಡುತ್ತೇವೆ. ಹಣ ಬರುವಾಗ ಹೇಗೆ ಬರುತ್ತದೆ ಎಂದು ತಿಳಿಯುವುದಿಲ್ಲ, ಹಾಗೆ ಹೋಗುವಾಗ ಕೂಡ ಹೇಗೆ ಹೋಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ನಾವು ನಿಜವಾದ ಶ್ರಿಮಂತರಾಗಬೇಕಾದರೆ ಎಂದೂ "ಕರಗದ" ಸಂಪತ್ತನ್ನೂ ನಮ್ಮದಾಗಿಸಿಕೊಳ್ಳಬೇಕು. ವೇದ ವಿದ್ಯೆಗಳು ಹಾಗು ಅದರಿಂದ ಬರುವ ಜ್ಞಾನ ಎಂದೂ ಕರಗದ ಅಪೂರ್ವ ಸಂಪತ್ತು.
ವಿದ್ಯಾದೇವತೆಯಾದ ಸರಸ್ವತಿ-ಭಾರತಿಯರಿಗೂ ಭಗವಂತ ನಿಯಾಮಕ ಆದ್ದರಿಂದ ಆತ ಶ್ರೀಮಾನ್.
ಈ ಹಿಂದೆ ಹೇಳಿದಂತೆ ಭಗವಂತ ನಮಗೆ ಅತ್ಯಂತ ಅಮೂಲ್ಯವಾದ ಐದು ಶ್ರೀಗಳನ್ನು ಕರುಣಿಸಿದ ಶ್ರೀಮಾನ್. ಅವುಗಳೆಂದರೆ ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು. ಇದಕ್ಕಿಂತ ಹೆಚ್ಚಿನ ಸಂಪತ್ತು ಮನುಷ್ಯನಿಗೆ ಇನ್ನೊಂದಿಲ್ಲ. ಈ ಸಂಪತ್ತನ್ನೂ ನಾವು ಎಂದೂ ದುರುಪಯೋಗ ಮಾಡಿಕೊಳ್ಳಬಾರದು. ಅದಕ್ಕಾಗಿ ಶಾಂತಿ ಮಂತ್ರದಲ್ಲಿ ಒಳ್ಳೆಯದನ್ನು ನೋಡೋಣ. ಒಳ್ಳೆಯದನ್ನು ಮಾಡೋಣ, ಒಳ್ಳೆಯದನ್ನು ಕೇಳೋಣ ಹಾಗು ಒಳ್ಳೆಯದನ್ನು ಯೋಚಿಸೋಣ ಎಂದು ಹೇಳಿದೆ.
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ ಸ್ಥಿರೈರಂಗೈಃ ಸ್ತುಷ್ಟುವಾಂ ಸಸ್ತನೂಭಿಃ ವ್ಯಶೇಮ ದೇವಹಿತಂ ಯದಾಯುಃ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನಃ ಪೂಷಾ ವಿಶ್ವವೇದಾಃ ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದಧಾತು ಓಂ ಶಾಂತಿಃ ಶಾಂತಿಃ ಶಾಂತಿಃ
ಸಾಮಾನ್ಯವಾಗಿ ನಾವು ಜೀವನ ನಿರ್ವಹಣೆಯ ಹಾಗು ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಯೋಚಿಸುತ್ತಾ ಹಣದ ಹಿಂದೆ ಓಡುತ್ತಾ ಭಗವಂತನ ಅಭಯವನ್ನು ಮರೆತು ಬದುಕುತ್ತೇವೆ. ಗೀತೆಯಲ್ಲಿ ಭಗವಂತ ನಮಗೆ ರಕ್ಷಣೆಯ ಅಭಯವಿತ್ತಿದ್ದಾನೆ.
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ-೨೨)
ಅಂದರೆ ಚಿಂತೆಯನ್ನು ತೊರೆದು ಭಕ್ತಿಯಿಂದ ನನ್ನನ್ನು ಪೂಜಿಸುವ ಭಕ್ತರ ಯೋಗ-ಕ್ಷೇಮದ ಹೊಣೆ ನನ್ನದು. ಆದ್ದರಿಂದ ಅತ್ಯಂತ ಶ್ರೀಮಂತನಾದ ಭಗವಂತನ ಮುಂದೆ ಜುಜುಬಿ ಹಣದ ಅಭಿಷ್ಟವನ್ನು ವ್ಯಕ್ತಪಡಿಸದೆ, ಅವನನ್ನು ಸಂಪೂರ್ಣ ಭಕ್ತಿಯಿಂದ ನಂಬಿ ಬದುಕಿದರೆ, ನಮ್ಮ ಸಕಲ ಅಭಿಷ್ಟವನ್ನೂ ಆತ ಪೂರೈಸಿ ರಕ್ಷಿಸುತ್ತಾನೆ.

Thursday, July 29, 2010

Vishnu sahasranama 214-218

ವಿಷ್ಣು ಸಹಸ್ರನಾಮ: ನಿಮಿಷೋನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ
214) ನಿಮಿಷಃ

ನಿಮಿಷಃ ಎಂದರೆ ಕಣ್ಮುಚ್ಚಿ ನಿದ್ರಿಸುವವ.ಇಲ್ಲಿ ಭಗವಂತನ ಪ್ರಳಯಕಾಲದ ಯೋಗನಿದ್ರೆಯನ್ನು ನಿಮಿಷಃ ಎಂದಿದಾರೆ.

215)ಅನಿಮಿಷಃ

ಮೇಲಿನ ನಿಮಿಷಃ ಎನ್ನುವ ಪದದ ತದ್ವಿರುದ್ದ ನಾಮ ಅನಿಮಿಷಃ. ಅಂದರೆ ಭಗವಂತ ಎಂದೂ ನಿದ್ರಿಸುವುದಿಲ್ಲ! ಆತನಿಗೆ ನಿದ್ರೆಯೇ ಇಲ್ಲ. ಅಂದರೆ ಭಗವಂತ ನಮ್ಮಂತೆ ನಿದ್ರಿಸುವುದಿಲ್ಲ. ಆತನ ನಿದ್ರೆ ಕೇವಲ ಎಚ್ಚರದ ಯೋಗ ನಿದ್ರೆ.

216)ಸ್ರಗ್ವೀ

ಸ್ರಗ್ವೀ ಎಂದರೆ ಮಾಲೆ ತೊಟ್ಟವನು ಎಂದರ್ಥ. ಭಗವಂತನನ್ನು ಪಂಕಜ-ನಾಭ, ಪಂಕಜ-ನೇತ್ರ, ಪಂಕಜ-ಅಂಗ್ರಿ ಪಂಕಜ-ಮಾಲಿ ಎನ್ನುತ್ತಾರೆ. ಈ ಬ್ರಹ್ಮಾಂಡವನ್ನು ನಾಭಿಯಲ್ಲಿ ಧರಿಸಿದವನು ಪಂಕಜ-ನಾಭ, ಈ ಜಗದ ನೇತಾರ ಪಂಕಜ-ನೇತ್ರ, ಈ ಬ್ರಹ್ಮಾಂಡ ಭಗವಂತನ ಕಾಲಿನ ಒಂದು ದೂಳಿನ ಕಣ ಅದ್ದರಿಂದ ಆತ ಪಂಕಜ-ಅಂಗ್ರಿ ಹಾಗು ಅನಂತ ಕೋಟಿ ಬ್ರಹ್ಮಾಂಡಗಳ ಸರಮಾಲೆಗಳ ಸೃಷ್ಟಾರ ಪಂಕಜ-ಮಾಲಿ ಅಥವಾ ಸ್ರಗ್ವೀ. ಸ್ರಗ್ವೀ ಅಂದರೆ ಇನ್ನೊಂದು ಅರ್ಥ ತುಳಸೀ ಮಾಲೆ ತೊಟ್ಟವ. ಭಗವಂತನಿಗೆ ಲಕ್ಷ್ಮೀ ಸಾನಿಧ್ಯವಿರುವ ತುಳಸಿಮಾಲೆ ಅತ್ಯಂತ ಪ್ರೀಯ. ಕೃಷ್ಣಾವತಾರದಲ್ಲಿ ಸದಾ ವನಮಾಲೆಯನ್ನು ತೊಟ್ಟ ಭಗವಂತನಿಗೆ ಭಕ್ತಿಯಿಂದ ಅರ್ಪಿಸಿದ ಯಾವ ಮಾಲೆಯೂ ಇಷ್ಟ.

217)ವಾಚಸ್ಪತಿಃ

ವಾಗ್ದೇವತೆಯ ಒಡೆಯ ಅಥವಾ ಎಲ್ಲಾ ವಾಕ್ ಗಳಿಗೆ ಪತಿ. ಅನೇಕ ಬಾಷೆಗಳನ್ನು ತಿಳಿದು ಮಾತನಾಡುವವ ವಾಚಸ್ಪತಿಯಲ್ಲ. ಪ್ರಾಣಿಗಳಿಗೂ ಅವುಗಳದ್ದೇ ಆದ ಭಾಷೆ ಇದೆ. ಆದರೆ ಅದು ನಮಗೆ ಅರ್ಥವಾಗುವುದಿಲ್ಲ. ಭಾಷೆ ನಾಲ್ಕು ಮಜಲುಗಳಿಂದ ಬೆಳೆದಿದೆ. ಪರಾಶರ, ಪಶ್ಯಂತಿ, ಮದ್ಯಮ ಹಾಗು ವೈಖರಿ. ಇಲ್ಲಿ ಪರಾಶರ ಅತ್ಯಂತ ಸೂಕ್ಷ್ಮವಾದ ಭಾಷೆಯ ಸ್ಥಿತಿ. ಮನಸ್ಸಿನ ಯೋಚನೆಗನುಗುಣವಾಗಿ ನಾಭಿಯಲ್ಲಿ ಉಂಟಾಗುವ ಕಂಪನ( Vibration)-'ಪರಾಶರ'. 'ಪಶ್ಯಂತಿ' ಎಂದರೆ ನಾಭಿಯಿಂದ ಹೊರಟ ಸೂಕ್ಷ್ಮ ಭಾಷೆ ಹೃದಯದಲ್ಲಿ ಅಭಿವ್ಯಕ್ತವಾಗುವ ಸ್ಥಿತಿ. ಆ ನಂತರ ಕುತ್ತಿಗೆ ಮೂಲಕ ಹೊರಹೊಮ್ಮುವ ಭಾಷೆಯ ಸ್ಥಿತಿ 'ಮದ್ಯಮ'. ಕೊನೆಯದಾಗಿ ಬಾಯಿಯ ಮೂಲಕ ಹೊರಹೊಮ್ಮುವ ಶಬ್ದ 'ವೈಖರಿ'. ಹೀಗೆ ಪ್ರಾಣಿ-ಪಕ್ಷಿಗಳಿಂದ ಹಿಡಿದು, ಭಾಷೆಯ ವಿವಿಧ ಮಜಲನ್ನು ತಿಳಿದಿರುವ ಭಗವಂತ ವಾಚಸ್ಪತಿಃ. ಈ ಕಾರಣಕ್ಕಾಗಿ ಭಗವಂತನನ್ನು ನಾವು ಯಾವ ಭಾಷೆಯಲ್ಲಿ ಕೂಡ ಉಪಾಸನೆ ಮಾಡಬಹುದು. ಆತ ನಮ್ಮ ನಾಭಿ-ಹೃದಯ ಭಾಷೆಯನ್ನೂ ಕೂಡ ಅರ್ಥೈಸಬಲ್ಲ.

218)ಉದಾರಧೀಃ

ಉದಾರಧೀಃ ಎಂದರೆ ಉತ್ಕೃಷ್ಟವಾದ ಅರಿವಿನ ಅಲೆ ಅಥವಾ ಸರ್ವೋತ್ಕೃಷ್ಟವಾದ ಜ್ಞಾನ. ಭಗವಂತ ಸರ್ವವನ್ನೂ ಬಲ್ಲ ಸರ್ವಜ್ಞ.