Thursday, August 26, 2010

Vishnusahasranama 314-316

ವಿಷ್ಣು ಸಹಸ್ರನಾಮ : ಕ್ರೋಧಹಾ ಕ್ರೋಧಕೃತ್ಕರ್ತಾ

314) ಕ್ರೋಧಹಾ
ಮನುಷ್ಯ ಕಾಮವನ್ನಾದರೂ ಗೆಲ್ಲಬಹುದು ಆದರೆ ಕ್ರೋದವನ್ನು ಗೆಲ್ಲುವುದು ಅತೀ ಕಷ್ಟ. ಕ್ರೋಧ ನಮಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮನ್ನು ಅಂಟಿಕೊಂಡಿರುತ್ತದೆ. ಈ ಸಮಸ್ಯೆ ಋಷಿ ಮುನಿಗಳನ್ನೂ ಬಿಟ್ಟಿಲ್ಲ. ಕಾಮವನ್ನು ಗೆದ್ದ ವಿಶ್ವಾಮಿತ್ರರು ರಂಬೆ ಬಂದಾಗ ಕೋಪಗೊಂಡು 'ಕಲ್ಲಾಗು' ಎಂದು ಶಾಪ ಕೊಟ್ಟು ಕ್ರೋಧದ ಬಲೆಗೆ ಬೀಳುತ್ತಾರೆ. ನಮ್ಮ ಕ್ರೋಧವನ್ನು ಭಗವಂತನೊಬ್ಬನೇ ಹರಣ ಮಾಡಬಲ್ಲ. ನಾವು ಕ್ರೋಧದಿಂದ ಮುಕ್ತಿ ಪಡೆಯಬೇಕಾದರೆ ಭಗವಂತನಲ್ಲಿ ಶರಣಾಗುವುದೊಂದೇ ನಮಗಿರುವ ಮಾರ್ಗ. ನಮ್ಮ ಕ್ರೋಧವನ್ನು ಕಳೆವವನು ಹಾಗು ಕ್ರೋಧದ ಪಡೆಯಾದ ರಾಕ್ಷಸರನ್ನು ಸಂಹಾರ ಮಾಡುವ ಭಗವಂತ ಕ್ರೋಧಹಾ.
315) ಕ್ರೋಧಕೃತ್
ದುಷ್ಟ ಸಂಹಾರದಲ್ಲಿ ಭಗವಂತ ಸ್ವಯಂ ಕ್ರೋಧ ರೂಪಿ. ಭಗವಂತನ ನರಸಿಂಹ ಅವತಾರ ಆತನ ಕ್ರೋಧ ರೂಪದ ಒಂದು ಉದಾಹರಣೆ. ನಮಗೆ ಕೋಪವನ್ನು ಕೊಡುವವನು ಭಗವಂತನೇ! ಮಹಾತ್ಮರ ಕೋಪ ಮಹತ್ಕಾರ್ಯವಾಗಿ ಮಾರ್ಪಾಟಾಗುತ್ತದೆ. ಸನಕಾದಿಗಳು ಜಯ-ವಿಜಯರ ಮೇಲೆ ಕೋಪಗೊಂಡು ಶಾಪ ಕೊಟ್ಟ ಪರಿಣಾಮ ಭಗವಂತ ಭೂಮಿಯಲ್ಲಿ ಹಲವು ಅವತಾರವನ್ನು ತೊಟ್ಟು ಸಜ್ಜನರ ಉದ್ದಾರ ಮಾಡುವಂತಾಯಿತು. ಹೀಗೆ ದುರ್ಜನರ ಮೇಲೆ ಕೋಪಗೊಳ್ಳುವ ಭಗವಂತ ಕ್ರೋಧಕೃತ್.
316) ಕರ್ತಾ
ಕರ್ತಾ ಎಂದರೆ 'ಮಾಡುವವನು' ಅಥವಾ 'ಕತ್ತರಿಸುವವನು'. ಸೃಷ್ಟಿ ಕಾಲದಲ್ಲಿ ಎಲ್ಲವನ್ನೂ ಸೃಷ್ಟಿ 'ಮಾಡುವ' ಭಗವಂತ ಸಂಹಾರ ಕಾಲದಲ್ಲಿ ಎಲ್ಲವನ್ನೂ 'ಕತ್ತರಿಸುತ್ತಾನೆ' ಹೀಗೆ ಯಾವ ಯಾವ ಕಾಲದಲ್ಲಿ ಏನೇನು ಆಗಬೇಕೋ ಅದನ್ನು ಮಾಡುವ ಹಾಗು ಯಾವ ಕಾಲದಲ್ಲಿ ಯಾವುದು ಇರಬಾರದೋ ಅದನ್ನು ಕತ್ತರಿಸಿ ತೆಗೆಯುವ ಭಗವಂತ ಕರ್ತಾ

Wednesday, August 25, 2010

Vishnu sahasranama 310-313


ವಿಷ್ಣು ಸಹಸ್ರನಾಮ: ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ
310) ಶಿಷ್ಟೇಷ್ಟಃ

ಶಿಷ್ಟರು ಎಂದರೆ ಸಂಪ್ರದಾಯದಿಂದ ಬಂದ ಸತ್ಯದ ಅರಿವನ್ನು ಪಡೆದವರು; ಗುರೂಪದೇಶದಂತೆ ಸತ್ಯದ ಮಾರ್ಗದಲ್ಲಿ ನಡೆಯುವವರು. ಬಲ್ಲವರಿಗೆ ಇಷ್ಟವಾದ ಹಾಗು ಬಲ್ಲವರಿಂದ ಪೂಜೆತನಾಗುವ ಭಗವಂತ ಶಿಷ್ಟೇಷ್ಟಃ.
311) ಶಿಖಂಡೀ
ಸಾಮಾಜಿಕವಾಗಿ ಈ ಪದಕ್ಕೆ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು. ಶಿಖ+ಅಂಡ ಇಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು ಈ ಕಾರಣಕ್ಕಾಗಿ ಆತನನ್ನು ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ ಆ ಕಾರಣಕ್ಕಾಗಿ ಆತನನ್ನು ಶಿಖಂಡೀ ಎನ್ನುವುದು ವಾಡಿಕೆ.
ಈ ನಾಮವನ್ನು ಒಡೆದು ನೋಡಿದರೆ ಶಿ+ಖಂಡಿ; ಇಲ್ಲಿ ಶಿ ಎಂದರೆ ಸದಾ ಅಜ್ಞಾನದ ನಿದ್ದೆಯಲ್ಲಿರುವವರು, ಇಂತವರನ್ನು ಖಂಡಿಸುವ ಭಗವಂತ ಶಿಖಂಡೀ, ಶಂ ಎಂದರೆ ಸುಖ, ಸ್ವಯಂ ಆನಂದ ಸ್ವರೂಪನಾಗಿದ್ದು ದುಃಖಮಯವಾದ ಸಂಸಾರವನ್ನು ಖಂಡಿಸಿ ಮುಕ್ತಿ ಕೊಡುವವನು; ಸುಖಕ್ಕೆ ಅಯೋಗ್ಯರಾದವರ ಸುಖವನ್ನು ಖಂಡಿಸುವ ಭಗವಂತ ಶಿಖಂಡೀ.
312) ನಹುಷಃ
ನಮ್ಮನ್ನು ಸಂಸಾರ ಬಂಧನದಲ್ಲಿ ಸಿಲುಕಿಸುವ, ಕೊನೆಗೆ ಸಂಸಾರ ಬಂಧದಿಂದ ಬಿಡಿಸಿ ಮೋಕ್ಷ ಕರುಣಿಸುವ ಭಗವಂತ ನಹುಷಃ.
ನಾವು ಅನೇಕ ಬಂಧನಗಳ ಸರಮಾಲೆಗಳಿಂದ ಬಂಧಿಸಲ್ಪಟ್ಟಿರುತ್ತೇವೆ. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವುದಕ್ಕೆ ಅವರೊಳಗಿರುವ ಯಾವುದೋ ಒಂದು ಶಕ್ತಿ ಕಾರಣವಾಗಿರುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ಅಪರಿಚಿತರಾಗಿ ಬಂದು ಸ್ನೇಹದ ಬಂಧನದಲ್ಲಿ ಸಿಲುಕುವುದು, ಪತಿ-ಪತ್ನಿಯಾಗಿ ಪ್ರೀತಿಯ ಬಂಧನದಲ್ಲಿ ಬಂಧಿಸಲ್ಪಡುವುದು, ಎಲ್ಲವೂ ಭಗವಂತನ ನಿಯಮದಂತೆ. ಒಬ್ಬ ವ್ಯಕ್ತಿಯ ಸಹವಾಸದಲ್ಲಿ ನಮ್ಮ ಹೃದಯ ಅರಳುವಂತೆ ಮಾಡುವವ ಭಗವಂತ. ಇದರಿಂದ ಸ್ನೇಹ ಬೆಳೆಯುತ್ತದೆ. ಸ್ನೇಹ-ಪ್ರೇಮದ ನಂಟನ್ನು ಬೆಳೆಸುವವ ಹಾಗು ಬೆಸೆಯುವವ ಹಾಗು ಬೇರ್ಪಡಿಸುವವ ಭಗವಂತ. ನಮ್ಮನ್ನು ಬಂಧನಕ್ಕೆ ಸಿಲುಕಿಸುವ ಭಗವಂತ ಯಾವಾಗ ಬೇರ್ಪಡಿಸುತ್ತಾನೆ ಎಂದು ತಿಳಿಯುವುದು ಕಷ್ಟ. ಪ್ರೀತಿಗಾಗಿ ಬೇರ್ಪಡುವ, ದ್ವೇಷದಿಂದ ಬೇರ್ಪಡುವ ಜನರನ್ನು ಸಾಮಾನ್ಯವಾಗಿ ನಾವು ಕಾಣುತ್ತೇವೆ. ಹೀಗೆ ಬಂಧನದಲ್ಲಿ ಸಿಲುಕಿಸುವವ ಹಾಗು ಬಂಧನದಿಂದ ಬೇರ್ಪಡಿಸುವ ಭಗವಂತ ನಹುಷಃ. ಗ್ರಹ-ಗೊಲಗಳನ್ನು ಒಂದಕ್ಕೊಂದು ಸಂಕರ್ಷಣ ಶಕ್ತಿಯಿಂದ ಬಂಧಿಸಿಟ್ಟಿರುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಬೇರ್ಪಡಿಸುತ್ತಾನೆ. ಇದು ಆತನ ನಿಯಮ.


313) ವೃಷಃ
ರೂಢಿಯಲ್ಲಿ ವೃಷಃ ಎಂದರೆ ಗೂಳಿ ಎನ್ನುವ ಅರ್ಥವಿದೆ. ಆದರೆ ವೈದಿಕವಾಗಿ ವೃಷಃ ಎಂದರೆ 'ಸುರಿಸುವುದು' ಎನ್ನುವ ಅರ್ಥವನ್ನು ಕೊಡುತ್ತದೆ. ಭಕ್ತರ ಹಾಗು ಜ್ಞಾನಿಗಳ ಮೇಲೆ ಅಭೀಷ್ಟದ ಮಳೆ ಸುರಿಸುವ ಭಗವಂತ ವೃಷಃ. ಈ ನಾಮದ ಇನ್ನೊಂದು ಅರ್ಥ 'ಧರ್ಮ'; ಸಮಾಜವನ್ನು ಧಾರಣೆ ಮಾಡುವುದು ಧರ್ಮ ಹಾಗು ಇದು ಭಗವಂತನ ಪ್ರತೀಕ. ವೃ+ಷಃ ಇಲ್ಲಿ 'ಷ' ಎಂದರೆ ಷಡ್ಗುಣಾಃ; ಭಗವಂತನ ಉಪಾಸನೆ ಮಾಡುವ ಆರು ಮೂಲ ಗುಣ. ಐಶ್ವರ್ಯ, ವೀರ್ಯ, ಯಶಸ್ಸು, ಸಂಪತ್ತು , ಜ್ಞಾನ ಹಾಗು ವೈರಾಗ್ಯ. ಯಾರಲ್ಲಿ ಈ ಆರು ಗುಣಗಳು ಪೂರ್ಣವಾಗಿದೆಯೋ ಅವನು ವೃಷಃ .

Tuesday, August 24, 2010

Vishnu Sahasranama 308-309

ವಿಷ್ಣು ಸಹಸ್ರನಾಮ: ಇಷ್ಟೋ ವಿಶಿಷ್ಟಃ........
308) ಇಷ್ಟಃ

ಯಾವುದೇ ಒಂದು ವಸ್ತುವನ್ನು ಗೌರವಿಸಿ ಆದರಿಸಬೇಕಾದರೆ ಅದು ನಮಗೆ ಇಷ್ಟವಾಗಬೇಕು. ಭಗವಂತನ ರೂಪಗಳು ಹಲವು; ಹಾಗು ಒಬ್ಬೊಬ್ಬರಿಗೆ ಒಂದೊಂದು ರೂಪ ಇಷ್ಟ. ಇಲ್ಲಿ ಇಷ್ಟ ಎಂದರೆ ನಮ್ಮ ಪ್ರೀತಿಗೆ ಪಾತ್ರವಾದ ವಸ್ತು. ಭಗವಂತ ಎಲ್ಲರೂ ಪ್ರೀತಿಸಬೇಕಾದ ವಸ್ತು. ಇನ್ನೊಂದು ಅರ್ಥದಲ್ಲಿ ಇಷ್ಟಃ ಎಂದರೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವವನು. ಗೀತೆಯಲ್ಲಿ ಹೇಳುವಂತೆ:
ಅಹಂ ಹಿ ಸರ್ವ ಯಜ್ಞಾನಾಂ ಭೂಕ್ತಾ ಚ ಪ್ರಭುರೇವ ಚ
ನಾವು ಯಾವುದೇ ದೇವತೆಯ ಕುರಿತು ಯಾಗ ಮಾಡಿದರೂ ಅದು ಕೊನೆಗೆ ತಲುಪುವುದು ಅಂತರ್ಯಾಮಿ-ಯಾದ ಭಗವಂತನನ್ನೇ. ಹೀಗೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವ, ಎಲ್ಲಾರಿಗೂ ಇಷ್ಟನಾದ 'ಇಷ್ಟದೇವ' ಭಗವಂತ ಇಷ್ಟಃ.
309) ಅವಿಶಿಷ್ಟಃ (ವಿಶಿಷ್ಟಃ)
ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಅವಿಶಿಷ್ಟಃ ; ಆತ ಎಲ್ಲರಿಗಿಂತ ಹೆಚ್ಚು ವಿಶೇಷತೆ ಉಳ್ಳವನು (Extraordinary). ಅಸಾಧಾರಣ ಗುಣವುಳ್ಳ ಸರ್ವೋತ್ಕೃಷ್ಟ ಭಗವಂತ ವಿಶಿಷ್ಟಃ. ಇಲ್ಲಿ ಶಿಷ್ಟ ಎಂದರೆ 'ಶೇಷ' ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಮಹಾ ಪ್ರಳಯದ ನಂತರ ಕೊನೆಗೆ ಉಳಿಯುವ ಏಕಮಾತ್ರ ಶಕ್ತಿ. ಪ್ರಪಂಚಕ್ಕೆ ಭಗವಂತನ ಅರಿವನ್ನು ಕೊಟ್ಟವರು ಜ್ಞಾನಿಗಳು. ಜ್ಞಾನಿಗಳ ಉಪದೇಶದಿಂದ ಯಾರನ್ನು ತಿಳಿಯಲು ಸಾದ್ಯವೋ ಅವನು ವಿಶಿಷ್ಟಃ