ವಿಷ್ಣು ಸಹಸ್ರನಾಮ: ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ
571) ಸುಧನ್ವಾ
ಸೊಗಸಾದ ಸುಂದರವಾದ ಬಲಿಷ್ಠವಾದ ಧನುಸ್ಸನ್ನು ಶತ್ರುಗಳ ದಮನಕ್ಕೋಸ್ಕರ ಹಿಡಿದವ.ಆತ ನಮಗೆಲ್ಲರಿಗೂ ಓಂಕಾರವೆಂಬ ಧನುಸ್ಸನ್ನು ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿ ನಮ್ಮ ಆತ್ಮವನ್ನು ಬಾಣವಾಗಿ ಉಪಯೋಗಿಸಿ ಭಗವಂತನತ್ತ ಗುರಿಮಾಡಿ ಹೊಡೆದಾಗ ಆತನನ್ನು ತಲುಪಬಹುದು. ಓಂ ಅಂದರೆ ಎಲ್ಲಾ ವೇದಗಳ ಮೂಲಾಕ್ಷರ, ಸಮಸ್ತ ವೇದಗಳ ಜ್ಞಾನದಿಂದ(ಬಿಲ್ಲಿನಿಂದ) ನಮ್ಮ ಆತ್ಮಸ್ವರೂಪ(ಬಾಣ) ಭಗವಂತನನ್ನು ತಲುಪುವ ಸಾಧನ.
ವಿದ್ಯಾಮಾನಿನಿಯಾದ ಶ್ರೀತತ್ವವನ್ನು ಕೈಯಲ್ಲಿ ಹಿಡಿದವ; ರಮೆಯನ್ನು ಬಿಲ್ಲಾಗಿ,ಪ್ರಾಣನನ್ನು ಬಾಣವಾಗಿ ಹಿಡಿದ ಭಗವಂತ ಸುಧನ್ವಾ. ಅವತಾರ ರೂಪಿಯಾಗಿ ವಿಶೇಷ ಬಿಲ್ಲಿನಿಂದ ಶತ್ರು ಸಂಹಾರ ಮಾಡಿದ ಭಗವಂತ ಸುಧನ್ವಾ.
572) ಖಂಡಪರಶುಃ
ಶತ್ರುಗಳನ್ನು ತರಿವ ಕೊಡಲಿ ಹೊತ್ತವನು ಖಂಡಪರಶುಃ. ಪರಶುರಾಮನಾಗಿ, ವಿಶೇಷ ಕೊಡಲಿಯಿಂದ ದುಷ್ಟ ಕ್ಷತ್ರಿಯರ ದಮನ ಮಾಡಿದ ಭಗವಂತ ಖಂಡಪರಶುಃ.
573) ದಾರುಣಃ
ದುಷ್ಟರಿಗೆ, ಲೋಕ ಕಂಟಕರಿಗೆ ಭಗವಂತ ಭಯಾನಕ (ದಾರುಣ). 21 ಬಾರಿ ಕ್ಷತ್ರಿಯರ ನಾಶಮಾಡಿ ಭಯಂಕರನಾಗಿ ಕಾಣಿಸಿಕೊಂಡವನು.
574) ದ್ರವಿಣಪ್ರದಃ ಇಡೀ ಪ್ರಪಂಚದ ಸಂಪತ್ತನ್ನು ಸಮಾಜಕ್ಕೆ ಕೊಡುವವ. ಸಮಾಜದ ಸಂಪತ್ತನ್ನು ತಮ್ಮ ಸ್ವಾರ್ಥಕ್ಕಾಗಿ ನುಂಗುವ ಬ್ರಷ್ಟರನ್ನು ನಿಗ್ರಹ ಮಾಡಿ ಅದನ್ನು ಸಮಾಜಕ್ಕೆ ಮರಳಿ ಕೊಡುವವ. ಈ ಕಾರಣದಿಂದ ಮೋಸ ವಂಚನೆ ಮಾಡಿ ಗಳಿಸಿದ ಸಂಪತ್ತು ಎಂದೂ ಶಾಶ್ವತವಲ್ಲ. ಅದು ಎಂದೆಂದೂ ಕ್ಷಣಿಕ. ಏಕೆಂದರೆ ಭಗವಂತ ಅಂಥಹ ಬ್ರಷ್ಟರಿಗೆ ದಾರುಣನಾಗಿ ಸಮಾಜಕ್ಕೆ ದ್ರವಿಣಪ್ರದಃ.
No comments:
Post a Comment